Advertisement

ಗೋಳಿಸೊಪ್ಪು ತಿಂದು 4 ಜಾನುವಾರು ಗಂಭೀರ, ಒಂದು ಸಾವು

09:32 PM Mar 09, 2023 | Team Udayavani |

ಉಳ್ಳಾಲ: ಕರಿ ಗೋಳಿ ಸೊಪ್ಪು ತಿಂದ ಪರಿಣಾಮ ಎರಡು ಹಸು ಮತ್ತು ಮೂರು ಕರುಗಳ ಆರೋಗ್ಯ ತೀವ್ರ ಹದಗೆಟ್ಟ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ. ಇವುಗಳಲ್ಲಿ ಒಂದು ಹಸು ಮೃತಪಟ್ಟರೆ, ಉಳಿದ ನಾಲ್ಕು ಜಾನುವಾರುಗಳಿಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ.
ಮುಂಡೋಳಿಯ ಕೃಷಿಕ ಸಂಜೀವ ಪೂಜಾರಿಯವರ ಹಟ್ಟಿಯಲ್ಲಿ ಬುಧವಾರ ಜಾನುವಾರುಗಳ ಅಡಿಗೆ ಕರಿ ಗೋಳಿ ಸೊಪ್ಪು ಹಾಕಲಾಗಿತ್ತು. ಆದರೆ ಹಸುಗಳೆಲ್ಲ ಅದನ್ನೇ ತಿಂದ ಅನಂತರ ತೀವ್ರ ಅಸ್ವಸ್ಥಕ್ಕೆ ಒಳಗಾದವು. ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದವು ಕಾಲುಗಳನ್ನು ನೆಲಕ್ಕೆ ಹೊಡೆಯುವಂತೆ ವರ್ತಿಸಲಾರಂಭಿಸಿದ್ದವು. ಇದನ್ನು ಗಮನಿಸಿದ ಮನೆಮಂದಿ ಕೋಟೆಕಾರು ಪಶು ವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಅವರು ಸಹಾಯಕ ಆಯುಕ್ತರ ತುರ್ತು ಸಭೆಯಲ್ಲಿದ್ದ ಕಾರಣ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದರು.

Advertisement

ಗುರುವಾರ ಮುಂಜಾನೆ ವಿಷಾಂಶ ಹಸುಗಳ ದೇಹವಿಡೀ ಪಸರಿಸಿ ಒಂದು ಹಸು ಸಾವನ್ನಪ್ಪಿತ್ತು. ಇನ್ನುಳಿದವು ಗಂಭೀರ ಸ್ಥಿತಿಗೆ ತಲುಪಿದ್ದವು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದು, ಪಶುವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಕೋಟೆಕಾರು ಪಶು ವೈದ್ಯಾಧಿಕಾರಿ ಡಾ| ಚಂದ್ರಹಾಸ್‌ ನೇತೃತ್ವದಲ್ಲಿ ತೀವ್ರ ಚಿಕಿತ್ಸೆಯನ್ನು ಆರಂಭಿಸಲಾಯಿತು. ತಲಪಾಡಿ ಪಶು ವೈದ್ಯಾಧಿಕಾರಿ ಡಾ| ರಚನಾ ಅವರೂ ಸ್ಥಳಕ್ಕಾಗಮಿಸಿ ಗಂಭೀರ ಸ್ಥಿತಿಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕೋಟೆಕಾರು ಪಶುವೈದ್ಯಾಧಿಕಾರಿ ಡಾ| ಗಜೇಂದ್ರ ಕುಮಾರ್‌ ಪಿ.ಕೆ. ಮಾಹಿತಿ ನೀಡಿ, ಜಾನುವಾರು ಮಲಗುವ ಹಟ್ಟಿಗೆ ಗೋಳಿ ಸೊಪ್ಪು ಹಾಕಲಾಗಿದೆ. ಜಾನುವಾರುಗಳು ಆಕಸ್ಮಿಕವಾಗಿ ಅದೇ ಸೊಪ್ಪುಗಳನ್ನು ತಿಂದಿವೆ. ಅಧಿಕವಾಗಿ ತಿಂದಿರುವುದರಿಂದ ವಿಷವಾಗಿ ಪರಿಣಮಿಸಿದೆ. ಗೋಳಿ ಸೊಪ್ಪಿನ ಎಲೆಗಳಲ್ಲಿ ಇರುವ ಸೊನೆ ರಕ್ತದಲ್ಲಿ ಸೇರಿ ಅಂಟಾಗಿದೆ. ಇದರಿಂದ ಒಂದು ಜಾನುವಾರು ಸಾವನ್ನಪ್ಪಿದ್ದು, ಉಳಿದವುಗಳಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ ಎಂದರು.

ಪಶುವೈದ್ಯಾಧಿಕಾರಿಗಳ ಕೊರತೆ
ಉಳ್ಳಾಲ ತಾಲೂಕಿನಲ್ಲಿ ಕೋಟೆಕಾರು ಮತ್ತು ತಲಪಾಡಿಗೆ ಪಶುವೈದ್ಯಾಧಿಕಾರಿಗಳಿದ್ದು, ಪಾವೂರು, ಕೊಣಾಜೆ, ಅಂಬ್ಲಿಮೊಗರು, ಕುರ್ನಾಡು ಪಶುಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ. ತಲಪಾಡಿಯ ಅಧಿಕಾರಿ ಡಾ| ರಚನಾ ಅವರಿಗೆ ಅಡ್ಯಾರು ಭಾಗದ ಜವಾಬ್ದಾರಿ ನೀಡಿದ್ದು, ಇಡೀ ಉಳ್ಳಾಲ ವ್ಯಾಪ್ತಿಯಲ್ಲಿ ಓರ್ವರೇ ಕಾರ್ಯನಿರ್ವಹಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next