ಸವಣೂರು: ಮಳೆಗಾಲದಲ್ಲಿ ತೋಡು, ಬೇಸಗೆಯಲ್ಲಿ ರೋಡು ಎಂಬಂತಿದ್ದ ಬೆಳಂದೂರು ಜಿ.ಪಂ.ವ್ಯಾಪ್ತಿಯ ಸವಣೂರು ಗ್ರಾ.ಪಂ.ಕ್ಕೊಳಪಟ್ಟ ಪಾಲ್ತಾಡಿ ಗ್ರಾಮದ ಪರಣೆಯಿಂದ ಬಂಬಿಲ ಬೈಲು ಪ್ರದೇಶಗಳಿಗೆ ಹೋಗುವ ರಸ್ತೆಗೆ ಮೋರಿ ಅಳವಡಿಕೆಗೆ ಎಸ್.ಡಿ.ಆರ್.ಎಫ್. ನಿಧಿಯಿಂದ 5 ಲಕ್ಷ ರೂ. ಅನುದಾನ ಮಂಜೂರಾಗಿದೆ.
ಕಾಮಗಾರಿ ನಿರ್ವಹಿಸುವಂತೆ ಪಂಚಾಯತ್ ರಾಜ್ ಎಂಜಿನಿಯರ್ ಮಂಗಳೂರು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರಿಗೆ ತಿಳಿಸಲಾಗಿದೆ. ಈ ಕುರಿತು ‘ಉದಯವಾಣಿ’ ಸುದಿನ ಕಳೆದ ವರ್ಷ ಹಾಗೂ 2019ರ ಮೇ 9ರಂದು ಸಚಿತ್ರ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ಕಳೆದ ವರ್ಷ ಈ ರಸ್ತೆ ಮಳೆಗಾಲದಲ್ಲಿ 20 ದಿನಗಳಿಗಿಂತಲೂ ಹೆಚ್ಚು ಅವಧಿ ಮುಳುಗಡೆಯಾಗಿತ್ತು. ಸ್ಥಳೀಯರ ಮನವಿಯಂತೆ ತಹಶೀಲ್ದಾರ್, ತಾ.ಪಂ. ಇಒ, ಜಿ.ಎಂ. ಎಂಜಿನಿಯರ್ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ, ಪರಿಶೀಲಿಸಿದ್ದರು.
50ಕ್ಕೂ ಅಧಿಕ ಮನೆಗಳು
ಪರಣೆಯಿಂದ ಮೀನಕೊಳೆಂಜಿ, ಜಾರಿಗೆತ್ತಡಿ, ಚಾಕೋಟೆತ್ತಡಿ ಸಸಹಿತ ಬಂಬಿಲಬೈಲು ಪ್ರದೇಶಗಳ 50ಕ್ಕೂ ಹೆಚ್ಚು ಕುಟುಂಬಗಳಿಗೆ ಈ ರಸ್ತೆಯ ಮೂಲಕವೇ ಸಂಪರ್ಕ ವಿದ್ದು, ಮಳೆಗಾಲದಲ್ಲಿ ಮನೆ ತಲುಪಲು ಇವರೆಲ್ಲ ಹರಸಾಹಸ ಮಾಡಬೇಕಾಗುತ್ತದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ಕೂಡ ಆತಂಕದಲ್ಲೇ ಸಂಚರಿಸುತ್ತಾರೆ. ಈ ಭಾಗದಲ್ಲಿ ತರಕಾರಿ, ಅಡಿಕೆ, ತೆಂಗು ಕೃಷಿಕರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರಿಗೂ ಮಳೆಗಾಲ ಸಂಕಷ್ಟದ ಸಮಯ.