Advertisement

460 ಕೋ.ರೂ.ಜಲಸಿರಿ ಯೋಜನೆ ಅನುಷ್ಠಾನ ಪ್ರಕ್ರಿಯೆ ಆರಂಭ

12:32 AM Apr 30, 2019 | Sriram |

ಮಹಾನಗರ: ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಮತ್ತು ವಿತರಣೆ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ 460.83 ಕೋ.ರೂ. ವೆಚ್ಚದ ಜಲಸಿರಿ ಯೋಜನೆ ಅನುಷ್ಠಾನ ಪ್ರಕ್ರಿಯೆ ಆರಂಭಗೊಂಡಿದೆ.

Advertisement

ಈ ಯೋಜನೆಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಕೂಡ ಪ್ರಾರಂಭಗೊಂಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನೀರು ವಿತರಣ ವ್ಯವಸ್ಥೆಯನ್ನು ಬಲಗೊಳಿಸಿ ದಿನದ 24 ತಾಸುಗಳ (24×7) ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ 2ನೇ ಹಂತದ ಎಡಿಬಿ ಜಲಸಿರಿ ಯೋಜನೆ ರೂಪಿಸಲಾಗಿದ್ದು, ಕ್ಯುಮಿಪ್‌ ಅಡಿಯಲ್ಲಿ ಅನುಷ್ಠಾನ ಗೊಳ್ಳುತ್ತಿದೆ. ಟೆಂಡರ್‌ ಸಲ್ಲಿಕೆ ಅಂತಿಮ ಅವಧಿ ಮುಗಿದು 90 ದಿನಗಳ ಪ್ರೊಸೆಸಿಂಗ್‌ ಅವಧಿಯ ಬಳಿಕ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಕಾಮಗಾರಿ ಪ್ರಾರಂಭಿಸಲಿದೆ.ಕಾಮಗಾರಿ ಅವಧಿ ಒಟ್ಟು 33 ತಿಂಗಳುಗಳಾಗಿವೆ.

20 ಓವರ್‌ಹೆಡ್‌
ಟ್ಯಾಂಕ್‌ ನಿರ್ಮಾಣ
ಕುಡಿಯುವ ನೀರು ಪೂರೈಕೆಯ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ನಗರದಲ್ಲಿ 20 ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣವಾಗಲಿದೆ. ಇದಕ್ಕೆ ಈಗಾಗಲೇ ಜಾಗ ಗುರುತಿಸಿ ಅಂತಿಮಗೊಳಿಸಲಾಗಿದೆ. ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಜಾಲ್‌ ಗ್ರಾಮದ ಜಲ್ಲಿಗುಡ್ಡೆ, ದೇರೆಬೈಲ್‌ ಗ್ರಾಮದ ನೆಕ್ಕಿಲಗುಡ್ಡೆ, ಲೋಹಿತ್‌ನಗರ, ಮರೋಳಿ ಗ್ರಾಮದ ಹೋಲಿಹಿಲ್‌ ಜಯನಗರ, ಪದವು ಗ್ರಾಮದ ಶಕ್ತಿನಗರ, ಪಚ್ಚನಾಡಿ ಗ್ರಾಮದ ಸಂತೋಷ್‌ನಗರ, ವಾಮಂಜೂರು, ಕೊಡಿಯಾಲ್‌ಬೈಲ್‌ ಗ್ರಾಮದ ಲೇಡಿಹಿಲ್‌, ಎಸ್‌.ಪಿ. ಬಂಗ್ಲೆ ಬಳಿ, ದೇರೆಬೈಲ್‌ ಗ್ರಾಮದ ಡೊಮಿನಿಕ್‌ ಚರ್ಚ್‌ ರಸ್ತೆ ಬಳಿ, ಕುಡುಪು ಗ್ರಾಮದ ಮಂಗಳಾನಗರ, ತಿರುವೈಲ್‌ ಗ್ರಾಮದ ಅಮೃತನಗರ, ಕಸಬ ಬಜಾರ್‌ ಗ್ರಾಮದ ನೆಹರೂ ಮೈದಾನ ಚಿಲ್ಡ್ರನ್ಸ್‌ ಪಾರ್ಕ್‌ ಬಳಿ, ಜಪ್ಪಿನಮೊಗರು ಗ್ರಾಮದ ನಂದಿಗುಡ್ಡ ವಾಮನ್ಸ್‌ನಾಯಕ್‌ ಗ್ರೌಂಡ್‌, ವೆಲೆನ್ಸಿಯಾ ಸಿ.ಎಸ್‌.ಐ. ಶ್ಮಶಾನ, ಬಜಾಲ್‌ ಗ್ರಾಮದ ಬಜಾಲ್‌ ಜೆ.ಎಂ. ರಸ್ತೆ ಬಳಿ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಜಿಮೊಗರು ಗ್ರಾಮದ ಉರುಂದಾಡಿ ಗುಡ್ಡೆ, ಕುಂಜತ್ತಬೈಲ್‌ (ಮರಕಡ)ಗ್ರಾಮದ ಮರಕಡ, ಸುರತ್ಕಲ್‌ ಗ್ರಾಮದ ಸದಾಶಿವ ದೇವಸ್ಥಾನ ರಸ್ತೆ, ಹೊಸಬೆಟ್ಟು-ಕಟ್ಲ ಗ್ರಾಮದ ತಾಲೂಕು ಬೋರ್ಡ್‌ ರಸ್ತೆ ಕಟ್ಲ, ಸುರತ್ಕಲ್‌-ಮುಕ್ಕ ಗ್ರಾಮದ ಸುರತ್ಕಲ್‌ ಮುಕ್ಕ, ಕುಳಾಯಿ-ಕಾನ ಮತ್ತು ಬಾಳ ಗ್ರಾಮದಲ್ಲಿ ಮನಪಾ ಸ್ಥಳ, ಕಾಟಿಪಳ್ಳ 6ನೇ ಬ್ಲಾಕ್‌ ಕೃಷ್ಣಾಪುರ ಗ್ರಾಮದ ಪುನರ್ವಸತಿ ಕೇಂದ್ರ, ಪಣಂಬೂರು ಗ್ರಾಮದ ಕೂರಿಕಟ್ಟ, ಕೋಡಿಪಾಡಿ, ದೇರೆಬೈಲ್‌ ಗ್ರಾಮದ ಹರಿಪದವುಗಳಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ನಗರದಲ್ಲಿ ಎರಡು
ಜಲಸಂಗ್ರಹ ಸ್ಥಾವರ
ಯೋಜನೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಲೇಡಿಹಿಲ್‌ ಸಮೀಪದ ಆಫೀಸರ್ ಕ್ಲಬ್‌ ಬಳಿ ಮತ್ತು ಬಾಳದಲ್ಲಿ ತಲಾ 10 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಜಲಸಂಗ್ರಹ ಸ್ಥಾವರಗಳು ನಿರ್ಮಾಣವಾಗಲಿದೆ. ಲೇಡಿಹಿಲ್‌ ಬಳಿ ಜಲಸಂಗ್ರಹ ಸ್ಥಾವರಕ್ಕೆ 35ಸೆಂಟ್ಸ್‌ ಜಾಗ ಗುರುತಿಸಲಾಗಿದೆ. ಈ ಜಲಸ್ಥಾವರದಿಂದ ಚಿಲಿಂಬಿ, ಅಶೋಕನಗರ ಪ್ರದೇಶ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಗಲಿದೆ. ಬಾಳದಲ್ಲಿ ಈಗಾಗಲೇ ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿಯ ವಶದಲ್ಲಿರುವ 75 ಸೆಂಟ್ಸ್‌ ಪ್ರದೇಶದಲ್ಲಿ ಸಂಗ್ರಹ ಸ್ಥಾವರ ನಿರ್ಮಾಣವಾಗಲಿದೆ.

ತುಂಬೆಯ ರಾಮಲ್‌ಕಟ್ಟೆಯಲ್ಲಿ ಎರಡು ಎಕ್ರೆ ಜಾಗದಲ್ಲಿ ಹೊಸದಾಗಿ 20 ಎಂಎಲ್‌ಡಿ ನೀರು ಸಂಸ್ಕರಣೆ ಸ್ಥಾವರ ನಿರ್ಮಾಣವಾಗಲಿದ್ದು, ಇದರಲ್ಲಿ ಹೆಚ್ಚುವರಿಯಾಗಿ 10 ಎಂಎಲ್‌ಡಿ ನಗರಕ್ಕೆ ಲಭ್ಯವಾಗಲಿದ್ದು ಪ್ರತಿದಿನ ಈಗಿನ 160 ಎಂಎಲ್‌ಡಿ ಬದಲು 170 ಎಂಎಲ್‌ಡಿ ನೀರು ಸರಬರಾಜರಾಗಲಿದೆ.ಇದಲ್ಲದೆ 160 ಎಂಎಲ್‌ಡಿ ನೀರು ಶುದ್ಧೀಕರಣ ವೇಳೆ ದಿನವೊಂದಕ್ಕೆ ಸುಮಾರು 8 ಎಂಎಲ್‌ಡಿ ನೀರು ಹರಿದು ಹೋಗುತ್ತಿದ್ದು ಇದನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಘಟಕವೊಂದು ಸ್ಥಾಪನೆಯಾಗಲಿದೆ.

Advertisement

ಹೊಸ ಪಂಪ್‌ಹೌಸ್‌ಗಳ ನಿರ್ಮಾಣ
ನಗರ ನೀರು ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ 8 ಇಂಟರ್‌ ಮೀಡಿಯೆಟ್‌ ಪಂಪ್‌ಹೌಸ್‌ಗಳನ್ನು ನಿರ್ಮಿಸಲಾಗುವುದು. ಜಾಕ್‌ವೆಲ್‌ನಿಂದ ಓವರ್‌ಹೆಡ್‌ಗಳ ವರೆಗೆ ನೀರು ಸರಬರಾಜು ಮಾರ್ಗ ಮಧ್ಯೆ 181 ಸಗಟು ನೀರು ಹರಿಯುವಿಕೆ ಮೀಟರ್‌( ಬಲ್ಕ್ ಫ್ಲೋ ಮೀಟರ್‌) ಅಳವಡಿಸಲಾಗುತ್ತಿದೆ.

ನೀರು ವಿತರಣೆ ಜಾಲ ಸುಧಾರಣೆ
ನಗರದಲ್ಲಿ ಒಟ್ಟು 96,300 ನೀರಿನ ಸಂಪರ್ಕಗಳಿವೆ ಎಂದು ಗುರುತಿಸಲಾಗಿದೆ. ಮನೆಗಳಿಗೆ ನೀರು ವಿತರಣೆ ಜಾಲ ಉನ್ನತೀಕರಣಕ್ಕೆ ಯೋಜನೆಯಲ್ಲಿ ಕ್ರಮವಹಿಸಲಾಗಿದೆ. ಸರಾಗ ನೀರು ಪೂರೈಕೆ ನಿಟ್ಟಿನಲ್ಲಿ ನಗರದೊಳಗೆ ಒಟ್ಟು 1,388.74 ಕಿ.ಮೀ. ಎಚ್‌ಡಿಪಿಇ ಅಳವಡಿಸಲಾಗುತ್ತಿದೆ.

 ಟೆಂಡರ್‌ ಪ್ರಕ್ರಿಯೆ
ನಗರಕ್ಕೆ 24×7 ನೀರು
ಪೂರೈಕೆಗೆ ವಿತರಣ
ವ್ಯವಸ್ಥೆಯನ್ನು ಬಲಪಡಿಸುವ ಯೋಜನೆಗೆ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆಗಳು ಮುಗಿದ ಬಳಿಕ ಅನುಷ್ಠಾನ ಆರಂಭಗೊಳ್ಳಲಿದೆ.
 - ಅಮೃತ್‌ ಕುಮಾರ್‌,
ಕಾರ್ಯನಿರ್ವಾಹಕ
ಎಂಜಿನಿಯರ್‌

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next