Advertisement

ವಾಪಿ ಕನ್ನಡ ಸಂಘದ 38ನೇ ವಾರ್ಷಿಕೋತ್ಸವ 

03:24 PM Feb 28, 2018 | |

ವಾಪಿ: ವಾಪಿ ಕನ್ನಡ ಸಂಘದ 38 ನೇ ವಾರ್ಷಿಕೋತ್ಸವ ಸಂಭ್ರಮವು ಫೆ. 17 ರಂದು ಸಂಘದ ವಾಪಿಯಲ್ಲಿರುವ ವಿವಿಧೋದ್ದೇಶ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಬಿಎಸ್‌ಕೆಬಿ  ಅಸೋಸಿಯೇಶನ್‌ ಸಂಚಾಲಿತ  ಆಶ್ರಯದ ಗೌರವ ಕಾರ್ಯ ನಿರ್ವಾಹಕಿ ಚಂದ್ರಾವತಿ ಕೆ. ರಾವ್‌ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನೆರೂಲ್‌ದಲ್ಲಿರುವ ಆಶ್ರಯ ವೃದ್ಧಾಶ್ರಮವಾಗಿರದೆ ಹಿರಿಯ ನಾಗರಿಕರ ಮನೆಯಾಗಿದೆ. ಇಂತಹ ಸಂಸ್ಥೆ ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಬೇಕಾದರೆ, ಸಂಬಂಧ ಪಟ್ಟ ಎಲ್ಲರೂ, ಸಮರ್ಪಣಾ ಭಾವವನ್ನು ಹೊಂದುವ ಆವಶ್ಯಕತೆಯಿದೆ. ಮನೆಯಲ್ಲಿ ಕನ್ನಡ ಮಾತನಾಡದಿದ್ದರೆ, ಕನಿಷ್ಠ ಪಕ್ಷ ಕನ್ನಡ ಕಲಿಕಾ ಕೇಂದ್ರದಲ್ಲಿ ಕನ್ನಡ ಕಲಿಯದಿದ್ದಲ್ಲಿ ಉಚ್ಚಾರ ದೋಷ, ಶಬ್ದ ಪ್ರಯೋಗದಲ್ಲಿನ ಅಡಚಣೆ ಎಲ್ಲ ಕಂಡು ಬರುತ್ತದೆ. ಯುವ ಪೀಳಿಗೆಯನ್ನು ಕನ್ನಡದ ರಾಯಭಾರಿಗಳನ್ನಾಗಿಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ. ತಂದೆ ತಾಯಿ ಕನ್ನಡದಲ್ಲಿ ನುಡಿದರೆ, ಸಂಸ್ಕೃತಿಯ ಪಾಠ ನೀಡಿದರೆ, ಸಂಸ್ಕಾರದ ಔಚಿತ್ಯ ತಿಳಿಸಿದರೆ ಮಾತ್ರ ಪ್ರಬುದ್ಧ ನಾಗರಿಕರನ್ನು ಸಿದ್ಧಗೊಳಿಸುವುದು ಸಾಧ್ಯವಾಗುತ್ತದೆ. ಇಲ್ಲದಿದ್ದಲಿ ಮೊಬೈಲ್‌, ಫೇಸ್‌ಬುಕ್‌ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಯುವಪೀಳಿಗೆ ಸಂಸ್ಕೃತಿಯನ್ನು ಮರೆಯುವುದರಲ್ಲಿ ಎರಡು ಮಾತಿಲ್ಲ. ಗಂಡ ಹೆಂಡತಿ ಇಬ್ಬರೂ ದುಡಿಯಬೇಕಾದ ಅನಿವಾರ್ಯತೆ ಇರುವ ಇಂದಿನ ದಿನಗಳಲ್ಲಿ ಮಕ್ಕಳನ್ನು ಮರೆಯದೆ, ಅವರಿಗೂ ಸಮಯ ಕೊಡುವ ಸತ್ಸಂಪ್ರದಾಯ ಉಳಿಸಿ, ಬೆಳೆಸಿಕೊಳ್ಳಬೇಕು ಎಂದು ನುಡಿದರು.

ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ  ಜಾನಕಿ ರಾವ್‌ ಪ್ರಾರ್ಥನೆಗೈದರು.  ಗತ ಸಾಲಿನಲ್ಲಿ  ಕನ್ನಡಕ್ಕಾಗಿ, ದೇಶಕ್ಕಾಗಿ ದುಡಿದು ನಮ್ಮನ್ನಗಲಿದ ಕನ್ನಡ ಮನಸ್ಸುಗಳನ್ನು ನೆನೆದು ಶ್ರದ್ಧಾಂಜಲಿ ಅರ್ಪಿಸುವ ಕಾರ್ಯವನ್ನು ಪ್ರತಿಭಾ ಪ್ರಯಾಗ ನಡೆಸಿಕೊಟ್ಟರು. ಗೌರವ ಕಾರ್ಯದರ್ಶಿ ಮಮತಾ ಮಲ್ಹಾರ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ  ಉದಯ ಸೊಗಲಿ ಇವರು ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು. ಕಾರ್ಯಕ್ರಮಕ್ಕೆ ಶುಭಕೋರಿ ಬಂದ ಸಂದೇಶಗಳನ್ನು, ಸಭಾ ಕಾರ್ಯಕ್ರಮವನ್ನು ವಿಶ್ವಸ್ಥ ಮಲ್ಹಾರ್‌ ನಿಂಬರಗಿ ಮತ್ತು ಮಾಜಿ ಕಾರ್ಯದರ್ಶಿ ರಾಜೀವ ಶೆಟ್ಟಿ ನಿರ್ವಹಿಸಿದರು. ವಿಶ್ವಸ್ಥ ಪಿ. ಎಸ್‌. ಕಾರಂತ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ವಿಭಾಗದ ಮುಖ್ಯಸ್ಥೆ ಪ್ರಫುಲ್ಲಾ  ಶೆಟ್ಟಿ ಅವರು ಅತಿಥಿಗಳನ್ನು  ಶಾಲು ಹೊದಿಸಿ, ಮಾಜಿ ಮುಖ್ಯಸ್ಥೆ ವನಿತಾ ಪ್ರಭುರವರು ಆಧ್ಯಾತ್ಮಿಕ ಹೊತ್ತಿಗೆಯನ್ನು,  ಮಮತಾ ಮಲ್ಹಾರ್‌ ಫಲಪುಷ್ಪ, ಅಧ್ಯಕ್ಷ  ವಿಶ್ವನಾಥ ಭಂಡಾರಿ ಇವರು ನೆನಪಿನ ಕಾಣಿಕೆ ಹಾಗೂ ಜಾನಕಿ ರಾವ್‌ ಇವರು ಸಮ್ಮಾನ ಪತ್ರವನ್ನಿತ್ತು  ಗೌರವಿಸಿದರು. ಉಪಾಧ್ಯಕ್ಷೆ ನಿಶಾ ಶೆಟ್ಟಿ ಸಮ್ಮಾನ ಪತ್ರ ಓದಿದರು.

ಶೈಕ್ಷಣಿಕ ರಂಗಗಳಲ್ಲಿ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಕೊಟ್ಟು ಪ್ರೋತ್ಸಾಹಿಸಲಾಯಿತು.  ವರ್ಷವಿಡೀ ನಡೆದ 15 ಕ್ಕೂ ಮಿಕ್ಕಿದ ಕಾರ್ಯಕ್ರಮಗಳ ಸಂಚಾಲಕರನ್ನು ಅಧ್ಯಕ್ಷ  ವಿಶ್ವನಾಥ ಭಂಡಾರಿ ಹಾಗೂ ಹೊಸದಾಗಿ ಸಂಘಕ್ಕೆ ಸೇರ್ಪಡೆಗೊಂಡ ಸದಸ್ಯರನ್ನೂ ವಿಶ್ವಸ್ಥ ನಾರಾಯಣ ಶೆಟ್ಟಿ  ಇವರು ಗೌರವಿಸಿದರು.

ಸಂಘಕ್ಕಾಗಿ ದುಡಿದ ಹಿರಿಯರಾದ ದಿ. ಎಂ. ಕೃಷ್ಣರಾಜ ರಾವ್‌ ಸಿಲ್ವಾಸ್‌ ಅವರ ಪತ್ನಿ ದಾಕ್ಷಾಯಣಿ ರಾವ್‌ ಅವರನ್ನು ಲಲಿತಾ ಕಾರಂತ, ಸರಳಾ ಭಟ್‌, ಶಕುಂತಲಾ ಗೋಸಿ ಅವರು ಶಾಲು ಹೊದಿಸಿ, ನೆನಪಿನ ಕಾಣಿಕೆ ಮತ್ತು ಫಲ ತಾಂಬೂಲ ನೀಡಿ ಗೌರವಿಸಿದರು. ಗಣರಾಜ್ಯೋತ್ಸವದ ದಿನ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ಹಾಗೂ ನವರಾತ್ರಿಯಲ್ಲಿ ಜರಗಿದ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದರಾದವರಿಗೆ ಗಣ್ಯರು  ಬಹುಮಾನ ವಿತರಿಸಿ ಶುಭಹಾರೈಸಿದರು.

Advertisement

ಮಹಿಳಾ ವಿಭಾಗದ ಮುಖ್ಯಸ್ಥೆ ಪ್ರಫುಲ್ಲಾ ಶೆಟ್ಟಿ  ಮತ್ತು ವಾರ್ಷಿಕೋತ್ಸವದ ಸಂಚಾಲಕರಾದ ಎ. ಎನ್‌. ರಾವ್‌ ಇವರು ಮಾತನಾಡಿ, ತಮಗೆ ದೊರೆತ  ಸಹಕಾರವನ್ನು ಸ್ಮರಿಸಿಕೊಂಡರು. ಸಂಘದ ಅಧ್ಯಕ್ಷರಾದ ವಿಶ್ವನಾಥ ಭಂಡಾರಿ  ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾದ ಸರ್ವ ಸದಸ್ಯರ ಸಹಕಾರವನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಅನಂತರದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 300 ಕ್ಕೂ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದರು. ಆನಂತರ ಸಾಂಸ್ಕೃತಿಕ   ಕಾರ್ಯಕ್ರಮ ಜರಗಿತು. ಮಹಿಳಾ ವಿಭಾಗದ ಕಾರ್ಯದರ್ಶಿ ಲಲಿತಾ ಕಾರಂತ ವಂದಿಸಿದರು. ಕಾರ್ಯಕ್ರಮ ನಿರ್ವಹಿಸಿದ ಜಾನಕಿ ರಾವ್‌, ಆಶಾ ಹೆಗ್ಡೆ ಮತ್ತು ಅಶ್ವಿ‌ತಾ ಕೊಟ್ಯಾನ್‌ರನ್ನು ಅಭಿನಂದಿಸಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next