Advertisement

323 ಅಂಗನವಾಡಿಗೂ ಸ್ವಂತ ಕಟ್ಟಡ; ಬೆಳ್ತಂಗಡಿ ತಾಲೂಕಿನ 81 ಗ್ರಾಮ ಪಂಚಾಯತ್‌ ವ್ಯಾಪ್ತಿ

02:17 PM Oct 13, 2022 | Team Udayavani |

ಬೆಳ್ತಂಗಡಿ: ಆಂಗ್ಲ ಮಾಧ್ಯಮ ಶಿಕ್ಷಣ ಕಂಪನ ಹಳ್ಳಿ ಹಳ್ಳಿಗೂ ವ್ಯಾಪಿಸಿರುವುದು ಒಂದೆಡೆಯಾದರೆ ಗ್ರಾಮೀಣ ಬದಕುಕಿನ ಸೊಗಡು ಕನ್ನಡ ಮಾಧ್ಯಮದ ಕಂಪು ಇನ್ನು ಹಚ್ಚಹಸುರಾಗಿಯೇ ಉಳಿದಿದೆ. ಈ ವರೆಗೆ ಅತ್ಯಂತ ಬೇಡಿಕೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಅತ್ಯಂತ ಕಟ್ಟಕಡೆಯ ಜತೆಗೆ ಅರಣ್ಯದಂಚಿನ ಬಾಂಜಾರು ಮಲೆಯಲ್ಲಿ ನೂತನ ಅಂಗನವಾಡಿ ಸ್ಥಾಪನೆಯ ಕನಸು ಈಡೇರುವ ಹಂತದಲ್ಲಿರುವುದು ಹರ್ಷದಾಯಕ.

Advertisement

13,262 ಚಿಣ್ಣರ ಸುರಕ್ಷತೆಗೆ ಕ್ರಮ

ಬೆಳ್ತಂಗಡಿ ತಾಲೂಕಿನಲ್ಲಿ 81 ಗ್ರಾಮಗಳಿಗೆ ಒಳಪಟ್ಟಂತೆ 18 ಮಿನಿ ಅಂಗನವಾಡಿ ಸೇರಿ 324 ಅಂಗನವಾಡಿಗಳಲ್ಲಿ 13,262 ಚಿಣ್ಣರಿದ್ದಾರೆ. ಇದರಡಿ 3,390 ಗರ್ಭಿಣಿಯರು, ಬಾಣಂತಿಯರಿದ್ದಾರೆ. ಈ ಪೈಕಿ 323 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಈ ಪೈಕಿ 4 ಅಂಗನವಾಡಿಗೆ ನೂತನ ಕಟ್ಟಡ ಪ್ರಗತಿಯ ಹಂತದಲ್ಲಿದೆ. ಈ ಮಧ್ಯೆ ತಾಲೂಕಿನ ಬಾರ್ಯ ಗ್ರಾಮದ ದೊಡ್ಡಕಲ್ಲು ಹಾಗೂ ಕಟ್ಟಡಕಡೆಯ ಕಾಡಿನಮಧ್ಯೆ ಇರುವ ನೆರಿಯ ಗ್ರಾ.ಪಂ. ವ್ಯಾಪ್ತಿಯ ಬಾಂಜಾರು ಮಲೆಯಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬಾಂಜಾರು ಮಲೆಯಲ್ಲಿ 44ಕ್ಕೂ ಅಧಿಕ ಕುಟುಂಬಗಳಿದ್ದು 130 ಕ್ಕೂ ಅಧಿಕ ಜನಸಂಖ್ಯೆಯಿದೆ. ಅಂಗನವಾಡಿಯಿಂದ ಕಾಲೇಜು ಶಿಕ್ಷಣವರೆಗೆ ತೆರಳುವ 20ಕ್ಕೂ ಅಧಿಕ ಮಕ್ಕಳಿದ್ದಾರೆ. ಇಲ್ಲಿಂದ ಅಂಗನವಾಡಿ ತೆರಳಲು 36 ಕಿ.ಮೀ. ಕ್ರಮಿಸಿ ಕಕ್ಕಿಂಜೆಗೆ ಬರುವ ಅನಿವಾರ್ಯವಿದೆ. ಹೀಗಾಗಿ ಬಹು ವರ್ಷಗಳ ಬೇಡಿಕೆಯೊಂದು ಹಾಗೆ ಉಳಿದಿತ್ತು. ಪ್ರಸಕ್ತ ವರ್ಷದಲ್ಲಿ ಬಾರ್ಯ ಹಾಗೂ ಬಾಂಜಾರು ಮಲೆ ಅಂಗನವಾಡಿ ಮಂಜೂರುಗೊಂಡರೆ ಅಂಗನವಾಡಿಗಳ ಸಂಖ್ಯೆ 326ಕ್ಕೇರಲಿದೆ. ಕೋವಿಡ್‌ ಸಂದರ್ಭದಲ್ಲಿಯೂ ಬಾಂಜಾರು ಮಲೆಗೆ ಲಸಿಕೆ ಸಹಿತ ಅಗತ್ಯ ಸವಲತ್ತು ಒದಗಿಸಲು ಆರೋಗ್ಯ ಇಲಾಖೆಯೆ ಹರಸಾಹಸ ಪಡುವಂತಾಗಿತ್ತು. ಇದರಿಂದ ರಾಜ್ಯದಲ್ಲೇ ಕಟ್ಟಕಡೆಗೆ ಲಸಿಕೆ ತಲುಪಿದ ಗ್ರಾಮವಾಗಿಯೂ ಗೋಚರಿಸಿತ್ತು.

ಈಗಿರುವ 324 ಅಂಗನವಾಡಿಗಳ ಪೈಕಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆಲ್ಲಗುತ್ತು ಅಂಗನವಾಡಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಉಳಿದಂತೆ 2019-20ನೇ ಸಾಲಿನ ಆರ್‌.ಐ.ಡಿ.ಎಫ್‌.-25 ಮಳೆ ಹಾನಿಗೊಂಡ ಕಟ್ಟಡಗಳ ಪುನರ್‌ ನಿರ್ಮಾಣ ಯೋಜನೆಯಡಿ ಜಿಲ್ಲೆಗೆ ಮಂಜೂರಾದ 25 ಅಂಗನವಾಡಿಗಳಲ್ಲಿ ಬೆಳ್ತಂಗಡಿ ತಾಲೂಕಿನ ಹಾನಿ ಪ್ರಮಾಣ ಅಂದಾಜಿಸಿ ಅತೀ ಹೆಚ್ಚು 14 ಅಂಗನವಾಡಿ ಮಂಜೂರುಗೊಂಡಿತ್ತು. ಅವುಗಳಲ್ಲಿ 14 ಅಂಗನವಾಡಿಗೂ ಕಟ್ಟಡ ರಚನೆಗೊಂಡು ಚಿಣ್ಣರ ಕಲರವ ಬೀರಿದೆ.

Advertisement

14 ಅಂಗನವಾಡಿಗೆ ನೂತನ ಕಟ್ಟಡ

ತಾಲೂಕಿನ 14 ಕಡೆಗಳಲ್ಲಿ ಪ್ರತೀ ಕಟ್ಟಡಕ್ಕೆ 16 ಲಕ್ಷ ರೂ. ಘಟಕ ವೆಚ್ಚದಲ್ಲಿ ಇಂದಬೆಟ್ಟುವಿನ ಬಂಗಾಡಿ-2 ಕೇಂದ್ರ, ಕಣಿಯೂರು, ಕಳಿಯದ-ರಕ್ತೇಶ್ವರಿ ಪದವು, ಬೆಳಾಲು ಗ್ರಾಮದ ಮಾಯಾ ಹಾಗೂ ಬೆಳಾಲು, ಕೊಕ್ಕಡದ-ಸೌತಡ್ಕ, ಪಟ್ರಮೆಯ-ಪಟ್ಟೂರು, ಉಜಿರೆಯ-ದೊಂಪದಪಲ್ಕೆ, ಮಿತ್ತಬಾಗಿಲಿನ -ಕುಕ್ಕಾವು, ಕವೆಟ್ಟು ಗ್ರಾಮದ- ಗುರುವಾಯನಕೆರೆ, ನಾವೂರು, ನಡ ಗ್ರಾಮದ ಸುರಿಯ, ಧರ್ಮಸ್ಥಳದ- ದೊಂಡೋಲೆ, ಬೆಳಾಲು, ಮೇಲಂತಬೆಟ್ಟು-1 ಇಷ್ಟು ಕಡೆಗಳಲ್ಲಿ ನೂತನ ಕಟ್ಟಡ ರಚನೆಯಾಗಿ ಉದ್ಘಾಟನೆಯ ಭಾಗ್ಯವೂ ದೊರೆತಿದ್ದರಿಂದ ಚಿಣ್ಣರ ಕಲರವ ಮೂಡಿದೆ.

ನಿರ್ಮಾಣ ಹಂತದಲ್ಲಿವೆ 6 ಕಟ್ಟಡ

ಈಗಾಗಲೆ 2020-21ನೇ ಸಾಲಿನಲ್ಲಿ ಪ.ಪಂ. ವ್ಯಾಪ್ತಿಯ ಸುದೆಮುಗೇರು, ಉಜಿರೆಯ ನೀರಚಿಲುಮೆ, ಕೊಕ್ಕಡದ ಕೊಕ್ಕಡ, ಮಾಲಾಡಿಯ ಪುರಿಯದಲ್ಲಿ ಉಳಿದಂತೆ 2021-22ನೇ ಸಾಲಿನ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ನಾವೂರು ಗಿರಿಜನ ಕಾಲನಿಯಲ್ಲಿ ಹಾಗೂ ಧರ್ಮಸ್ಥಳದ ಮುಳಿಕ್ಕಾರು ಸೇರಿ ಒಟ್ಟು 6 ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ. ಈ ಮೂಲಕ ಶಾಸಕ ಹರೀಶ್‌ ಪೂಂಜ ಅವರ ಮುತುವರ್ಜಿಯಿಂದ ತಾಲೂಕಿಗೆ 20 ನೂತನ ಅಂಗನವಾಡಿ ಕಟ್ಟಡದ ಭಾಗ್ಯ ದೊರೆತಿದೆ.

ಪ್ರಸ್ತಾವನೆ ಸಲ್ಲಿಕೆ: ಬೆಳ್ತಂಗಡಿ ತಾಲೂಕಿನಲಿ ತೀರ ಗುಡ್ಡಗಾಡು ಹಾಗೂ ಅತೀ ದೂರದ ಬಾಂಜಾರು ಮಲೆ ಹಾಗೂ ಬಾರ್ಯದ ದೊಡ್ಡಕಲ್ಲು ಎಂಬಲ್ಲಿ ನೂತನ ಅಂಗನವಾಡಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೆ 20 ಅಂಗನವಾಡಿಗಳ ಪೈಕಿ 14 ನೂತನ ಸುಸಜ್ಜಿತ ಕಟ್ಟಡ ರಚನೆಗೊಂಡು ಉದ್ಘಾಟನೆಯನ್ನು ಶಾಸಕರು ನೆರವೇರಿಸಿದ್ದಾರೆ. -ಪ್ರಿಯಾ ಆ್ಯಗ್ನೆಸ್‌ ಚಾಕೊ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next