Advertisement

ಪ್ರವಾಸಿ ತಾಣಗಳಲ್ಲಿ ಹೆಚ್ಚುತ್ತಿರುವ ಜನ, ನಿಯಮಗಳತ್ತ ನಿರ್ಲಕ್ಷ್ಯ : 3ನೇ ಅಲೆಗೆ ಆಹ್ವಾನ?

02:06 AM Jul 10, 2021 | Team Udayavani |

ಹೊಸದಿಲ್ಲಿ /ಬೆಂಗಳೂರು : ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಮೂರನೇ ಅಲೆ ಉದ್ಭವಿಸಲು ಜನರೇ ಕಾರಣವಾಗುತ್ತಿದ್ದಾರೆಯೇ?
– ಸಾರ್ವಜನಿಕರ ವರ್ತನೆ ಗಮನಿಸಿದರೆ ಈ ಅನುಮಾನ ಬಾರದಿರದು. ದೇಶದ ಬಹುತೇಕ ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಎಡೆಮಾಡಿದೆ. ಕೇಂದ್ರ ಸರಕಾರ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಜನರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದೆ. ಜನರೇ 3ನೇ ಅಲೆಗೆ ಆಹ್ವಾನ ನೀಡುತ್ತಿದ್ದಾರೆ ಎಂದೂ ಆತಂಕ ವ್ಯಕ್ತಪಡಿಸಿದೆ.

Advertisement

ಪ್ರವಾಸಿ ತಾಣಗಳಿಂದಲೇ ಅಪಾಯ
3ನೇ ಅಲೆ ಉಂಟಾದರೆ ಅದಕ್ಕೆ ಪ್ರವಾಸಿ ತಾಣಗಳೇ ಕಾರಣ ಎಂಬುದು ಕೇಂದ್ರ ಸರಕಾರದ ಆತಂಕ. ಬಹುತೇಕ ಪ್ರವಾಸಿ ತಾಣಗಳಲ್ಲಿ ಜನ ನಿರಾತಂಕವಾಗಿ ಸೇರುತ್ತಿದ್ದಾರೆ. ಕೊರೊನಾವನ್ನು ಜನರೇ ಕೈಬೀಸಿ ಕರೆಯುತ್ತಿರುವಂತಿದೆ. ಪ್ರವಾಸಿಗರು ತಾವಷ್ಟೇ ಸೋಂಕಿಗೆ ಒಡ್ಡಿಕೊಳ್ಳುತ್ತಿಲ್ಲ, ಇತರರಿಗೂ ಹಬ್ಬಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಕಳವಳಪಟ್ಟಿದೆ.

ಕೊರೊನಾ ಆಹ್ವಾನ
ಕೇಂದ್ರ ಆರೋಗ್ಯ ಇಲಾಖೆ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯ ಪ್ರಮುಖ ವಿಚಾರವೇ ಮಸ್ಸೂರಿ. ಉತ್ತರಾಖಂಡದ ಈ ನಗರದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ, ಯಾವುದೇ ನಿಯಮ ಪಾಲನೆ ಮಾಡದೆ ಓಡಾಡುತ್ತಿರುವ ಫೋಟೋವೊಂದನ್ನು ಪ್ರದರ್ಶಿಸಲಾಯಿತು. ಇಂಗ್ಲೆಂಡ್‌, ರಷ್ಯಾ, ಬಾಂಗ್ಲಾದೇಶ, ಇಂಡೋನೇಷ್ಯಾಗಳಲ್ಲಿ ಜನರು ಕೊರೊನಾ ನಿಯಮ ಮರೆತದ್ದರಿಂದ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಯಿತು. ಇಂಗ್ಲೆಂಡ್‌ನಲ್ಲಿ ಯುರೋ ಕಪ್‌ ನಡೆಯುತ್ತಿದ್ದು, ಸಾರ್ವಜನಿಕರು ಗುಂಪುಗೂಡುತ್ತಿರುವುದರಿಂದ ಅಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಸಾಧ್ಯವಾದಷ್ಟು ಗುಂಪುಗೂಡಬಾರದು ಎಂದು ಸಲಹೆ ನೀಡಲಾಯಿತು.

2ನೇ ಅಲೆ ಇನ್ನೂ ಮಾಯವಾಗಿಲ್ಲ
ದೇಶದಲ್ಲಿ 2ನೇ ಅಲೆ ಇನ್ನೂ ಮಾಯವಾಗಿಲ್ಲ. ದಯಮಾಡಿ ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೊರೊನಾವನ್ನು ಗೆದ್ದಿದ್ದೇವೆ ಎಂಬ ಭಾವನೆ ಜನರಲ್ಲಿ ಬಂದುಬಿಟ್ಟಿದೆ. ಹೀಗಾಗಿ ಮಾಸ್ಕ್ ಧಾರಣೆ, ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ ನಿರ್ಲಕ್ಷಿಸಿ ಗುಂಪು ಸೇರುವಂಥ ವರ್ತನೆ ತೋರುತ್ತಿದ್ದಾರೆ ಎಂದು ಇಲಾಖೆ ವಿಷಾದ ವ್ಯಕ್ತಪಡಿಸಿದೆ. ದೇಶದಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾದಾಗ ಮಾತ್ರ 2ನೇ ಅಲೆ ತಗ್ಗಿದೆ ಎನ್ನಬಹುದು. ಆದರೆ ಈಗ 40ರಿಂದ 50 ಸಾವಿರ ಪ್ರಕರಣಗಳು ಕಂಡುಬರುತ್ತಿವೆ.

ಕೇರಳ, ಮಹಾದಲ್ಲಿ ಶೇ. 50 ಪ್ರಕರಣ
ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವುದು ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ. ಕಳೆದ ವಾರ ಮಹಾರಾಷ್ಟ್ರದಲ್ಲಿ ಶೇ. 20ರಷ್ಟು ಮತ್ತು ಕೇರಳದಲ್ಲಿ ಶೇ. 32ರಷ್ಟು ಪ್ರಕರಣ ಕಂಡು ಬಂದಿವೆ. 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 90 ಜಿಲ್ಲೆಗಳಲ್ಲಿ ಶೇ. 80ರಷ್ಟು ಪ್ರಕರಣ ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಜು. 8ಕ್ಕೆ ಅಂತ್ಯಗೊಂಡ ವಾರದಲ್ಲಿ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 66 ಜಿಲ್ಲೆಗಳಲ್ಲಿ ಶೇ. 10ಕ್ಕೂ ಹೆಚ್ಚು ಪಾಸಿಟಿವಿಟಿ ದರವಿದೆ ಎಂದು ಇಲಾಖೆ ಹೇಳಿದೆ.

Advertisement

ಕೊಡಗಿನಲ್ಲೇ ಹೆಚ್ಚು
ರಾಜ್ಯದಲ್ಲಿ ಒಂದು ವಾರದಿಂದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 1.7ರಷ್ಟಿದೆ. ನಿತ್ಯ ಸರಾಸರಿ 1.5 ಲಕ್ಷ ಪರೀಕ್ಷೆಗಳು ನಡೆಯುತ್ತಿವೆ. ಕೊಡಗು, ಚಿಕ್ಕಮಗಳೂರು ಬಿಟ್ಟು ಎಲ್ಲ ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ, 12 ಜಿಲ್ಲೆಗಳಲ್ಲಿ ಶೇ. 1ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿದೆ.

ಹೆಚ್ಚುತ್ತಿವೆ ಪ್ರಕರಣ
ವಿವಿಧ ದೇಶಗಳಲ್ಲಿ ಮತ್ತೆ ಕೊರೊನಾ ಬಾಧಿಸುತ್ತಿದೆ. ಬ್ರೆಜಿಲ್‌ನಲ್ಲಿ 53 ಸಾವಿರ, ಭಾರತದಲ್ಲಿ 43 ಸಾವಿರ, ಇಂಡೋನೇಷ್ಯಾದಲ್ಲಿ 38 ಸಾವಿರ, ಇಂಗ್ಲೆಂಡ್‌ ನಲ್ಲಿ 32 ಸಾವಿರ, ರಷ್ಯಾದಲ್ಲಿ 24 ಸಾವಿರ, ಇರಾನ್‌ ಮತ್ತು ಕೊಲಂಬಿಯಾಗಳಲ್ಲಿ 23 ಸಾವಿರ, ಅರ್ಜೆಂಟೀನಾದಲ್ಲಿ 19 ಸಾವಿರ, ಅಮೆರಿಕದಲ್ಲಿ 19 ಸಾವಿರ ಪ್ರಕರಣಗಳು ಕಂಡುಬಂದಿವೆ.

ತಜ್ಞರು ಹೇಳುವುದೇನು?

ಕೊರೊನಾ ಸಾವು ನೋವಿನಿಂದ ಪಾಠ ಕಲಿತು ಜವಾಬ್ದಾರಿಯಿಂದ ವರ್ತಿಸಬೇಕಿದೆ. ಹೆಚ್ಚು ಜನ ಲಸಿಕೆ ಪಡೆಯುವವರೆಗೂ 2ನೇ ಅಲೆ ಮುಗಿದು, 3ನೇ ಅಲೆಯ ಭೀತಿ ತಗ್ಗುವವರೆಗೂ ಎಚ್ಚರಿಕೆಯಿಂದ ಇರಬೇಕು.
-ಡಾ| ಸಿ.ಎನ್‌. ಮಂಜುನಾಥ್‌, ಜಯದೇವ ಹೃದ್ರೋಗ ಸಂಶೋಧನ ಸಂಸ್ಥೆ ನಿರ್ದೇಶಕರು

ಮತ್ತೂಂದು ಲಾಕ್‌ಡೌನ್‌ ಬೇಡ ಎಂದಾದರೆ ಜನರು ಪ್ರವಾಸ, ತೀರ್ಥಯಾತ್ರೆ ಮತ್ತಿತರ ಚಟುವಟಿಕೆಗಳಿಂದ ದೂರ ಉಳಿಯಬೇಕು. ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಂಡು ಸೋಂಕು ಹೆಚ್ಚಲು ಹಾದಿ ಮಾಡಿಕೊಡಬಾರದು.
– ಡಾ| ಎಚ್‌. ಅಂಜನಪ್ಪ, ಖ್ಯಾತ ವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next