Advertisement

ವಿಶ್ವವಿಖ್ಯಾತ 408ನೇ ಮೈಸೂರು ದಸರಾ ಆರಂಭ

06:00 AM Oct 11, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ, 408ನೇ ಮೈಸೂರು ದಸರಾ ಮಹೋತ್ಸವಕ್ಕೆ ನಾಡದೇವತೆ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬುಧವಾರ ವಿಧ್ಯುಕ್ತ ಚಾಲನೆ ದೊರೆಯಿತು.

Advertisement

ಬೆಳಗ್ಗೆ 7.05 ರಿಂದ 7.35ರವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿಯವರು ಬೆಳ್ಳಿ ಪಲ್ಲಕ್ಕಿಯಲ್ಲಿ ಅಲಂಕರಿಸಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ 2018ನೇ ಸಾಲಿನ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. 

ಡಾ.ಸುಧಾಮೂರ್ತಿ ಅವರು ಮಂಗಳವಾರ ಸಂಜೆಯೇ ತಮ್ಮ ಕುಟುಂಬದವರೊಂದಿಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು.

ಬುಧವಾರ ಬೆಳಗ್ಗೆ 7 ಗಂಟೆಗೆ ಕುಮಾರಸ್ವಾಮಿ ಮತ್ತು ಅವರ ಸಂಪುಟದ ಇತರ ಸಚಿವರ ಜೊತೆಗೆ ಜಿಲ್ಲಾಡಳಿತದ ವತಿಯಿಂದ ಡಾ.ಸುಧಾಮೂರ್ತಿ ಅವರನ್ನು ಪೂರ್ಣಕುಂಭ ಸ್ವಾಗತ ನೀಡಿ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತರ ನೇತೃತ್ವದಲ್ಲಿ ನಾಡದೇವತೆಗೆ ಫ‌ಲ-ತಾಂಬೂಲ, ಸೀರೆ-ರವಿಕೆ ಕಣ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ, ದೇವಸ್ಥಾನದ ಹೊರ ಆವರಣದಲ್ಲಿ ಹಾಕಲಾಗಿದ್ದ ಪೆಂಡಾಲ್‌ನ ವೇದಿಕೆಯಲ್ಲಿ ಬೆಳ್ಳಿ ಮಂಟಪದಲ್ಲಿ ಇರಿಸಲಾಗಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಸುಧಾಮೂರ್ತಿಯವರು ದಸರೆಗೆ ಚಾಲನೆ ನೀಡಿದರು.

ಇದೇ ವೇಳೆ, ಮಾತನಾಡಿದ ಸುಧಾಮೂರ್ತಿ, ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಕೊಡಗಿನ ಜನತೆಗೆ ಮನೆ ಕಟ್ಟಿಕೊಡಲು 25 ಕೋಟಿ ರೂ.ನೀಡುವುದಾಗಿ ಘೋಷಣೆ ಮಾಡಿದರು. ಸುಧಾಮೂರ್ತಿ ಅವರೊಂದಿಗೆ ಬಂದಿದ್ದ ಅವರ ಪತಿ ಡಾ.ಎನ್‌.ಆರ್‌.ನಾರಾಯಣಮೂರ್ತಿ, ಮಗಳು ಅಕ್ಷತಾ, ಸಹೋದರಿ ಸುನಂದಾ ಕುಲಕರ್ಣಿ, ಭಾವ ಶ್ರೀನಿವಾಸ ಕುಲಕರ್ಣಿ ಅವರು ವೇದಿಕೆಯ ಮುಂಭಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

Advertisement

ಕಾಂಗ್ರೆಸ್‌ ನಾಯಕರ ಮುನಿಸು: ಉದ್ಘಾಟನಾ ಸಮಾರಂಭದಲ್ಲಿ ಕೈ ನಾಯಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಶಿಷ್ಠಾಚಾರದ ಪ್ರಕಾರ ಸಚಿವರಾದ ಡಾ.ಜಯಮಾಲಾ ಹಾಗೂ ರಾಜಶೇಖರ ಬಿ.ಪಾಟೀಲ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ, ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಎನ್‌.ಮಹೇಶ್‌ ಗೈರು ಹಾಜರಾಗಿದ್ದರು. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಗೈರಾಗಿದ್ದರು.

ಅರಮನೆಯಲ್ಲಿ ಖಾಸಗಿ ದರ್ಬಾರ್‌ ಆರಂಭ
ನಾಡಹಬ್ಬ ದಸರೆಗೆ ಚಾಲನೆ ದೊರೆತ ಬೆನ್ನಲ್ಲೇ, ರಾಜಪೋಷಾಕು, ಚಿನ್ನಾಭರಣ ಧರಿಸಿ, ರಾಜಪೇಟ ತೊಟ್ಟು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ಅಂಬಾ ವಿಲಾಸ ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್‌ ಆರಂಭಿಸಿದರು. ಇದರೊಂದಿಗೆ ಅರಮನೆಯಲ್ಲಿ ನವರಾತ್ರಿ ಉತ್ಸವದ ಧಾರ್ಮಿಕ ವಿಧಿ ವಿಧಾನಗಳ ಆಚರಣೆಗೂ ವಿಧ್ಯುಕ್ತ ಚಾಲನೆ ದೊರೆಯಿತು.  ಡಾ.ಸುಧಾಮೂರ್ತಿ, ಪತಿ ನಾರಾಯಣಮೂರ್ತಿ ಹಾಗೂ ಮಕ್ಕಳೊಂದಿಗೆ ದರ್ಬಾರ್‌ ಹಾಲ್‌ಗೆ ತೆರಳಿ ಯದುವೀರ್‌ರ ಖಾಸಗಿ ದರ್ಬಾರನ್ನು ಕುತೂಹಲದಿಂದ ವೀಕ್ಷಿಸಿದರು.

ಸಿನಿಮಾ ಸಂಭ್ರಮಕ್ಕೆ ಚಾಲನೆ
ಮೈಸೂರು ನಗರದ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ಸಿನಿಮಾ ಸಂಭ್ರಮಕ್ಕೆ ಚಾಲನೆ ನೀಡಿದರು. ಅ.10ರಿಂದ 17ರವರೆಗೆ ನಡೆಯುವ ಚಲನಚಿತ್ರೋತ್ಸವದಲ್ಲಿ ಕನ್ನಡ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದಿರುವ ವಿವಿಧ ಭಾಷೆಯ 65 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next