Advertisement

Illiterate; 9,290 ಗ್ರಾಮ ಪಂಚಾಯತ್ ಸದಸ್ಯರು ಅನಕ್ಷರಸ್ಥರು!

01:09 AM Dec 15, 2023 | Team Udayavani |

ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ, ನೀತಿ ನಿರೂಪಣೆಯಲ್ಲಿ ಮಹತ್ತರ ಪಾತ್ರ ವಹಿಸುವ ರಾಜ್ಯದ ಗ್ರಾ.ಪಂ.ಗಳ ಸದಸ್ಯರಲ್ಲಿ ಬರೋಬ್ಬರಿ 9,290ಕ್ಕೂ ಹೆಚ್ಚು ಮಂದಿಗೆ ಓದು ಬರಹವೇ ಗೊತ್ತಿಲ್ಲ. ಅಂದರೆ, ರಾಜ್ಯದಲ್ಲಿ ಒಟ್ಟು ಒಟ್ಟು 95,000 ಕ್ಕೂ ಅಧಿಕ ಗ್ರಾಪಂ ಸದಸ್ಯರಿದ್ದು, ಈ ಪೈಕಿ ಶೇ.10ರಷ್ಟು ಸದಸ್ಯರು ಅನಕ್ಷರಸ್ಥರು! ಹೀಗಾಗಿ ರಾಜ್ಯದ ಗ್ರಾ.ಪಂ.ಗಳ ಅನಕ್ಷರಸ್ಥ ಸದಸ್ಯರನ್ನು ಗುರುತಿಸಿ ಅವರಿಗೆ ಓದು, ಬರಹ, ಮತ್ತು ಲೆಕ್ಕಾಚಾರದಲ್ಲಿ ಕನಿಷ್ಠ ಸ್ವಾವಲಂಬನೆ ತರಲು ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನ ದಡಿ ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಪಂಚಾಯತ್‌ರಾಜ್‌ ಮುಂದಾಗಿದೆ.

Advertisement

21 ಜಿಲ್ಲೆಗಳಲ್ಲಿ ಸಾಕ್ಷರ ಸಮ್ಮಾನ
ರಾಜ್ಯದ 21 ಜಿಲ್ಲೆಗಳಲ್ಲಿ ಡಿ.26ರಿಂದ ಸಾಕ್ಷರ ಸಮ್ಮಾನ ಕಾರ್ಯಕ್ರಮದ ಮೂಲಕ 4,078 ಮಂದಿ ಅನಕ್ಷರಸ್ಥ ಗ್ರಾಮ ಪಂಚಾಯತ್‌ ಸದಸ್ಯರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ ಸಹಯೋಗದೊಂದಿಗೆ ತರಬೇತಿ ಪಡೆದ ಬೋಧಕರಿಂದ ತರಬೇತಿ ಸಿಗಲಿದೆ. ಈಗಾಗಲೇ ಈ ಸಂಬಂಧ ಈ ಹಿಂದೆ ಸಾಕ್ಷರತಾ ಕಾರ್ಯಕ್ರಮದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಹಾಗು ನಿವೃತ್ತ ಶಿಕ್ಷಕರು, ಗ್ರಾ.ಪಂ. ಗ್ರಂಥಪಾಲಕರು, ವಯಸ್ಕರ ಕಲಿಕೆ-ಬೋಧನೆಯಲ್ಲಿ ಅನುಭವ ಇರುವರನ್ನು ಸಾಕ್ಷರ ಸಮ್ಮಾನ ಕಾರ್ಯಕ್ರಮದಡಿ ಬೋಧಕರನ್ನಾಗಿ ಗುರುತಿಸಿ ಅವರಿಗೆ ತರಬೇತಿ ನೀಡಲಾಗಿದೆ.

50 ದಿನ 100 ಗಂಟೆಗಳ ತರಬೇತಿ
ಕನಿಷ್ಠ 100 ಗಂಟೆಗಳ ತರಬೇತಿಗೆ ಯೋಜನೆ ರೂಪಿಸಲಾಗಿದೆ. ದಿನಕ್ಕೆ 2 ಗಂಟೆಯಂತೆ ಒಟ್ಟು 50 ದಿನ ಒಬ್ಬರಿಂದ ಒಬ್ಬರಿಗೆ ಕಲಿಸುವ ವಿಧಾನವನ್ನು ರೂಪಿಸಲಾಗಿದ್ದು, ಈಗಾಗಲೇ ಬೋಧಕರಿಗೆ 3 ದಿನಗಳ ಪಠ್ಯಾಧಾರಿತ ತರಬೇತಿ ನೀಡಲಾಗಿದೆ. ನಾಯಕತ್ವ, ಆರೋಗ್ಯ, ಪರಿಸರ, ಸಹಕಾರ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತಿತರ ವಿಷಯಗಳ ಬಗ್ಗೆ ಪಠ್ಯ ಬೋಧನೆ ಮಾಡಲಾಗುತ್ತಿದೆ. ಸಾಕ್ಷರ ಸಮ್ಮಾನ ತರಬೇತಿ ವೇಳೆ ಮೌಲ್ಯಮಾಪನವೂ ನಡೆಯಲಿದೆ.

ಬೆಳಗಾವಿಯಲ್ಲಿ ಅತಿ ಹೆಚ್ಚು
ಡಿ.26ರಿಂದ ಚಾಲನೆಗೊಳ್ಳುತ್ತಿರುವ ಸಾಕ್ಷರ ಸಮ್ಮಾನ ಕಾರ್ಯಕ್ರಮದಡಿ ರಾಜ್ಯದ 21 ಜಿಲ್ಲೆಗಳಲ್ಲಿ ಗುರುತಿಸಿರುವ ಅನಕ್ಷರಸ್ಥ ಗ್ರಾ.ಪಂ. ಸದಸ್ಯರ ಪಟ್ಟಿಯಲ್ಲಿ ಬೆಳಗಾವಿ (681) ಮೊದಲ ಸ್ಥಾನದಲ್ಲಿದೆ, ತುಮಕೂರು (328), ಚಿಕ್ಕಬಳ್ಳಾಪುರ (305), ವಿಜಯ ನಗರ (298), ಚಾಮರಾಜನ ನಗರ (275), ರಾಮನಗರ (227), ಹಾಸನ (223), ದಾವಣಗೆರೆ (215), ಚಿತ್ರದುರ್ಗ (183), ಕೋಲಾರ (184), ಗದಗ(182) ಹೊಂದಿದ್ದರೆ ಅತಿ ಕಡಿಮೆ ಅನಕ್ಷರಸ್ಥ ಗ್ರಾ.ಪಂ. ಸದಸ್ಯರನ್ನು ಕೊಡಗು (45), ಉಡುಪಿ (46), ಬೆಂಗಳೂರು ಗ್ರಾಮಾಂತರ (61), ಬೆಂಗಳೂರು (62), ದಕ್ಷಿಣ ಕನ್ನಡ (76) ಸದಸ್ಯರನ್ನು ಹೊಂದಿದೆ.

ಅತಿ ಹೆಚ್ಚು ಅನಕ್ಷರಸ್ಥರು ಇರುವುದೆಲ್ಲಿ?
ರಾಜ್ಯದ ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಒಟ್ಟು 80 ತಾಲೂಕುಗಳ 1,268 ಗ್ರಾಪಂಗಳಲ್ಲಿ ಬರೋಬ್ಬರಿ 5,798 ಅನಕ್ಷರಸ್ಥ ಗ್ರಾಪಂ ಸದಸ್ಯರು ಇರುವುದನ್ನು ಗುರುತಿಸಿ ಆ ಪೈಕಿ 3,011 ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ 1,500 ಕ್ಕೂ ಹೆಚ್ಚು ಸಾಕ್ಷರ ಬೋಧಕರ ಮೂಲಕ ಸಾಕ್ಷರತೆ ಕಲಿಸಲಾಗಿದೆ. ಇನ್ನೂ 2,787 ಓದು, ಬರಹ ಬಾರದ ಗ್ರಾಪಂ ಸದಸ್ಯರಿಗೆ ಸಾಕ್ಷರ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ.

Advertisement

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next