Advertisement

ಬಿಬಿಎಂಪಿ ಬಜೆಟ್‌ನ 254 ಕೋಟಿಗೆ ಕತ್ತರಿ

04:24 AM May 14, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿಯು 2020-21ನೇ ಸಾಲಿನ ಬಜೆಟ್‌ ಅನುಮೋದನೆಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇವಲ ಮೂರು ಕೆಲಸದ ದಿನಗಳಲ್ಲಿ ಸರ್ಕಾರವು ಹಲವು ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಿದೆ. ಪರಿಷ್ಕೃತ  ಆಯವ್ಯಯದಲ್ಲಿ ಸುಮಾರು 254 ಕೋಟಿ ರೂ. ಗಳಷ್ಟು ಕತ್ತರಿ ಹಾಕಲಾಗಿದೆ. ಬಿಬಿಎಂಪಿಯು 11,969.5 ಕೋಟಿ ಮೊತ್ತದ ಬಜೆಟ್‌ ಅನ್ನು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿತ್ತು.

Advertisement

ನಗರಾಭಿವೃದ್ಧಿ ಇಲಾಖೆಯು ಹಲವು ಅನಗತ್ಯ  ಮತ್ತು  ಪುನರಾವರ್ತಿತ ಯೋಜನೆಗಳಿವೆ ಎಂಬ ಕಾರಣಕ್ಕೆ 254 ಕೋಟಿಯಷ್ಟು ಮೊತ್ತ ಕಡಿತಗೊಳಿಸಿ, 11,715.2 ಕೋಟಿ ರೂ. ಆಯವ್ಯಯಕ್ಕೆ ಬುಧವಾರ ಅನುಮೋದನೆ ನೀಡಿದೆ. ಮೇ 7ರಂದು ಪ್ರಸ್ತಾವನೆ ಕಳುಹಿಸಲಾಗಿತ್ತು. 8ರಂದು  ನಗರಾಭಿವೃದ್ಧಿ ಇಲಾಖೆ ತಲುಪಿತ್ತು. 13ರಂದು ಅನುಮೋದನೆಗೊಂಡು ಪಾಲಿಕೆಗೆ ವಾಪಸ್‌ ಬಂದಿದೆ. ಈ “ತ್ವರಿತ ಅನುಮೋದನೆ’ ಸ್ವತಃ ಅಧಿಕಾರಿಗಳನ್ನೂ ಹುಬ್ಬೇರಿಸುವಂತೆ ಮಾಡಿದೆ.

ಬಜೆಟ್‌ ಪ್ರಸ್ತಾವನೆ ಅಂತಿಮಗೊಳಿಸಿ, ಸರ್ಕಾರಕ್ಕೆ  ಸಲ್ಲಿಸುವವರೆಗಿನ ಇಡೀ ಪ್ರಕ್ರಿಯೆಯಲ್ಲಿ ಆಯುಕ್ತರು ಅಂತರ ಕಾಯ್ದುಕೊಂಡಿರುವುದು ಈ ತ್ವರಿತ ಅನುಮೋದನೆಗೆ ಕಾರಣ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಪರಿಷ್ಕೃತ ಬಜೆಟ್‌ನಲ್ಲಿ ರಸ್ತೆ ಗುಂಡಿ ದುರಸ್ತಿಗೆ ನೀಡಿದ್ದ 120  ಕೋಟಿ ರೂ.ಗಳನ್ನು 5 ಕೋಟಿ ರೂ.ಗಳಿಗೆ ಸೀಮಿತಗೊಳಿಸಲಾಗಿದೆ. ಅದೇ ರೀತಿ, ಮಳೆ ನೀರುಗಾಲುವೆ ವಾರ್ಷಿಕ ನಿರ್ವಹಣೆಗೆ ಎಸೊ ಖಾತೆಯಲ್ಲಿ ಮೀಸಲಿಟ್ಟಿದ್ದ 75 ಕೋಟಿಯನ್ನು 25 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ. ಜತೆಗೆ  ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 75 ಕೋಟಿ ರೂ. ನೀಡಲಾಗಿತ್ತು. ಅದನ್ನು 50 ಕೋಟಿ ರೂ. ಗಳಿಗೆ ಇಳಿಸಲಾಗಿದೆ.

ಯಲಹಂಕ, ಮಲ್ಲೇಶ್ವರ, ಸಿ.ವಿ. ರಾಮನ್‌ನಗರ, ರಾಜಾಜಿನಗರ, ಗೋವಿಂದರಾಜನಗರ, ಚಿಕ್ಕಪೇಟೆ,  ಮಹದೇವಪುರ, ಬಸವನಗುಡಿ, ಪದ್ಮನಾಭನಗರ, ಬೊಮ್ಮನಹಳ್ಳಿ,  ಕೆ.ಆರ್‌. ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌, ಬಿಟಿಎಂ ಲೇಔಟ್‌, ಬೆಂಗಳೂರು ದಕ್ಷಿಣ ಕ್ಷೇತ್ರಗಳು ಇದರಲ್ಲಿ ಬರುತ್ತವೆ. ಹೆಚ್ಚು-ಕಡಿಮೆ ಇದೇ  ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ವಾರ್ಡ್‌ಗಳ (ವಾರ್ಡ್‌ಗಳ ಸಂಖ್ಯೆ: 181, 124, 04, 82, 176, 193, 84, 68, 110, 180, 67) ಅಭಿವೃದ್ಧಿ ಕಾಮಗಾರಿಗಳಿಗಾಗಿ 110 ಕೋಟಿ ರೂ. ಮೀಸಲಿಡಲಾಗಿತ್ತು. ಅದನ್ನು ಪರಿಷ್ಕೃತ ಆಯವ್ಯಯದಲ್ಲಿ ಮೀಸಲು ಅನುದಾನವನ್ನು 77 ಕೋಟಿಗೆ ಸೀಮಿತಗೊಳಿಸಲಾಗಿದೆ.

ಇನ್ನು ಬೆಳ್ಳಂದೂರು ಮತ್ತು ವರ್ತೂರು ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿಯಿಂದ ಬಿಡಿಎಗೆ ಪ್ರಸ್ತಾವಿತ ಬಜೆಟ್‌ನಲ್ಲಿ ಯಾವುದೇ ಸಹಾಯಧನ ಮೀಸಲಿಟ್ಟಿರಲಿಲ್ಲ. ಪರಿಷ್ಕೃತದಲ್ಲಿ ಕ್ರಮವಾಗಿ 25 ಕೋಟಿ ಹಾಗೂ 20 ಕೋಟಿ ರೂ. ನೀಡಲಾಗಿದೆ. ಅಲ್ಲದೆ, ಉತ್ತರಹಳ್ಳಿಯ ಬ್ರಿಗೇಡ್‌ ಅಪಾರ್ಟ್‌ಮೆಂಟ್‌ ಹತ್ತಿರದ ಬೃಹತ್‌ ನೀರುಗಾಲುವೆ ಅಭಿವೃದ್ಧಿಗೆ 10 ಕೋಟಿ ರೂ. ಮೀಸಲಿಡಲಾಗಿದೆ. ಈ ಮೊದಲು  ಯಾವುದೇ ಅನುದಾನ ಮೀಸಲಿಟ್ಟಿರಲಿಲ್ಲ.

Advertisement

ಮಾಹಿತಿ ನೀಡದೆ ಬಜೆಟ್‌ ಪರಿಷ್ಕರಣೆ!: ಬೆಂಗಳೂರು: ಬಿಬಿಎಂಪಿಯ 2020-21ನೇ ಸಾಲಿನ ಆಯವ್ಯಯದಲ್ಲಿ ಹಲವು ಬದಲಾವಣೆಗಳಾಗಿವೆ. ಆದರೆ, ಈ ಬದಲಾವಣೆಗಳ ಬಗ್ಗೆ ಬಜೆಟ್‌ ಮಂಡನೆ ಮಾಡಿದ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌.  ಶ್ರೀನಿವಾಸ್‌ ಅವರಿಗೇ ಮಾಹಿತಿ ನೀಡಿಲ್ಲ! ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌. ಶ್ರೀನಿವಾಸ್‌ ಅವರು, ಏ.20ರಂದು 2020-21ನೇ ಸಾಲಿನ ಬಜೆಟ್‌ ಮಂಡನೆ ಮಾಡಲಾಗಿತ್ತು.

ಸದ್ಯ ಈ ಬಜೆಟ್‌ನಲ್ಲಿ ಹಲವು ಬದಲಾವಣೆಗಳು ಮಾಡಲಾಗಿದ್ದು, ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, ಏನು ಬದಲಾವಣೆ ಮಾಡಲಾಗಿದೆ ಎನ್ನುವ ಬಗ್ಗೆ ಬಜೆಟ್‌ ಮಂಡನೆ ಮಾಡಿದ ನನಗೇ ಮಾಹಿತಿ ನೀಡದೆ ಮೇಯರ್‌  ಹಾಗೂ ಉಪಮೇಯರ್‌ ಬದಲಾವಣೆ  ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್‌ ಮಂಡನೆ ಮಾಡುವ ವೇಳೆ ಪ್ರತಿ ಹಂತದಲ್ಲೂ ಮೇಯರ್‌ ಎಂ.ಗೌತಮ್‌ಕುಮಾರ್‌ ಅವರ ಗಮನಕ್ಕೆ ತರಲಾಗಿತ್ತು. ಈ ಸಂಬಂಧ  ಮೂರು ಬಾರಿ ಮೇಯರ್‌ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಆದರೆ, ಬಜೆಟ್‌ ಅನುಮೋದನೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ವೇಳೆ ನನಗೆ ಮಾಹಿತಿಯೇ ನೀಡಿಲ್ಲ ಎಂದು ದೂರಿದರು.

ಇನ್ನು ಈ ಸಂಬಂಧ  ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ಅವರು, ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಅಂದಾಜು 600 ಕೋಟಿ ರೂ. ಏರಿಕೆಯಾಗುವ ಸಾಧ್ಯತೆ ಇದೆ.  ಬಜೆಟ್‌ನಲ್ಲಿ ಘೋಷಣೆ ಮಾಡಿದ ಯಾವುದೇ ಪ್ರಸ್ತಾವನೆಗಳನ್ನು ಅಥವಾ ಯೋಜನೆಗಳನ್ನು ಕೈಬಿಟ್ಟಿಲ್ಲ. ಆದರೆ, ಕಾಂಗ್ರೆಸ್‌ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಎಲ್ಲೆಲ್ಲಿ ದೂರು ಕೇಳಿ ಬಂದಿದ್ದವೂ ಅಲ್ಲಿ ಸರಿಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next