Advertisement

3 ತಿಂಗಳಲ್ಲಿ 50 ಹೊಸ ಬಸ್‌ಗಳ ಸೇವೆ

10:50 PM Dec 09, 2019 | Team Udayavani |

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಹೊಸದಾಗಿ 50 ರಾಜಹಂಸ ಹಾಗೂ ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಮಂಗಳೂರಿನಿಂದ ಹೈದರಾಬಾದ್‌ಗೆ ಆರಂಭಿಸಿರುವ ಅಂಬಾರಿ ಡ್ರೀಮ್‌ಕ್ಲಾಸ್‌ ಮಲ್ಟಿಆ್ಯಕ್ಸೆಲ್‌ ಎಸಿ ಸ್ಲೀಪರ್‌ ಬಸ್‌ಗೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಸ್‌ ಸೇವೆಯಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.

ಯಾನ ದರ 1,400 ರೂ.
ಮಂಗಳೂರಿನಿಂದ ಅಪರಾಹ್ನ 3 ಗಂಟೆಗೆ ಹೊರಡುವ ಬಸ್‌ ಉಡುಪಿ ಮಣಿಪಾಲ, ಕುಂದಾಪುರ, ಭಟ್ಕಳ ಮಾರ್ಗವಾಗಿ ಹೈದರಾಬಾದ್‌ಗೆ ಮರುದಿನ ಬೆಳಗ್ಗೆ 8.30ಕ್ಕೆ ತಲುಪಲಿದೆ. ಮರು ಪ್ರಯಾಣದಲ್ಲಿ ಹೈದರಾಬಾದ್‌ನಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 10 ಗಂಟೆಗೆ ಮಂಗಳೂರು ತಲುಪುವುದು. ಯಾನದರ 1,400 ರೂ. ಆಗಿರುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಎನ್‌. ಅರುಣ ವಿವರಿಸಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಸಚಿವರಲ್ಲಿ ಕೋರಿದರು.

ಕೆಎಸ್ಸಾರ್ಟಿಸಿಯ ವಿಭಾಗೀಯ ಸಂಚಾರ ಅಧಿಕಾರಿ ಇಸ್ಮಾಯಿಲ್‌, ಮನಪಾ ಸದಸ್ಯರಾದ ಸುಧೀರ್‌ ಶೆಟ್ಟಿ, ಶಕೀಲಾ ಕಾವ ಉಪಸ್ಥಿತರಿದ್ದರು.

Advertisement

ವಿಶೇಷತೆಗಳು
40 ಆಸನ ಸಾಮರ್ಥ್ಯದ ಅಂಬಾರಿ ಡ್ರೀಮ್‌ಕ್ಲಾಸ್‌ ಮಲ್ಟಿ ಆ್ಯಕ್ಸೆಲ್‌ ಎಸಿ ಸ್ಲೀಪರ್‌ ಬಸ್‌ ಆರಾಮದಾಯಕ ಪ್ರಯಾಣವನ್ನು ಕಲ್ಪಿಸಲಿದೆ. ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಶನ್ಸ್‌, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ ಹೊಂದಿದೆ. ವಿಹಂಗಮ ನೋಟಕ್ಕಾಗಿ ವಿಶಾಲವಾದ ಕಿಟಕಿಗಳು, ಮೇಲ್ಛಾವಣಿ ಕಿಟಕಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next