Advertisement

ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ.ಲಾಭ

03:41 PM Dec 14, 2019 | Team Udayavani |

ಹಾಸನ: ಹಾಸನ ಹಾಲು ಒಕ್ಕೂಟವು ನವೆಂಬರ್‌ ಅಂತ್ಯಕ್ಕೆ 50 ಕೋಟಿ ರೂ. ಲಾಭಗಳಿಸಿದೆ. ಲಾಭಾಂಶವನ್ನು ಹಾಲು ಉತ್ಪಾದಕರಿಗೂ ಹಂಚುವ ನಿಟ್ಟಿನಲ್ಲಿ ತಕ್ಷಣದಿಂದ ಹಾಲು ಖರೀದಿ ದರವನ್ನು ಒಂದು ರೂ. ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ತಿಳಿಸಿದರು.

Advertisement

ಹಾಸನ ಡೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಲ್‌ ಮಿಲ್ಕ್ಕೂಲರ್‌ ಕೇಂದ್ರ ಮತ್ತು ಸ್ವಯಂಚಾಲಿತ ಹಾಲು ಸಂಗ್ರಹಣೆ ಮತ್ತು ಪರೀಕ್ಷಾ ಘಟಕಗಳ ಚಾಲನಾ ಕಾರ್ಯಾಗಾರ ಹಾಗೂ ಹಾಲು ಉತ್ಪಾದಕರ ಸಂಘಗಳ ಕುಂದು ಕೊರತೆಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 28.40 ರೂ. ದರ ಕೊಡುವುದರೊಂದಿಗೆ ಹಾಸನ ಹಾಲು ಒಕ್ಕೂಟವು ರಾಜ್ಯದಲ್ಲಿಯೇ ಆತಿ ಹೆಚ್ಚು ಹಾಲಿನ ದರ ಕೊಡುತ್ತಿರುವ ಏಕೈಕ ಒಕ್ಕೂಟ ಎಂದರು.

 ರಾಜ್ಯದಲ್ಲಿಯೇ ಹೆಚ್ಚುದರ ನಿಗದಿ: ಹಾಲು ಉತ್ಪಾದಕರಿಗೆ ಲೀ.ಗೆ ಒಂದು ರೂ. ಹೆಚ್ಚಳ ಮಾಡಿರುವುದರಿಂದ ಒಕ್ಕೂಟವು ಹೆಚ್ಚುವರಿಯಾಗಿ 12 ಕೋಟಿ ರೂ.ಗಳ ಹೊರೆ ಹೊರಬೇಕಾಗಿದೆ. ಎಂದ ಅವರು, ಬೆಂಗಳೂರು ಹಾಲು ಒಕ್ಕೂಟವು ನೇರವಾಗಿ ಹಾಲು ಮಾರಾಟ ಮಾಡುತ್ತಿದ್ದರೂ ಹಾಲು ಉತ್ಪಾದಕರಿಗೆ 26 ರೂ. ದರ ನೀಡುತ್ತಿದೆ. ಆದರೆ ಹಾಸನ ಒಕ್ಕೂಟವು ಸಂಗ್ರಹಿಸುತ್ತಿರುವ 8 ಲಕ್ಷ ಲೀ. ಪೈಕಿ 1.40 ಲಕ್ಷ ಲೀ. ಮಾತ್ರ ನೇರವಾಗಿ ಮಾರಾಟ ಮಾಡಿ ಉಳಿದ ಹಾಲನ್ನು ಇತರೆ ಉತ್ಪನ್ನಗಳಾಗಿ ಪರಿವರ್ತಿಸಿಯೂ ಹಾಲು ಉತ್ಪಾದಕರಿಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ದರವನ್ನು ನೀಡುತ್ತಿದೆ ಎಂದು ಹೇಳಿದರು.

ಮೆಗಾಡೇರಿಗೆ 53 ಎಕರೆ ಖರೀದಿ: ಹಾಸನ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಕೌಶಿಕ ಗ್ರಾಮದ ಬಳಿ ಮೆಗಾಡೇರಿ ನಿರ್ಮಾಣಕ್ಕೆ 53 ಎಕರೆಯನ್ನು ಖರೀದಿಸಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿಯೇ ಹಾಸನದಲ್ಲಿ ಮೆಗಾಡೇರಿ ನಿರ್ಮಾಣಕ್ಕೆ 504 ಕೋಟಿ ರೂ. ಗಳಿಗೆ ಮಂಜೂರಾತಿ ನೀಡಿದ್ದು, ಮೆಗಾಡೇರಿ ನಿರ್ಮಾಣ ಕಾರ್ಯ ಏಪ್ರಿಲ್‌ನಂತರ ಆರಂಭವಾಗಲಿದೆ ಎಂದ ಅವರು, ಈಗ ಹಾಸನ ಹಾಲು ಒಕ್ಕೂಟದ ವಾರ್ಷಿಕ ವಹಿವಾಟು 1,300 ಕೋಟಿ ರೂ.ಗಳಿಗೆ ಏರಿದೆ. ನಾನು ಅಧ್ಯಕ್ಷನಾದಾಗ 1995 ರಲ್ಲಿ ವಹಿವಾಟು ಕೇವಲ 25 ಕೋಟಿ ರೂ. ಇತ್ತು ಎಂದರು.

ಕಲ್ಯಾಣ ಮಂಟಪದಲ್ಲಿ ಶೇ.50 ರಿಯಾಯ್ತಿ: ಹಾಸನದ ಪಶು ಆಹಾರ ಘಟಕದ ಆವರಣದಲ್ಲಿ ಚನ್ನಪಟ್ಟಣ ಬೈಪಾಸ್‌ ರಸ್ತೆಗೆ ಹೊಂದಿಕೊಂಡಂತೆ ಕೆಎಂಎಫ್ನಿಂದ ನಿರ್ಮಿಸಿದ್ದ 8 ಕೋಟಿ ರೂ ವೆಚ್ಚದ ಕಲ್ಯಾಣ ಮಂಟಪವನ್ನು ಹಾಸನ ಹಾಲು ಒಕ್ಕೂಟಕ್ಕೆ ವಹಿಸಿಕೊಳ್ಳಲಾಗಿದ್ದು, ಇನ್ನೊಂದು ತಿಂಗಳಲ್ಲಿ ನೂತನ ಕಲ್ಯಾಣ ಮಂಟಪ ಸೇವೆಗೆ ಲಭ್ಯವಾಗಲಿದೆ. ಈ ಕಲ್ಯಾಣ ಮಂಟಪದ ಬಾಡಿಗೆಯಲ್ಲಿ ಹಾಲು ಉತ್ಪಾದಕರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು ಅತಿ ಸಣ್ಣ ರೈತರಾಗಿದ್ದರೆ ಶೇ.76ರಷ್ಟು ರಿಯಾಯತಿ ನೀಡಲಾಗುವುದು ಎಂದು ತಿಳಿಸಿದರು.

Advertisement

ಹಾಲು ಉತ್ಪಾದಕರಿಗೆ ವಿಮಾ ಸೌಲಭ್ಯ: ಹಾಲು ಉತ್ಪಾದಕರಿಗೆ ವಿಮಾ ಸೌಲಭ್ಯ ಒಗದಿಸಿದ್ದು, ವಿಮಾ ಕಂತಿನ ಶೇ.60ರಷ್ಟು ಮೊತ್ತವನ್ನು ಹಾಸನ ಹಾಲು ಒಕ್ಕೂಟವೇ ಭರಿಸಲಿದ್ದು, ಹಾಲು ಉತ್ಪಾದಕರು 200 ರೂ. ಪಾವತಿಸಿದರೆ ಸಾಕು. ವಿಮೆ ಹೊಂದಿದ ಹಾಲು ಉತ್ಪಾದಕರು ಅಕಾಲಿಕ ಮರಣಕ್ಕೆ ತುತ್ತಾದರೆ 2 ಲಕ್ಷ ರೂ. ವಿಮೆ ಮೊತ್ತ ಕುಟುಂಬಕ್ಕೆ ಸಿಗಲಿದೆ. ಹಾಗೆಯೇ ಹೈನು ರಾಸುಗಳಿಗೆ ವಿಮಾ ಕಂತು ವಾರ್ಷಿಕ 1,300 ರೂ ನಿಗದಿಯಾಗಿದ್ದು ಅದರಲ್ಲಿಯೂ ಶೇ.60ರಷ್ಟನ್ನು ಹಾಸನ ಹಾಲು ಒಕ್ಕೂಟವೇ ಭರಿಸಲಿದೆ ಎಂದು ಹೇಳಿದರು.

ಒಕ್ಕೂಟದ ನಿರ್ದೇಶಕರಾದ ಎನ್‌.ಸಿ.ನಾರಾಯಣಗೌಡ, ಹೊನ್ನವಳ್ಳಿ ಸತೀಶ್‌, ದೊಡ್ಡಬೀಕನಹಳ್ಳಿ ನಾಗರಾಜ್‌, ರಾಮಚಂದ್ರೇಗೌಡ, ಚನ್ನೇಗೌಡ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ವ್ಯವಸ್ಥಾಪಕ ಜಯಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next