Advertisement

’30 Gram Gold’ ಮೂಲಕ ಲಕ್ಷಾಂತರ ರೂ. ವಂಚನೆಯ ಜಾಲ: ನಾಲ್ವರ ಬಂಧನ

09:39 PM Mar 06, 2024 | Team Udayavani |

ಪಡುಬಿದ್ರಿ: ಸಿನಿಮಾ ಕತೆಯೊಂದರಿಂದ ಪ್ರೇರಿತನಾಗಿ ಅದರಲ್ಲಿನ ಬ್ರಹ್ಮಾಂಡ ರಹಸ್ಯವನ್ನು ಬಳಸಿಕೊಳ್ಳುತ್ತಾ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಪಡುಬಿದ್ರಿ ಕಂಚಿನಡ್ಕ ನಿವಾಸಿ, ಕೇರಳ ಮೂಲದ ಆರೋಪಿ ರಾಜೀವ್ 30ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಸ್ಥಳೀಯವಾಗಿ ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣವನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿಗಳು ಬೇಧಿಸಿದ್ದಾರೆ.

Advertisement

ರಾಜೀವ್‌ನಿಗೆ ಸಹಕರಿಸಿದ ಆರೋಪಿಗಳಾದ ಕುಮುಟಾದ ನಿತಿಲ್ ಭಾಸ್ಕರ್ ಶೇಟ್(35), ಸಂಜಯ್ ಶೇಟ್(42) ಮತ್ತು ಸಂತೋಷ್ ಶೇಟ್(39) ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ(26) ಎಂಬವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆವರನ್ನು ೧೫ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಆರೋಪಿಗಳಿಂದ ನಕಲಿ 916 ಹಾಲ್‌ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ ಮೆಷಿನ್ ಕಂಪ್ಯೂಟರ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ರಾಜೀವ್ ಚಲನಚಿತ್ರ ಕತೆಯಲ್ಲಿದ್ದಂತೆ 30 ಗ್ರಾಂ ಗೋಲ್ಡ್ ಬಳಸಿ20 ಗ್ರಾಂ ಚಿನ್ನಾಭರಣದೊಂದಿಗೆ ಗಲ್ ರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ವಾಪಾಸಾಗುವ ವೇಳೆ 20 ಗ್ರಾಂ ಶುದ್ಧ ಚಿನ್ನದಾಭರಣವನ್ನೇ ಹಾಕಿಕೊಂಡು ಬರುವ ತನ್ನ ಪ್ಲಾನ್‌ಗೆ ಸಹಕರಿಸಲು ಪ್ರಕರಣದ ಇತರ ಆರೋಪಿ ಗೆಳೆಯ ನಿತಿಲ್ ಭಾಸ್ಕರ್ ಶೇಟ್‌ನನ್ನು ಬಳಸಿಕೊಂಡಿದ್ದ.

Advertisement

ಕುಮುಟಾದ ಇನ್ನಿಬ್ಬರು ಆರೋಪಿಗಳಿಂದ ನಕಲಿ ಚಿನ್ನದ ಆಭರಣಗಳನ್ನು ತಯಾರಿಸಿಕೊಂಡು ಬೆಳಗಾವಿಯಲ್ಲಿ ನಕಲಿ ಹಾಲ್‌ಮಾರ್ಕ್ ಮೊಹರನ್ನು ಹಾಕಲಾಗುತ್ತಿತ್ತು. ಆದರೆ ಆರೋಪಿ ರಾಜೀವ್ ತನ್ನ ಖತರ್‌ನಾಕ್ ಪ್ಲಾನನ್ನು ಬದಲಾಯಿಸಿ, ಸ್ಥಳೀಯವಾಗಿ ವಿತ್ತೀಯ ಸಂಸ್ಥೆಗಳಿಗೇ ದೋಖಾ ಹಾಕಲು ಶುರುವಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಗಳಾದ ಕುಮುಟಾದ ವ್ಯಕ್ತಿಗಳಿಬ್ಬರು 30 ಗ್ರಾಂ ಚಿನ್ನಕ್ಕಾಗಿ ಬೇಕಾಗಿರುವ ಹಣವನ್ನು ಮುಂಗಡ ಪಡೆದು ಒಳಗೆ ಬೆಳ್ಳಿ, ತಾಮ್ರದ್ದಾಗಿರುವ ಆಭರಣಗಳಿಗೆ 30ಗ್ರಾಂ ಚಿನ್ನವನ್ನು ಲೇಪಿಸಿ ಬೆಳಗಾವಿಯಲ್ಲಿ ನಕಲಿ 916 ಹಾಲ್‌ಮಾರ್ಕ್ ಕೂಡಾ ಮುದ್ರಿಸಿ ಅಸಲಿ ಚಿನ್ನದಂತೆ ಮಿಂಚುವ40 ನಕಲಿ ಚಿನ್ನದ ಬಳೆಗಳನ್ನು ತಯಾರಿಸಿ ಕೊಟ್ಟಿದ್ದರು.

ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವ ಯಾವುದೇ ವಿಧಾನಗಳಲ್ಲೂ ನಕಲಿ ಚಿನ್ನವೆಂಬುದನ್ನೇ ಪತ್ತೆಹಚ್ಚಲಾಗುತ್ತಿರಲಿಲ್ಲ.92 ಶೇಕಡಾ ಚಿನ್ನದಾಭರಣಗಳಂತೆಯೇ ಸಾಚಾ ಚಿನ್ನ ಇದೆಂದು ನಂಬಿದ ಬ್ಯಾಂಕು, ಸೊಸೈಟಿಗಳು ಚಿನ್ನಭರಣ ಈಡಿನ ಸಾಲವನ್ನಿತ್ತು ಮರಳಿ ಬಾರದೇ ಇದ್ದಾಗ ಏಲಂ ಪ್ರಕ್ರಿಯೆ ನಡೆಸಿ ಇದರಲ್ಲೂ ನಕಲಿ – ಅಸಲಿಗಳನ್ನು ಪತ್ತೆ ಮಾಡಲಾಗಿರಲಿಲ್ಲ.

ಕೇವಲ ಉಡುಪಿಯ ಬಿಡ್ಡುದಾರರೊಬ್ಬರು ಇದನ್ನು ಕತ್ತರಿಸಿ ಪರಿಶೀಲಿಸಿದಾಗ ಆರೋಪಿ ರಾಜೀವ್ ಮತ್ತಾತನ ಪತ್ನಿಯ ಚಿನ್ನಾಭರಣ ಸಾಲದ ಇಡಿಯ ಪ್ರಕರಣವು ಹೊರಬಂದಿತ್ತು. ಪಡುಬಿದ್ರಿಯಲ್ಲಿನ ಇಂಡಸ್ಟ್ರಿಯಲ್ ಬ್ಯಾಂಕ್‌ನ ಪಡುಬಿದ್ರಿ ಶಾಖೆಯಲ್ಲಿ 2022 ಸೆ. 1 ರಿಂದ ಫೆ. 26 ,2024 ರವರೆಗೆ ಈ ದಂಪತಿ 180 ಗ್ರಾಂ ನಕಲಿ ಚಿನ್ನವನ್ನಿಟ್ಟು 8.08 ಲಕ್ಷಗಳನ್ನು ಪಡೆದುಕೊಂಡಿದ್ದರು.

ಸಹಕಾರಿ ಸಂಘವೊಂದರ ಸಿಟಿ ಶಾಖೆಯಿಂದ ಆರೋಪಿಗಳು ಇದೇ ಸುಮಾರು 2 ವರ್ಷಗಳ ಅವಧಿಯಲ್ಲಿ 231 ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19 ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದಾರೆ. ಉಚ್ಚಿಲದ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ಮಾರ್ಚ್ 2023 ರಿಂದ ಫೆ. 26, 2024 ರ ಅವಧಿಯಲ್ಲಿ 72 ಗ್ರಾಂ ಚಿನ್ನ ಅಡವಿಟ್ಟು 2.86 ಲಕ್ಷ ರೂ. ಗಳ ಸಹಿತ ಒಟ್ಟು 29.94 ಲಕ್ಷ ರೂ. ಗಳನ್ನು ರಾಜೀವ್ ದಂಪತಿ ಪಡೆದಿದ್ದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್, ಉಪಅಧೀಕ್ಷಕ ಸಿದ್ಧಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಅವರ ನಿರ್ದೇಶನದಂತೆ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಎಂ. ಎಸ್. ಹಾಗೂ ಅವರ ಸಿಬಂದಿಗಳು ಈ ಪ್ರಕರಣವನ್ನು ಬೇಧಿಸಿದ್ದು ಇನ್ನಷ್ಟು ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next