Advertisement

ದಶಕದ ಒಡಲಲ್ಲಿ ನೂರಾರು ನೆನಪು

10:03 AM Jan 01, 2020 | sudhir |

2020ರ ಹೊಸ್ತಿಲಲ್ಲಿ ನಾವಿದ್ದೇವೆ. ಮುಂದಡಿ ಇಡುವ ಮುನ್ನ ಒಮ್ಮೆ ಹಿಂದಿರುಗಿ ನೋಡಿದಾಗ ಒಂದು ದಶಕದಲ್ಲಿ ಏನೆಲ್ಲಾ ನಡೆದುಹೋಯಿತು ಎಂದು ಅಚ್ಚರಿಯಾಗುತ್ತದೆ. 2010-2019ರ ವರೆಗಿನ ಪ್ರಮುಖ ಘಟನಾವಳಿಗಳಲ್ಲಿ ಆಯ್ದ ಕೆಲವು ಇಲ್ಲಿವೆ…

Advertisement

ಮೊದಲ ಐಪ್ಯಾಡ್‌
ಜಗತ್ತನ್ನು ತಮ್ಮ ಪರದೆಯೊಳಕ್ಕೆ ಸೆಳೆದುಕೊಂಡ ಐಪ್ಯಾಡ್‌ಗಳು ದಶಕಗಳಿಂದ ಇವೆಯೇನೋ ಎಂದು ನಮಗನ್ನಿಸುವಂತಾಗಿದೆ. ಆದರೆ, ಮೊದಲ ಐಪ್ಯಾಡ್‌ ಬಿಡುಗಡೆಯಾದದ್ದೇ 3 ಏಪ್ರಿಲ್‌ 2010ರಲ್ಲಿ. ಆ್ಯಪಲ್‌ ಕಂಪನಿಯ ಜನಕ, ಪ್ರಖ್ಯಾತ ಉದ್ಯಮಿ ಸ್ಟೀವ್‌ ಜಾಬ್ಸ್ ಇದನ್ನು ಲೋಕಾರ್ಪಣೆ ಮಾಡಿದ್ದರು. ಮರು ವರ್ಷವೇ, ಅಂದರೆ 2011ರಲ್ಲಿ ಸ್ಟೀವ್‌ ಜಾಬ್ಸ್ ನಿಧನರಾದರು. ಆದರೆ ಅವರ ಕನಸಿನ ಕೂಸಾದ ಐಪ್ಯಾಡ್‌ ಮಾತ್ರ ಬೆಳೆಯುತ್ತಲೇ ಸಾಗಿತು. ಐಪ್ಯಾಡ್‌ಗಳು ಈಗಿನ ಸ್ಮಾರ್ಟ್‌ ಫೋನ್‌ಗಳ ಬೆಳವಣಿಗೆಗೆ ಬಹಳ ಪ್ರೇರಣೆಯಾದವು ಎನ್ನುತ್ತಾರೆ ಟೆಕ್‌ ಲೋಕದ ಪರಿಣತರು. ಈ ಹತ್ತು ವರ್ಷಗಳಲ್ಲಿ ಜಗತ್ತಿನಾದ್ಯಂತ 36 ಕೋಟಿ ಐಪ್ಯಾಡ್‌ಗಳು ಮಾರಾಟವಾಗಿವೆ!

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಕಹಳೆ
2011 ಏಪ್ರಿಲ್‌ನಿಂದ‌ ಡಿಸೆಂಬರ್‌ವರೆಗೂ ದೇಶ ಅಕ್ಷರಶಃ ಅಣ್ಣಾ ಹಜಾರೆಯೆಂಬ ಅಜ್ಜನಿಗೆ ಮಾರುಹೋಗಿತ್ತು. ಜನಲೋಕಪಾಲ ಮಸೂದೆ ಮತ್ತು ಭ್ರಷ್ಟಾಚಾರ ವಿರೋಧಿ ಕಾಯ್ದೆ ತರಬೇಕು ಎಂದು ಹಜಾರೆಯವರ ನೇತೃತ್ವದಲ್ಲಿ ಆರಂಭವಾದ ಹೋರಾಟ ನೋಡನೋಡುತ್ತಿದ್ದಂತೆಯೇ ದೇಶಾದ್ಯಂತ ಹರಡಿತು. ಆದರೆ ತದನಂತರದ ವರ್ಷಗಳಲ್ಲಿ ಅಣ್ಣಾ ಹಜಾರೆ ಗುಂಪು ಇಬ್ಭಾಗವಾಯಿತು. ಅದರಲ್ಲಿ ಪ್ರಮುಖರಾಗಿದ್ದ ಕೇಜ್ರಿವಾಲ್‌, ಅಣ್ಣಾ ಹಜಾರೆ ವಿರೋಧದ ನಡುವೆಯೂ ಆಮ್‌ ಆದ್ಮಿ ಪಕ್ಷ ಸ್ಥಾಪಿಸಿಬಿಟ್ಟರು. ಅಣ್ಣಾ ಟೀಂನಲ್ಲಿದ್ದ ಪ್ರಶಾಂತ್‌ ಭೂಷಣ್‌, ಕುಮಾರ್‌ ವಿಶ್ವಾಸ್‌, ಯೋಗೇಂದ್ರ ಯಾದವ್‌ ಟೀಂ ಕೇಜ್ರಿವಾಲ್‌ನ ಭಾಗವಾದರು. ಒಟ್ಟಲ್ಲಿ ಕೇಜ್ರಿವಾಲ್‌ ಮತ್ತು ಆಪ್‌ನ ಬೆಳವಣಿಗೆಗೆ ಪರೋಕ್ಷವಾಗಿ ಈ ಆಂದೋಲನವೇ ಕಾರಣವಾಗಿದ್ದು ಸುಳ್ಳಲ್ಲ. ಅಲ್ಲದೇ, ಭ್ರಷ್ಟಾಚಾರ ಗ್ರಸ್ಥವಾಗಿದ್ದ ಯುಪಿಎ ಸೋಲಿಗೂ ಈ ಆಂದೋಲನ ಮುನ್ನುಡಿ ಬರೆಯಿತು.

ಗಡ್ಡಾಫಿಯ ಅಂತ್ಯ
2011ರ ಅಕ್ಟೋಬರ್‌ 20ರಂದು ಲಿಬಿಯಾದ ಪದಚ್ಯುತ ಸರ್ವಾಧಿಕಾರಿ ಮುಅಮ್ಮರ್‌ ಗಡ್ಡಾಫಿಯನ್ನು ಬಂಡುಕೋರರು ಕೊಂದುಹಾಕಿದರು. ಲಿಬಿಯಾವನ್ನು ನಾಲ್ಕು ದಶಕ ಆಳಿ, ಐಷಾರಾಮಿ ಬದುಕು ನಡೆಸಿದ್ದ ಗಡ್ಡಾಫಿ ಕೊನೆಯ ಸಮಯದಲ್ಲಿ ಡ್ರೈನೇಜ್‌ ಪೈಪ್‌ನಲ್ಲಿ ಅಡಗಿದ್ದ‌. ಚಿತ್ರಹಿಂಸೆ ಅನುಭವಿಸಿ ಸತ್ತ ಗಡ್ಡಾಫಿಯ ಅಂತಿಮ ಕ್ಷಣಗಳ ವೀಡಿಯೋ ವೈರಲ್‌ ಆಯಿತು. ಗಡ್ಡಾಫಿಯ ಈ ಅಂತ್ಯ ಜಾಗತಿಕ ಭೂರಾಜಕೀಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಬಂಡುಕೋರ ಗುಂಪುಗಳಿಗೆ ಅಮೆರಿಕ ಪರೋಕ್ಷವಾಗಿ ಮಾಡಿದ ಸಹಾಯವೂ ಟೀಕೆಗೆ ಒಳಗಾಯಿತು. ಲಿಬಿಯಾದಲ್ಲಿ ಶಾಂತಿ ನೆಲೆಸುವುದಕ್ಕಾಗಿ ಗಡ್ಡಾಫಿ ವಿರುದ್ಧ ಸಮರ ಸಾರಿದ್ದಾಗಿ ಅಮೆರಿಕ ವಾದಿಸುತ್ತಾ ಬಂದಿತಾದರೂ, ಲಿಬಿಯಾದಲ್ಲಿ ಪರಿಸ್ಥಿತಿ ಸುಧಾರಿಸುವ ಬದಲು ಈಗ ಮತ್ತಷ್ಟು ಹದಗೆಟ್ಟಿದೆ.

2012ರಲ್ಲಿ ವಿಶ್ವದ ಅಂತ್ಯ!
2012. ಇದೊಂದೇ ಸಂಖ್ಯೆ ಇಡೀ ವಿಶ್ವವನ್ನು ಬೆಚ್ಚಿಬೀಳಿಸಿತ್ತು. 2012ರ ಡಿಸೆಂಬರ್‌ 31ರಂದು ಪ್ರಳಯವಾಗಿ, ವಿಶ್ವನಾಶ ಖಚಿತ ಎಂಬ ಭಯ ಯಾವ ಮಟ್ಟಕ್ಕೆ ಹರಡಿತೆಂದರೆ, ಇದೊಂದು ಜಾಗತಿಕ ಕಳವಳದ ಪ್ರಕರಣವಾಯಿತು. ಮಾಯನ್‌ ಕ್ಯಾಲೆಂಡರ್‌ನಲ್ಲಿ ಈ ದಿನದಂದು ವಿಶ್ವದ ಅಂತ್ಯವಾಗುತ್ತದೆ ಎಂದು ಬರೆದಿದ್ದಾಗಿ ಹೇಳಲಾಗುತ್ತದೆ. ನಮ್ಮ ಸುದ್ದಿ ವಾಹಿನಿಗಳಂತೂ ಒಂದೆಡೆ “”ಇದೆಲ್ಲ ಸುಳ್ಳು ಸುದ್ದಿ. ಮೌಡ್ಯದ ಪರಮಾವಧಿ” ಎಂದು ಹೇಳುತ್ತಲೇ, ಇನ್ನೊಂದೆಡೆ “”ಹೇಗೆ ಪ್ರಪಂಚ ನಾಶವಾಗುತ್ತದೆ” ಎಂಬ ಬಗ್ಗೆ ಚಿತ್ರಣಗಳನ್ನು ಕಟ್ಟಿಕೊಟ್ಟು ಜನರನ್ನು ಭಯಪಡಿಸಲು ಪ್ರಯತ್ನಿಸಿದವು. ಇನ್ನು ಪ್ರಪಂಚ ನಾಶವಾಗುತ್ತದೆ ಎಂಬ ಪುಕಾರು ಜೋರಾಗಲು 2009ರಲ್ಲಿ ಬಂದ “2012′ ಎಂಬ ಸಿನೆಮಾ ಕೂಡ ಪ್ರಮುಖ ಕಾರಣ. ಮಾಯನ್‌ ಕ್ಯಾಲೆಂಡರ್‌ನ ಮಾತು ನಿಜವಾಗಿದ್ದರೆ, ಇಷ್ಟೊತ್ತಿಗೆ ಪ್ರಪಂಚ ಅಂತ್ಯವಾಗಿ ವರ್ಷಗಳೇ ಆಗಿರುತ್ತಿದ್ದವು!

Advertisement

ಐಸಿಸ್‌ನ ಮಹಾಕ್ರೌರ್ಯ
ಯಾವುದೇ ಉಗ್ರಸಂಘಟನೆಗೂ ಸಾಧ್ಯವಾಗದ ಮಟ್ಟಿಗೆ ಬೆಳೆದು ನಿಂತಿತು ಐಸಿಸ್‌ ಎಂಬ ಪಾಶವೀ ಉಗ್ರಸಂಘಟನೆ. ಮಧ್ಯಪ್ರಾಚ್ಯದಲ್ಲಿ ಲಕ್ಷಾಂತರ ಜನರ ಮಾರಣಹೋಮ, ಯಾಜಿದಿಗಳು ಸೇರಿದಂತೆ, ಅನೇಕ ಅನ್ಯ ಧರ್ಮೀಯರ ಶಿರಚ್ಛೇದ, ಪಾರಂಪರಿಕ ಕಟ್ಟಡಗಳ ವಿನಾಶ, ಲೈಂಗಿಕ ಗುಲಾಮಗಿರಿಯಂಥ ಕ್ರೂರ ವರ್ತನೆಗಳ ಮೂಲಕ ಬೆಚ್ಚಿಬೀಳಿಸಿದ್ದ ಐಸಿಸ್‌ ಉಗ್ರ ಸಂಘಟನೆ, ಸೋಷಿಯಲ್‌ ಮೀಡಿಯಾಗಳ ಬಳಕೆಯಿಂದ ಜಗದಗಲ ವ್ಯಾಪಿಸಿತು. ಆದರೆ ಈಗ ಐಸಿಸ್‌ ತನ್ನ ಮುಖ್ಯ ಕೇಂದ್ರಗಳಾಗಿದ್ದ ಇರಾಕ್‌, ಸಿರಿಯಾ, ಇರಾನ್‌ನಲ್ಲಿ ಅವಸಾನವಾಗಿದೆ. ಭಾರತದಲ್ಲೂ ಮೊಳಕೆಯೊಡೆಯಲು ಆರಂಭಿಸಿತ್ತಾದರೂ, ದೇಶದ ಗುಪ್ತಚರ ಮತ್ತು ಭದ್ರತಾ ಇಲಾಖೆ ಈ ಚಿಗುರನ್ನು ಮೊಳಕೆಯಲ್ಲೇ ಅಂತ್ಯಗೊಳಿಸಿವೆ. ಇದೇ ವರ್ಷ ಐಸಿಸ್‌ ಸ್ಥಾಪಕ ಬಗ್ಧಾದಿಯೂ ಅಮೆರಿಕನ್‌ ಕಾರ್ಯಾಚರಣೆಯಲ್ಲಿ ಛಿದ್ರವಾಗಿದ್ದಾನೆ.

ಭಾರತದ ಮಂಗಳಯಾನ
24 ಸೆಪ್ಟೆಂಬರ್‌ 2014! ಭಾರತಕ್ಕೆ ಮಂಗಳವಾರ್ತೆ ದೊರೆತ ದಿನವಿದು. ಭಾರತದ ಮಹತ್ವಾಕಾಂಕ್ಷಿ ಮಾರ್ಸ್‌ ಆರ್ಬಿಟರ್‌ ಮಿಷನ್‌(ಮಾಮ್‌)/ಮಂಗಳಯಾನ ಯಶಸ್ವಿಯಾಗಿ, ಇಡೀ ಪ್ರಪಂಚವೇ ಭಾರತದ ಸಾಧನೆಯನ್ನು ಬೆರಗಾಗಿ ನೋಡಿತು. 5 ನವೆಂಬರ್‌ 2013ರಲ್ಲಿ ಉಡಾವಣೆ ಮಾಡಲಾಗಿದ್ದ ಮಂಗಳಯಾನ ನೌಕೆಯು ಅಂಗಾರಕನ ಕಕ್ಷೆಯನ್ನು ಪ್ರವೇಶಿಸಿ ಇಸ್ರೋದ ಗರಿಮೆಯನ್ನು ಗಗನಕ್ಕೇರಿಸಿತು. ತನ್ಮೂಲಕ ಭಾರತ ಮಂಗಳ ಗ್ರಹವನ್ನು ಪ್ರವೇಶಿಸಿದ ನಾಲ್ಕನೇ ದೇಶವಾಯಿತು. ಕೇವಲ 450 ಕೋಟಿ ರೂಪಾಯಿಯಲ್ಲಿ ನಡೆದ ಈ ಯೋಜನೆ, ಭಾರತದ ವೈಜ್ಞಾನಿಕ ಸಾಮರ್ಥ್ಯದ ಅಗಾಧತೆಯನ್ನು ಪ್ರಪಂಚಕ್ಕೆ ಪರಿಚಯಿಸಿತು.

ನೋಟ್‌ಬಂದಿ, ಜಿಎಸ್‌ಟಿ
ಡಿಮಾನಿಟೈಸೇಷನ್‌. ಈ ದಶಕದ ಅತಿ ಚರ್ಚಿತ ಪದವಿದು. 2016ರ ನವೆಂಬರ್‌ 8ರಂದು ಘೋಷಣೆಯಾದ ನೋಟ್‌ಬಂದಿಯ ವಿಚಾರ ಈಗಲೂ ಚರ್ಚೆಯಾಗುತ್ತಲೇ ಇದೆ. ಅದರ ಪರಿಣಾಮ ಈಗಲೂ ಮುಂದುವರಿದಿದೆ. ಕಾಳಧನದ ವಿರುದ್ಧದ ಈ ಸಮರವು ವ್ಯಾಪಕ ಮೆಚ್ಚುಗೆಯನ್ನು, ಅಷ್ಟೇ ತೆಗಳಿಕೆಯನ್ನೂ ಎದುರಿಸಿತು. ಇದರಿಂದಾಗಿ ಮೋದಿ ಸರ್ಕಾರ ಉರುಳುವುದು ಖಚಿತ ಎಂದು ಪ್ರತಿಪಕ್ಷಗಳೆಲ್ಲ ಭಾವಿಸಿದವು, ಇದೇ ವಿಚಾರವನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದವು. ಆದರೆ ನೋಟ್‌ಬಂದಿ, ಬಿಜೆಪಿಯನ್ನು ಬಂಧಿಸಲಿಲ್ಲ. ಇನ್ನು ದೇಶದಲ್ಲಿದ್ದ ಹಲವು ರೀತಿಯ ತೆರಿಗೆ ಪದ್ಧತಿಗಳನ್ನು ಹಿಂದಕ್ಕೆ ತಳ್ಳಿ ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿಯಾದ ಜಿಎಸ್‌ಟಿಯನ್ನು ಮೋದಿ ಸರ್ಕಾರ 2017ರ ಜುಲೈ 1ರಂದು ಜಾರಿಗೆ ತಂದಿತು. ಜಮ್ಮು-ಕಾಶ್ಮೀರವು ಜುಲೈ 7ರಂದು ಜಿಎಸ್‌ಟಿಯನ್ನು ಅಳವಡಿಸಿಕೊಂಡಿತು. ತನ್ಮೂಲಕ ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿ ಅಸ್ತಿತ್ವಕ್ಕೆ ಬಂದಿತು.

ಕ್ರಾಂತಿಕಾರಿ ಕ್ಯಾಸ್ಟ್ರೋ ಯುಗಾಂತ್ಯ
ಕ್ಯೂಬಾ ಎಂದಾಕ್ಷಣ ನೆನಪಿಗೆ ಬರುವ ಹೆಸರೇ ಫಿಡೆಲ್‌ ಕ್ಯಾಸ್ಟ್ರೋ. ಕ್ಯಾಸ್ಟ್ರೋ 20ನೇ ಶತಮಾನದ ಪ್ರಖ್ಯಾತ ಕ್ರಾಂತಿಕಾರಿಗಳಲ್ಲಿ ನಿಸ್ಸಂಶಯವಾಗಿಯೂ ಪ್ರಮುಖರು. ಅದರಲ್ಲೂ ಎಡಚಿಂತನೆಯವರ ವಲಯದಲ್ಲಿ ಕ್ಯಾಸ್ಟ್ರೋ ಬಹಳ ಜನಪ್ರಿಯರಾದರು. ಆದರೆ ದಮನಿತರ ಪರ ದನಿಯೆತ್ತುತ್ತಾ ಕ್ಯೂಬಾದ ಚುಕ್ಕಾಣಿ ಹೊತ್ತಿದ್ದ ಕ್ಯಾಸ್ಟ್ರೋ ಕ್ರಮೇಣ ಸರ್ವಾಧಿಕಾರದತ್ತ ವಾಲಿದ್ದು ದುರಂತ. ಸುಧಾರಣೆಗಳ ಜತೆಜತೆಗೇ ಸ್ವತಂತ್ರ ದನಿಗಳನ್ನು ಹತ್ತಿಕ್ಕಿದರು. ಅವರ ಅರ್ಧ ಶತಮಾನದ ಆಡಳಿತಾವಧಿಯಲ್ಲಿ 15,000ಕ್ಕೂ ಹೆಚ್ಚು ರಾಜಕೀಯವಿರೋಧಿಗಳನ್ನು ಬಂಧಿಸಲಾಯಿತು. ಕ್ಯಾಸ್ಟ್ರೋ 2008ರಲ್ಲಿ ಕ್ಯೂಬಾದ ಅಧ್ಯಕ್ಷ ಪದವಿಯನ್ನು ತಮ್ಮ ಸಹೋದರ ರೌಲ್‌ ಕ್ಯಾಸ್ಟ್ರೋಗೆ ವಹಿಸಿದ್ದರು. 2016 ನವೆಂಬರ್‌ 26ರಂದುತಮ್ಮ 90ನೇ ವಯಸ್ಸಲ್ಲಿ ಫಿಡೆಲ್‌ ಕ್ಯಾಸ್ಟ್ರೋ ಮೃತಪಟ್ಟರು. ಕ್ಯಾಸ್ಟ್ರೋಗೆ ಅಂತಿಮ ನಮನ ಸಲ್ಲಿಸಲು ಭಾರತದಿಂದ ರಾಜನಾಥ್‌ ಸಿಂಗ್‌ ನೇತೃತ್ವದ ತಂಡ ಕ್ಯೂಬಾಕ್ಕೆ ತೆರಳಿತ್ತು.

ಪಾಕ್‌ನ ಎದೆ ನಡುಗಿಸಿದ ಸರ್ಜಿಕಲ್‌ ಸ್ಟ್ರೈಕ್‌!
29 ನವೆಂಬರ್‌ 2016. ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿ ಮಲಗಿದ್ದ ಸೈನಿಕರನ್ನು ಹತ್ಯೆಗೈದು ಅಟ್ಟಹಾಸ ಮೆರೆದಿದ್ದ ಪಾಕಿಸ್ತಾನದ ಉಗ್ರರಿಗೆ ಮತ್ತು ಪಾಕಿಸ್ತಾನಕ್ಕೆ ಭಾರತೀಯ ಸೇನೆಯು ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ನೆನಪಿನಲ್ಲುಳಿಯುವಂತೆ ಬರೆ ಹಾಕಿದ ದಿನವಿದು. ಭಾರತೀಯ ಸೇನೆ ಪಾಕ್‌ ಬೆಂಬಲಿತ ಉಗ್ರರ ಕ್ಯಾಂಪಿಗೆ ನುಗ್ಗಿ 38 ಭಯೋತ್ಪಾದಕರನ್ನು ಮತ್ತು ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿತು. ಅಲ್ಲಿಯವರೆಗೂ ಇಂಥ ಕಾರ್ಯಾಚರಣೆಗಳು ಅಮೆರಿಕಕ್ಕೆ ಮಾತ್ರ ಸಾಧ್ಯ ಎಂಬ ಭ್ರಮೆಯಲ್ಲಿದ್ದ ಪಾಕಿಸ್ತಾನ ಅಕ್ಷರಶಃ ನಡುಗಿಹೋಯಿತು. ಸರ್ಜಿಕಲ್‌ ಸ್ಟ್ರೈಕ್‌ ಎಂಬ ಪದ ದೇಶಾದ್ಯಂತ ಪ್ರಖ್ಯಾತವಾಗಲು ಈ ಕಾರ್ಯಾಚರಣೆ ಕಾರಣವಾಯಿತು. ಇನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಬಾಲಾಕೋಟ್‌ನ ಮೇಲೆ ಬಾಂಬಿನ ಮಳೆಗರೆದು ಎರಡನೇ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತು.

ಸೆಂಟಿನಲ್‌ ಜನರಿಗೆ ಬಲಿಯಾದ ಪ್ರಚಾರಕ
ಅಂಡಮಾನ್‌ ಮತ್ತು ನಿಕೋಬಾರ್‌ ಬಳಿಯ ನಾರ್ತ್‌ ಸೆಂಟಿನೆಲ್‌ ದ್ವೀಪದಲ್ಲಿರುವ ಸಂರಕ್ಷಿತ ಬುಡಕಟ್ಟು ಜನಾಂಗದವರ ಮನವೊಲಿಸಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯೋಚಿಸಿದ ಅಮೆರಿಕದ 27 ವರ್ಷದ ಕ್ರೈಸ್ತ ಮಿಷನರಿ ಜಾನ್‌ ಅಲನ್‌ ಚೌ ಬುಡಕಟ್ಟು ಜನರ ಬಾಣಕ್ಕೆ ಬಲಿಯಾದರು. 2018ರ ನ. 16ರಂದು ನಡೆದ ಈ ಘಟನೆ ಪ್ರಪಂಚದಾದ್ಯಂತ ಸುದ್ದಿಯಾಯಿತು. ಈ ದ್ವೀಪವು ಭಾರತಕ್ಕೆ ಸೇರಿದೆ. ಸೆಂಟಿನಲ್‌ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದವರೂ ಜೈಲು ಸೇರಬೇಕಾಗುತ್ತದೆ. ಆಧುನಿಕ ಜಗತ್ತಿನ ಸಂಪರ್ಕವನ್ನು ಪ್ರತಿರೋಧಿಸುವ ಸೆಂಟಿನಲ್‌ ಬುಡಕಟ್ಟು ಜನರಿಗೆ ನಮ್ಮ ಕಾನೂನುಗಳು ಅನ್ವಯಿಸುವುದಿಲ್ಲ. ವೈಜ್ಞಾನಿಕ ವಲಯದ ಪ್ರಕಾರ, ಆಧುನಿಕ ಜಗತ್ತಿನ ಒಂದು ಸಾಮಾನ್ಯ ಜ್ವರವೂ ಕೂಡ ಈ ಬುಡಕಟ್ಟು ಸಮುದಾಯವನ್ನೇ ನಾಶ ಮಾಡಬಲ್ಲದು.

ಅಬ್‌ ಕೀ ಬಾರ್‌!
2014ರ ಲೋಕಸಭಾ ಚುನಾವಣೆಯ ನಂತರ ದೇಶದ ರಾಜಕೀಯ ದೃಶ್ಯವೇ ಸಂಪೂರ್ಣ ಬದಲಾಗಿದೆ. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಷ್ಟ್ರಮಟ್ಟದ ಅಖಾಡಕ್ಕೆ ಧುಮುಕಿ, ಅಬ್‌ ಕೀ ಬಾರ್‌ ಮೋದಿ ಸರ್ಕಾರ, ಹರ್‌ ಹರ್‌ ಮೋದಿ ಘರ್‌ ಘರ್‌ ಮೋದಿ, ಸಬ್‌ ಕಾ ಸಾಥ್‌ ಸಬ್‌ಕಾ ವಿಕಾಸ್‌ ಎಂಬ ಘೋಷಣೆಗಳೊಂದಿಗೆ ಹಾಗೂ ಚಾಯ್‌ ಪೇ ಚರ್ಚಾದಂಥ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಕಾಂಗ್ರೆಸ್‌ ವಿರುದ್ಧ ಸಮರ ಸಾರಿ ಅಧಿಕಾರಕ್ಕೇರಿದರು. ಈ ಘೋಷವಾಕ್ಯಗಳೆಲ್ಲ ಮನೆಮಾತಾದವು. ಗಮನಾರ್ಹ ಸಂಗತಿಯೆಂದರೆ, ಮೋದಿ ನೇತೃತ್ವದ ಬಿಜೆಪಿ ಸೋಷಿಯಲ್‌ ಮೀಡಿಯಾವನ್ನು ಅತ್ಯಂತ ಪ್ರಬಲವಾಗಿ ಬಳಸಿಕೊಂಡ ರೀತಿ. ಸೋಷಿಯಲ್‌ ಮೀಡಿಯಾದ ಶಕ್ತಿ ಎಂಥದ್ದು ಎಂದು ದೇಶದ ಉಳಿದ ರಾಜಕೀಯ ಪಕ್ಷಗಳಿಗೆ ಮತ್ತು ಜನರಿಗೆ ಅರ್ಥವಾದ ವರ್ಷವದು.

Advertisement

Udayavani is now on Telegram. Click here to join our channel and stay updated with the latest news.

Next