Advertisement

ಸರ್ಪನಮನೆ ಸಸ್ಯ ಕೇಂದ್ರದಲ್ಲಿದೆ 3.52 ಲಕ್ಷ ವಿಧದ ಗಿಡಗಳು

12:17 AM Jun 19, 2019 | sudhir |

ಬೈಂದೂರು: ತಾಲೂಕಿನ ಪ್ರಸಿದ್ದ ಸಸ್ಯ ಕ್ಷೇತ್ರವಾದ ಶಿರೂರು ಸರ್ಪನಮನೆಯಲ್ಲಿ ಈ ವರ್ಷ 3.52 ಲಕ್ಷ ಗಿಡಗಳನ್ನು ಸಿದ್ಧಪಡಿಸಲಾಗಿದ್ದು, ಹಸಿರು ಕ್ರಾಂತಿಯ ಚಿಂತನೆಯೊಂದಿಗೆ ಅರಣ್ಯ ಇಲಾಖೆ ಕಾಡು ವೃದ್ಧಿ ಹಾಗೂ ಅರಣ್ಯ ಬೆಳೆಸಲು ಸಾರ್ವಜನಿಕರ ಸಹಕಾರದೊಂದಿಗೆ ಹತ್ತಾರು ವಿಭಿನ್ನ ಯೋಜನೆಗಳನ್ನು ರೂಪಿಸಿದೆ.

Advertisement

ಕುಂದಾಪುರ ತಾಲೂಕಿನ ಶಿರೂರು ಗ್ರಾಮದ ಸಂಕದಗುಂಡಿ ಬಳಿ ಇರುವ ಸರ್ಪನಮನೆ ಸಸ್ಯ ಕ್ಷೇತ್ರ 5 ಎಕರೆ ವಿಸ್ತಾರವಾಗಿದೆ. ಸಾಗುವಾನಿ, ಬಾದಾಮಿ, ಹಲಸು, ಶ್ರೀಗಂಧ, ಮಾವು, ಮಹಾಗನಿ, ಸೇರಿದಂತೆ 38ಕ್ಕೂ ಅಧಿಕ ಪ್ರಭೇದದ ಗಿಡಗಳನ್ನು ಪೂರೈಸಲಾಗುತ್ತಿದೆ.

ಅರಣ್ಯ ವ್ಯಾಪ್ತಿ ವಿವರ

ಬೈಂದೂರು ವಲಯಾರಣ್ಯ ಬೈಂದೂರಿನಿಂದ ಮರವಂತೆಯವರೆಗೆ ತನ್ನ ವ್ಯಾಪ್ತಿ ಹೊಂದಿದೆ. ಇದರಲ್ಲಿ ಬೈಂದೂರು ಕೇಂದ್ರ ಸ್ಥಾನ, ಗೋಳಿಹೊಳೆ, ಕಿರಿಮಂಜೇಶ್ವರ ವ್ಯಾಪ್ತಿಗಳಿದ್ದು 9 ಗಸ್ತುಗಳಾಗಿ ವಿಂಗಡಿಸಲಾಗಿದೆ. ಒಟ್ಟು 8,467 ಹೆಕ್ಟೇರ್‌ ಅರಣ್ಯ ಭೂಮಿ ಇದ್ದು ಶಿರೂರು, ಕರ್ನ್ಗದ್ದೆ, ಬೈಂದೂರು, ವಸ್ರೆ, ಗೋಳಿಹೊಳೆ, ಹುಲಿಮೀಸೆ ಪಾರೆ, ಕುರ್ಶಿಗುಡ್ಡೆ, ಹೇರೂರು ಪೂರ್ವ ಮತ್ತು ಹೇರೂರು ಪಶ್ಚಿಮ ಎಂದು ವಿಂಗಡಿಸಲಾಗಿದೆ.

2019-20ರ ಸಾಲಿನಲ್ಲಿ 316 ಹೆಕ್ಟೇರ್‌ ನೆಡುತೋಪು ನೆಡುವ ಗುರಿ ಹೊಂದಿದೆ. ಹಸಿರು ಕರ್ನಾಟಕ ಯೋಜನೆಯಡಿ 5 ಸಾವಿರ ಹೊಂಡಗಳನ್ನು ತೆಗೆಯಲಾಗಿದೆ. ಇದುವರೆಗೆ 2 ಲಕ್ಷಕ್ಕೂ ಅಧಿಕ ಗಾಳಿ ಗಿಡಗಳನ್ನು ನೆಡಲಾಗಿದೆ.

Advertisement

ಸಾರ್ವಜನಿಕ ಯೋಜನೆಗಳು

ಅರಣ್ಯ ಇಲಾಖೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 20 ಸಾವಿರ ಗಿಡ ನೆಡಲಾಗಿದೆ. ಕೃಷಿಕರಿಗೆ 1 ಹೆಕ್ಟೇರ್‌ಗೆ 400 ಗಿಡಗಳನ್ನು ನೀಡಲಾಗುತ್ತದೆ.ಅತ್ಯಂತ ರಿಯಾಯಿತಿ ದರದಲ್ಲಿ ನೀಡುವ ಜತೆಗೆ ಮೊದಲ ವರ್ಷ 30 ರೂಪಾಯಿ, ಎರಡನೇ ವರ್ಷದಲ್ಲಿ 30 ರೂಪಾಯಿ ಹಾಗೂ ಮೂರನೇ ವರ್ಷ 40 ರೂಪಾಯಿ ಸಹಾಯಧನ ನೀಡುತ್ತಿದೆ. ಪ.ಪಂಗಡ ಮತ್ತು ಪ.ಜಾತಿಯವರಿಗೆ ಗ್ಯಾಸ್‌ ಸ್ಟವ್‌ ಹಾಗೂ ಸಿಲಿಂಡರ್‌ ವಿತರಿಸಲಾಗುತ್ತದೆ. ಸೋಲಾರ್‌ ವಾಟರ್‌ ಹೀಟರ್‌ ಸೌಲಭ್ಯ ಕೂಡ ದೊರೆಯುತ್ತದೆ.ಬೈಂದೂರು ವ್ಯಾಪ್ತಿಯಲ್ಲಿ 8 ಜನರಿಗೆ ಇದನ್ನು ಶಿಫಾರಸು ಮಾಡಲಾಗಿದೆ. ಗೋಬರ್‌ ಗ್ಯಾಸ್‌, ಕಸಿಗೇರು, ಮಾವಿನ ಗಿಡಗಳು ದೊರೆಯಲಿವೆ.

ಪ್ರಾಯೋಜಕತ್ವ

ಬೈಂದೂರು ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳು ಮತ್ತು ಸರಕಾರದ ಇಲಾಖೆಯ ವತಿಯಿಂದ ನಡೆಯುವ ಪರಿಸರ ಸ್ನೇಹಿ ಮತ್ತು ಗಿಡಗಳನ್ನು ನೆಡುವ ಕಾರ್ಯಕ್ರಮಗಳಲ್ಲಿ ಅರಣ್ಯ ಇಲಾಖೆ ಸಹಭಾಗಿತ್ವ ನೀಡುತ್ತಿದೆ. ಶಿರೂರು ಜೆಸಿಐ ವತಿಯಿಂದ ನಡೆಯುವ ವೃಕ್ಷರಥ -2019 ಅಭಿಯಾನದ ಮೂಲಕ ಶಾಲಾ ಕಾಲೇಜುಗಳಿಗೆ ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ಸಹಭಾಗಿತ್ವ ನೀಡಲಾಗಿದೆ.

ಕ್ಷಿತಿಜ ನೇಸರಧಾಮ ಅರಣ್ಯ ವ್ಯಾಪ್ತಿ ಮುಂತಾದ ಕಡೆ ಹಸಿರಾಗಿಸುವ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರ ಜೊತೆಗೆ ಅರಣ್ಯ ಮಾಹಿತಿ, ಗ್ರಾಮೀಣ ಭಾಗದಲ್ಲಿ ಕೃಷಿ ತೋಟಗಾರಿಕೆಯ ಅಕ್ರಮ ಸಕ್ರಮ ಮುಂತಾದ ಕಾರಣಗಳಿಂದ ಕಾಡು ನಾಶ ಮಾಡುವುದನ್ನು ನಿಯಂತ್ರಿಸುವ ಕೆಲಸವಾಗಬೇಕಿದೆ.

ಪರಿಸರ ಜಾಗೃತಿ, ಕೆರೆಗಳ ರಕ್ಷಣೆ, ಚೆಕ್‌ಡ್ಯಾಮ್‌ ಅಳವಡಿಕೆ, ಮಳೆನೀರು ಕೊಯ್ಲು, ಇಂಗುಗುಂಡಿ ಅನುಷ್ಠಾನದ ಮೂಲಕ ಪರಿಸರ ಜಾಗೃತಿ ಹೆಚ್ಚಿಸುವ ಕೆಲಸಗಳಾಗಬೇಕಿದೆ.

ಮನಪರಿವರ್ತನೆಗೆ ಹೊಸ ಪ್ರಯೋಗ

ಅಪರಾಧಗಳು ನಡೆದ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಕ್ಕಿಂತ ಘಟಿಸುವ ಮುನ್ನ ಜನಸಾಮಾನ್ಯರಿಗೆ ವಾಸ್ತವ ಸಂಗತಿ ಅರಿವು ಮೂಡಿಸಿದರೆ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತದೆ.

ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಮರಕಳ್ಳತನ, ಕಾಡುಪ್ರಾಣಿಗಳ ಶಿಕಾರಿ ನಡೆಸುವ ಮೂಲಕ ಕೆಲವು ತಂಡಗಳು ಜೀವನ ಸಾಗಿಸುತ್ತಿದೆ. ಇಂಥವರಿಗೆ ಕಾಡುಪ್ರಾಣಿಗಳ ಬೇಟೆಗೆ ಕಾನೂನಿನ ಪ್ರಕಾರ ಯಾವ ಶಿಕ್ಷೆಗಳಿವೆ, ಒಂದೊಮ್ಮೆ ಬೆಲೆ ಬಾಳುವ ಮರಕಳ್ಳತನ ನಡೆಸಿದರೆ ಉಂಟಾಗುವ ಪರಿಣಾಮಗಳೇನು, ಪ್ರಕೃತಿ ರಕ್ಷಣೆಯಲ್ಲಿ ಜನಸಾಮಾನ್ಯರ ಜವಾಬ್ದಾರಿಗಳೇನು ಮುಂತಾದ ವಿಷಯಗಳ ಕುರಿತು ಸ್ವ-ಸಹಾಯ ಸಂಘಗಳು, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮನಪರಿವರ್ತನೆ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಯೋಗ ಬೈಂದೂರು ವಲಯಾರಣ್ಯಾಧಿಕಾರಿಗಳ ಮುತುವರ್ಜಿಯಲ್ಲಿ ನಡೆಯುತ್ತಿದೆ.

ಮಳೆಗಾಲದ ಬಳಿಕ ಕಾಡು ತೊರೆಗಳಿಗೆ ಸಾಂಪ್ರದಾಯಿಕ ಚೆಕ್‌ಡ್ಯಾಂ ನಿರ್ಮಿಸಿದಾಗ ನೀರು ಶೇಖರಣೆಯಾಗಿ ಕಾಡು ಪ್ರಾಣಿಗಳಿಗೆ, ಪಕ್ಷಿಗಳಿಗೆ ನೀರಿನ ದಾಹ ತೀರುತ್ತದೆ ಎಂಬುದು ಇಲಾಖೆಯ ಸಿಬಂದಿಗಳ ಅಭಿಪ್ರಾಯ. ಒಟ್ಟಾರೆಯಾಗಿ ಹಸಿರು ಚಿಂತನೆಯಲ್ಲಿ ಬೈಂದೂರು ಅರಣ್ಯ ಇಲಾಖೆ ತಂಡ ಸಾಂಘಿಕ ಪ್ರಯತ್ನ ನಡೆಸುತ್ತಿದ್ದು, ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ಮಾದರಿಯಾಗುತ್ತಿದೆ.

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next