ನವದೆಹಲಿ: ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಟು ಪತ್ರಕರ್ತರಿಗೆ ಆನ್ಲೈನ್ನಲ್ಲಿ ಭಯೋತ್ಪಾದಕರಿಂದ ಬೆದರಿಕೆಗಳು ಬರುತ್ತಿದ್ದು ಈ ಕಾರಣದಿಂದ ನಾಲ್ವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಈ ಸಂಬಂಧ ಶ್ರೀನಗರದ ಶೇರ್ಗರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರೈ ಹೇಳಿದರು.
ವರದಿಯಾದಂತೆ, ಶ್ರೀನಗರ ಮೂಲದ ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಎಂಟು ಪತ್ರಕರ್ತರಿಗೆ ಭಯೋತ್ಪಾದಕ ಬ್ಲಾಗ್ “ಕಾಶ್ಮೀರ ಫೈಟ್” ಮೂಲಕ ಬೆದರಿಕೆಗಳು ಬಂದಿವೆ. ಬೆದರಿಕೆಗೆ ಹೆದರಿದ ನಾಲ್ವರು ಮಾಧ್ಯಮ ಪ್ರತಿನಿಧಿಗಳು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ರಾಜೀನಾಮೆ ನೀಡಿರುವ ಮಾಧ್ಯಮ ಪ್ರತಿನಿಧಿಗಳು ರೈಸಿಂಗ್ ಕಾಶ್ಮೀರ್ ಎಂಬ ಮಾಧ್ಯಮ ಸಂಸ್ಥೆಗೆ ಸೇರಿದವರು ಎಂದು ಲಿಖಿತ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಭಯೋತ್ಪಾದನೆ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಸಚಿವರು ಹೇಳಿದರು.
Related Articles
ಭಯೋತ್ಪಾದಕ ಬೆದರಿಕೆ ಮತ್ತು ದಾಳಿಗಳಿಂದ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಜನರ ಜೀವಗಳನ್ನು ರಕ್ಷಿಸಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ಇದರಲ್ಲಿ ಪೂರ್ವಭಾವಿ ಭದ್ರತಾ ವ್ಯವಸ್ಥೆಗಳು ಸೇರಿವೆ.
ಪೊಲೀಸ್, ಸೇನೆ, ಅರೆಸೇನಾ ಮತ್ತು ಗುಪ್ತಚರ ಸಂಸ್ಥೆಗಳನ್ನು ಒಳಗೊಂಡಿರುವ ಭದ್ರತಾ ವ್ಯವಸ್ಥೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ನಿಯೋಜಿಸಲಾಗಿದೆ ಎಂದರು.