Advertisement

7ನೇ ಆರ್ಥಿಕ ಗಣತಿ ಕಾರ್ಯಕ್ಕೆ ಚಾಲನೆ

12:41 PM Jan 02, 2020 | Suhan S |

ಬೆಳಗಾವಿ: ಆರ್ಥಿಕ ಗಣತಿ ಕಾರ್ಯವನ್ನು ಪ್ರಪ್ರಥಮ ಬಾರಿಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಕೈಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್‌. ಬಿ. ಬೊಮ್ಮನಹಳ್ಳಿ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 7ನೇ ಆರ್ಥಿಕ ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 7ನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯಾಚರಣೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಕೃಷಿ ಹಾಗೂ ಕೃಷಿಯೇತರ ಉದ್ಯಮಗಳ ಪಟ್ಟಿಯನ್ನು ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ತಯಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಆರ್ಥಿಕ ಗಣತಿಯಲ್ಲಿ ಗಣತಿದಾರರು ತಮಗೆ ನಿರ್ದಿಷ್ಟ ಪಡಿಸಿದ, ಗಡಿಯೊಳಗೆ ಬರುವ ಪ್ರತಿ ಮನೆ, ಕಟ್ಟಡಗಳಿಗೂ ಭೇಟಿ ನೀಡುವುದರ ಮೂಲಕ ಅಲ್ಲಿ ನಡೆಯುವ ಉದ್ಯಮ ಅಥವಾ ವ್ಯಾಪಾರ ಘಟಕಗಳ, ಮಾಲೀಕರ ಲಿಂಗವಾರು, ಸಾಮಾಜಿಕ  ಪಂಗಡವಾರು ಮಾಹಿತಿಯನ್ನು, ಉದ್ಯಮವಾರು ಕೆಲಸಗಾರರ ಮಾಹಿತಿ, ಉದ್ಯಮಿ ಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಯನ್ನು ಕಲೆ ಹಾಕುತ್ತಾರೆ ಎಂದರು.

ಈ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಲು ಮಾತ್ರ ಉಪಯೋಗಿಸಲಾಗುತ್ತಿದ್ದು, ಎಲ್ಲ ಸಂಗ್ರಹಿಸಿದ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದರು.

ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥರು ಗಣತಿದಾರರು ಮತ್ತು ಮೇಲ್ವಿಚಾರರಿಗೆ ಜನಸಾಮಾನ್ಯರೊಂದಿಗೆ ಸೌಹಾರ್ದ ಯುತವಾಗಿ ಸಂವಹನ ನಡೆಸಿ ಅಪೇಕ್ಷಿತ ಮಾಹಿತಿಯನ್ನು ಸಂಗ್ರಹಿಸಲು ಸೂಕ್ತ ನಿರ್ದೇಶನಗಳನ್ನು ನೀಡಲು ಸೂಚಿಸಿದ ಜಿಲ್ಲಾಧಿಕಾರಿಗಳು ಈ ಗಣತಿ ಕಾರ್ಯವನ್ನು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಜಿಲ್ಲೆಯಾದ್ಯಂತ ನಿರ್ವಹಿಸಿ ಗುಣಮಟ್ಟದ ಅಂಕಿ ಅಂಶಗಳನ್ನು ನಿಗದಿತ ಅವಧಿಯಲ್ಲಿ ಸಂಗ್ರಹಿಸಬೇಕು ಎಂದರು.

ಈ ಗಣತಿ ಕಾರ್ಯವು 2020 ಜನವರಿ 1ರಿಂದ ಮಾರ್ಚ್‌ 31ರವರೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲಿದೆ. ಜನ ಸಾಮಾನ್ಯರು ಸಹ ಸಾಮಾನ್ಯ ಸೇವಾ ಕೇಂದ್ರದಿಂದ ನೀಡಲಾದ ಗುರುತಿನಚೀಟಿಯೊಂದಿಗೆ ತಮ್ಮ ಮನೆ ಮತ್ತು ಉದ್ಯಮಗಳಿಗೆ ಆಗಮಿಸುವ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದರು.

Advertisement

ಗಣತಿ ಸಂದರ್ಭದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಗಳಿಂದ ಸೂಕ್ತ ಸಹಕಾರ ಅಗತ್ಯವಾಗಿದೆ ಎಂದರು.  ರೇಖಾ ಬಿ. ಶೆಟ್ಟರ, ಪಿ.ಜಿ. ಕುಲಕರ್ಣಿ, ವೀರೇಶ ಪುರಾಣಿಕ, ಕಿರಣ ಜೋಶಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next