Advertisement

ಮೋದಿ ಸರಕಾರಕ್ಕೆ 7 ವರ್ಷ; ಇಡೀ ದಿನ ಡಿಸಿಎಂ ಬೆಂಗಳೂರು ರೌಂಡ್ಸ್‌

05:24 PM May 30, 2021 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರಕಾರ ಏಳನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರವೂ ಸೇರಿ ನಗರದ ವಿವಿಧೆಡೆ ಸಂಚರಿಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ; ಪಕ್ಷದ ಕಾರ್ಯಕರ್ತರು, ಕೋವಿಡ್‌ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಯನ್ನು ಭೇಟಿ ಮಾಡಿದರು.

Advertisement

ಮೊದಲಿಗೆ ಅರಮನೆ ನಗರ ವಾರ್ಡ್‌ ಆರ್‌ಎಂವಿ ಬಡಾವಣೆ ನಿವಾಸಿಗಳ ಸಂಘದ ಪಾರ್ಕ್‌ನಲ್ಲಿ  ವ್ಯಾಕ್ಸಿನೇಷನ್‌ ಅಭಿಯಾನದಲ್ಲಿ ಪಾಲ್ಗೊಂಡ ಅವರು, ಅಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪಿನ ಜನಕ್ಕೆ ನೀಡಲಾಗುತ್ತಿದ್ದ ಲಸಿಕೆ ಮಾಹಿತಿಯನ್ನು ಪಡೆದುಕೊಂಡರು. ವೈದ್ಯರು, ಸಿಬ್ಬಂದಿ ಹಾಗೂ ಲಸಿಕೆ ಪಡೆಯಲು ಬಂದಿದ್ದ ಹಿರಿಯ ನಾಗರೀಕರ ಯೋಗಕ್ಷೇಮ ವಿಚಾರಿಸಿದರು, ಈ ಸಂದರ್ಭದಲ್ಲಿ ಸರಕಾರದ ಕೋವಿಡ್‌ ನಿರ್ವಹಣೆ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಗುಟ್ಟಹಳ್ಳಿ ವಾರ್ಡ್‌ನಲ್ಲಿ ಸೇವಾ ಹೀ ಸಂಘಟನೆ ಮೂಲಕ ಬಡವರು, ಮುಂಚೂಣಿ ಕಾರ್ಯಕರ್ತರಾದ ಪೌರ ಕಾರ್ಮಿಕರು, ಬೆಸ್ಕಾಂ ಮತ್ತು ಒಳಚರಂಡಿ & ಜಲಮಂಡಳಿ ಕಾರ್ಮಿಕರಿಗೆ ಆಹಾರ ದಾನ್ಯದ ಕಿಟ್ʼಗಳನ್ನು ವಿತರಿಸಿದರು. ಬಳಿಕ ಕಾಡುಮಲ್ಲೇಶ್ವರ ವಾರ್ಡ್‌ನ ಸಮುದಾಯ ಭವನದಲ್ಲಿ ವ್ಯಾಕ್ಸಿನ್‌ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.

ಸಿಹಿ, ಫುಡ್ ಕಿಟ್ ಹಂಚಿದ ಡಿಸಿಎಂ:

ಮೋದಿ ಸರಕಾರಕ್ಕೆ 7 ವರ್ಷ ತುಂಬಿದ ಕಾರಣ ಎಲ್ಲ ಕಡೆಗಳಲ್ಲೂ ಲಸಿಕೆ ಪಡೆಯಲು ಬಂದು ಸಾಲಿನಲ್ಲಿ ನಿಂತಿದ್ದವರಿಗೆ ಡಿಸಿಎಂ ಸ್ವತಃ ಸಿಹಿ ಹಂಚಿದರು. ಅದೇ ರೀತಿ ಎಂಎಸ್‌ಆರ್‌ ನಗರದಲ್ಲಿ ಕೋವಿಡ್‌ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಆಹಾರ ಕಿಟ್‌ಗಳು ಮತ್ತು ಪ್ರೆಶರ್‌ ಕುಕ್ಕರ್‌ಗಳನ್ನು ವಿತರಣೆ ಮಾಡಿದರು. ಅಲ್ಲದೆ, ಪೌರ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿದರು. ಮಾಜಿ ಶಾಸಕ ಮುನಿರಾಜು ಅವರೊಂದಿಗೆ ದಾಸರಹಳ್ಳಿ ಪಿಎಚ್‌ಸಿಗೆ ಭೇಟಿ ನೀಡಿ, ಅಲ್ಲಿನ ಆಶಾ ಕಾರ್ಯಕರ್ತೆಯರು, ಅರೆ ವೈದ್ಯ ಸಿಬ್ಬಂದಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು.

Advertisement

ದಾಸರಹಳ್ಳಿಗೆ ಆಕ್ಸಿಜನ್‌ ಸಾಂದ್ರಕ :

ಡಿಸಿಎಂ ಅಶ್ವತ್ಥನಾರಾಯಣ ಅವರು ಐದು ಆಮ್ಲಜನಕ ಸಾಂದ್ರಕಗಳನ್ನು ಮಾಜಿ ಶಾಸಕ ಮುನಿರಾಜು ಅವರಿಗೆ ಹಸ್ತಾಂತರ ಮಾಡಿದರು. ಕ್ಷೇತ್ರದ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಇವು ಲಭ್ಯವಿದ್ದು, ಜನರು ಅನುಕೂಲ ಪಡೆಯಬಹುದು ಎಂದು ಅವರು ಹೇಳಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ:

ದಾಸರಹಳ್ಳಿ ಮಂಡಲ ವಿಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅವರು, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಸೇರಿ ಎಲ್ಲ ಪ್ರತಿಪಕ್ಷಗಳು ಒಡೆದಾಳುವ ರಾಜಕೀಯ ಮಾಡಿಕೊಂಡು ದೇಶದ ಹಿತವನ್ನು ಕಡೆಗಣಿಸಿದವು. ಕೋವಿಡ್‌ನಂಥ ಸಂಕಷ್ಟ ಕಾಲದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ನಡೆಸಿದವು ಎಂದು ಡಾ.ಸಿ.ಎನ್.‌ಅಶ್ವತ್ಥನಾರಾಯಣ ಕಟುವಾಗಿ ಟೀಕಿಸಿದರು. ಇನ್ನೊಂದೆಡೆ ಈ ವರ್ಷದ ಕೊನೆಯೊಳಗೆ ರಾಜ್ಯದ ಹಾಗೂ ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್‌ ಸಿಗಲಿದೆ. ಈವರೆಗೆ ದೇಶದಲ್ಲಿ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜೂನ್ ನಲ್ಲಿ 120 ಮಿಲಿಯನ್ ನಷ್ಟು ಕೋವಿಡ್ ಲಸಿಕೆಗಳು ಲಭ್ಯ : ಕೇಂದ್ರ ಆರೋಗ್ಯ ಸಚಿವಾಲಯ

ಮೋದಿ ನೇತೃತ್ವದಲ್ಲಿ ಇಡೀ ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಅವರು ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಓರ್ವ ಮಹಾಪುರುಷ, ಯುಗಪುರುಷ ನಮ್ಮ ದೇಶದ ಪ್ರಧಾನಿಯಾಗಿರುವುದು ಅದೃಷ್ಟದ ಸಂಗತಿ. ಇದನ್ನು ಪ್ರತಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ಎಂದರು.

ಮೋದಿ ಬರುವ ತನಕ ನಮ್ಮ ದೇಶದಲ್ಲಿ ಒಂದು ವೇಂಟಿಲೇಟರ್‌ ತಯಾರಾಗುತ್ತಿರಲಿಲ್ಲ. ಮಾಸ್ಕ್‌, ಸ್ಯಾನಿಟೈರ್‌, ಪಿಪಿಇ ಕಿಟ್‌ ಇರಲಿಲ್ಲ. ಪ್ರತಿಯೊಂದಕ್ಕೂ ಇನ್ನೊಂದು ದೇಶವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಈಗ ಕೇವಲ ಒಂದೇ ವರ್ಷದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದೇವೆ. ಅಷ್ಟೇ ಏಕೆ? ಆಮ್ಲಜನಕ ಸಾಂದ್ರಕಗಳನ್ನೂ ಈಗ ಆತ್ಮನಿರ್ಭರ್‌ ಭಾರತ ಕಲ್ಪನೆಯಡಿ ನಮ್ಮಲ್ಲಿಯೇ ತಯಾರು ಮಾಡಿಕೊಳ್ಳುತ್ತಿದ್ದೇವೆ ಎಂದರೆ ಹುಡುಗಾಟಿಕೆ ಅಲ್ಲ ಎಂದು ಅವರು ನುಡಿದರು.

ಮೊದಲ ಹಂತದಲ್ಲಿ ಲಸಿಕೆ ನೀಡಲು ಆರಂಭಿಸಿದಾಗ ಕಾಂಗ್ರೆಸ್‌ ಮತ್ತಿತರೆ ಪ್ರತಿಪಕ್ಷಗಳು ದೊಡ್ಡ ಗೊಂದಲವನ್ನೇ ಸೃಷ್ಟಿ ಮಾಡಿದವು. ಅಪಪ್ರಚಾರ ನಡೆಸಿದವು. ಈಗ ಲಸಿಕೆ ಸಿಗುತ್ತಿಲ್ಲ ಎಂದು ಹುಯಿಲೆಬ್ಬಿಸುತ್ತಿವೆ. ಪ್ರತಿಪಕ್ಷಗಳ ದ್ವಂದ್ವ ದೋರಣೆಗೆ ಇದಕ್ಕಿಂತ ನಿದರ್ಶನ ಬೇಕೆ? ನಮ್ಮ ದೇಶದಲ್ಲಿ ಸಂಶೋಧನೆಯಾದ ನಮ್ಮದೇ ಲಸಿಕೆಯ ಬಗ್ಗೆ ಹಗುರವಾಗಿ ಮಾಡುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.

ಲಸಿಕೆ ತಯಾರಿಕೆಯಲ್ಲಿ ದೊಡ್ಡ ಪ್ರಮಾಣದ ಹೆಜ್ಜೆಗಳನ್ನಿಟ್ಟ ಭಾರತಕ್ಕೆ ತಡೆಯೊಡ್ಡಲು ಜಾಗತಿಕ ಮಟ್ಟದಲ್ಲಿ ಬಹಳ ಕುತಂತ್ರವೇ ನಡೆಯಿತು. ಕಚ್ಛಾ ವಸ್ತುಗಳು ಬರದಂತೆ ತಡೆದರು. ಪೇಟೆಂಟ್‌ ನೆಪ ಹೇಳಿದರು. ಇವೆಲ್ಲ ಬಿಕ್ಕಟ್ಟುಗಳನ್ನು ಪ್ರಧಾನಿಯವರು ನಿರಾಯಾಸವಾಗಿ ಶಮನ ಮಾಡಿದರು ಎಂದು ಡಿಸಿಎಂ ಹೇಳಿದರು.

ಇಡೀ ದಿನದ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ಮುನಿರಾಜು, ಪಕ್ಷದ ಮಂಡಲಾಧ್ಯಕ್ಷ ಲೋಕೇಶ್, ಅರಮನೆ ನಗರ ವಾರ್ಡಿನ ಬಿಬಿಎಂಪಿ ಮಾಜಿ ಸದಸ್ಯೆ ಸುಮಂಗಲ ಕೇಶವ್, ಮತ್ತೀಕೆರೆ ಬಿಬಿಎಂಪಿ ಮಾಜಿ ಸದಸ್ಯ ಜಯಪ್ರಕಾಶ್, ಅದೇ ವಾರ್ಡಿನ ಪಕ್ಷದ ಅಧ್ಯಕ್ಷ ಪ್ರೇಮ್ ಕುಮಾರ್, ಪಕ್ಷದ ಕಾರ್ಯಕರ್ತರು ಡಿಸಿಎಂ ಜತೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next