Advertisement

ತೆರವಾಗದ ಮೃತ್ಯುಂಜಯ ನದಿ ಹೂಳು

02:13 AM Jun 20, 2020 | Sriram |

ಮುಂಡಾಜೆ: ಚಾರ್ಮಾಡಿಯಿಂದ ಮುಂಡಾಜೆ ಮೂಲಕ ಕಲ್ಮಂಜ ವಾಗಿ ಹರಿಯುವ ಮೃತ್ಯುಂಜಯ ನದಿಯಲ್ಲಿ ಕಳೆದ ಮಳೆಗಾಲ ಪ್ರವಾಹ ದೊಂದಿಗೆ ಬಂದ ಮರಳು ತುಂಬಿ ಕೊಂಡಿದ್ದು, ಅಪಾಯ ಆಹ್ವಾನಿಸುತ್ತಿದೆ.

Advertisement

ಮಂಗಳೂರು-ಮೂಡಿಗೆರೆ ರಾಜ್ಯ ಹೆದ್ದಾರಿಯ ಮುಂಡಾಜೆ ಸೇತುವೆ ಬಳಿ ಮೃತ್ಯುಂಜಯ ನದಿಯಲ್ಲಿ ಸುಮಾರು 200 ಮೀ. ದೂರದವರೆಗೆ ಸುಮಾರು 5 ಮೀ. ಎತ್ತರಕ್ಕೆ ಮರಳು ಬಂದು ಬಿದ್ದಿದ್ದು, ನದಿ ಹರಿಯುವ ದಿಕ್ಕನ್ನೇ ಬದಲಾಯಿಸಿದೆ. ಸೇತುವೆ ಬಳಿ ನೀರು ಹರಿದು ಬರುವ ಸ್ಥಳದಲ್ಲಿರುವ ಮರಳು ನಿಂತಿದ್ದು, ಈ ಮಳೆಗಾಲದಲ್ಲಿ ಸೇತುವೆಗೆ ಹಾನಿ ಯಾಗುವ ಸಾಧ್ಯತೆ ಇದೆ. ಈ ಸೇತುವೆಗೆ ಹಾನಿ ಸಂಭವಿಸಿ ರಸ್ತೆ ಹಾನಿಯಾದರೆ, ಚಾರ್ಮಾಡಿ ಮೂಲಕ ವಾಹನ ಸಂಚಾರ ಸ್ಥಗಿತಗೊಳ್ಳ‌ಬಹುದು. ಕೆಳಭಾಗದಲ್ಲಿರುವ ಮುಂಡಾಜೆ ವಾಳ್ಯ, ಕಲ್ಮಂಜ ಭಾಗದ ತೋಟಗಳಿಗೆ ಮತ್ತೆ ಪ್ರವಾಹದೊಂದಿಗೆ ಮರಳು ನುಗ್ಗುವ ಸಾಧ್ಯತೆಯಿದೆ. ಮರಳು ತೆರವು ಬಗ್ಗೆ ವಿಚಾರಿಸಿದರೆ, ಒಂದು ಇಲಾಖೆ ಇನ್ನೊಂದು ಇಲಾಖೆಯತ್ತ ಬೆರಳು ತೋರಿಸುತ್ತಿದೆ.

ಕಳೆದ ಮಳೆಗಾಲದಲ್ಲಿ ಬಂದ ಮರಳು ತೋಟಗಳಲ್ಲಿ ಹುದುಗಿದೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಿಂದ ತೋಟಗಳಿಂದ ಮರಳು ಸಾಗಾಟ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಇದನ್ನು ದುರುಪಯೋಗಪಡಿಸಿ ತೋಟಗಳಲ್ಲಿ ರಸ್ತೆ ನಿರ್ಮಿಸಿ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಿಂದ ಅವ್ಯಾಹತವಾಗಿ ಮರಳು ಸಾಗಾಟ ನಡೆದಿದೆ ಎಂಬ ಆರೋಪವಿದೆ.

ಸರಕಾರದ ಹಣ ಪೋಲು
ಕಳೆದ ವರ್ಷದ ಪ್ರವಾಹದ ಸಮಯ ಕೃಷಿ ತೋಟಗಳಿಗೆ ನುಗ್ಗಿದ ಮರಳು ತೆರವಿಗೆ ಸರಕಾರ ಈ ಭಾಗದ ಪ್ರವಾಹ ಪೀಡಿತರಿಗೆ ಪ್ರತಿ ಎಕ್ರೆಗೆ 11,000 ರೂ.ಗೂ ಹೆಚ್ಚಿನ ಪರಿಹಾರ ಮೊತ್ತ ಮಂಜೂರು ಮಾಡಿತ್ತು. ಈಗ ನದಿಯಲ್ಲಿ ತುಂಬಿರುವ ಮರಳು ಈ ಬಾರಿ ಮತ್ತೆ ತೋಟಗಳಿಗೆ ಬಂದು ಬಿದ್ದರೆ ಮತ್ತೆ ಪರಿಹಾರ ನೀಡಬೇಕಾಗುತ್ತದೆ. ನದಿ ಪಾತ್ರಗಳಲ್ಲಿರುವ ಮರಳನ್ನು ಸರಕಾರದ ವತಿಯಿಂದ ತೆರವುಗೊಳಿಸಿದರೆ ಸರಕಾರದ ಹಣ ಪರಿಹಾರ ರೂಪದಲ್ಲಿ ಪೋಲಾಗುವುದು ತಪ್ಪುತ್ತದೆ.

ತೆರವಿಗೆ ಸೂಚನೆ
ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೇತುವೆಯ ಆಸು ಪಾಸಿನಲ್ಲಿರುವ ಮರಳನ್ನು ತೆರವು ಗೊಳಿಸುವಂತೆ ಸೂಚಿಸಲಾಗಿದೆ.
-ನಿರಂಜನ್‌, ಅಡಿಶನಲ್‌ ಡೈರೆಕ್ಟರ್‌,
ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಮಂಗಳೂರು

Advertisement

ತೆರವು ಅಗತ್ಯ
ಕಳೆದ ಮಳೆಗಾಲದಲ್ಲಿ ತೋಟಕ್ಕೆ ನೆರೆಯೊಂದಿಗೆ ನುಗ್ಗಿದ ಮರಳಿನಿಂದ ಸಾಕಷ್ಟು ನಷ್ಟ ಉಂಟಾಗಿದೆ. ಸೇತುವೆ ಬಳಿ ಇರುವ ಮರಳನ್ನು ತೆರವುಗೊಳಿಸದಿದ್ದಲ್ಲಿ ಈ ಮಳೆ ಗಾಲದಲ್ಲಿ ಪ್ರವಾಹ ಉಂಟಾದರೆ ಅಡಿಕೆ ತೋಟಗಳು ಸಂಪೂರ್ಣ ನಾಶ ವಾಗಲಿವೆ. ಮರಳನ್ನು ಕೂಡಲೇ ತೆರವು ಗೊಳಿಸುವುದು ಅವಶ್ಯ.
– ಶಶಿಧರ ಠೊಸರ್‌
ಸಕೃಷಿಕರು, ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next