Advertisement

ಬಿಸಿಯೂಟ ಸೇವಿಸಿ 66 ಬಾಲಕಿಯರು ಅಸ್ವಸ್ಥ

11:33 AM Dec 22, 2019 | Team Udayavani |

ಮುಧೋಳ/ಮಹಾಲಿಂಗಪುರ: ಅಲ್ಪೋಪಹಾರ ಚಿತ್ರಾನ್ನ (ಬಿಸಿಯೂಟ) ಸೇವಿಸಿ 66 ಮಕ್ಕಳು ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲಿ ಅಸ್ವಸ್ಥಗೊಂಡ ಘಟನೆ ರನ್ನ ಬೆಳಗಲಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲೆಯಲ್ಲಿ ಶನಿವಾರ ನಡೆದಿದೆ.

Advertisement

ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಸೇರಿ ಮಕ್ಕಳನ್ನು ರನ್ನಬೆಳಗಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ ಮೂಲಕ ಮುಧೋಳ ತಾಲೂಕು ಸರಕಾರಿ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಲಾಯಿತು. ಆಸ್ಪತ್ರೆಯಲ್ಲಿದ್ದ ಡಾ| ಎಂ.ಎ.ದೇಸಾಯಿ, ಡಾ| ಸುನೀಲ ಪಿ., ಡಾ| ಶ್ರೇಣಿ ನಾವಲಗಿ, ಡಾ| ರಾಘವೇಂದ್ರ ನಾಲವತವಾಡ ಹಾಗೂ ಇತರೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಟಿಎಚ್‌ಓ ಡಾ| ಮಲಘಾಣ ಮಕ್ಕಳಿಗೆ ಚಿಕಿತ್ಸೆ ನೀಡಿದರು. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಮುಧೋಳ ಆಸ್ಪತ್ರೆಗೆ ಮಕ್ಕಳನ್ನು ದಾಖಲು ಮಾಡಿದ ಸುದ್ದಿ ತಿಳಿದ ಪಾಲಕರು-ಸಂಬಂಧಿಗಳು ಆಸ್ಪತ್ರೆಗೆ ಧಾವಿಸಿದ್ದರಿಂದ ಇವರನ್ನು ನಿಯಂತ್ರಿಸುವುದರಲ್ಲಿ ಪೊಲೀಸರು ಹೈರಾಣಾದರು. ಅಲ್ಪೋಪಹಾರದಲ್ಲಿ ಸೀಮೆಎಣ್ಣೆ ಮಿಶ್ರಿತವಾಗಿದೆ. ಚಿತ್ರಾಣಕ್ಕೆ ಬಳಸಿದ ಆಲೂಗಡ್ಡೆಯಲ್ಲಿ ಸೀಮೆ ಎಣ್ಣೆಯ ವಾಸನೆ ಬಂದಿದೆ. ಅಲ್ಪೋಹಾರ ಮತ್ತು ಇತರ ಸಾಮಗ್ರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಕ್ಕಳಿಗೆ ಸಂಜೆವರೆಗೆ ಚಿಕಿತ್ಸೆ ನೀಡಿ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ ನಂತರ ಮಕ್ಕಳನ್ನು ಕರೆಸಿ ಮನೆಗೆ ಕಳುಹಿಸಲಾಗಿದೆ ಎಂದು ಕ್ಷೇತ್ರ ಸಮಯಯಾಧಿಕಾರಿ ಮಹಾಂತೇಶ ನರಸನಗೌಡರ ತಿಳಿಸಿದ್ದಾರೆ.

ಅಧಿಕಾರಿಗಳ ಭೇಟಿ: ಜಮಖಂಡಿ ಉಪವಿಭಾಗಾಧಿ ಕಾರಿ ಸಿದ್ದು ಹುಲ್ಲೋಳ್ಳಿ, ಮುಧೋಳ ತಹಶೀಲ್ದಾರ್‌ ಬಾಡಗಿ, ಸಿಪಿಐ ಎಚ್‌.ಆರ್‌.ಪಾಟೀಲ, ಪಿಎಸ್‌ಐ ಆರ್‌.ವೈ. ಬೀಳಗಿ, ಬಿಇಒ ಬಿ.ವೈ. ದೇವನಗಾಂವ, ಕ್ಷೇತ್ರ ಸಮನ್ವಯಾ ಧಿಕಾರಿ ಮಹಾಂತೇಶ ನರಸನಗೌಡರ, ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ,ಕಾರ್ಯ ನಿರ್ವಾಹಕ ಅಧಿಕಾರಿಗಳು, ಶಿಕ್ಷಣಸಂಯೋಜಕರು, ಅಕ್ಷರ ದಾಸೋಹ ಅ ಧಿಕಾರಿಗಳು, ಗ್ರಾಮದ ಹಿರಿಯರು ಮುಧೋಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ಆರೋಗ್ಯ ವಿಚಾರಿಸಿದರು.

ಎಪಿಎಂಸಿ ನಿರ್ದೇಶಕ ಅಪ್ಪಾಸಾಹೇಬ ಪವಾರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ನಗರಸಭೆ ಸದಸ್ಯ ಸಿದ್ಧನಾಥ ಮಾನೆ, ಮುಖಂಡರಾದ ಕಾಶಿನಾಥ ಹುಡೇದ, ಮಹಾಲಿಂಗ ಕುಂಬಾರ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ, ಚಿಕ್ಕಪ್ಪ ನಾಯಿಕ, ಸೋಮು ದಂಡಿನ, ಅಶೋಕ ಸಿದ್ದಾಪುರ ಆಗಮಿಸಿದ್ದರು. ಬೆಳಗಲಿಯ ಕೆಜಿಎಸ್‌ ಶಾಲೆಯಲ್ಲಿ 7 ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕರು ಸೇರಿದಂತೆ 8 ಜನ ಶಿಕ್ಷಕರಿದ್ದಾರೆ. ಶಾಲೆಯ ಒಟ್ಟು ದಾಖಲಾತಿ 199 ಇದ್ದು, ಶನಿವಾರ 186 ಮಕ್ಕಳು ಶಾಲೆಗೆ ಹಾಜರಾಗಿದ್ದರು. ಅದರಲ್ಲಿ 66 ಜನ ಮಕ್ಕಳು ಅಸ್ವಸ್ಥರಾಗಿದ್ದಾರೆ.

Advertisement

ಮುಖ್ಯ ಶಿಕ್ಷಕಿ ಅಮಾನತು: ಬಿಸಿಯೂಟ ಮಕ್ಕಳಿಗೆ ಕೊಡುವ ಮುನ್ನ ಶಿಕ್ಷಕರು ಸೇವಿಸಿ ವಹಿಯಲ್ಲಿ ದೃಢೀಕರಣ ಮಾಡಿದ ನಂತರವೇ ಶಾಲಾ ಮಕ್ಕಳಿಗೆ ನೀಡುವ ನಿಯಮವಿದೆ. ಬಿಸಿಯೂಟದಲ್ಲಿ ಸೀಮೆ ಎಣ್ಣಿ ಮಿಶ್ರಿತವಾಗಿ 66 ಮಕ್ಕಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಳಗಲಿಯ ಕೆಜಿಎಸ್‌ ಶಾಲೆಯ ಮುಖ್ಯ ಶಿಕ್ಷಕಿ ಎಸ್‌.ಎಲ್‌. ಕಠಾರೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಡಿಡಿಪಿಐ ಶ್ರೀಶೈಲ ಬಿರಾದರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next