Advertisement

ಯೋಗಿ ರಾಜ್ಯದಲ್ಲಿ ನಿಲ್ಲದ ಮಹಿಳಾ ದೌರ್ಜನ್ಯ ; ಅತ್ಯಾಚಾರ ಸಂತ್ರಸ್ತೆ ಮೇಲೆ ಆಸಿಡ್ ದಾಳಿ

10:13 AM Dec 09, 2019 | Team Udayavani |

ಮುಝಾಫರನಗರ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇದೆ. ಅತ್ಯಾಚಾರಕ್ಕೊಳಗಾಗಿದ್ದ 30 ವರ್ಷದ ಮಹಿಳೆ ತಾನು ನೀಡಿದ್ದ ದೂರನ್ನು ಹಿಂಪಡೆಯಲು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯ ಮೇಲೆ ದುಷ್ಕರ್ಮಿಗಳು ಆಸಿಡ್ ಎರಚಿದ್ದಾರೆ. ಉತ್ತರಪ್ರದೇಶದ ಮುಜಫರ್ ನಗರದ ಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

Advertisement

ಸಂತ್ರಸ್ತೆಯು ಪೊಲೀಸ್ ದೂರನ್ನು ನೀಡಿದ್ದರೂ ಪೊಲೀಸರು ಅತ್ಯಾಚಾರಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಮತ್ತು ಅತ್ಯಾಚಾರವಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಪ್ರಕರಣವವನ್ನೇ ಮುಗಿಸಿಬಿಟ್ಟಿದ್ದರು. ಹಾಗಾಗಿ ಸಂತ್ರಸ್ತ ಮಹಿಳೆಯು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ನ್ಯಾಯಲಯದಲ್ಲೇ ತನ್ನ ದೂರನ್ನು ಸಲ್ಲಿಸಿದ್ದಳು.

ದೂರನ್ನು ಹಿಂಪಡೆಯುವಂತೆ ಸಂತ್ರಸ್ತೆಯ ಮೇಲೆ ಸತತ ಒತ್ತಡಗಳನ್ನು ಹಾಕಲಾಗಿತ್ತು. ಕಳೆದ ಬುಧವಾರ ರಾತ್ರಿ ಸಂತ್ರಸ್ತೆಯ ಮನೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಆಕೆಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸಿಡ್ ದಾಳಿ ನಡೆಸಿರುವ ನಾಲ್ವರು ಸದ್ಯಕ್ಕೆ ತಲೆತಪ್ಪಿಸಿಕೊಂಡಿದ್ದು ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next