Advertisement

ಲಾಕ್‌ಡೌನ್‌ ಸಡಿಲಿಕೆ ಬಳಿಕ 31 ಕೋವಿಡ್‌-19 ಪ್ರಕರಣ

01:20 AM May 21, 2020 | Sriram |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮಂಗಳೂರು ನಗರ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ.

Advertisement

ಕೋವಿಡ್‌-19 ಲಾಕ್‌ ಡೌನ್‌ ಸಡಿಲಿಕೆ ಅನಂತರ ಮಂಗಳೂರಿನಲ್ಲಿ ಕೋವಿಡ್‌-19 ಸೋಂಕಿತರ ಪ್ರಕರಣ ಸಂಖ್ಯೆ ಏರುತ್ತಿದೆ. ಬುಧವಾರ (ಮೇ 20) ನಗರದ ನೀರುಮಾರ್ಗ ಸಮೀಪದ ಮಹಿಳೆಗೂ ಕೋವಿಡ್‌-19 ಪಾಸಿಟವ್‌ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಮಂಗಳೂರು ನಗರದಲ್ಲಿಯೇ (ದುಬಾೖ ಪ್ರಯಾಣಿಕರು ಸೇರಿ) ಇದೀಗ ಒಟ್ಟು 26 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯಲ್ಲಿ ಮೇ 4ರಿಂದ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಬಳಿಕ ಜಿಲ್ಲೆಯಲ್ಲಿ ಒಟ್ಟು 31 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಮೇ 12ರಂದು 176 ಕನ್ನಡಿಗರನ್ನು ದುಬಾೖಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಶೇಷ ವಿಮಾನದಲ್ಲಿ ಒಟ್ಟು 96 ಮಂದಿ ದ.ಕ. ಜಿಲ್ಲೆಯ ಪ್ರಯಾಣಿಕರಿದ್ದರು. ಇವರೆಲ್ಲರೂ ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಈ ಪೈಕಿ 15 ಮಂದಿಗೆ ಕೋವಿಡ್‌-19 ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಒಂದೇ ದಿನ ದಾಖಲಾದ ಅತೀ ಹೆಚ್ಚಿನ ಪ್ರಕರಣ ಇದಾಗಿತ್ತು.

ಲಾಕ್‌ಡೌನ್‌ ಸಡಿಲಿಕೆಯಾದಂತೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ನಿಧಾನವಾಗಿ ಆರಂಭವಾಗುತ್ತಿದೆ. ಅಂಗಡಿ ಮುಂಗಟ್ಟು ತೆರೆದಿದ್ದು,ಕೆಎಸ್ಸಾರ್ಟಿಸಿ ಬಸ್‌ ಆರಂಭಗೊಂಡಿದೆ. ವಾಹನ ಸಂಚಾರ ಕೂಡ ಆರಂಭವಾಗಿದೆ. ಹೀಗಿದ್ದಾಗ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ ಇದನ್ನು ಅಷ್ಟಾಗಿ ಪಾಲಿಸುತ್ತಿಲ್ಲ,

ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ
ಜಿಲ್ಲೆಯಲ್ಲಿ ಈವರೆಗೆ 55 ಪ್ರಕರಣಗಳಲ್ಲಿ ಭಟ್ಕಳ-1, ಕಾಸರಗೋಡು-4, ಕಾರ್ಕಳ-3, ತೊಕ್ಕೊಟ್ಟು-1, ತುಂಬೆ-1, ಸಜೀಪ-1, ಪುತ್ತೂರು-1, ಸುಳ್ಯ-1, ಉಪ್ಪಿನಂಗಡಿ-2, ಕರಾಯ-1 ಬಂಟ್ವಾಳ ಪೇಟೆ-11, ದುಬಾೖಯಿಂದ ವಿಶೇಷ ವಿಮಾನದ ಮೂಲಕ ಜಿಲ್ಲೆ ಗೆ ಪ್ರಯಾಣ ಬೆಳೆಸಿದವರು -15, ಬೋಳೂರು 5, ಶಕ್ತಿನಗರ-2, ಯೆಯ್ಯಾಡಿ-2, ಜೆಪ್ಪು ಪಟ್ಣ-1, ಸುರತ್ಕಲ್‌-1, ನೀರುಮಾರ್ಗ-1, ಉಳ್ಳಾಲ-1 ಪ್ರಕರಣ ದಾಖಲಾಗಿತ್ತು. ಈ ಪೈಕಿ ಸದ್ಯ 20 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 30 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಕೋವಿಡ್‌-19ದಿಂದ ಜಿಲ್ಲೆಯಲ್ಲಿ ಐದು ಸಾವು
ಕೋವಿಡ್‌-19 ಜಿಲ್ಲೆಯಲ್ಲಿ ಒಟ್ಟು ಐದು ಮಂದಿಯನ್ನು ಬಲಿತೆಗೆದುಕೊಂಡಿದೆ. ಬಂಟ್ವಾಳ ಮೂಲದ ಮೂರು ಮಹಿಳೆ ಸಹಿತ ಮಂಗಳೂರು ನಗರದ ಬೋಳೂರು ಮತ್ತು ಶಕ್ತಿನಗರದ ಮಹಿಳೆ ಈಗಾಗಲೇ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next