ದೊಡ್ಡಬಳ್ಳಾಪುರ: ಇತ್ತೀಚೆಗೆ ತಾಲೂಕಿನ ಸಾಸಲು ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ನಡೆದ “ಜಿಲ್ಲಾಧಿಕಾರಿಗಳ ನಡೆ- ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ 688 ವಿವಿಧ ಸಾಮಾಜಿಕ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಹಾಗೂ ಕಂದಾಯ ಸಮಸ್ಯೆ ಅರ್ಜಿ ಗಳನ್ನು ವಿಲೇವಾರಿ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸರ್ಕಾರ ಒಂದು ಕಡೆ ಜನ ಒಂದು ಕಡೆ ಇರುವ ಪದ್ಧತಿ ಹೋಗಿ ಸರ್ಕಾರವೇ ಮನೆಯ ಬಾಗಿಲಿಗೆ ಹೋಗಬೇಕು. ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಬೇಕು ಎನ್ನುವ ಉದ್ದೇಶದಿಂದ ಕಂದಾಯ ಇಲಾಖೆಯಿಂದ ರಾಜ್ಯದ 227 ತಾಲೂಕು ಗಳಲ್ಲಿ ಏಕಕಾಲಕ್ಕೆ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರದಿಂದ ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಚಾಲನೆ ನೀಡಿದ್ದರು.
11ಜಮೀನು ಮಂಜೂರು: ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ 58, ವೃದ್ಧಾಪ್ಯ ವೇತನ 97, ವಿಧವಾ ವೇತನ 17, ಅಂಗವಿಕಲರಿಗೆ -4, ಮನಸ್ವಿನಿ 3 ಮಂದಿಗೆ ಪಿಂಚಣಿ ವಿತರಿಸಲಾಯಿತು. ಎನ್ಎಸ್ ಎಪಿ ಅಡಿಯಲ್ಲಿ 3 ಮಂದಿ ವಿಧವೆಯರಿಗೆ ನೆರವು ನೀಡಲಾಗಿದೆ. 30 ಪೌತಿ ಖಾತೆ ಮಾಡಿಕೊಡಲಾಗಿದೆ. 16 ಪಹಣಿ ತಿದ್ದುಪಡಿ, ಪೋಡಿ ಮುಕ್ತ ಗ್ರಾಮದಡಿ 5 ಫಲಾನುಭವಿಗಳಿಗೆ ಪೋಡಿ ಮಾಡಿಕೊಡಲಾಗಿದೆ. 63 ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ. ಸಾಗುವಳಿ ಚೀಟಿಯನ್ವಯ 12 ಮಂದಿಗೆ ಖಾತೆ ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಿಗೆ 11 ಜಮೀನು ಮಂಜೂರಾಗಿದೆ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ಹೊಸಹಳ್ಳಿ ಗ್ರಾಮದ ಸರ್ವೆ ನಂ.55ರಲ್ಲಿ 5 ಎಕರೆ ಭೂಮಿಯನ್ನು 20×30 ಅಳತೆಯಲ್ಲಿ 400 ಮಂದಿಗೆ ವಸತಿ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗೆ ಹಸ್ತಾಂತರ ಮಾಡುವಂತೆ ಹಾಗೂ ಸ್ಮಶಾನ ಒತ್ತುವರಿ ತೆರವಿಗೆ ಸಚಿವ ಅಶೋಕ್ ಸೂಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವ್ಹೀಲ್ ಚೇರ್, ಶ್ರವಣ ಸಾಧನ ವಿತರಿಸಲಾಗಿದೆ. ಬಹಿರಂಗವಾಗಿ ವಿಲೇವಾರಿಯಾಗಲಿ: ಆಧಾರ್, ಮತದಾರರ ಗುರುತಿನ ಚೀಟಿಗಳ ವಿತರಣೆಗೆ ಆದ್ಯತೆ ನೀಡುವುದಕ್ಕಿಂತ, ಜಿಲ್ಲಾಧಿಕಾರಿ, ತಹಶೀಲ್ದಾರ್ ರಂತಹ ಅಧಿಕಾರಿಗಳು ಭಾಗವಹಿಸುವ ಇಂತಹ ಕಾರ್ಯಕ್ರಮಗಳಲ್ಲಿ ಪೋಡಿ ಮುಕ್ತ ಗ್ರಾಮ ಘೋಷಣೆ, ಕಂದಾಯ ದಾಖಲೆಗಳಾದ ಪಹಣಿ, ಮ್ಯುಟೇಷನ್, ಮೊದಲಾದ ದಾಖಲಾತಿ ರೈತರಿಗೆ ತಲುಪ ಬೇಕು. ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಪ್ರಕರಣಗಳ ದಾಖಲೆ ಪರಿಶೀಲಿಸಿ ಬಹಿರಂಗವಾಗಿ ವಿಲೇವಾರಿಯಾಗಬೇಕು. ಪೌತಿ ಖಾತೆ ಗ್ರಾಮಸ್ಥರ ಸಮ್ಮುಖದಲ್ಲಿ ಯಾವುದೇ ದಾಖಲೆಗಳಿಲ್ಲದೇ ಹೇಳಿಕೆ ಪಡೆದು ಮಾಡಿಕೊಡಬೇಕು ಎನ್ನುತ್ತಾರೆ ರೈತ ನಟರಾಜ್.
ನಮ್ಮ ತಂದೆ ಸಂಜೀವಪ್ಪ ಪೌತಿಯಾಗಿದ್ದು ಅವರ ಪೌತಿ ಖಾತೆಯನ್ನು ನಮ್ಮ ತಾಯಿ ರಂಗಮ್ಮ ಹೆಸರಿಗೆ ವರ್ಗಾಯಿಸಲು ಅರ್ಜಿ ಸಲ್ಲಿಸಿ 6 ತಿಂಗಳಾಗಿತ್ತು. ಕಾರ್ಯಕ್ರಮದಲ್ಲಿ ತ್ವರಿತವಾಗಿ ಖಾತೆ ಬದಲಾವಣೆ ಯಾಯಿತು. ಇಲ್ಲವಾದಲ್ಲಿ ವರ್ಷಗಟ್ಟಲೆ ಅಲೆಯ ಬೇಕಿತ್ತು. ಕಾರ್ಯಕ್ರಮದಲ್ಲಿ ಅಧಿಕಾರಿಗಳು 15 ದಿನಕ್ಕೆ ಮೊದಲೇ ಸಿದ್ಧತೆ ಮಾಡಿಕೊಂಡು, ಯಶಸ್ಸು ಮಾಡಿದ್ದಾರೆ. ಇಂತಹ ಕಾರ್ಯಕ್ರಮಗಳು ನಿರಂತರ ವಾಗಿರಲಿ ಎನ್ನುತ್ತಾರೆ ಹೊಸಹಳ್ಳಿ ಗ್ರಾಮದ ಎಚ್.ಎಸ್.ಮಂಜುನಾಥ್.