Advertisement

5ಜಿ ವೇಗದ ಶಂಕರ್

06:00 AM Oct 23, 2018 | |

ಕೈಗಳು ಬಲಹೀನವಾಗಿವೆ. ದೃಷ್ಟಿಯೂ ಕೈಕೊಟ್ಟಿದೆ. ಆದರೆ, ಈ ತೊಂದರೆಯಿಂದ ಶಂಕರ್‌ ಎದೆಗುಂದಿಲ್ಲ, ಹತಾಶರಾಗಿಲ್ಲ. ಆನ್‌ಲೈನ್‌ ಆರ್ಡರ್‌/ ಪೇಮೆಂಟ್‌, ಮೆಸೇಜ್‌ ಟೈಪಿಂಗ್‌ನಂಥ ಕೆಲಸವನ್ನು ಅವರು ಶರವೇಗದಲ್ಲಿ ಮಾಡಿ ಮುಗಿಸುತ್ತಾರೆ. ಯೂಟ್ಯೂಬ್‌ ಚಾನೆಲ್‌ ಮೂಲಕ ಟೆಕ್ನಾಲಜಿ ಕ್ಲಾಸ್‌ಗಳನ್ನು ಮಾಡುತ್ತಾರೆ.  ಒಳಗಣ್ಣಿನಿಂದಲೇ ಎಲ್ಲವನ್ನೂ ಗ್ರಹಿಸುತ್ತಾ, ಟೆಕ್ನಾಲಜಿ ಬಳಕೆಯಲ್ಲಿ ಎಲ್ಲರಿಗಿಂತ ಮುಂದಿರುವ ಈ ಸಾಹಸಿಯ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿಯಾಗುವಂಥದು…

Advertisement

ಕನಸುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಿ ಅನ್ನೋ ಮಾತಿದೆ. ಯಾವುದಾದರೊಂದು ಕನಸನ್ನು ಸದಾ ಜೀವಿಸುತ್ತಾ, ಅದನ್ನು ನನಸು ಮಾಡಲು ಪ್ರಯತ್ನಿಸುತ್ತಿರಬೇಕು. ಆದರೆ, ಕಣ್ಣಿಲ್ಲದಿದ್ದರೂ ಕನಸು ಕಾಣೋಕೆ ಅಡ್ಡಿಯಿಲ್ಲ ಅನ್ನುವುದನ್ನು, ಬಳ್ಳಾರಿಯ 29ರ ಹರೆಯದ ಶಂಕರ್‌ ಚಂದ್ರಶೇಖರ್‌ ಅವರಿಂದ ಕಲಿಯಬೇಕು. ದೃಷ್ಟಿಹೀನತೆಯ ಜೊತೆಗೆ, ಇವರ ಎರಡೂ ಕೈಗಳು ಸ್ವಾಧೀನ ಕಳೆದುಕೊಂಡಿವೆ. ಆದರೆ, ಅವರು ನಮ್ಮೆಲ್ಲರಿಗಿಂತ ಮುಂದೆ.

   ಮೆಸೇಜ್‌ ಟೈಪಿಂಗ್‌, ಆನ್‌ಲೈನ್‌ ಆರ್ಡರ್‌, ಆನ್‌ಲೈನ್‌ ಪೇಮೆಂಟ್‌… ಎಲ್ಲದರಲ್ಲೂ ಶಂಕರ್‌ ಫ‌ಟಾಫ‌ಟ್‌. ತಮ್ಮಂತೆಯೇ ಎಲ್ಲ ಅಂಧರೂ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವತಂತ್ರವಾಗಿ ಬದುಕಬೇಕೆಂಬುದು ಇವರ ಕನಸು. ಅದೇ ಉದ್ದೇಶದಿಂದ, ವಾಟ್ಸಾéಪ್‌ ಗ್ರೂಪ್‌ ಹಾಗೂ ಟೆಕ್‌ ಆ್ಯಕ್ಸೆಸೆಬಿಲಿಟಿ ಟ್ಯುಟೋರಿಯಲ್ಸ್‌ ಎಂಬ ಯೂಟ್ಯೂಬ್‌ ಚಾನೆಲ್‌ ಪ್ರಾರಂಭಿಸಿರುವ ಇವರು, ಆ ಮೂಲಕ ಟೆಕ್ನಾಲಜಿ ಕ್ಲಾಸ್‌ಗಳನ್ನು ನಡೆಸುತ್ತಾರೆ. ವಾಟ್ಸಾಪ್‌ ಟಿಪ್ಸ್‌ ಆ್ಯಂಡ್‌ ಟ್ರಿಕ್ಸ್‌ ಫಾರ್‌ ಬ್ಲೆ„ಂಡ್ಸ್‌, ಹೌ ಟು ಆಟೋಮೇಟ್‌ ಯುರ್‌ ಡಿವೈಸ್‌, ಹೌ ಡಸ್‌ ಎ ವಿಷುವಲಿ ಇಂಪೇರ್‌ ಪರ್ಸನ್‌ ರೀಡ್‌ ಟೆಕ್ಸ್ಟ್ ದಟ್‌ ಇಸ್‌ ಇನ್‌ ಎ ಇಮೇಜ್‌ ಮುಂತಾದ ವಿಷಯಗಳ ಕುರಿತು ಮಾಹಿತಿ ಇಲ್ಲಿ ಲಭ್ಯ. ಕಣ್ಣುಗಳಲ್ಲಿ ಬೆಳಕು ಮೂಡದಿದ್ದರೂ, ಅಂಧರ ಬಾಳಿಗೆ ದಾರಿದೀಪವಾಗಿರುವ ಶಂಕರ್‌ ಅವರ ಯಶೋಗಾಥೆಯನ್ನು ಅವರ ಮಾತುಗಳಲ್ಲೇ ಕೇಳಿ. 

“ನಾನು ಹುಟ್ಟಿದ್ದು ಬಳ್ಳಾರಿಯಲ್ಲಿ. ಅಂಧತ್ವದ ಜೊತೆಗೆ ನನ್ನ ಕೈಗಳೂ ಬಲಹೀನವಾಗಿವೆ. ಆದರೆ, ನಾನೂ ಎಲ್ಲರಂತೆ ಸ್ವತಂತ್ರವಾಗಿ ಬದುಕು ನಡೆಸಬೇಕು ಅನ್ನೋದು ಅಪ್ಪ- ಅಮ್ಮನ ಆಸೆಯಾಗಿತ್ತು. ಹಾಗಾಗಿ 3ನೇ ವಯಸ್ಸಿಗೇ ನನ್ನನ್ನು ಬೆಂಗಳೂರಿನ ರಮಣ ಮಹರ್ಷಿ ಅಂಧರ ವಸತಿ ಶಾಲೆಗೆ ಸೇರಿಸಿದರು. ನನ್ನನ್ನು ಬೆಂಗಳೂರಿಗೆ ಕಳಿಸಲು ಅಮ್ಮನಿಗೆ ಬಹಳ ಹೆದರಿಕೆಯಿತ್ತು. ಇನ್ನೂ ಸಣ್ಣ ಮಗು, ನಮ್ಮನ್ನೆಲ್ಲ ಬಿಟ್ಟು ಹೇಗೆ ಇರ್ತಾನೆ, ಹಾಸ್ಟೆಲ್‌ನಲ್ಲಿ ಹೇಗೆ ನೋಡಿಕೊಳ್ತಾರೋ ಅಂತೆಲ್ಲಾ ಭಯಪಟ್ಟಿದ್ದರು. ಆದರೆ, ನನ್ನ ಭವಿಷ್ಯದ ಬಗ್ಗೆ ಯೋಚಿಸಿದಾಗ ಹಾಸ್ಟೆಲ್‌ಗೆ ಸೇರಿಸುವುದೇ ಒಳ್ಳೆಯದು ಅಂದುಕೊಂಡರು. ಯಾಕೆಂದರೆ, ಬಳ್ಳಾರಿಯಲ್ಲಿ ಅಂಧರಿಗೆ ವಿಶೇಷ ಶಾಲೆ ಇರಲಿಲ್ಲ. ಅವರ ಆ ಒಂದು ನಿರ್ಧಾರದಿಂದ ನನ್ನ ಬದುಕಿಗೊಂದು ದಾರಿ ಕಾಣಿಸಿತು. 

  ನನ್ನ ಬಾಲ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. ಪ್ರಾರಂಭದಲ್ಲಿ, ಹಾಸ್ಟೆಲ್‌ನಲ್ಲಿ ಒಂಟಿಯಾಗಿಬಿಟ್ಟಿದ್ದೆ. ಅಪ್ಪ- ಅಮ್ಮನ ನೆನಪು ತುಂಬಾ ಕಾಡುತ್ತಿತ್ತು. ಕ್ರಮೇಣ ಅದು ಅಭ್ಯಾಸವಾಯ್ತು. ನನ್ನಂತೇ ಇರುವ ಅನೇಕ ಸ್ನೇಹಿತರು ಸಿಕ್ಕಿದರು. ಗುರುಗಳು ಒಳ್ಳೆಯ ಮಾರ್ಗದರ್ಶನ ನೀಡಿದರು. ಬ್ರೈಲ್‌ ಲಿಪಿಯಲ್ಲಿ ಓದು- ಬರೆಯುವುದರ ಜೊತೆಗೆ, ನನ್ನ ಕೆಲಸಗಳನ್ನೆಲ್ಲ ನಾನೇ ಮಾಡಿಕೊಳ್ಳುವುದನ್ನು ಕಲಿತೆ. 

Advertisement

ಕಂಪ್ಯೂಟರ್‌ ಕಂಡದ್ದು 5ನೇ ಕ್ಲಾಸಲ್ಲಿ
ನನಗೆ ತಂತ್ರಜ್ಞಾನವನ್ನು ಮೊದಲು ಪರಿಚಯಿಸಿದ್ದು ಮಾಲತೇಶ್‌ ಸರ್‌. ಆಗ ನಾನು ಐದನೇ ತರಗತಿಯಲ್ಲಿದ್ದೆ. ಆದರೆ, ಕಂಪ್ಯೂಟರ್‌ ಬಗ್ಗೆ ಹೆಚ್ಚಿನ ಜ್ಞಾನ ಇರಲಿಲ್ಲ. ಅದು ಹೇಗೆ ಕೆಲಸ ಮಾಡುತ್ತೆ ಅನ್ನೋದು ನನ್ನಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಅದೇ ಕುತೂಹಲ, ತಂತ್ರಜ್ಞಾನದ ಬೇರೆ ಬೇರೆ ವಿಷಯಗಳನ್ನು ಕಲಿಯಲು ಸಹಾಯ ಮಾಡಿತು. ಹತ್ತನೇ ತರಗತಿಯ ನಂತರ, ಬೆಂಗಳೂರಿನಲ್ಲಿ ಹಾಸ್ಟೆಲ್‌ ಸೌಲಭ್ಯವಿಲ್ಲದ ಕಾರಣ, ಬಳ್ಳಾರಿಗೆ ವಾಪಸ್‌ ಬರಬೇಕಾಯ್ತು. ಬಳ್ಳಾರಿಯಲ್ಲೇ ದ್ವಿತೀಯ ಪಿಯುಸಿ ಮುಗಿಸಿ, ಮತ್ತೆ ರಮಣ ಮಹರ್ಷಿ ಶಾಲೆಗೆ ಡಿಪ್ಲೊಮಾ ಇನ್‌ ಟೀಚಿಂಗ್‌ ಫಾರ್‌ ದಿ ಬ್ಲೆ„ಂಡ್‌ ಎಂಬ ಕೋರ್ಸ್‌ಗೆ ಸೇರಿಕೊಂಡೆ.

ಕುತೂಹಲವೇ ನನ್ನ ಗುರು
ಡಿಪ್ಲೊಮಾ ಮುಗಿದ ನಂತರ ನನಗೆ ಎರಡು ವರ್ಷ ಕೆಲಸ ಸಿಗಲೇ ಇಲ್ಲ. ಊಟ, ವಸತಿಗಾಗಿ ಪರದಾಡುವ ಪರಿಸ್ಥಿತಿ ಇತ್ತು. ಆಗ, ಟೆಕ್ನಾಲಜಿಯ ಬಗ್ಗೆ ನನಗಿದ್ದ ಆಸಕ್ತಿಯನ್ನು ಗುರುತಿಸಿ ಚಿರಂಜೀವಿ ಎಂಬ ಸ್ನೇಹಿತ, ಲ್ಯಾಪ್‌ಟಾಪ್‌ ಕೊಡಿಸಿದರು. ನಂತರ ನಾನು ಆನ್‌ಲೈನ್‌ ಟ್ಯುಟೋರಿಯಲ್‌ಗ‌ಳ ಮೂಲಕ ಜಾವ, ಸಿ, ಸಿ ++, ಎಚ್‌ಟಿಎಮ್‌ಎಲ್‌ ಕೋಡಿಂಗ್‌ ಭಾಷೆಗಳನ್ನು ಕಲಿತೆ. ಕುತೂಹಲವೇ ನನ್ನ ಮೊದಲ ಗುರು. ಯಾವುದೇ ಹೊಸ ವಸ್ತು ಅಥವಾ ಆ್ಯಪ್‌ ಸಿಕ್ಕರೆ, ಮೊದಲು ಅದು ಹೇಗೆ ಕೆಲಸ ಮಾಡುತ್ತದೆ, ಅದರಲ್ಲಿ ಇನ್ನೂ ಏನೇನಿದೆ ಅಂತ ನಾನು ಜಾಲಾಡಿ ತಿಳಿದುಕೊಳ್ಳುತ್ತೇನೆ. ಹೆಚ್ಚಿನ ಮಾಹಿತಿಗೆ ಇಂಟರ್ನೆಟ್‌ನಲ್ಲಿ ಹುಡುಕುತ್ತೇನೆ. ತಂತ್ರಜ್ಞಾನ ಕಲಿತು, ದೆಹಲಿಯ ನೋಯ್ಡಾದ ಎಚ್‌ಸಿಎಲ್‌ ಸಾಫ್ಟ್ವೇರ್‌

 ಕಂಪನಿಯಲ್ಲಿ ಆ್ಯಕ್ಸೆಸೆಬಿಲಿಟಿ ಟೆಸ್ಟರ್‌ ಆಗಿ ಉದ್ಯೋಗ ಪಡೆಯಲೂ ಕುತೂಹಲದ ಕಲಿಕೆಯೇ ಕಾರಣ. ಒಂದು ವರ್ಷ ಅಲ್ಲಿ ಕೆಲಸ ಮಾಡಿದ ನಂತರ ಈಗ, ಬೆಂಗಳೂರಿನ ಕೆರ್ನರ್‌ ಹೆಲ್ತ್‌ ಕೇರ್‌ ಸಲ್ಯೂಷನ್‌ನಲ್ಲಿ ಸೀನಿಯರ್‌ ಸಾಫ್ಟ್ವೇರ್‌ ಟೆಸ್ಟ್‌ ಎಂಜಿನಿಯರ್‌ ಆಗಿದ್ದೇನೆ. ನನ್ನ ಸಾಮರ್ಥ್ಯ ಗುರುತಿಸಿ ಕೆಲಸ ಕೊಡಿಸಿದ ಗೆಳೆಯ ಶರತ್‌ಗೆ ನಾನು ಋಣಿ.   

ಯಾರೂ ಪರದಾಡಬಾರದು..
ನಾಲ್ಕು ವರ್ಷಗಳ ಹಿಂದೆ ನಾನೊಂದು ಆ್ಯಂಡ್ರಾಯ್ಡ ಮೊಬೈಲ್‌ ಖರೀದಿಸಿದೆ. ಅದನ್ನು ಸರಿಯಾಗಿ ಬಳಸಲು ಬಾರದೆ, ಮೂರು ತಿಂಗಳು ಮೂಲೆಗೆ ಎಸೆದಿದ್ದೆ. ಇಂಟರ್ನೆಟ್‌ನಲ್ಲಿಯೂ ನನಗೆ ಬೇಕಾದ ಮಾಹಿತಿಗಳು ಸಿಗಲಿಲ್ಲ. ಹೇಗಪ್ಪಾ ಇದನ್ನು ಬಳಸೋದು ಅಂತ ಪರದಾಡುವಂತಾಯ್ತು. ಆಗ, ಟ್ರಯಲ್‌ ಆ್ಯಂಡ್‌ ಎರರ್‌ ಮಾಡಿ, ನಾನೇ ಮೊಬೈಲ್‌ ಬಳಸುವುದನ್ನು ಕಲಿಯುತ್ತೇನೆ ಅಂತ ನಿರ್ಧರಿಸಿದೆ. ನಿಧಾನಕ್ಕೆ ಮೊಬೈಲ್‌ ಅರ್ಥವಾಗತೊಡಗಿತು. ಈಗ ಮೊಬೈಲ್‌ ನನ್ನ ಪರಮಾಪ್ತ ಮಿತ್ರ ಅಂದರೆ ತಪ್ಪಲ್ಲ. ಆ ಸಂದರ್ಭದಲ್ಲೇ ನನಗೊಂದು ಯೋಚನೆ ಬಂತು. ನನ್ನಂತೆ ಸಾವಿರಾರು ಮಂದಿಗೆ, ಮಾಹಿತಿಯ ಕೊರತೆಯಿಂದ ಮೊಬೈಲ್‌ನ ಪ್ರಯೋಜನ ಪಡೆಯಲಾಗುತ್ತಿಲ್ಲ. ಅವರಿಗೆ ಸಹಾಯ ಮಾಡಬೇಕು ಅಂತ, ವಾಟ್ಸಾಪ್‌ ಗ್ರೂಪ್‌ ಒಂದನ್ನು ರಚಿಸಿದೆ. ಸೀಮಿತ ಜನರಷ್ಟೇ ಅದರ ಪ್ರಯೋಜನ ಪಡೆಯಬಹುದಾಗಿತ್ತು. ಇನ್ನೂ ಹೆಚ್ಚಿನ ಜನರನ್ನು ತಲುಪಬೇಕೆಂದು, 2016ರಲ್ಲಿ Tech Accessibility Tutorials ಎಂಬ ಯೂಟ್ಯೂಬ್‌ ಚಾನೆಲ್‌ ಶುರುಮಾಡಿದೆ. ಈಗ ಚಾನೆಲ್‌ಗೆ 3700 ಮಂದಿ ಚಂದಾದಾರರು ಇದ್ದಾರೆ. ಯಾವುದೇ ಹೊಸ ಅಪ್ಲಿಕೇಷನ್ಸ್‌ಗಳು ಬಂದರೂ, ಅದನ್ನು ಇನ್‌ಸ್ಟಾಲ್‌ ಮಾಡಿಕೊಂಡು, ಅದರ ಬಗ್ಗೆ ಎಲ್ಲ ಮಾಹಿತಿಯನ್ನೂ ಕಲೆ ಹಾಕುತ್ತೇನೆ. ನಂತರ ಸ್ನೇಹಿತೆ ವೈಷ್ಣವಿಯ ಜೊತೆ ಸೇರಿ ವಿಡಿಯೊ ಮಾಡಿ, ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡುತ್ತೇನೆ. 

ನಮ್ಮನ್ನೂ ಪರಿಗಣಿಸಿ…
ನಾವು ಬಳಸುವ ಕೆಲವು ವಸ್ತುಗಳು, ಟೆಕ್ನಾಲಜಿ ನೂರಕ್ಕೆ ನೂರರಷ್ಟು ವಿಷುವಲಿ ಚಾಲೆಂಜ್‌ ಫ್ರೆಂಡ್ಲಿ ಆಗಿಲ್ಲ. ಕೆಲವೊಂದು ವಿಷಯಗಳಲ್ಲಿ ನಮ್ಮನ್ನು ಯಾರೂ ಪರಿಗಣಿಸಿದಂತಿಲ್ಲ.  ನನ್ನ ಪ್ರಕಾರ, ಕರೆನ್ಸಿ ನೋಟುಗಳಲ್ಲಿ ಒಂದಷ್ಟು ಬದಲಾವಣೆಯಾಗಬೇಕು. ಇತ್ತೀಚಿಗೆ ಎಲ್ಲ ನೋಟುಗಳೂ ಒಂದೇ ಸೈಜಿನಲ್ಲಿರುವುದರಿಂದ, ನಮಗೆ ಅದನ್ನು ಗುರುತು ಹಿಡಿಯಲು ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಟೆಕ್ನಾಲಜಿಯ ಮೊರೆ ಹೋಗಲಾಗದು. 

ಮುಂದಿನ ಕನಸು, ಕಲ್ಪನೆ 
ಟೆಕ್ನಾಲಜಿಯ ಪ್ರಯೋಜನಗಳಿಂದ ಯಾರೊಬ್ಬರೂ ವಂಚಿತರಾಗಬಾರದು. ಎಲ್ಲ ದೃಷ್ಟಿಹೀನರೂ ಸುಲಭವಾಗಿ ಮೊಬೈಲ್‌, ಕಂಪ್ಯೂಟರ್‌ ಬಳಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಪಡುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೆಬ್‌ಸೈಟ್‌ಗಳನ್ನೂ ಅಂಧರು ಬಳಸುವಂತಾಗಬೇಕು ಎಂಬುದು ನನ್ನ ಕನಸು. ಅಂಧರಿಗೆ ಸಹಾಯ ಮಾಡಲು ಬಹಳಷ್ಟು ಜನರು ಮುಂದೆ ಬರುತ್ತಿದ್ದಾರೆ. ಅವರೆಲ್ಲರನ್ನೂ ಒಳಗೊಳ್ಳುವಂಥ ಒಂದು ವೆಬ್‌ಸೈಟ್‌ ಪ್ರಾರಂಭಿಸುವ ಯೋಚನೆಯೂ ಇದೆ. 

ತಪ್ಪು ಮಾಡೋಣ, ಅದರಿಂದ ಕಲಿಯೋಣ
ದೇವರು ಎಲ್ಲರಿಗೂ ಒಂದಲ್ಲ ಒಂದು ಪ್ರತಿಭೆ ಕೊಟ್ಟಿರುತ್ತಾನೆ. ಅದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಯಾವುದಕ್ಕೂ ಕೊರಗದೆ, ಸಿಕ್ಕ ಪ್ರೋತ್ಸಾಹವನ್ನು ಬಳಸಿಕೊಂಡು ಸಮಾಜಮುಖೀಯಾಗಬೇಕು. ಮನಸ್ಸಿನಲ್ಲಿರುವ ಎಲ್ಲ ನಕಾರಾತ್ಮಕ ಯೋಚನೆಗಳನ್ನು ದೂರ ಮಾಡಿ. ಸೋಲಿನ ಭಯ ಬೇಡವೇ ಬೇಡ. ತಪ್ಪು ಮಾಡೋಣ, ಅದರಿಂದಲೇ ಕಲಿಯೋಣ. 

ಇವರಿಗೆ ನಾನು ಋಣಿ
ನ್ಯೂನತೆಗಳನ್ನು ಮೀರಿ, ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದ ಅಪ್ಪ (ಚಂದ್ರಶೇಖರ್‌), ಅಮ್ಮನಿಗೆ (ಸರೋಜಮ್ಮ) ನಾನು ಚಿರಋಣಿ. ಗೆಳೆಯರ, ಹಿತೈಷಿಗಳ ಸಹಾಯವನ್ನಂತೂ ಮರೆಯುವಂತಿಲ್ಲ. ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದ ನೋವುಗಳಿಗೂ, ಕಷ್ಟಗಳಿಗೂ, ಕೊರತೆಗಳಿಗೂ ಥ್ಯಾಂಕ್ಸ್‌ ಹೇಳಲೇಬೇಕು.  

ತಂತ್ರಜ್ಞಾನ ಬಳಕೆ ಹೇಗೆ?
ಅಂಧರು ಹೇಗೆ ಬರೆಯುತ್ತಾರೆ, ಹೇಗೆ ಮೊಬೈಲ… ಬಳಸುತ್ತಾರೆ ಅಂತ ಕೆಲವರು ಅಚ್ಚರಿಯಿಂದ ಕೇಳುತ್ತಾರೆ. ನಾವು, ಸ್ಪರ್ಶ ಹಾಗೂ ಶ್ರವಣ ಶಕ್ತಿಯ ಮೂಲಕ ಎಲ್ಲವನ್ನೂ ಗ್ರಹಿಸುವ ಸಾಮರ್ಥ್ಯ ಹೊಂದಿದ್ದೇವೆ. ಈಗಿನ ಐ ಓಯಸ್‌ ಆ್ಯಂಡ್ರಾಯ್ಡ ಮತ್ತು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್‌ಗಳು ತಮ್ಮದೇ ಆದ ಸ್ಕ್ರೀನ್‌ ರೀಡರ್‌ಗಳನ್ನು ಹೊಂದಿವೆ. ಈ ಸ್ಕ್ರೀನ್‌ ರೀಡರ್‌ಗಳು, ಪರದೆಯ ಮೇಲೆ ತೋರಿಸುವ ಮಾಹಿತಿಯನ್ನು ಧ್ವನಿಗೆ ಪರಿವರ್ತಿಸಿ, ಸ್ಪೀಕರ್‌ ಮೂಲಕ ಔಟ್‌ಪುಟ್‌ ಕೊಡುತ್ತವೆ. ಅದನ್ನು ಕೇಳಿಸಿಕೊಂಡು ನಾವು ತಂತ್ರಜ್ಞಾನವನ್ನು ಬಳಸುತ್ತೇವೆ.

ವಾಟ್ಸಾಪ್‌ ಗ್ರೂಪ್‌: 7795927572 
ಯೂಟ್ಯೂಬ್‌ ಚಾನೆಲ್‌ ಲಿಂಕ್‌:  goo.gl/8YvxiT

ಪ್ರಿಯಾಂಕಾ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next