Advertisement

Explainer:ಉತ್ತರಾಖಂಡ್‌ – ನೂರಾರು ಅಕ್ರಮ ಸಮಾಧಿ ಸ್ಮಾರಕ, ದೇವಸ್ಥಾನ ತೆರವು; ಕೈ ವಾದವೇನು?

12:51 PM Aug 11, 2023 | Team Udayavani |

ನವದೆಹಲಿ: ಉತ್ತರಾಖಂಡದಲ್ಲಿನ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ರಾಜ್ಯದಲ್ಲಿನ ಅರಣ್ಯಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಅಕ್ರಮ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ಕಾರ್ಯವನ್ನು ತೀವ್ರಗೊಳಿಸಿದ್ದು, ಇದು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಇದನ್ನೂ ಓದಿ:Chikkmagaluru ಮತ್ತೆ ಹಿಜಾಬ್ ವಿವಾದ: ವಿಡಿಯೋ ವೈರಲ್ ಬೆನ್ನಲ್ಲೇ ಆಡಳಿತ ಮಂಡಳಿಯಿಂದ ಕ್ರಮ

ದ ಪ್ರಿಂಟ್‌ ಗೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, 2023ರ ಮೇ ತಿಂಗಳಿನಿಂದ ಈವರೆಗೆ‌ ಅಕ್ರಮವಾಗಿ ನಿರ್ಮಿಸಿರುವ 465 ಗೋರಿ ಕಟ್ಟಿದ ಸ್ಮಾರಕಗಳನ್ನು, 45 ದೇವಸ್ಥಾನಗಳು ಮತ್ತು ಎರಡು ಗುರುದ್ವಾರಗಳನ್ನು ಧ್ವಂಸಗೊಳಿಸಿರುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಆರೋಪವೇನು?

ಇದು ಪುಷ್ಕರ್‌ ಸಿಂಗ್‌ ಧಾಮಿ ಸರ್ಕಾರದ ಕೋಮು ಧ್ರುವೀಕರಣವನ್ನು ಇನ್ನಷ್ಟು ಹದಗೆಡಿಸುವ ನಿರ್ಧಾರವಾಗಿದೆ ಎಂದು ವಿಪಕ್ಷ ಕಾಂಗ್ರೆಸ್‌ ಆರೋಪಿಸಿದೆ. ಆದರೆ ಭಾರತೀಯ ಜನತಾ ಪಕ್ಷ ಈ ಆರೋಪವನ್ನು ಅಲ್ಲಗಳೆದಿದ್ದು, ಇದರಲ್ಲಿ ಯಾವುದೇ ಧಾರ್ಮಿಕ ದ್ವೇಷದ ಅಜೆಂಡಾ ಇಲ್ಲ. ಅತಿಕ್ರಮವಾಗಿ ನಿರ್ಮಿಸಿದ್ದ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವುದಷ್ಟೇ ಉದ್ದೇಶವಾಗಿದೆ ಎಂದು ತಿರುಗೇಟು ನೀಡಿದೆ.

Advertisement

2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಾಖಂಡ್‌ ಸರ್ಕಾರ ಒತ್ತುವರಿ ತೆರವು ಹೆಸರಿನಲ್ಲಿ ಮತ ಧ್ರುವೀಕರಣಕ್ಕೆ ಮುಂದಾಗಿರುವುದಾಗಿ ಕಾಂಗ್ರೆಸ್‌ ದೂರಿದೆ. ಅಲ್ಲದೇ ರಾಜ್ಯದಲ್ಲಿ ಏಕರೂಪ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದಾಗಿ ಆರೋಪಿಸಿದೆ.

ಚುನಾವಣೆ ಸಂದರ್ಬದಲ್ಲಿ ಬಿಜೆಪಿ ಪ್ರತಿಬಾರಿ ಹಿಂದೂ-ಮುಸ್ಲಿಂ ನಾಟಕಕ್ಕೆ ಮುಂದಾಗುತ್ತದೆ. ಒತ್ತುವರಿ ತೆರವುಗೊಳಿಸುವ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಉತ್ತರಾಖಂಡ್‌ ಕಾಂಗ್ರೆಸ್‌ ವಕ್ತಾರ ಸುಜಾತಾ ಪೌಲ್‌ ಪ್ರತಿಕ್ರಿಯೆ ನೀಡಿರುವುದಾಗಿ ದ ಪ್ರಿಂಟ್‌ ವರದಿ ಮಾಡಿದೆ.

ಬಿಜೆಪಿ ತಿರುಗೇಟು:

ಕಾಂಗ್ರೆಸ್‌ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಧಾಮಾಜಿ ಅವರು ದೇವ ಭೂಮಿಯ ಪಾವಿತ್ರ್ಯವನ್ನು ಕಾಪಾಡಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಇದರ ಒಂದು ಭಾಗವಾಗಿದೆ ಎಂದು ಬಿಜೆಪಿ ವಕ್ತಾರ ಮನ್ವೀರ್‌ ಸಿಂಗ್‌ ತಿಳಿಸಿದ್ದಾರೆ.

11 ಸಾವಿರ ಹೆಕ್ಟೇರ್‌ ಗಳಷ್ಟು ಅರಣ್ಯ ಭೂಮಿ ಒತ್ತುವರಿ:

ರಾಜ್ಯದ ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಉತ್ತರಾಖಂಡ್‌ ರಾಜ್ಯದಲ್ಲಿ ಸುಮಾರು 11,814 ಹೆಕ್ಟೇರ್‌ ಗಳಷ್ಟು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ ತಿಂಗಳಿನಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಪುಷ್ಕರ್‌ ಧಾಮಿ ಅವರು, ರಾಜ್ಯದಲ್ಲಿನ ಅತಿಕ್ರಮವಾಗಿ ನಿರ್ಮಿಸಿರುವ ಗೋರಿ(ಸ್ಮಾರಕ), ದೇವಸ್ಥಾನಗಳು ಮತ್ತು ಚರ್ಚ್‌ ಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದರು ಎಂದು ವಿವರಿಸಿದೆ.

ಈ ತೆರವುಗೊಳಿಸುವ ಕಾರ್ಯಾಚರಣೆಯಿಂದ ಸುಮಾರು 2,508 ಎಕರೆ ಅರಣ್ಯ ಪ್ರದೇಶದ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಡೆಹ್ರಾಡೂನ್‌, ನೈನಿತಾಲ್‌, ಹರಿದ್ವಾರ್‌ ಮತ್ತು ಉಧಾಮ್‌ ಸಿಂಗ್‌ ನಗರಗಳಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್‌ ನ ಆದೇಶದ ಮೇರೆಗೆ ಉತ್ತರಾಖಂಡ್‌ ಸರ್ಕಾರ ಅರಣ್ಯ ಭೂಮಿ ಮತ್ತು ಇತರ ಭೂಮಿಯ ಒತ್ತುವರಿಯನ್ನು ತೆರವುಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ನೋಡಲ್‌ ಅಧಿಕಾರಿ ಡಾ.ಪರಾಗ್‌ ಮಧುಕರ್‌ ಧಾಕಾಟೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಕಾನೂನು ವ್ಯಾಪ್ತಿಯಲ್ಲಿ ನಾವು ಒತ್ತುವರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ಧಾರ್ಮಿಕ ಕೇಂದ್ರಗಳನ್ನು, ಅಂಗಡಿ, ಉಪಹಾರ ಮಂದಿರ, ತೋಟ, ನಿವಾಸಗಳನ್ನು ತೆರವುಗೊಳಿಸುತ್ತಿದ್ದೇವೆ. ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡ ಪರಿಣಾಮ ನಮಗೆ ಪರಿಸರವನ್ನು ರಕ್ಷಿಸುವುದು ತುಂಬಾ ಕ್ಲಿಷ್ಟದಾಯಕವಾಗಿತ್ತು ಎಂದು ಧಾಕಾಟೆ ವಿವರಿಸಿದ್ದಾರೆ.

ವಕ್ಫ್‌ ಬೋರ್ಡ್‌ ನಿಂದ ಮಾನ್ಯತೆ ಪಡೆದ ಮದರಸಾ, ಸಮಾಧಿ ಸ್ಮಾರಕಗಳನ್ನು ತೆರವುಗೊಳಿಸಿಲ್ಲ. ಕೇವಲ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಧಾರ್ಮಿಕ ಕೇಂದ್ರಗಳನ್ನು ಯಾವುದೇ ತಾರತಮ್ಯ ಇಲ್ಲದೇ ತೆರವುಗೊಳಿಸಿದ್ದೇವೆ. ಇದೊಂದು ರಾಜಕೀಯ ಸೇಡಿನ ಕ್ರಮವಲ್ಲ, ಎಲ್ಲರಿಗೂ ನೋಟಿಸ್‌ ಅನ್ನು ಜಾರಿಗೊಳಿಸಿ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಸಾವಿರಕ್ಕೂ ಅಧಿಕ ಗೋರಿ ಸ್ಮಾರಕಗಳಿವೆ:

ಉತ್ತರಖಂಡ್‌ ನಲ್ಲಿ ಸಾವಿರಕ್ಕೂ ಅಧಿಕ ಗೋರಿ ಸ್ಮಾರಕಗಳನ್ನು ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರಕಗಳು ಪವಿತ್ರ ಬಾಬಾಗಳ ಕೇಂದ್ರವಲ್ಲ, ಇದೊಂದು ಸಮಾಜ ವಿರೋಧಿ ಕೃತ್ಯಗಳ ಜಿಹಾದಿ ಕೇಂದ್ರಗಳಾಗಿವೆ ಎಂದು ಸಿಎಂ ಧಾಮಿ ಆರ್‌ ಎಸ್‌ ಎಸ್‌ ನ ಮುಖವಾಣಿ ಪಾಂಚಜನ್ಯಕ್ಕೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು.

ಕಳೆದ ತಿಂಗಳು ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ನ್ಯಾಷನಲ್‌ ಪಾರ್ಕ್‌ ಪ್ರದೇಶದಲ್ಲಿ ಸುಮಾರು ಶತಮಾನಗಳ ಹಿಂದೆ ನಿರ್ಮಿಸಿದ್ದ ಥಪಾಲಿ ಬಾಬಾ ಸಮಾಧಿ ಸ್ಮಾರಕವನ್ನು ತೆರವುಗೊಳಿಸುವ ವೇಳೆ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೆ ಅರಣ್ಯ ಅಧಿಕಾರಿಗಳು ಅಕ್ರಮವಾಗಿ ನಿರ್ಮಿಸಿರುವ ಈ ಸ್ಮಾರಕವನ್ನು ಧ್ವಂಸಗೊಳಿಸಿದ್ದರು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next