Advertisement

ರೋಗಿ ಸಾವಿಗೆ ಕಾರಣರಾದ ವೈದ್ಯರಿಗೆ 8 ಲಕ್ಷ ದಂಡ

01:22 PM Jan 17, 2023 | Team Udayavani |

ಮೈಸೂರು: ವೈದ್ಯಕೀಯ ನಿರ್ಲಕ್ಷ್ಯದೊಂದಿಗೆ ಸೇವಾ ನ್ಯೂನತೆ ಎಸಗಿ ರೋಗಿಯ ಸಾವಿಗೆ ಕಾರಣರಾದ ಇಬ್ಬರು ವೈದ್ಯರಿಗೆ ಮೈಸೂರು ಜಿಲ್ಲಾ ಗ್ರಾಹಕ ಆಯೋಗ 8 ಲಕ್ಷ ರೂ.ದಂಡ ವಿಧಿಸಿದೆ.

Advertisement

ಮೈಸೂರಿನ ವಿಕ್ರಮ್‌ ಜ್ಯೋತ್‌ ಆಸ್ಪತ್ರೆಯ ವೈದ್ಯರಾದ ಡಾ.ರಾಜ್‌ ಕುಮಾರ್‌ ವಾಧ್ವಾ, ಡಾ.ಎನ್‌. ರಾಘವೇಂದ್ರ ದಂಡ ಪಾವತಿಸಬೇಕಾಗಿದೆ. ಇವರಿಬ್ಬರ ನಿರ್ಲಕ್ಷ್ಯದಿಂದ ಮೈಸೂರಿನ ಕುವೆಂಪು ನಗರದ ನಿವಾಸಿ ಕೆ.ಶಂಕರ ನಾರಾಯಣ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ದಾವೆ ಹೂಡಲಾಗಿತ್ತು.

ಮೈಸೂರಿನ ಕುವೆಂಪು ನಗರದ ನಿವಾಸಿ ಎಚ್‌.ಜೆ. ವನಜಾಕ್ಷಿಯವರ ಪತಿ ಕೆ.ಶಂಕರ ನಾರಾಯಣ ಅವರು 2015ರ ಸಮಯದಲ್ಲಿ ಅನಾರೋಗ್ಯದ ಕಾರಣ ಯಾದವಗಿರಿಯಲ್ಲಿರುವ ವಿಕ್ರಮ್‌ ಜ್ಯೋತ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆ ಸಮಯದಲ್ಲಿ ಡಾ.ರಾಜ್‌ ಕುಮಾರ್‌ ವಾಧ್ವಾ ಅವರು ಶಂಕರ ನಾರಾಯಣ ಅವರಿಗೆ ಚಿಕಿತ್ಸೆ ನೀಡಿದ್ದಲ್ಲದೆ ಮಾತ್ರೆಯನ್ನು ಸೇವಿಸುವಂತೆ ಸಲಹೆ ನೀಡಿದ್ದರು. ಬಳಿಕ ಹೊಟ್ಟೆನೋವಿನ ಕಾರಣ ಶಂಕರ್‌ ನಾರಾಯಣ ಅವರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು.

ಆಗ ಎಂಐಆರ್‌ ಸ್ಕ್ಯಾನ್‌ ಮಾಡಲಾಗಿ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ನಂತರ ಶಂಕರ್‌ ನಾರಾಯಣ ಅವರಿಗೆ ಚಿಕಿತ್ಸೆ ನೀಡುವಂತೆ ಡಾ.ಎನ್‌.ರಾಘವೇಂದ್ರರಿಗೆ ಸೂಚಿಸಲಾಯಿತು. ಅವರು ಶಂಕರ ನಾರಾಯಣ ಅವರು ಕ್ಯಾನ್ಸರ್‌, ಅಲ್ಸರ್‌ ಅಥವಾ ಟಿ ಬಿ ಕಾಯಿಲೆಯಿಂದ ಬಳಲುತ್ತಿರಬಹುದೆಂಬ ಶಂಕೆಯಿಂದ ಅವರ ಪತ್ನಿ ವನಜಾಕ್ಷಿಯವರ ಗಮನಕ್ಕೆ ತಾರದೇ ಶಂಕರ ನಾರಾಯಣ ಅವರಿಗೆ ಲೆಪರಾಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಸಮಯದಲ್ಲಿ ಸೂಕ್ತ ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿದ್ದರಿಂದ ರೋಗಿಯು ಪ್ರಜ್ಞಾಹೀನ ಸ್ಥಿತಿಗೆ ಹೋಗುವಂತಾಯಿತು. ತದ ನಂತರ ಶಂಕರ ನಾರಾಯಣ್‌ ಅವರ ವಿವಿಧ ಅಂಗಗಳ ವೈಫ‌ಲ್ಯ ಉಂಟಾಗಿ ರೋಗಿಯ ಆರೋಗ್ಯ ತೀರಾ ಹದಗೆಟ್ಟಿತು. ತಾತ್ಕಾಲಿಕ ವೆಂಟಿಲೇಟರ್‌ ಅಳವಡಿಸಿ ತೀವ್ರನಿಗಾ ಘಟಕಕ್ಕೆ ರೋಗಿಯನ್ನು ದಾಖಲಿಸಲಾಯಿತು.

ನಂತರ ರೋಗಿಯು 14 ದಿನ ಪ್ರಜ್ಞಾಹೀನ ಸ್ಥಿತಿ ತಲುಪಲಾಗಿ ಮೂರು ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರುವಂತಾಯಿತು. ಆನಂತರ ಆಸ್ಪತ್ರೆಯವರಿಗೆ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವನಜಾಕ್ಷಿ ಅವರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಡಾ.ಎನ್‌.ರಾಘವೇಂದ್ರ ಅವರು ರೋಗಿಯನ್ನು ಕರೆದುಕೊಂಡು ಹೋಗಿ, ಇನ್ನು ಉಳಿಯುವುದು ಕಷ್ಟ ಎಂದು ಹೇಳಿ ಕೇಸ್‌ ಹಿಸ್ಟರಿಯನ್ನೂ ನೀಡದೇ ರೋಗಿಯನ್ನು 2015ರಲ್ಲಿ ಡಿಸ್ಚಾರ್ಜ್‌ ಮಾಡಿದ್ದರು. ಮತ್ತೆ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿ ಎರಡು ದಿನದ ಬಳಿಕ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟರು.

Advertisement

ಗ್ರಾಹಕರ ಆಯೋಗದ ಮೊರೆ: ಶಂಕರ್‌ ನಾರಾಯಣ್‌ ಅವರ ಸಾವಿಗೆ ವಿಕ್ರಮ್‌ ಜ್ಯೋತ್‌ ಆಸ್ಪತ್ರೆ ಹಾಗೂ ಅದರ ವೈದ್ಯರಾದ ಡಾ.ರಾಜ್‌ ಕುಮಾರ್‌ ವಾಧ್ವಾ ಮತ್ತು ಡಾ.ಎನ್‌.ರಾಘವೇಂದ್ರ ಅವರ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನತೆಯೇ ಕಾರಣ ಎಂದು ಆರೋಪಿ ವನಜಾಕ್ಷಿ ಮತ್ತು ಅವರ ಪುತ್ರಿ ಶಿವಾನಿ ಶಂಕರ್‌ ಪರಿಹಾರ ಕೋರಿ 2017 ರ ಡಿ.14 ರಂದು ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ಈ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ 2021ರಲ್ಲಿ ಶಂಕರ ನಾರಾಯಣ ಅವರ ಪತ್ನಿ ವನಜಾಕ್ಷಿಯವರೂ ಸಹ ಮೃತರಾದರು.

ವೈದ್ಯಕೀಯ ನಿರ್ಲಕ್ಷ್ಯತೆ ಸಾಬೀತು: ಪ್ರಕರಣದ ವಿಚಾರಣೆ ನಡೆಸಿದ ಮೈಸೂರು ಜಿಲ್ಲಾ ಗ್ರಾಹಕರ ಆಯೋಗವು, ವೈದ್ಯರಾದ ಡಾ.ರಾಜ್‌ ಕುಮಾರ್‌ ವಾಧ್ವಾ ಮತ್ತು ಡಾ.ಎನ್‌ ರಾಘವೇಂದ್ರ ಅವರ ವೈದ್ಯಕೀಯ ನಿರ್ಲಕ್ಷ್ಯತೆ ಹಾಗೂ ಸೇವಾ ನ್ಯೂನತೆ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಯೋಗವು, ಇಬ್ಬರು ವೈದ್ಯರಿಗೆ 8 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದೆ. ಜತೆಗೆ ಪ್ರಕರಣದ ವೆಚ್ಚ 5 ಸಾವಿರ ರೂ. ಪಾವತಿಸುವಂತೆ ಸೂಚನೆ ನೀಡಲಾಗಿದೆ. ಮೃತ ಶಂಕರ ನಾರಾಯಣ್‌ ಅವರ ಪತ್ನಿ ಮತ್ತು ಪುತ್ರಿ ಪರವಾಗಿ ವಕೀಲ ಕೆ.ಈಶ್ವರ ಭಟ್‌ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next