Advertisement

ಯಾರಿಗೆ ಪಂಚ ಕಿರೀಟ : ಐದು ರಾಜ್ಯಗಳ ಮತ ಎಣಿಕೆ ಇಂದು

10:21 PM Mar 09, 2022 | Team Udayavani |

ನವದೆಹಲಿ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬರಲಿದೆಯೇ? ಗೋವಾದಲ್ಲಿ ಅತಂತ್ರವೋ-ಸ್ವತಂತ್ರವೋ…? ಉತ್ತರಾ ಖಂಡದಲ್ಲಿ ಯಾರಿಗೆ ಅಧಿಕಾರ ಸಿಗಲಿದೆ? ಪಂಜಾಬ್‌ ನಲ್ಲಿ ಆಪ್‌ ಬರುತ್ತಾ? ಮಣಿಪುರದಲ್ಲಿನ ಸ್ಥಿತಿ ಏನು?

Advertisement

ಫೆ.10ರಂದು ಶುರುವಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫ‌ಲಿತಾಂಶ ಗುರುವಾರ (ಮಾ.10) ಪ್ರಕಟವಾಗಲಿದ್ದು, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಶುರುವಾಗಲಿದೆ. ಮಧ್ಯಾಹ್ನದ ಹೊತ್ತಿಗೆ ಐದೂ ರಾಜ್ಯಗಳಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರ ಬಹುತೇಕ ಸ್ಪಷ್ಟವಾಗಲಿದೆ.
ಜೂನ್‌-ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆ, 2024ಕ್ಕೆ ನಡೆಯಲಿರುವ ಲೋಕಸಭೆ ಚುನಾವಣೆಗೆ ಈ ಐದೂ ರಾಜ್ಯಗಳ ಚುನಾವಣೆ, ವಿಶೇಷವಾಗಿ ಉತ್ತರ ಪ್ರದೇಶ ಫ‌ಲಿತಾಂಶ ದಿಕ್ಸೂಚಿಯಾಗಲಿದೆ.

ಮತದಾನ ನಡೆದದ್ದು
ಫೆ.10- ಮಾ.7
ಜ.8- ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದ ದಿನ.

ಏನೇನು ವ್ಯವಸ್ಥೆ-ಸಿದ್ಧತೆಗಳು?
50,000 – ಐದು ರಾಜ್ಯಗಳಲ್ಲಿ ಎಣಿಕೆಯಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು
1,200- ಮತಎಣಿಕೆಗಾಗಿ ಇರುವ ಹಾಲ್‌ಗ‌ಳು
750- ಉತ್ತರ ಪ್ರದೇಶದಲ್ಲಿನ ಎಣಿಕೆ ಹಾಲ್‌ಗ‌ಳು
200- ಪಂಜಾಬ್‌ನಲ್ಲಿ ಇರುವ ಎಣಿಕೆ ಹಾಲ್‌ಗ‌ಳು
650- ಎಣಿಕೆ ಪ್ರಕ್ರಿಯೆ ಮೇಲೆ ನಿಗಾ ಇರಿಸಲು ವೀಕ್ಷಕರು
250- ಉ.ಪ್ರ.ದ ಪ್ರತಿ ಜಿಲ್ಲೆಗೆ ನೀಡಲಾಗಿರುವ ಕೇಂದ್ರೀಯ ಅರೆ ಸೇನಾಪಡೆ

ಫ‌ಲಿತಾಂಶದಿಂದ ಯಾರಿಗೆ ಏನು ಸಂದೇಶ?
ನರೇಂದ್ರ ಮೋದಿ
ಐದೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಚಾರದ ನೇತೃತ್ವ ವಹಿಸಿದ್ದ ಪ್ರಧಾನಿಯವರಿಗೆ ಪಕ್ಷದ ಮೇಲೆ ಹಿಡಿತ ಮತ್ತಷ್ಟು ಬಿಗಿಯಾಗುವುದು ಖಚಿತವಾಗಲಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅವರು 30ಕ್ಕೂ ಹೆಚ್ಚು ಸಾರ್ವಜನಿಕ ಭಾಷಣಗಳನ್ನು ಮಾಡಿದ್ದಾರೆ. ಉ.ಪ್ರ.ಚುನಾವಣೆಯಲ್ಲಿ ಗೆಲ್ಲುವ ಮೂಲಕ 2024 ಲೋಕಸಭೆ ಚುನಾವಣೆಯಲ್ಲಿ ದಾಖಲೆಯ ಮೂರನೇ ಬಾರಿಗೆ ಎನ್‌ಡಿಎಯನ್ನು ಜಯದತ್ತ ಕೊಂಡೊಯ್ಯಲು ಮುನ್ನಡಿ ಈ ಫ‌ಲಿತಾಂಶದ ಮೂಲಕ ಬರೆದಂತಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನರೇಂದ್ರ ಮೋದಿಯವರ ನಾಯಕತ್ವವನ್ನು ಇನ್ನೂ ಜನರು ಮೆಚ್ಚಿಕೊಂಡಿದ್ದಾರೆ ಎನ್ನುವ ಅಂಶ ಸಾಬೀತಾಗಲಿದೆ. ಇದರ ಜತೆಗೆ ಮಿತ್ರ ಪಕ್ಷಗಳಿಗೆ ಎನ್‌ಡಿಎನಲ್ಲಿ ಪೂರಕ ವಾತಾವರಣ ಇದೆ ಎನ್ನುವ ಅಂಶವನ್ನೂ ಪುಷ್ಟೀಕರಿಸಲಿದೆ.

Advertisement

ಯೋಗಿ ಆದಿತ್ಯನಾಥ್‌
ಉತ್ತರ ಪ್ರದೇಶದಲ್ಲಿ 2ನೇ ಬಾರಿಗೆ ಬಿಜೆಪಿ ಅಧಿಕಾರ ಉಳಿಸಿಕೊಂಡರೆ 1980ರ ದಶಕದ ಬಳಿಕ ಇಂಥ ಸಾಧನೆ ಮಾಡಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ರಾಜ್ಯ ಬಿಜೆಪಿ ಘಟಕ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಕೂಡ ಅವರಿಗೆ ವಿಶೇಷ ಮನ್ನಣೆಗೆ ಸಿಗಲಿದೆ. ಇದರ ಜತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 80 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳುಹಿಸುವ ಹೆಚ್ಚಿನ ಹೊಣೆಗಾರಿಕೆ ಅವರಿಗೆ ಸಿಗುವ ಸಾಧ್ಯತೆ ಇದೆ. ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಬಿಗಿತ ತಂದು ಮೆಚ್ಚುಗೆ ಪಡೆದಿರುವ ಯೋಗಿ ಆದಿತ್ಯನಾಥ್‌ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಮತ್ತು ಸಮಾಜಮುಖೀ ಯೋಜನೆಗಳನ್ನು ಇನ್ನಷ್ಟು ಆದ್ಯತೆಯಲ್ಲಿ ಜಾರಿಗೆ ತರಬೇಕಾಗುವ ಹೊಣೆ ಬರಲಿದೆ.

ರಾಹುಲ್‌ ಗಾಂಧಿ
ಐದೂ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ, ರಾಹುಲ್‌ ಗಾಂಧಿಯವರ ನಾಯಕತ್ವ ಮತ್ತಷ್ಟು ಪ್ರಶ್ನೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ಸದ್ಯ ಪ್ರಕಟವಾಗಿರುವ ಮತಗಟ್ಟೆ ಸಮೀಕ್ಷೆಗಳಲ್ಲಿ ಕೂಡ ಯಾವೊಂದು ರಾಜ್ಯದಲ್ಲಿಯೂ ಅವರ ಪಕ್ಷ ಅಧಿಕಾರಕ್ಕೆ ಬರುವ ಸೂಚನೆಗಳಿಲ್ಲ. ಹೀಗಾಗಿ, ಕಾಂಗ್ರೆಸ್‌ನಲ್ಲಿರುವ ಜಿ-23 ನಾಯಕರು ಪಕ್ಷದಲ್ಲಿ ಮತ್ತಷ್ಟು ಸುಧಾರಣೆಗಳು ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪ್ರತಿಪಾದಿಸುವುದಕ್ಕೆ ಮತ್ತಷ್ಟು ಪುಷ್ಟಿ ಬರಬಹುದು. ಜತೆಗೆ, ಯುಪಿಎನಲ್ಲಿರುವ ಇತರ ಪಕ್ಷಗಳೂ ರಾಹುಲ್‌ ನಾಯಕತ್ವ ಪ್ರಶ್ನಿಸಬಹುದು.

ಅಖೀಲೇಶ್‌ ಯಾದವ್‌
ಈ ಬಾರಿ ಎಸ್‌ಪಿ ಸೋತರೆ ನಿಜಕ್ಕೂ ಅವರಿಗೆ ಹಿನ್ನಡೆಯೇ. ಸಮೀಕ್ಷೆಗಳ ಪ್ರಕಾರ ನೋಡುವುದಿದ್ದರೆ ಅವರಿಗೆ ತೃಪ್ತಿ ತರುವ ವಿಚಾರವೆಂದರೆ 2017ಕ್ಕಿಂತ ಹೆಚ್ಚಿನ ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಮುಂದಿನ ಲೋಕಸಭೆ ಚುನಾವಣೆಗಾಗಿ ಅವರು, ಈಗಿನಿಂದಲೇ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಮತ್ತಷ್ಟು ಹೊಸ ವ್ಯೂಹ ರಚನೆ ಮಾಡಬೇಕಾಗಬಹುದು. ಟಿಎಂಸಿ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ರಚಿಸಲು ಪ್ರಯತ್ನಿಸುತ್ತಿರುವ ಬಿಜೆಪಿ-ಕಾಂಗ್ರೆಸ್‌ ಹೊರತಾಗಿರುವ ಮೈತ್ರಿಕೂಟ ಸೇರುವತ್ತ ಅಖೀಲೇಶ್‌ ಯೋಚನೆ ಮಾಡುವಂತಾಗಬಹುದು.

ಅರವಿಂದ ಕೇಜ್ರಿವಾಲ್‌
ಆಮ್‌ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಸಮೀಕ್ಷೆಗಳ ಅಭಿಪ್ರಾಯದಿಂದ ಅವರ ಪಕ್ಷ “ದೆಹಲಿಗೆ ಸೀಮಿತವಾಗಿರುವ ಪಕ್ಷ’ ಎಂಬ ಟೀಕೆಯಿಂದ ಮುಕ್ತವಾಗಬಹುದು. ಗೋವಾದಲ್ಲಿ ಸರ್ಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ. ಜತೆಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತೃತೀಯ ಶಕ್ತಿ ಎಂಬ ಗೌರವಕ್ಕೆ ಪಾತ್ರವಾಗಹುದು. ಜತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕೆಲವು ರಾಜ್ಯಗಳಲ್ಲಿಯಾದರೂ ಸವಾಲೊಡ್ಡುವ ಬಲ ಬರಬಹುದು.

ಮಾಯಾವತಿ
ಒಂದು ವೇಳೆ ಹಾಲಿ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ ಎಂದಾದರೆ, ಬಿಎಸ್‌ಪಿಯ ಅಸ್ತಿತ್ವಕ್ಕೇ ಧಕ್ಕೆ ಬರಬಹುದು. ಈಗಾಗಲೇ ಎರಡನೇ ಹಂತದ ನಾಯಕರೆಲ್ಲ ಸಮಾಜವಾದಿ ಪಕ್ಷ, ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ, ರಾಜಕೀಯವಾಗಿ ಅದರ ಅಸ್ತಿತ್ವಕ್ಕೇ ಸವಾಲು ಉಂಟಾಗುವ ಬೆಳವಣಿಗೆ ಉಂಟಾಗಬಹುದು

ನವಜೋತ್‌ ಸಿಂಗ್‌ ಸಿಧು
ಪಂಜಾಬ್‌ನಲ್ಲಿ ಚುನಾವಣೆಯಲ್ಲಿ ಸೋತ ಸಂಪೂರ್ಣ ಹೊಣೆ ಹೊರಬೇಕಾಗಬಹುದು. ಅಮರಿಂದರ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪಕ್ಷದ ಸೋಲಿಗೆ ಅವರೇ ಕಾರಣ ಎಂಬ ಅಪಖ್ಯಾತಿ ಬರಬಹುದು. ಈ ಬೆಳವಣಿಗೆ ಕಾಂಗ್ರೆಸ್‌ನ ವರಿಷ್ಠರ ಅವಕೃಪೆಗೆ ಸಿಧು ಪಾತ್ರರಾಗುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next