Advertisement

ಕರಾವಳಿಯಲ್ಲಿ ಕೋವಿಡ್ 19 ಸೋಂಕು ಉಲ್ಬಣ; ಒಂಬತ್ತು ಮಂದಿ ಸಾವು

02:35 AM Jul 17, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

Advertisement

ಗುರುವಾರ ಒಂದೇ ದಿನ 238 ಮಂದಿಗೆ ಸೋಂಕು ದೃಢಪಟ್ಟಿದೆ. ಇದು ಒಂದೇ ದಿನ ವರದಿಯಾದ ಗರಿಷ್ಠ (ಜು. 12ರಂದು 196) ಸೋಂಕಿತರ ಸಂಖ್ಯೆಯಾಗಿದೆ.

ಇಂದು ಕೋವಿಡ್ 19 ಸೋಂಕಿಗೆ ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಹಾಗೂ 74 ಮಂದಿ ಗುಣಮುಖರಾಗಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೂಲ್ಕಿಯ 44 ವಯಸ್ಸಿನ ಪುರುಷ, ಮಧುಮೇಹದಿಂದ ಬಳಲುತ್ತಿದ್ದ ಬೆಳಗಾವಿ ರಾಮದುರ್ಗಾದ 68 ವಯಸ್ಸಿನ ಪುರುಷ, ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದ ಮಂಗಳೂರಿನ 62ರ ವಯಸ್ಸಿನ ಪುರುಷ, ಕಿಡ್ನಿ ಸಮಸ್ಯೆ, ಮಧುಮೇಹದಿಂದ ಬಳಲುತ್ತಿದ್ದ ಮಂಗಳೂರಿನ 66 ವಯಸ್ಸಿನ ಪುರುಷ, ಮಧುಮೇಹದಿಂದ ಬಳಲುತ್ತಿದ್ದ ಬಂಟ್ವಾಳ ತಾಲೂಕಿನ 47 ವಯಸ್ಸಿನ ಮಹಿಳೆ ಹಾಗೂ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಂಗಳೂರಿನ 76 ವಯಸ್ಸಿನ ಮಹಿಳೆ ಮೃತಪಟ್ಟಿದ್ದಾರೆ.

ಐಎಲ್‌ಐ ಪ್ರಕರಣ ಏರಿಕೆ
ಜಿಲ್ಲೆಯಲ್ಲಿ ಗುರುವಾರ ವರದಿಯಾಗಿರುವ 238 ಪ್ರಕರಣಗಳ ಪೈಕಿ 23 ಪ್ರಾಥಮಿಕ ಸಂಪರ್ಕ, 106 ಮಂದಿ ಇನ್‌ಫ್ಲೂಯೆನ್ಝಾ ಲೈಕ್‌ ಇಲ್‌ನೆಸ್‌ (ಐಎಲ್‌ಐ), 17 ಮಂದಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ (ಸಾರಿ) ಪ್ರಕರಣಗಳಾಗಿವೆ. 19 ಮಂದಿ ವಿದೇಶದಿಂದ ಬಂದವರು. 73 ಮಂದಿ ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಪೈಕಿ ಇನ್‌ಫ್ಲೂಯೆನ್ಝಾ ಲೈಕ್‌ ಇಲ್‌ನೆಸ್‌ (ಐಎಲ್‌ಐ) ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ.

Advertisement

ಮೃತರ ಸಂಖ್ಯೆ 63ಕ್ಕೆ
ಜಿಲ್ಲೆಯಲ್ಲಿ ಈವರೆಗೆ ಒಟ್ಟು 2,763 ಮಂದಿಗೆ ಸೋಂಕು ದೃಢಪಟ್ಟಿದ್ದು 1,163 ಮಂದಿ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 63ಕ್ಕೇರಿದೆ. ಒಟ್ಟು 1537 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಖಲೆ ಸಂಖ್ಯೆಯತ್ತ
ಜಿಲ್ಲೆಯಲ್ಲಿ ಕಳೆದ ವಾರದಿಂದೀಚೆಗೆ ಪ್ರತೀ ದಿನ 100ರ ಗಡಿ ದಾಟುತ್ತಿದ್ದ ಕೋವಿಡ್ 19 ಸಂಖ್ಯೆ 2 ದಿನ ಇಳಿಕೆ ಕಂಡಿತ್ತು. ಮಂಗಳವಾರ 91 ಹಾಗೂ ಬುಧವಾರ 73 ಜನರಿಗೆ ಕೋವಿಡ್ 19 ಸೋಂಕು ತಗಲಿತ್ತು. ಆದರೆ ಗುರುವಾರ ಮಾತ್ರ ಪ್ರಕರಣ ದಾಖಲೆಯ (238) ಏರಿಕೆ ಕಂಡಿದೆ.

ಆಸ್ಪತ್ರೆ ಬೀಗ ಮುರಿದು ಬಾಣಂತಿ, ಮಗು ಕರೆದೊಯ್ದ ಪತಿ!
ಬೆಳ್ತಂಗಡಿ:
ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆರಿಗೆಯಾದ ಮಹಿಳೆಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪತಿ ಗೇಟ್‌ ಬೀಗ ಮುರಿದು ಆಸ್ಪತ್ರೆ ಪ್ರವೇಶಿಸಿದ್ದು, ಮಗು ಮತ್ತು ಬಾಣಂತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ನಾವೂರು ಗ್ರಾಮದ ಮಹಿಳೆ ಬುಧವಾರ ಇಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಈ ಸಂದರ್ಭ ಅವರ ಗಂಟಲ ದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಈ ನಡುವೆ ಬುಧವಾರ ರಾತ್ರಿಯೇ ಅವರಿಗೆ ಹೆರಿಗೆ ಆಗಿತ್ತು. ಗುರುವಾರ ಸಂಜೆ ಕೋವಿಡ್ 19 ಪರೀಕ್ಷೆಯ ಫ‌ಲಿತಾಂಶದ ಮಾಹಿತಿ ಸಿಕ್ಕಿತ್ತು. ಇದನ್ನು ಮಹಿಳೆ ಪತಿಗೆ ತಿಳಿಸಿದ ಕೂಡಲೇ ಅವರು ಕಾರಿನಲ್ಲಿ ಬಂದು ತಾಯಿ-ಮಗುವನ್ನು ಕರೆದೊಯ್ದಿದ್ದಾರೆ. ಅವರು ಎಲ್ಲಿಗೆ ಹೋಗಿದ್ದಾರೆಂದು ಗೊತ್ತಾಗಿಲ್ಲ. ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 109 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಉಡುಪಿಯಲ್ಲಿ 36, ಕುಂದಾಪುರ 62, ಕಾರ್ಕಳ 11 ಪ್ರಕರಣ ದಾಖಲಾಗಿದೆ. 61 ಪುರುಷರು, 40 ಮಹಿಳೆಯರು, 6 ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳಿಗೆ ಸೋಂಕು ಕಾಣಿಸಿ ಕೊಂಡಿದೆ. ಉಡುಪಿಯಲ್ಲಿ ಒಬ್ಬರು ಮತ್ತು ಕುಂದಾಪುರದಲ್ಲಿ ಇಬ್ಬರು ಸಹಿತ ಒಟ್ಟು 3 ಮಂದಿ ಸಾವನ್ನಪ್ಪಿದ್ದಾರೆ.

ಉಡುಪಿಯ ಡಾ| ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯಲ್ಲಿ ಕುಕ್ಕೆಹಳ್ಳಿಯ 49ರ ಹರೆಯದ ವ್ಯಕ್ತಿ ಮೃತಪಟ್ಟಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದಾಗ ಕೋವಿಡ್ 19 ಲಕ್ಷಣ ಕಂಡುಬಂದಿತ್ತು.

ಬುಧವಾರ ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಂಕೋಲಾದ ವ್ಯಕ್ತಿ ಮೃತಪಟ್ಟಿದ್ದು, ಕೋವಿಡ್‌ ತಗಲಿದ್ದ ಹಿನ್ನೆಲೆಯಲ್ಲಿ ಬೀಡಿನ ಗುಡ್ಡೆಯಲ್ಲಿ ಕೋವಿಡ್‌ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಸ್ತಮಾದಿಂದ ಬಳಲುತ್ತಿದ್ದ ಕುಂದಾಪುರ ಮರವಂತೆಯ 58 ವರ್ಷದ ವ್ಯಕ್ತಿ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ. ಕೋವಿಡ್‌ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದ್ದು, ಚಿಕಿತ್ಸೆ ಆರಂಭಿಸುವ ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು.

14 ಕಡೆ ಸೀಲ್‌ಡೌನ್‌
ಉಡುಪಿ ತಾಲೂಕಿನ ಮಣಿಪಾಲದಲ್ಲಿ 5, 76 ಬಡಗಬೆಟ್ಟುವಿನಲ್ಲಿ 2, ತೆಂಕನಿಡಿಯೂರಿನಲ್ಲಿ 2, ಮೂಡನಿಡಂಬೂರು, ಉದ್ಯಾವರ, ಆತ್ರಾಡಿ, ಹಿರೇಬೆಟ್ಟು, ಹೆರ್ಗದಲ್ಲಿ ತಲಾ 1ರಂತೆ ಉಡುಪಿ ತಾಲೂಕಿನ 14 ಕಡೆಗಳಲ್ಲಿ ಗುರುವಾರ ಸೀಲ್‌ಡೌನ್‌ ಮಾಡಲಾಗಿದೆ.

489 ವರದಿ ನೆಗೆಟಿವ್‌
ಗುರುವಾರ 489 ವರದಿ ನೆಗೆಟಿವ್‌ ಬಂದಿದೆ. 80 ಮಂದಿ ಬಿಡುಗಡೆ ಹೊಂದಿದ್ದಾರೆ. 594 ವರದಿ ಬಾಕಿಯಿದೆ. 163 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯುಳ್ಳ 6 ಪುರುಷರು, ಓರ್ವ ಮಹಿಳೆ, ಸೋಂಕಿತರ ಸಂಪರ್ಕವುಳ್ಳ ಮಹಿಳೆ, ಫ್ಲ್ಯೂಜ್ವರ ಲಕ್ಷಣವುಳ್ಳ 3 ಪುರುಷರು, 1 ಮಹಿಳೆ ಸಹಿತ ಒಟ್ಟು 12 ಮಂದಿ ಐಸೊಲೇಶನ್‌ ವಾರ್ಡ್‌ಗೆ ದಾಖಲಿಸಲಾಗಿದೆ. 17 ಮಂದಿ ಐಸೊಲೇಶನ್‌ ವಾರ್ಡ್‌ನಿಂದ ಬಿಡುಗಡೆ ಹೊಂದಿದ್ದಾರೆ.

537 ಮಾದರಿ ಸಂಗ್ರಹ
ತೀವ್ರ ಉಸಿರಾಟದ ಸಮಸ್ಯೆಯುಳ್ಳ 6, ಸೋಂಕು ಲಕ್ಷಣವುಳ್ಳ 31, ಸೋಂಕಿತರ ಸಂಪರ್ಕವುಳ್ಳ 308, ಫ್ಲ್ಯೂ ಜ್ವರ ಲಕ್ಷಣವುಳ್ಳ 110, ಹಾಟ್‌ಸ್ಪಾಟ್‌ ಸಂಪರ್ಕವುಳ್ಳ 82 ಸಹಿತ ಒಟ್ಟು 537 ಮಂದಿಯ ಮಾದರಿಗಳನ್ನು ಗುರುವಾರ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆ ಸೀಲ್‌ಡೌನ್‌
ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ಓರ್ವ ದಾದಿ ಸಹಿತ ಇತರ ಸಿಬಂದಿಯನ್ನೂ ಸೋಂಕು ಬಾಧಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು 3 ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.

ಆಸ್ಪತ್ರೆಯಲ್ಲಿ ವೈರಸ್‌ ವ್ಯಾಪಕವಾಗಿ ಹರಡಿರುವ ಭೀತಿ ಎದುರಾಗಿದ್ದು, ಸ್ಯಾನಿಟೈಸ್‌ ಮಾಡುವ ಮಾಡಲಾಗುತ್ತಿದೆ. ತುರ್ತುಚಿಕಿತ್ಸೆ, ಐಸೊಲೇಶನ್‌ ಹಾಗೂ ಫೀವರ್‌ ಕ್ಲಿನಿಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಆಸ್ಪತ್ರೆಯ ಉಳಿದ ವೈದ್ಯರು ಹಾಗೂ ಸಿಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪಾಸಿಟಿವ್‌ ಬಂದವರನ್ನು ಪರೀಕ್ಷಿಸಿದ ವೈದ್ಯರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಸರ್ಜನ್‌ ಡಾ| ಮಧುಸೂದನ ನಾಯಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next