ಹೊಸದಿಲ್ಲಿ : ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಹೊರ ಬರಲು ನಿರ್ಧರಿಸಿದ ಹಾಕಿ ಇಂಡಿಯಾ ವಿರುದ್ಧ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾನುವಾರ ಅಸಮಾಧಾನ ಹೊರಹಾಕಿದ್ದಾರೆ.
ಏಕಪಕ್ಷೀಯವಾಗಿ ನಿರ್ಧರಿಸುವುದು ಸರಿಯಲ್ಲ, ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಮೊದಲು ರಾಷ್ಟ್ರೀಯ ಒಕ್ಕೂಟವು ಸರಕಾರದೊಂದಿಗೆ ಸಮಾಲೋಚಿಸಬೇಕು ಎಂದರು.
ಒಲಿಂಪಿಕ್ಸ್ ಗೆ ಪ್ರಮುಖ ಹಣಕಾಸು ನೆರವು ನೀಡುವ ದೇಶಕ್ಕೆ ಕ್ರೀಡಾಕೂಟದಲ್ಲಿ ಪ್ರತಿನಿಧಿಸುವ ಬಗೆಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ಇದು ಹಾಕಿ ಫೆಡರೇಷನ್ ನ ತಂಡವಲ್ಲ, ದೇಶವನ್ನು ಪ್ರತಿನಿಧಿಸುತ್ತಿರುವ ತಂಡ ಎಂದು ಕಿಡಿ ಕಾರಿದರು.
ಹಾಕಿ ಫೆಡರೇಷನ್ ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಮತ್ತು ಮೊದಲು ಸರಕಾರದೊಂದಿಗೆ ಚರ್ಚಿಸಬೇಕು. 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೇವಲ 18 ಆಟಗಾರರು ದೇಶವನ್ನು ಪ್ರತಿನಿಧಿಸುವುದಲ್ಲ. ಕಾಮನ್ವೆಲ್ತ್ ಜಾಗತಿಕ ಕ್ರೀಡಾಕೂಟವಾಗಿದ್ದು, ಹಾಕಿ ಫೆಡರೇಷನ್ ಕೂಡಲೇ ಸರಕಾರ ಮತ್ತು ಸಂಬಂಧ ಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸಬೇಕು.ಸರಕಾರ ಆ ಬಗ್ಗೆ ನಿರ್ಧರಿಸುತ್ತದೆ ಎಂದರು.
ಕೋವಿಡ್ ಕಾರಣ ಮುಂದಿಟ್ಟು ಜೊತೆಗೆ ಭಾರತೀಯರಿಗೆ ಇಂಗ್ಲೆಂಡ್ ನಲ್ಲಿ ವಿಧಿಸುತ್ತಿರುವ ಕಠಿಣ ಕ್ವಾರಂಟೈನ್ ನಿಯಮಗಳನ್ನು ವಿರೋಧಿಸಿ 2022 ರ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಹೊರ ಬರಲು ಹಾಕಿ ತಂಡ ನಿರ್ಧರಿಸಿತ್ತು .