Advertisement

ಕರ್ಲಕೊಪ್ಪದಲ್ಲಿ 3ರ್ಡ್‌ ಕ್ಲಾಸ್‌ ತಂಡ ವಾಸ್ತವ್ಯ

03:59 PM Jan 21, 2020 | Suhan S |

ಬಾಗಲಕೋಟೆ: ಕಳೆದ ಆಗಸ್ಟ್‌ನಲ್ಲಿ  ಉಂಟಾದ ಭೀಕರ ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾಗಿದ್ದ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮದಲ್ಲಿ 3ರ್ಡ್‌ ಕ್ಲಾಸ್‌ ಚಿತ್ರ ತಂಡದ ನಾಯಕ-ನಾಯಕಿ ಹಾಗೂ ಸಹ ನಿರ್ಮಾಪಕರು ಸೇರಿದಂತೆ ಇಡೀ ಚಿತ್ರ ತಂಡದವರು ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು.

Advertisement

ರವಿವಾರ ರಾತ್ರಿ ಗ್ರಾಮಕ್ಕೆ ತೆರಳಿದ 7 ಹಿಲ್ಸ್‌ ಸ್ಟುಡಿಯೋ ನಿರ್ಮಾಣದ 3ರ್ಡ್‌ ಕ್ಲಾಸ್‌ ಸಿನೆಮಾ ನಾಯಕ ನಮ್ಮ ಜಗದೀಶ, ನಟಿ ರೂಪಿಕಾ, ಸಹ ನಿರ್ಮಾಪಕ ನಂದನ್‌, ತಂಡದ ಕಿರಣ, ಮಣಿ ಮುಂತಾದವರನ್ನು ಇಡೀ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದರು. ಬಳಿಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ನೃತ್ಯ, ಹಾಡು ಹಾಡಿ ರಂಜಿಸಿದರು. ಸಂತ್ರಸ್ತರ ಮಕ್ಕಳಿಂದಲೂ ವಿವಿಧ ಹಾಡು, ನೃತ್ಯ ಮಾಡಿಸಿ ಮಕ್ಕಳ ಮೊಗದಲ್ಲಿ ಹರ್ಷ ಮೂಡಿಸಿದರು.

ಬಳಿಕ ನಟ ನಮ್ಮ ಜಗದೀಶ, ನಟಿ ರೂಪಿಕಾ, ಸಹ ನಿರ್ಮಾಪಕ ನಂದನ್‌ ಅವರೇ ಸ್ವತಃ ಮಕ್ಕಳು, ಗ್ರಾಮಸ್ಥರು ಹಾಗೂ ಚಿತ್ರ ತಂಡದವರಿಗೆ ಅಡುಗೆ (ಪಲಾವ್‌, ಶಾವಿಗೆ ಪಾಯಸ) ಸಿದ್ಧಪಡಿಸಿದರು. ಮಕ್ಕಳೊಂದಿಗೆ ಊಟ ಮಾಡಿ, ಶಾಲೆಯ ಕೊಠಡಿಯಲ್ಲೇ ವಾಸ್ತವ್ಯ ಮಾಡಿದರು.

ಸ್ವಾಮೀಜಿಗಳ ಶ್ಲಾಘನೆ :  ಪ್ರವಾಹ ಪೀಡಿತ ಗ್ರಾಮವನ್ನು ದತ್ತು ಪಡೆದು ಬಿದ್ದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವ 3ರ್ಡ್‌ ಕ್ಲಾಸ್‌ ಸಿನೆಮಾ ತಂಡದ ಕಾರ್ಯಕ್ಕೆ ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ, ಬೈರನಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ಹಲವು ಶ್ಲಾಘನೆ ವ್ಯಕ್ತಪಡಿಸಿದರು.

ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ :  3ರ್ಡ್‌ ಕ್ಲಾಸ್‌ ಸಿನೆಮಾ ನಡೆ ಗ್ರಾಮದ ಕಡೆ ಎಂಬ ಪರಿಕಲ್ಪನೆಯೊಂದಿಗೆ ನಟ-ನಿರ್ಮಾಪಕರೂ ಆಗಿರುವ ನಮ್ಮ ಜಗದೀಶ, ನಟಿ ರೂಪಿಕಾ ಹಾಗೂ ನಂದನ್‌ ಅವರು, ಚಿತ್ರ ತಂಡದ ಮೂಲಕ ಕರ್ಲಕೊಪ್ಪ ಗ್ರಾಮ ದತ್ತು ಪಡೆದಿದ್ದು, ಆರಂಭಿಕವಾಗಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗ್ರಾಮದ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 76 ಮಕ್ಕಳಿದ್ದು, ಆರು ಕೊಠಡಿಗಳಲ್ಲಿಎರಡು ಸಂಪೂರ್ಣ ಬಿದ್ದಿವೆ. ಆ ಕೊಠಡಿಗಳ ಪುನರ್‌ ನಿರ್ಮಾಣಕ್ಕೆ ಚಿತ್ರತಂಡ ಸೋಮವಾರ ಚಾಲನೆ ನೀಡಿತು. ಚಿತ್ರ ತಂಡದ ಪರವಾಗಿ ಕಾರ್ಗಿಲ್‌ ಯೋಧ ರಂಗಪ್ಪ ಆಲೂರ, ಗದಗ ಜಿಲ್ಲೆಯ ಹೊಳೆಆಲೂರಿನ ಜ್ಞಾನಸಿಂಧು ವಸತಿಯುತ ಅಂಧರ ಶಾಲೆಯ ಮಕ್ಕಳು ದೀಪ ಬೆಳಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

Advertisement

ಹಣ ಗಳಿಸುವ ಉದ್ದೇಶದಿಂದ ಸಿನೆಮಾ ಮಾಡಿಲ್ಲ. ಜನರ ಹಣ ಜನರಿಗಾಗಿ ವ್ಯಯ ಮಾಡಲು ನಿರ್ಧರಿಸಿದ್ದೇವೆ. ಕರ್ಲಕೊಪ್ಪದಲ್ಲಿ ಎರಡು ತಿಂಗಳಲ್ಲಿ ಶಾಲಾ ಕೊಠಡಿ ನಿರ್ಮಿಸಿ ಕಲಿಕೆಗೆ ಒಪ್ಪಿಸಲಾಗುವುದು. ನಾನು ಹಳ್ಳಿಯಿಂದ ಬಂದಿದ್ದು, ಹಳ್ಳಿಗರ ಸಮಸ್ಯೆ ಅರಿವಿದೆ. ನಮ್ಮ ತಂಡದಿಂದ ಗ್ರಾಮ ದತ್ತು ಪಡೆಯಲಾಗಿದೆ. -ನಮ್ಮ ಜಗದೀಶ, ನಟ

ಸಿನೆಮಾದವರು ಅಂದರೆ ಬಂಡವಾಳ ಹಾಕಿ ಸಿನೆಮಾ ಮಾಡಿ, ಪುನಃ ಗಳಿಸುವವರೆಂಬ ಭಾವನೆ ಎಲ್ಲರಲ್ಲಿದೆ. ಆದರೆ, ಈ ತಂಡದವರು ಇಡೀ ಗ್ರಾಮ ದತ್ತು ಪಡೆದು ಸಮಗ್ರ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿರುವ ಕಾರ್ಯ ಶ್ಲಾಘನೀಯ. ಶ್ರೀ ಶಾಂತಲಿಂಗ ಸ್ವಾಮೀಜಿ,ಬೈರನಟ್ಟಿ ವಿರಕ್ತಮಠ

Advertisement

Udayavani is now on Telegram. Click here to join our channel and stay updated with the latest news.

Next