Advertisement

2021 : ದೇವನಗರಿಗೆ ಸಿಹಿಗಿಂತಲೂ ಕಹಿಯೇ ಹೆಚ್ಚು

03:26 PM Dec 31, 2021 | Team Udayavani |

 ದಾವಣಗೆರೆ: ಪಂಚಮಸಾಲಿ, ವಾಲ್ಮೀಕಿ ನಾಯಕ, ಕುರುಬ ಸಮಾಜದಿಂದ ಮೀಸಲಾತಿಗೆ ಪ್ರಬಲ ಹೋರಾಟ, ಅಬ್ಬರಿಸಿದ ಕೊರೊನಾ, ಪ್ರಾಣವಾಯು, ಲಸಿಕೆಗಾಗಿ ಪರದಾಟ, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಅಮಿತ್‌ ಶಾ ಹೇಳಿಕೆ, ಗಮನ ಸೆಳೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ, ದಾಖಲೆ ಮಳೆ, ಅತಿವೃಷ್ಟಿ, ವರ್ಷಾಂತ್ಯದಲ್ಲಿ ಆಪಘಾತಗಳ ಸರಮಾಲೆ.., ಇವು ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ 2021 ರಲ್ಲಿ ಘಟಿಸಿದ ಕೆಲ ಪ್ರಮುಖ ಘಟನಾವಳಿ. ಬೆಣ್ಣೆ ನಗರಿ… ಖ್ಯಾತಿಯ ದಾವಣಗೆರೆ ಜಿಲ್ಲೆ ಸಿಹಿಗಿಂತಲೂ ಹೆಚ್ಚಾಗಿ ಕಹಿ ಘಟನೆಗಳಿಗೆ ಸಾಕ್ಷಿಯಾಯಿತು. ಮಹಾಮಾರಿ ಕೊರೊನಾ ರೂಪಾಂತರಿ ಒಮಿಕ್ರಾನ್‌ನ ಭಯ, ಆತಂಕದ ನಡುವೆಯೇ ಜಿಲ್ಲೆಯ ಜನರು ಹೊಸ ನಿರೀಕ್ಷೆಯೊಂದಿಗೆ ನೂತನ ವರ್ಷ 2022ರ ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ.

Advertisement

ಮೀಸಲು ಹೋರಾಟ

ಕಳೆದ ಕೆಲವಾರು ವರ್ಷದಿಂದ ಪ್ರಬಲ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ನೀಡಬೇಕು ಎಂಹ ಹೋರಾಟ ಜಾರಿಯಲ್ಲಿದೆ. ಹರಿಹರದ ಹರ ಪೀಠದಲ್ಲಿ ಜ.14 ಮತ್ತು 15ರಂದು ನಡೆದ ಹರ ಜಾತ್ರೆ ಹೋರಾಟ ಕಾವನ್ನು ಇನ್ನಷ್ಟು ಹೆಚ್ಚಿಸಿತು.2ಎ ಮೀಸಲಾತಿಗೆ ಒತ್ತಾಯಿಸಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಪ್ರಾರಂಭಿಸಿದ ಪಾದಯಾತ್ರೆ ದಾವಣಗೆರೆ ಆಗಮಿಸಿದ ನಂತರ ಹೊಸ ರೂಪವೇ ಪಡೆಯಿತು. ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಪಾದಯಾತ್ರೆ ಕೂಡಿಕೊಂಡಿದ್ದಲ್ಲದೆ ಸರ್ಕಾರದ ವಿರುದ್ಧ ಬಾರು ಕೋಲು ಚಳವಳಿಗೆ ನಾಂದಿ ಹಾಡಿದರು. ಉಭಯ ಜಗದ್ಗುರುಗಳು ಜೊತೆಯಾಗಿ ದಾವಣಗೆರೆಯಿಂದ ಪ್ರಾರಂಭಿಸಿದ ಪಾದಯಾತ್ರೆ ಪಂಚಮಸಾಲಿಸಮಾಜದ ಬಹು ದಿನಗಳ ಬೇಡಿಕೆ ಈಡೇರುವ ಸ್ಪಷ್ಟ ವಾತಾವರಣ ನಿರ್ಮಾಣ ಮಾಡಿದೆ. ವರ್ಷಾಂತ್ಯಕ್ಕೆ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ದಾವಣಗೆರೆ ಜಿಲ್ಲೆಯಿಂದಯೇ ಸಮೀಕ್ಷೆ ಪ್ರಾರಂಭಿಸಿರುವುದು ಸಮಾಜ ಬಾಂಧವರಲ್ಲಿ ಆಶಾಕಿರಣ ಮೂಡಿಸಿದೆ.

ಸಾಮಾಜಿಕ, ರಾಜಕೀಯ ಕ್ಷೇತ್ರದ ಮಾದರಿಯಲ್ಲೇ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲೂ ಅನ್ವಯವಾಗು ವಂತೆ ಶೇ.7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವ ಬೆಂಗಳೂರು ಪಾದಯಾತ್ರೆ ಒಳಗೊಂಡಂತೆ ವಿವಿಧ ಹಂತದ ಹೋರಾಟ ನಡೆದಿವೆ. ಈಗ್ಗೂ ಹೋರಾಟ ಜಾರಿಯಲ್ಲಿದೆ. ಫೆಬ್ರವರಿಯಲ್ಲಿ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಶೇ.7.5 ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ತಾವು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ. ನಾನೇದರೂ ಸತ್ತರೆ … ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮುಂದೆಯೇ ಹೇಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಮೀಸಲಾತಿ ನೀಡುವ ಭರವಸೆ ನೀಡಿದ ನಂತರವೇ ವಾತಾವರಣ ತಿಳಿಯಾಗಿತ್ತು. ರಾಜ್ಯದ ಮತ್ತೂಂದು ಪ್ರಬಲ ಕುರುಬ ಸಮಾಜವನ್ನ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ನಡೆದ ಶ್ರೀನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ದಾವಣಗೆರೆ ಜಿಲ್ಲೆಯ ಮೂಲಕ ಮುಂದೆ ಸಾಗಿತು. ಸ್ವಾಮೀಜಿಯವರ ಪಾದಯಾತ್ರೆ ಜಿಲ್ಲೆಯಲ್ಲಿ ಹೊಸ ರೂಪ ಪಡೆದಿದ್ದು ಇತಿಹಾಸ.

ಗಮನಾರ್ಹ ಘಟನೆ

Advertisement

ಗ್ರಾಮಕ್ಕೆ ಸಮರ್ಪಕ ರಸ್ತೆ ನಿರ್ಮಾಣ ಆಗುವವರೆಗೆ ಮದುವೆ ಆಗುವುದಿಲ್ಲ ಎಂದು ಪ್ರಧಾನಿ, ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯುವ ಮೂಲಕ ದಾವಣಗೆರೆ ತಾಲೂಕಿನ ಎಚ್‌. ರಾಂಪುರ ಗ್ರಾಮದ ಶಿಕ್ಷಕಿ ಎಚ್‌.ಬಿಂದು ರಾಷ್ಟ್ರದ ಗಮನ ಸೆಳೆದರು. ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ವಿದ್ಯಾರ್ಥಿಗಳು ಶಿಕಕರಿಗೆ ಕೀಟಲೆ ಮಾಡಿದ್ದು ಸಹ ರಾಜ್ಯದ ಗಮನ ಸೆಳೆಯಿತು. ರಾಜ್ಯದ ಪ್ರಬಲ ಮಠಾಧೀಶರರ ವಿರುದ್ಧ ಆರೋಪಗಳು ಸಹ ಕೇಳಿ ಬಂದವು. ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ಸಂಯುಕ್ತ ರೈತ ಮೋರ್ಚಾದ ರಾಕೇಶ್‌ ಟಿಕಾಯತ್‌ ದಾವಣಗೆರೆಗೆ ಭೇಟಿ ನೀಡಿದರು. ರೈತರ, ಕಾರ್ಮಿಕರ, ವಿದ್ಯಾರ್ಥಿ ಸಮುದಾಯದ ಹೋರಾಟಗಳು ನಡೆದವು.

ರಾಜಕೀಯ ಸಂಚಲನ
ದಾವಣಗೆರೆ ರಾಜ್ಯ ರಾಜಕೀಯದಲ್ಲೂ ಸಂಚಲನಕ್ಕೆ ಕಾರಣವಾಯಿತು. ಸೆ.2ರಂದು ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಉದ್ಘಾಟನೆಗೆ ಆಗಮಿಸಿದ್ದ ಬಿಜೆಪಿ ಹಿರಿಯ ನೇತಾರ, ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ 2023ರ ವಿಧಾನ ಸಭಾ ಚುನಾವಣೆ ಎದುರಿಸಲಾಗುವುದು… ಎಂಬ ಹೇಳಿಕೆ ಬಿಜೆಪಿಯ ನಾಯಕತ್ವದ ಬಗ್ಗೆ ಹೊಸ ವ್ಯಾಖ್ಯಾನಕ್ಕೆ ಕಾರಣವಾಯಿತು. ಬಿಜೆಪಿ ಮುಖಂಡರಲ್ಲೇ ಕೆಲ ಚರ್ಚೆಗೂ ನಾಂದಿ ಹಾಡಿತು. ಅಂದಿನ ಹೇಳಿಕೆ ಈಗಲೂ ರಾಜ್ಯ ರಾಜಕೀಯದಲ್ಲಿ ಪ್ರತಿಧ್ವನಿಸುತ್ತಲೇ ಇದೆ. ದಶಕಗಳ ನಂತರ ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿಯಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಎಚ್ಚರಿಕೆಯ ಮಾತುಗಳು ಗಮನ ಸೆಳೆದವು. ಆವರ ಮಾತು ಹಾನಗಲ್‌ ಉಪ ಚುನಾವಣೆಯ ಫಲಿತಾಂಶದಲ್ಲಿ ಪ್ರತಿಫಲಿಸಿದವು. ದಾವಣಗೆರೆ ಜಿಲ್ಲೆಯವರಿಗೇ ಉಸ್ತುವಾರಿ.. ನೀಡಬೇಕು ಎಂಬ ಒತ್ತಾಯ 2021 ರಲ್ಲೂ ಒತ್ತಾಯವಾಗಿಯೇ ಉಳಿಯುವಂತಾಗಿದ್ದು ರಾಜಕೀಯ ವಿಶೇಷ.

ಕಾಡಿದ ವರುಣ

ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆ ಅತಿವೃಷ್ಟಿಗೂ ಕಾರಣವಾಯಿತು. ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಒಂದೇ ದಿನ ದಾಖಲೆ ಪ್ರಮಾಣದ ಮಳೆ ಸುರಿಯಿತು. ಮಳೆಯ ಅಬ್ಬರಕ್ಕೆ ಒಂದೇ ದಿನ ಜಿಲ್ಲೆಯಲ್ಲಿ ಕೋಟಿಗೂ ಅಧಿಕ ಮೊತ್ತದ ಆಸ್ತಿ, ಬೆಳೆ ಹಾನಿ ಉಂಟಾಯಿತು. ದಾವಣಗೆರೆ ತಾಲೂಕಿನ ನರಗನಹಳ್ಳಿ, ಚನ್ನಗಿರಿ ತಾಲೂಕಿನ ನಲ್ಲೂರು, ಚಿರಡೋಣಿಯಲ್ಲಿ ಮೂವರು ಮೃತಪಟ್ಟರು. ಆತಿಯಾದ ಮಳೆಯಿಂದ ತರಕಾರಿ ಹಾಳಾಗಿ ಬೆಲೆ ಗಗನಮುಖೀಯಾಗಿತ್ತು. ವರ್ಷದ ಕೊನೆಗೆ ಬೆಲೆ ಏರಿಕೆ ಬಿಸಿ ಹೆಚ್ಚಾಗಿಯೇ ಇದೆ.

ಅಪಘಾತ..ಆಘಾತ
ಡಿಸೆಂಬರ್‌ನಲ್ಲಿ ಜಿಲ್ಲಾ ಕೇಂದ್ರ ದಾವಣಗೆರೆ ಸರಣಿ ಅಪಘಾತಕ್ಕೆ ಸಾಕ್ಷಿಯಾಯಿತು. ಹೊನ್ನಾಳಿ ತಾಲೂಕಿನ ವಿವಿಧ ಭಾಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾಕಷ್ಟು ಸಂಖ್ಯೆ ಸಾವು-ನೋವು ಉಂಟಾಯಿತು. ಚನ್ನಗಿರಿ ತಾಲೂಕು ಸಹ ಹಲವಾರು ಅಪಘಾತಗಳಿಗೆ ಸಾಕ್ಷಿಯಾಯಿತು.

ಅಗಲಿದವರು
2021ರಲ್ಲಿ ಕಾರ್ಮಿಕ ನಾಯಕ ಎಚ್‌.ಕೆ. ರಾಮಚಂದ್ರಪ್ಪ, ರಾಜ್ಯಸಭೆ ಮಾಜಿ ಸದಸ್ಯ ಕೆ.ಆರ್‌. ಜಯದೇವಪ್ಪ, ಮಾಜಿ ಶಾಸಕ ಬಿ.ಜಿ. ಕೊಟ್ರಪ್ಪ ಮುಂತಾದವರು ಅಗಲಿದರು.

ಅಬ್ಬರಿಸಿದ ಕೊರೊನಾ
2020ರಿಂದ ಕಾಡುತ್ತಿರುವ ಮಹಾಮಾರಿ ಕೊರೊನಾದಿಂದ ದಾವಣಗೆರೆ ಜಿಲ್ಲೆ 2021ರಲ್ಲಿ ಅಕ್ಪರಶಃ ಅಬ್ಬರಿಸಿತು. ಎರಡನೇ ಅಲೆ ನಡೆಸಿದ ದಾಳಿಯಿಂದ ಗ್ರಾಮೀಣ ಭಾಗದ ಜನರು ತತ್ತರಿಸಿ ಹೋದರು. ಮೊದಲ ಅಲೆಯಲ್ಲಿ 264 ಜನರು ಸಾವನ್ನಪ್ಪಿದ್ದರೆ, ಎರಡನೇ ಅಲೆಯಲ್ಲಿ 340ಕ್ಕೂ ಹೆಚ್ಚು ಜನರು ಕೊರೊನಾಕ್ಕೆ ಬಲಿಯಾದರು. ಕೊರೊನಾದ ಅಬ್ಬರಕ್ಕೆ ಜನರು ನಲುಗಿ ಹೋದರು. ಜಿಲ್ಲೆಯಲ್ಲಿ ವರ್ಷಾಂತ್ಯದಲ್ಲಿ ಕೊರೊನಾ ಅಬ್ಬರತೆ ಕಡಿಮೆಯಾಗಿರುವುದು, ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಂಕಿಯಲ್ಲಿ ಇರುವುದು ತುಸು ಸಮಾಧಾನದ ವಿಷಯವಾದರೂ ಹೊಸ ರೂಪಾಂತರಿ ಒಮಿಕ್ರಾನ್‌.. ಭಯ ಜಿಲ್ಲೆಯ ಜನರನ್ನು ಕಾಡುತ್ತಿದೆ. ಕೊರೊನಾದ ತೀವ್ರತೆ ಕಡಿಮೆ ಮಾಡುವ ರಾಮಬಾಣ ಎಂದೇ ಗುರುತಿಸಲ್ಪಡುವ ‌ ಕೊರೊನಾ ಲಸಿಕೆಗೆ ಪ್ರಾರಂಭಿಕ ಹಂತದಲ್ಲಿ ಜನರು ಹಗಲಿರುಳು ಅಲೆದಾಡಬೇಕಾಯಿತು. ಲಸಿಕಾ ಕೇಂದ್ರಗಳ ಮುಂದೆ ದಿನಗಟಲೆ ಕಾಯುವ ವಾತಾವರ ‌ಣವೂ ಇತ್ತು. ಕೆಲವಾರು ಕಡೆ ಜನರು ಪ್ರತಿಭಟನೆ ಸಹ ನಡೆಸಬೇ ಕಾಯಿತು. ಕೊನೆಗೆ ಲಸಿಕಾಕರಣ ಚುರುಕುಗೊಂಡ ಹಿನ್ನಲೆಯಲ್ಲಿ ಈಗ ಲಸಿಕಗೆಗಾಗಿ ಪರದಾಟ ತಪ್ಪಿದೆ.

 ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next