Advertisement

ಸೋಂಕಿನ ಶಕ್ತಿ 3 ಪಟ್ಟು; ಡಬ್ಲ್ಯುಎಚ್‌ಒ ಪ್ರಧಾನ ವಿಜ್ಞಾನಿಯಾದ ಡಾ|ಸೌಮ್ಯ ಎಚ್ಚರಿಕೆ

01:04 AM Dec 07, 2021 | Team Udayavani |

ಹೊಸದಿಲ್ಲಿ: ಕೊರೊನಾದ ಹೊಸ ರೂಪಾಂತರಿಯಾದ ಒಮಿಕ್ರಾನ್‌ ವೈರಸ್‌ ಕೊರೊನಾದ ಈ ಹಿಂದಿನ ರೂಪಾಂತರಿಯಾದ ಡೆಲ್ಟಾಕ್ಕಿಂತ ಮೂರು ಪಟ್ಟು ಹೆಚ್ಚು ಪಟ್ಟು ಮರುಸೋಂಕು ಉಂಟು ಮಾಡ
ಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ, ಭಾರತ ಮೂಲದ ಡಾ| ಸೌಮ್ಯಾ ಸ್ವಾಮಿನಾಥನ್‌ ತಿಳಿಸಿದ್ದಾರೆ.

Advertisement

ಒಮ್ಮೆ ಒಮಿಕ್ರಾನ್‌ನಿಂದ ಗುಣಮುಖರಾದರೂ ಅನಂತರದ 90 ದಿನಗಳಲ್ಲಿ ಪುನಃ ಅದರ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ ಎಂದು ಅವರು ಹೇಳಿದ್ದಾರೆ. ಒಮಿಕ್ರಾನ್‌ ರೂಪಾಂತರಿ ಗಂಭೀರ ಅನಾರೋಗ್ಯ ಉಂಟು ಮಾಡುವುದಿಲ್ಲ ಎಂದು ಹೇಳಿರುವ ಅವರು, ಸದ್ಯದ ಅಧ್ಯಯನದ ಪ್ರಕಾರ, ಒಂದೆಡೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ಸೇರುವವರ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಆದರೆ ಆಸ್ಪತ್ರೆಗೆ ಸೇರುವವರ ಪ್ರಮಾಣ ಹೆಚ್ಚಾಗುತ್ತದೆಯೇ ಎಂಬುದರ ಬಗ್ಗೆ ಇನ್ನು 3-4 ವಾರಗಳಲ್ಲಿ ಖಚಿತತೆ ಸಿಗುತ್ತದೆ ಎಂದಿದ್ದಾರೆ.

ಮತ್ತೊಂದೆಡೆ, ಆರೋಗ್ಯ ಇಲಾಖೆಗಳ ಸಿಬಂದಿಗೆ ಹಾಗೂ ಕೊರೊನಾ ನಿಗ್ರಹ ಅಭಿಯಾನದಲ್ಲಿ ಸೇವೆ ಸಲ್ಲಿಸುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಕೊರೊನಾ ಬೂಸ್ಟರ್‌ ಡೋಸ್‌ ನೀಡ ಬೇಕೆಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಆಗ್ರಹಿಸಿದೆ.

ಒಟ್ಟು 23 ಒಮಿಕ್ರಾನ್‌ ಕೇಸ್‌: ಸೋಮವಾರದಂದು ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿಯಲ್ಲಿ ಇನ್ನಷ್ಟು ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದು, ಸೋಮವಾರ ದಿನಾಂತ್ಯದ ಹೊತ್ತಿಗೆ ದೇಶದಲ್ಲಿ ಈ ರೂಪಾಂತರಿಯ ಸೋಂಕು ತಗಲಿರುವವರ ಸಂಖ್ಯೆ 23ಕ್ಕೇರಿದೆ. ಮುಂಬಯಿಯಲ್ಲಿ ಸೋಮವಾರ ಮತ್ತೆರಡು ಒಮಿಕ್ರಾನ್‌ ಕೇಸ್‌ಗಳು ಪತ್ತೆಯಾಗಿದ್ದು ಇಬ್ಬರಲ್ಲೂ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಲಾಗಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಒಟ್ಟು ಒಮಿಕ್ರಾನ್‌ ಸೋಂಕಿತರ ಸಂಖ್ಯೆ 10ಕ್ಕೇರಿದೆ. ಜೈಪುರದಲ್ಲಿ 9 ಕೇಸ್‌ಗಳು ಪತ್ತೆಯಾಗಿವೆ. ದೆಹಲಿಯಲ್ಲಿ 30ರ ಹರೆಯದ ಒಬ್ಬ ಯುವಕನಿಗೆ ಒಮಿಕ್ರಾನ್‌ ಸೋಂಕು ತಗಲಿದ್ದು ಆತನನ್ನು ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾ ಸಾವಿನ ಸಂಖ್ಯೆ; ಕೇರಳಕ್ಕೆ ಪತ್ರ: ಕೊರೊನಾ ಸಾವಿನ ಸಂಖ್ಯೆಯಲ್ಲಿ ಇತ್ತೀಚೆಗೆ ಕೇರಳ ಸರಕಾರ ಹೊರಡಿಸಿರುವ ಅಂಕಿ-ಅಂಶಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸರಕಾರ, ಈ ಕುರಿತಂತೆ ವಿವರಣೆ ಸಲ್ಲಿಸಬೇಕೆಂದು ಪತ್ರದ ಮುಖೇನ ಸೂಚಿಸಿದೆ. ಈ ಹಿಂದೆ ಕೇರಳದಲ್ಲಿ ಆಗಿದ್ದ ಕೆಲವು ಸಾವುಗಳನ್ನು ಸ್ಪಷ್ಟ ಕಾರಣ ಇಲ್ಲದಿದ್ದರಿಂದಾಗಿ ಕೊರೊನಾ ಸಾವಿನ ಲೆಕ್ಕಕ್ಕೆ ಸೇರಿಸಿರಲಿಲ್ಲ. ಇದೇ ಅಕ್ಟೋಬರ್‌ನಲ್ಲಿ ಈ ಪ್ರಮಾದಗಳನ್ನು ಸರಿಪಡಿಸಲು ಮುಂದಾದ ಕೇರಳ ಸರಕಾರ, ಕೊರೊನಾ ಸಾವಿನ ಸಂಖ್ಯೆಗೆ 12,000 ಹೆಚ್ಚು ಪ್ರಕರಣಗಳನ್ನು ಸೇರಿಸಿದೆ. ಆದರೆ ಕೇಂದ್ರ ಸರಕಾರವು ಏಕಾಏಕಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು ಹೇಗೆಂದು ಕೇಳಿ ಕೇರಳ ಸರಕಾರಕ್ಕೆ ಪತ್ರ ಬರೆದಿದ್ದು, ಈ ಕುರಿತಂತೆ ವಿವರಣೆ ನೀಡುವಂತೆ ಸೂಚಿಸಿದೆ.

Advertisement

ಇದನ್ನೂ ಓದಿ:ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಸಿಂದಿಯಾ ಸೂಚನೆ: ಡಿ. 1ರಂದು ದಿಲ್ಲಿಯಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಜನದಟ್ಟಣೆ ಇರುವ ಪೋಟೋ ಗಳು, ವೀಡಿಯೋಗಳು ಸಾಮಾಜಿಕ ಜಾಲಾತಾಣ ಗಳಲ್ಲಿ ವೈರಲ್‌ ಆಗಿದ್ದವು. ಇದನ್ನು ಗಮನಿಸಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಜನಸಂದಣಿಯನ್ನು ಸೂಕ್ತವಾಗಿ ನಿರ್ವ ಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊರೊನಾ ತಡೆಯಲು ಚ್ಯುಯಿಂಗ್‌ಗಮ್‌
ಕೊರೊನಾ ಸೋಂಕಿತರ ಎಂಜಲಿನಿಂದ ಕೊರೊನಾ ಹರಡುವುದನ್ನು ತಡೆಯಬಲ್ಲ ಚ್ಯುಯಿಂಗ್‌ಗಮ್‌ ಅನ್ನು ಅಮೆರಿಕ ವಿಜ್ಞಾನಿಗಳು ತಯಾರಿಸಿದ್ದಾರೆ. ಕೊರೊನಾ ಬಾಧಿತರ ಬಾಯಿಯಲ್ಲಿರುವ ಜೊಲ್ಲು ಗ್ರಂಥಿಗಳಲ್ಲಿ ಕೊರೊನಾ ವೈರಾಣುಗಳು ಹೆಚ್ಚು ಪ್ರಮಾಣದಲ್ಲಿ ದ್ವಿಗುಣಗೊಳ್ಳುತ್ತವೆ. ಬಾಯಿಯ ಹೊರಸೂಸುವ ಜೊಲ್ಲು, ಉಸಿರಿನಿಂದ ಕೊರೊನಾ ವೈರಾಣುಗಳು ಹರಡುವ ಸಾಧ್ಯತೆಗಳಿರುತ್ತದೆ. ಈ ಚ್ಯುಯಿಂಗ್‌ಗಮ್‌ ಅನ್ನು ಬಾಯಿಯಲ್ಲಿ ಅಗಿಯುವಾಗ, ಇದು ಜೊಲ್ಲುರಸದಲ್ಲಿರುವ ಕೊರೊನಾ ವೈರಾಣುಗಳನ್ನು ತನಗೆ ಅಂಟಿಕೊಳ್ಳುತ್ತ ವಲ್ಲದೆ, ಜೊಲ್ಲು ಗ್ರಂಥಿಗಳಲ್ಲಿ ದ್ವಿಗುಣಗೊಳ್ಳುವ ಪ್ರಮಾಣ ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದಹಾಗೆ, ಈ ಚ್ಯುಯಿಂಗ್‌ಗಮ್‌ ಅನ್ನು ಸಸ್ಯಗಳ ಪ್ರೋಟೀನ್‌ಗಳನ್ನು ಬಳಸಿ ತಯಾರಿಸಲಾಗಿದೆಯಂತೆ.

ಪರಿಹಾರ ವಿಳಂಬ: ಸುಪ್ರೀಂಕೋರ್ಟ್‌ ಅಸಮಾಧಾನ
ಕೊರೊನಾದಿಂದ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ನೀಡುವಲ್ಲಿ ಮಂದಗತಿ ಅನುಸರಿಸುತ್ತಿರುವ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನ ಸರಕಾರಗಳನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದೇ ಅಕ್ಟೋಬರ್‌ನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ತಲಾ 50,000 ರೂ. ಪರಿಹಾರ ನೀಡುವ ಪ್ರಸ್ತಾವನೆಗೆ ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿತ್ತು. ಆದರೆ ಹೆಚ್ಚಿನ ಕುಟುಂಬಗಳಿಗೆ ಪರಿಹಾರ ಇನ್ನೂ ಮರೀಚಿಕೆಯಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. “ಮಹಾರಾಷ್ಟ್ರ ಸರಕಾರದಡಿ, 1 ಲಕ್ಷ ಕುಟುಂಬಗಳಿಗೆ ಈ ಪರಿಹಾರ ಸಿಗಬೇಕಿತ್ತು. ಈವರೆಗೆ ಕೇವಲ 37,000 ಕುಟುಂಬಗಳಿಂದ ಅರ್ಜಿಗಳು ಬಂದಿದ್ದರೂ ಒಬ್ಬರಿಗೂ ಪರಿಹಾರ ಕೊಟ್ಟಿಲ್ಲ. ಇದೇ ನಿಧಾನಗತಿ ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲೂ ಆಗಿದೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next