Advertisement

ಗುದ್ದಲಿಪೂಜೆ ನಡೆದು 6 ತಿಂಗಳು; ರಸ್ತೆ ಕಾಮಗಾರಿ ಅಪೂರ್ಣ

12:53 AM May 29, 2020 | Sriram |

ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ಹಾಗೂ ವರಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸಂಪರ್ಕ ಕಲ್ಪಿಸುವ  ಮೂರ್ಸಾಲು ಮುನಿಯಾಲು ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 2019ರ ಡಿಸೆಂಬರ್‌ ತಿಂಗಳಿನಲ್ಲಿ ಗುದ್ದಲಿಪೂಜೆ ನಡೆಸಲಾಗಿದ್ದು, 6 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

Advertisement

ಗುದ್ದಲಿಪೂಜೆಯ ಅನಂತರ ಹಳೆಯ ಡಾಮರು ಅಗೆದು ತೆಗೆಯಲಾಗಿದೆ. ಕಾಂಕ್ರೀಟ್‌ ಕಾಮಗಾರಿ ಮಾತ್ರ ನಡೆದಿಲ್ಲ. ಅಗೆದ ರಸ್ತೆ ಭಾಗಕ್ಕೆ ಜಲ್ಲಿ ಕಲ್ಲು ಹಾಕಿ ಕಾಮಗಾರಿ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರಿಗೆ ಸಂಚಾರಕ್ಕೆ ತೀವ್ರ ಸಂಕಷ್ಟ ಉಂಟಾಗಿದೆ.

ಕಡ್ತಲ  ಮೂರ್ಸಾಲು ಮುನಿಯಾಲು ಸಂಪರ್ಕ ರಸ್ತೆಯ ಸುಮಾರು 2 ಕಿ.ಮೀ. ಭಾಗ ಸಂಪೂರ್ಣ ಹದಗೆಟ್ಟಿದ್ದು ಅಭಿವೃದ್ಧಿಪಡಿಸುವಂತೆ ಸ್ಥಳೀಯರು ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡುತ್ತ ಬಂದಿದ್ದರು.

ಸ್ಥಳೀಯಾಡಳಿತ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸುಮಾರು 1 ಕಿ.ಮೀ. ಭಾಗಕ್ಕೆ ಕಾಂಕ್ರೀಟ್‌ ಅಳವಡಿಸುವ ಬಗ್ಗೆ ಶಾಸಕರ ಮೂಲಕ ಅನುದಾನ ಒದಗಿಸಿತ್ತು. ಅದರಂತೆ ಹಳೆಯ ರಸ್ತೆಯನ್ನು ಅಗೆದು ತೆರವುಗೊಳಿಸಿದ ಗುತ್ತಿಗೆದಾರರು ಮತ್ತೆ ಕಾಮಗಾರಿ ಪ್ರಾರಂಭಿಸಿಲ್ಲ.

ಮಳೆಗಾಲದಲ್ಲಿ ಸಂಚಾರ ಕಷ್ಟ
ರಸ್ತೆ ಅಗೆದು ಜಲ್ಲಿಕಲ್ಲುಗಳನ್ನು ರಾಶಿ ಹಾಕಿರುವು ದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಶೇಖರಗೊಳ್ಳುವುದರಿಂದ ಸ್ಥಳೀಯರು ವಾಹನದಲ್ಲಿ ಸಂಚಾರ ನಡೆಸುವುದು ಅಸಾಧ್ಯವಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಪ್ರತಿನಿತ್ಯ ಮಳೆ ಸುರಿಯಲು ಪ್ರಾರಂಭವಾಗಿದೆ. ಈ ಭಾಗದ ನಾಗರಿಕರು ನಿತ್ಯ ವ್ಯವಹಾರಕ್ಕೆ ಕಡ್ತಲ ಹಾಗೂ ಮುನಿಯಾಲು ಪೇಟೆಯನ್ನು ಅವಲಂಬಿಸಿದ್ದು ರಸ್ತೆ ಅವ್ಯವಸ್ಥೆಯಿಂದಾಗಿ ಸಮಸ್ಯೆಗೆ ಸಿಲುಕಿದ್ದಾರೆ.

Advertisement

ಪ್ರತಿಭಟನೆಗೆ ಸಿದ್ಧತೆ
ರಸ್ತೆ ಕಾಮಗಾರಿ ನಡೆಸದೆ ಸ್ಥಳೀಯರಿಗೆ ಸಂಕಷ್ಟ ಉಂಟುಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲು ಸ್ಥಳೀಯರು ಸಿದ್ಧತೆ ನಡೆಸಿದ್ದರಾದರೂ ಕೊರೊನಾ ವಿರುದ್ಧ ಲಾಕ್‌ಡೌನ್‌ ಇರುವುದರಿಂದ ಪ್ರತಿಭಟನೆ ನಡೆಸಿರಲಿಲ್ಲ. ವಾರದೊಳಗೆ ಕಾಮಗಾರಿ ಪ್ರಾರಂಭ ಮಾಡದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಮಗಾರಿ ನಡೆಸದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮಳೆಗಾಲ ಪ್ರಾರಂಭಗೊಳ್ಳುವ ಮೊದಲು ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ
ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದ್ದು ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ತ್ವರಿತ ಕಾಮಗಾರಿ ನಡೆಸಲು ಮತ್ತೆ ಸೂಚಿಸಲಾಗುವುದು.
-ಸುನಿಲ್‌ ಕುಮಾರ್‌, ಶಾಸಕರು

ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ
ಸ್ಥಗಿತಗೊಂಡ ಕಾಮಗಾರಿಯನ್ನು ಮಳೆಗಾಲದ ಒಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಕಾಮಗಾರಿ ನಡೆಸದಿದ್ದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ರಸ್ತೆಯ ಜಲ್ಲಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಅನಂತರ ರಸ್ತೆ ಅಭಿವೃದ್ಧಿಪಡಿಸಲಾಗುವುದು.
-ಸುಂದರ್‌,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಕಾರ್ಕಳ

ಸಂಕಷ್ಟ
ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ನಿರಂತರ ಪ್ರಯತ್ನಪಟ್ಟರೂ ನಿಷ್ಪ್ರಯೋಜಕವಾಗಿದೆ. ಮಳೆಗಾಲದಲ್ಲಿ  ಮೂರ್ಸಾಲು ಭಾಗದ ಜನತೆಗೆ ತೀವ್ರ ಸಂಕಷ್ಟ ಉಂಟಾಗಲಿದೆ.
-ಅರುಣ್‌ ಕುಮಾರ್‌ ಹೆಗ್ಡೆ, ಅಧ್ಯಕ್ಷರು,
ಕಡ್ತಲ ಗ್ರಾಮ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next