Advertisement

ಜಿಪಂ ಯೋಜನೆಗಳಿಗೆ 233 ಕೋಟಿ ರೂ. ಹಂಚಿಕೆ

01:36 PM Jul 24, 2019 | Team Udayavani |

ಕೋಲಾರ: ಜಿಪಂಗೆ 2019-20 ಸಾಲಿನಲ್ಲಿ ವಿವಿಧ ಕಾಮಗಾರಿ, ಯೋಜನೆಗಳಿಗೆ ಹಂಚಿಕೆ ಆಗಿರುವ 233.20 ಕೋಟಿ ರೂ.ಗಳ ಅನುದಾನಕ್ಕೆ ಸದಸ್ಯರಿಂದ ಪತ್ರ ಪಡೆದು ವಿವಿಧ ಇಲಾಖೆಗಳಿಗೆ ಒದಗಿಸಿರುವ ಕಾಮಗಾರಿಗಳ ಕರಡು ಕ್ರಿಯಾ ಯೋಜನೆ ಪಟ್ಟಿ ತಯಾರಿಸಿ ಜಿಪಂ ಸಾಮಾನ್ಯ ಸಭೆಯಲ್ಲಿ ಮಂಡನೆ ಮಾಡಲು ತೀರ್ಮಾನಿಸಲಾಯಿತು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಗೀತಮ್ಮ ಅಧ್ಯಕ್ಷತೆಯಲ್ಲಿ ನಡೆದ 2019-20 ಸಾಲಿನಲ್ಲಿ ಜಿಪಂಗೆ ಕಾರ್ಯಕ್ರಮಗಳಿಗೆ ಹಂಚಿಕೆ ಆಗಿರುವ ಅನುದಾನದ ತಯಾರಿಸಿರುವ ಕರಡು ಕ್ರಿಯಾ ಯೋಜನೆ ಕುರಿತು ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ನಮ್ಮ ಅನುದಾನದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಬಾರದು, ಅನುದಾನವನ್ನು ಶಾಸಕರಿಗೆ ಹಂಚಿಕೆ ಮಾಡಿದರೆ ನಮ್ಮ ಗತಿ ಏನು ಎಂದು ಸಿ.ಎಸ್‌.ವೆಂಕಟೇಶ್‌ ಪ್ರಶ್ನೆ ಮಾಡಿದರು.

ಅಧಿಕಾರಿಗಳಿಗೆ ಸೂಚನೆ: ನಮ್ಮ ಸದಸ್ಯರನ್ನು ನಿರ್ಲಕ್ಷ್ಯ ಮಾಡಬಾರದು. ಅವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಕ್ರಿಯಾ ಯೋಜನೆ ಮಾಡುವಾಗ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ಗೀತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸದಸ್ಯರ ಕಡೆಗಣನೆ ಸರಿಯಲ್ಲ: ಸಿಇಒ ಜಿ.ಜಗದೀಶ್‌ ಮಾತನಾಡಿ, ಸರ್ಕಾರದಿಂದ ಜಿಪಂಗೆ ಒದಗಿಸಿರುವ ಹಣಕ್ಕೆ ಸದಸ್ಯರಿಂದಲೇ ಕ್ರಿಯಾ ಯೋಜನೆ ರೂಪಿತವಾಗಬೇಕು. ಅದು ಜಿಪಂನಿಂದ ಆಗಬೇಕಾದ ಕಾಮಗಾರಿಗಳು. ಇದರಿಂದಾಗಿ ಸದಸ್ಯರಿಂದ ತಾಲೂಕುವಾರು ಪತ್ರ ತೆಗೆದುಕೊಂಡು ಕ್ರಿಯಾ ಯೋಜನೆ ಪಟ್ಟಿ ತಯಾರಿಸಿ ಜಿಪಂ ಸಾಮಾನ್ಯ ಸಭೆಯಲ್ಲಿಟ್ಟು ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಬೇಕೆಂದರು.

Advertisement

ಸದಸ್ಯರನ್ನು ಆಹ್ವಾನಿಸಬೇಕು: ಅಧಿಕಾರಿಗಳು ಯಾವುದೇ ಕಾರಣಕ್ಕೂ ಸದಸ್ಯರನ್ನು ಕಡೆಗಣಿಸಬಾರದು. ಜನರಿಂದ ಆಯ್ಕೆ ಆಗಿ ಬಂದವರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿ ಸಮಸ್ಯೆ ಬಗೆಹರಿಸಬೇಕು. ಯಾವುದೇ ಕಾರ್ಯಕ್ರಮ ನಡೆಸುವಾಗ ಸದಸ್ಯರನ್ನು ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರಿನ ಘಟಕಗಳಲ್ಲಿ ಕಾರ್ಡ್‌ ಪದ್ಧತಿ ಇರಲಿ: ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಸಾರ್ವಜನಿಕರಿಂದ ನೀರಿಗಾಗಿ ವಸೂಲಿ ಮಾಡುವ ಹಣವನ್ನು ಘಟಕಗಳನ್ನು ರಿಪೇರಿ ಮಾಡುತ್ತಿಲ್ಲ. ಈ ಹಣ ತಿಂದು ತೇಗುತ್ತಿದ್ದಾರೆಯೇ ಹೊರತು ರಿಪೇರಿ ಕೆಲಸಕ್ಕೆ ಬಳಸಿಕೊಳ್ಳುತ್ತಿಲ್ಲ ಎಂದು ಕೆಲ ಸದಸ್ಯರು ಆರೋಪಿಸಿದರು.

ಶುದ್ಧ ನೀರಿನ ಘಟಕಗಳಲ್ಲಿ ಕಾಯಿನ್‌ ಬಳಕೆ ತಪ್ಪಿಸಿ ಕಾರ್ಡ್‌ ಪದ್ಧತಿ ಅಳವಡಿಸಿದರೆ ಅಕ್ರಮ ನಡೆಯುವುದನ್ನು ತಪ್ಪಿಸಬಹುದು ಎಂದರು.

ಯೋಜನಾಧಿಕಾರಿಯಿಂದ ಜಿಪಂ ಇಬ್ಭಾಗ: ಪ್ರಸ್ತುತ ಜಿಪಂನಲ್ಲಿರುವ ಯೋಜನಾಧಿಕಾರಿ ಮಾದೇಶ್‌ ಅವರಿಂದಾಗಿ ಜಿಪಂ ಇಬ್ಭಾಗವಾಗಿದೆ, ಜಿಪಂನಲ್ಲಿ 30 ಮಂದಿ ಸದಸ್ಯರಿದ್ದು ಸಭೆಗೆ 12 ಜನ ಮಾತ್ರ ಹಾಜರಾಗಲು ಅವರೇ ಕಾರಣ. ಉಪಾಧ್ಯಕ್ಷೆ ಯಶೋಧಾ ಅವರೂ ಬಾರದೆ ಹೋಗಿದ್ದಾರೆ ಎಂದು ಸದಸ್ಯ ಅರವಿಂದ್‌ ಗಂಭೀರ ಆರೋಪ ಮಾಡಿದರು.

ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಿಲ್ಲ:ಯೋಜನಾಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಕ್ರಿಯಾ ಯೋಜನೆ ಪಟ್ಟಿ ತಯಾರಿಸುವಾಗ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ಯಾವುದೇ ಜಿಪಂ ಯೋಜನೆಗಳಿರಲಿ ನಮ್ಮ ಗಮನಕ್ಕೆ ತರುವುದಿಲ್ಲ. ಕಾರ್ಯಕ್ರಮಗಳನ್ನು ರೂಪಿಸುವಾಗಲೂ ಶಿಷ್ಟಾಚಾರ ಪಾಲಿಸುವುದಿಲ್ಲ ಎಂದು ಆರೋಪಿಸಿ, ತರಾಟೆಗೆ ತೆಗೆದುಕೊಂಡರು.

ವರ್ತೂರು ಬಣದ ಸದಸ್ಯರ ಅಳಲು:

ನಮ್ಮ ಶಾಸಕರಿಲ್ಲದ ಕಾರಣ ನಮಗೆ ತೊಂದರೆ ಹೇಳತೀರದಾಗಿದೆ. ಯಾವ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡ ಮಾಜಿ ಶಾಸಕ ವರ್ತೂರ್‌ಪ್ರಕಾಶ್‌ ಬಣದ ಜಿಪಂ ಸದಸ್ಯರು, ಅಧಿಕಾರಿಗಳ ವಿರುದ್ಧ ತೀವ್ರ ಕಿಡಿಕಾರಿ, ಇದೇ ನಿರ್ಲಕ್ಷ್ಯ ಮುಂದುವರಿದರೆ ಜಿಪಂ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಗ್ರಾಮೀಣ ಭಾಗದಲ್ಲಿ ನೀರಿಗೆ ಸಮಸ್ಯೆ ಇದೆ. ನಾವು ಗ್ರಾಮೀಣ ಪ್ರದೇಶದಿಂದ ಗೆದ್ದು ಬಂದವರು. ಅವರಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಕೆಲಸ. ಅಧಿಕಾರಿಗಳು ನಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ, ಕನಿಷ್ಠ ಫೋನ್‌ ತೆಗೆದು ಮಾತಾಡುವ ಸೌಜನ್ಯವನ್ನೂ ತೋರುವುದಿಲ್ಲ ಎಂದು ಸದಸ್ಯ ಅರುಣ್‌ಕುಮಾರ್‌ ಕಿಡಿಕಾರಿದರು. ನಮ್ಮ ಬಗ್ಗೆ ನಿತ್ಯ ನಿರ್ಲಕ್ಷ್ಯ ತೋರುತ್ತಿರುವುದರ ಬಗ್ಗೆ ನಾವು ಜಿಪಂ ಮುಂದೆ ಕುಳಿತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೂಪಶ್ರೀ ಮಂಜುನಾಥ್‌ ಎಚ್ಚರಿಕೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next