Advertisement

ಜಿಲ್ಲೆಯ ಗ್ರಾಮೀಣದಲ್ಲಿ 499 ರೌಡಿಗಳು

11:54 AM Jan 18, 2020 | Suhan S |

ಧಾರವಾಡ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯ 499 ಜನರ ವಿರುದ್ಧ ರೌಡಿಶೀಟ್‌ ತೆರೆಯಲಾಗಿದೆ ಎಂದು ಎಸ್ಪಿ ವರ್ತಿಕಾ ಕಟಿಯಾರ್‌ ಹೇಳಿದರು.

Advertisement

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರೇಡ್‌ ಮೈದಾನದಲ್ಲಿ ಜಿಲ್ಲಾಮಟ್ಟದ ರೌಡಿಶೀಟರ್‌ ಗಳ ಪರೇಡ್‌ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇಷ್ಟು ಜನರ ವಿರುದ್ಧ ರೌಡಿಶೀಟರ್‌ ತೆರೆಯಲಾಗಿದ್ದು, ಈ ಪಟ್ಟಿಯನ್ನು ಅವರು ತೋರಿದ ಸನ್ನಡತೆ ಹಾಗೂ ಯಾವುದೇ ಪ್ರಕರಣಗಳಲ್ಲಿ ಮತ್ತೆ ಭಾಗಿಯಾಗದ ಕುರಿತು ವರದಿ ಪಡೆದು ಪರಿಶೀಲಿಸುತ್ತೇವೆ. ಇದರಲ್ಲಿ ಸನ್ನಡತೆ ತೋರಿದವರನ್ನು ಮಾತ್ರ ರೌಡಿಶೀಟರ್‌ ಪಟ್ಟಿಯಿಂದ ಕೈ ಬಿಡಲಾಗುವುದು ಎಂದರು.

ಯಾವುದೇ ರೀತಿಯ ಅಪರಾಧಗಳಲ್ಲಿ ಭಾಗವಹಿಸದಂತೆ ರೌಡಿಗಳಿಗೆ ಎಚ್ಚರಿಕೆ ನೀಡುವುದು ಮತ್ತು ರೌಡಿಶೀಟರ್‌ ತೆರೆದ ಮೇಲೆ ಅಪರಾಧ ಕೃತ್ಯಗಳಿಂದ ದೂರವಿರುವ ಕುರಿತು ಪರಿಶೀಲಿಸುವುದು ಪರೇಡ್‌ನ‌ ಮುಖ್ಯ ಆಶಯವಾಗಿದೆ. ಒಬ್ಬ ರೌಡಿ ವಿರುದ್ಧ ರೌಡಿಶೀಟ್‌ ತೆರೆದು, ಹತ್ತು ವರ್ಷಗಳಾಗಿದ್ದಲ್ಲಿ, ಅವನು ಕಳೆದ ಹತ್ತು ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಿರದಿದ್ದರೆ ಮತ್ತು ಸನ್ನಡತೆ ಹೊಂದಿದ್ದರೆ ಠಾಣಾಧಿಕಾರಿಯಿಂದ ವರದಿ ಪಡೆದು ರೌಡಿಶೀಟರ್‌ ಪಟ್ಟಿಯಿಂದ ಅವನ ಹೆಸರು ತೆಗೆಯಲಾಗುತ್ತದೆ. ಆದರೆ ರೌಡಿಶೀಟರ್‌ ಪಟ್ಟಿಯಿಂದ ಅವನ ಹೆಸರು ತೆಗೆದ ಮೇಲೆ ಮತ್ತೆ ಅಪರಾಧ ಕೃತ್ಯಕ್ಕೆ ಮುಂದಾದರೆ ಅಥವಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ತಕ್ಷಣ ರೌಡಿ ಪಟ್ಟಿಗೆ ಅವನ ಹೆಸರು ಮರು ಸೇರಿಸಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನ್ಯಾಯಾಲಯದಲ್ಲಿನ ಪ್ರಕರಣಗಳು

ಇತ್ಯರ್ಥವಾಗಿರುವ ಮತ್ತು 60 ವರ್ಷ ಮೇಲ್ಪಟ್ಟವರ, ಕಳೆದ ಹತ್ತು ವರ್ಷಗಳಲ್ಲಿ ಅಪರಾಧಗಳಿಂದ ದೂರವಿದ್ದು ಸನ್ನಡತೆ ತೋರಿರುವ ರೌಡಿಗಳ ಮೇಲಿರುವ ರೌಡಿಶೀಟರ್‌ ಪಟ್ಟಿ ತೆಗೆಯಲು ಶೀಘ್ರದಲ್ಲಿ ವರದಿ ಪಡೆದು, ಅಧಿಕಾರಿಗಳ ಸಭೆ ಜರುಗಿಸಿ ಕ್ರಮ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಉಪಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ನಾಯ್ಕ ಮಾತನಾಡಿ, ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಾದ ಅಳ್ನಾವರದಲ್ಲಿ 45, ಅಣ್ಣಿಗೇರಿಯಲ್ಲಿ 55, ಧಾರವಾಡ ಗ್ರಾಮೀಣ ಠಾಣೆಯಲ್ಲಿ 43, ಗರಗದಲ್ಲಿ 53, ಗುಡಗೇರಿಯಲ್ಲಿ 34, ಕಲಘಟಗಿಯಲ್ಲಿ 95, ಕುಂದಗೋಳದಲ್ಲಿ 40, ನವಲಗುಂದದಲ್ಲಿ 69, ಹುಬ್ಬಳ್ಳಿ ಗ್ರಾಮೀಣದಲ್ಲಿ 64 ಮತ್ತು ಮಹಿಳಾ ಪೊಲೀಸ್‌ ಠಾಣೆಯಲ್ಲಿ 1 ಹೀಗೆಒಟ್ಟು ಹತ್ತು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ 499 ಜನರ ವಿರುದ್ಧ ರೌಡಿಶೀಟ್‌ ತೆರೆಯಲಾಗಿದೆ ಎಂದು ತಿಳಿಸಿದರು.

Advertisement

ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ಶಿವಾನಂದ ಕಮತಗಿ, ವಿಜಯ ಬಿರಾದರ, ಬಸವರಾಜ ಕಲ್ಲಮ್ಮನವರ, ರಂಗನಾಥ ನೀಲಮ್ಮನವರ, ಬಸವರಾಜ ಕಾಮನಬೈಲ್‌ ಹಾಗೂ ಠಾಣಾಧಿಕಾರಿಗಳಾದ ಪಿಎಸ್‌ಐ ಮಹೇಂದ್ರಕುಮಾರ ನಾಯಕ, ನವೀನ ಜಕ್ಕಲಿ, ಪ್ರಸಾದ ಫಣೆಕರ, ಎಸ್‌. ದೇವಾನಂದ, ಎಸ್‌.ಬಿ. ಚಲವಾದಿ, ಲಾಲಸಾಬ ಜುಲಕಟ್ಟಿ ಹಾಗೂ ಎಸ್‌.ಆರ್‌. ಕಣವಿ ಪರೇಡ್‌ ಮೈದಾನದಲ್ಲಿದ್ದು, ರೌಟಿಶೀಟರ್‌ಗಳ ಅಪರಾಧ ಕೃತ್ಯ ಹಾಗೂ ಅವರ ಹಿನ್ನೆಲೆಯನ್ನು ಎಸ್ಪಿಗೆ ವಿವರಿಸಿದರು. ಈ ವೇಳೆ ಅಪರಾಧ ಕೃತ್ಯಗಳಿಂದ ದೂರ ಇರುವ ಕೆಲವರು ತಮ್ಮ ಸನ್ನಡತೆ ಗಮನಿಸಿ, ರೌಡಿಶೀಟರ್‌ ಪಟ್ಟಿಯಿಂದ ಕೈ ಬಿಡುವಂತೆ ಎಸ್‌ಪಿಗೆ ಮನವಿ ಮಾಡಿದರು. ಜಿಲ್ಲಾ ವಿಶೇಷ ವಿಭಾಗದ ಇನ್ಸ್‌ಪೆಕ್ಟರ್‌ ಪುಲಕೇಶ ನೀಲಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next