Advertisement

ನಾಳೆಯಿಂದ “2 ಎಕ್ರೆ’ಯೊಳಗಿನ ಸಂಜೀವನ ಜೀವನ !

11:02 PM Jan 08, 2020 | mahesh |

ಒಂದೂರಿನ 2 ಎಕ್ರೆ ಜಾಗದಲ್ಲಿ ಒಬ್ಬ ಸಂಜೀವಣ್ಣ ಎಂಬವರಿದ್ದಾರೆ. ಅದೇ ಊರಲ್ಲಿ ಮನೆ ಮನೆಗೆ ಬಟ್ಟೆ ಮಾರುವ ಇನ್ನೊಬ್ಬ ಸಂಜೀವ ಎಂಬವರೂ ಇದ್ದಾರೆ. ಎರಡು ಸಂಜೀವರು ಬೇರೆ ಬೇರೆ ಅನಾರೋಗ್ಯದ ಕಾರಣದಿಂದ ಅದೇ ಊರಿನ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಇಬ್ಬರು ಸಂಜೀವರ ದಾಖಲಾತಿಯ ಫೈಲ್‌ ಅದಲು-ಬದಲಾಗುತ್ತದೆ. ಅಲ್ಲಿಂದ ಅನಂತರ ಆಗುವ ಎಡವಟ್ಟುಗಳೇ 2 ಎಕ್ರೆ!

Advertisement

“2 ಎಕ್ರೆ’ ಹೆಸರು ಕೇಳುವಾಗ ಇದು ಭೂಮಿಯ ಬಗ್ಗೆ ಅನಿಸಬಹುದು. ಆದರೆ, ಇಲ್ಲಿ ಕಥೆ ಆರಂಭ ಹಾಗೂ ಮುಕ್ತಾಯ ಮಾತ್ರ 2 ಎಕ್ರೆ ಜಾಗದಲ್ಲಿ. ಉಳಿದಂತೆ ಇಲ್ಲಿ ಅನೇಕ ಸಂಗತಿಗಳಿವೆ. ನವೀನ್‌ ಡಿ. ಪಡೀಲ್‌ – ವಿಸ್ಮಯ ವಿನಾಯಕ್‌ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ ಆಸ್ತಿ ಸಿಕ್ಕಿರುತ್ತದೆ. ಅದನ್ನು ಡೀಲ್‌ ಮಾಡುವ ಹಾಸ್ಯ ಕಥಾನಕವೇ “2 ಎಕ್ರೆ’ ಎಂದೂ ಹೇಳಲಾಗುತ್ತಿದೆ. ಒನ್‌ಲೈನ್‌ ಸಿನೆಮಾ ಲಾಂಛನದಲ್ಲಿ ಸಂದೇಶ್‌ ರಾಜ್‌ ಬಂಗೇರ, ರೋಹನ್‌ ಕೋಡಿಕಲ್‌ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ ನಿರ್ದೇಶನದ “2 ಎಕ್ರೆ’ ಜ. 10ರಿಂದ ಕರಾವಳಿಯಾದ್ಯಂತ ಏಕಕಾಲದಲ್ಲಿ ತೆರೆಕಾಣಲಿದೆ.

ಈಗಾಗಲೇ ಇದರ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. “ಜಾಗೆ ರಡ್ಡ್ ಎಕ್ಕರೆ… ಬೈದೆರ್‌ ಲಪ್ಪೆರೆ… ಜಾಗೆದಕುಲು ಬನ್ನಾಗ ಮಾತ ಒತ್ತರೆ’ ಎಂಬ ಟೈಟಲ್‌ ಸಾಂಗ್‌ ಕ್ಲಿಕ್‌ ಆಗಿದೆ. ಶಶಿರಾಜ್‌ ರಾವ್‌ ಕಾವೂರು ಬರೆದಿರುವ “ಪಗೆಲ್‌ ಕರೀಂಡ್‌… ಮುಗಲ್‌ ಕಬೀಂಡ್‌..’ ಹಾಗೂ “ಇನಿ ದಾನೆ ಕುಸ್ಕೊಂದುಂಡು’ ಹಾಡುಗಳು ಕೂಡ ಗಮನ ಸೆಳೆದಿದೆ. ಮೊದಲ ಬಾರಿಗೆ ಪೃಥ್ವಿ ಅಂಬರ್‌ ಈ ಸಿನೆಮಾದಲ್ಲಿ ಹಾಡಿದ್ದಾರೆ. ದೀಪಕ್‌ ಕೋಡಿಕಲ್‌ ಕೂಡ ಸ್ವರ ನೀಡಿದ್ದಾರೆ. ಕಿಶೋರ್‌ ಕುಮಾರ್‌ ಶೆಟ್ಟಿ ಸಂಗೀತವಿದೆ.

“2 ಎಕ್ರೆ’ಯಲ್ಲಿ ಯಾರು… ಏನು?
ಅರವಿಂದ ಬೋಳಾರ್‌, ಶ್ರೀಪತಿ ಇಬ್ಬರೂ ಸಂಜೀವನ ಪಾತ್ರದಲ್ಲಿದ್ದಾರೆ. ನವೀನ್‌ ಡಿ. ಪಡೀಲ್‌, ವಿಸ್ಮಯ ವಿನಾಯಕ್‌ ಅಣ್ಣ ತಮ್ಮ. ಪೃಥ್ವಿ ಅಂಬರ್‌, ನಿರೀಕ್ಷಾ ಶೆಟ್ಟಿ ಹೀರೋ-ಹೀರೋಯಿನ್‌. ಪ್ರಕಾಶ್‌ ತೂಮಿನಾಡ್‌ 2 ಎಕ್ರೆಯ ಕೆಲಸದ ಆಳು, ಉಮೇಶ್‌ ಮಿಜಾರ್‌ ಆಸ್ಪತ್ರೆಯ ವಾರ್ಡನ್‌, ಮಂಜು ರೈ ಮುಳೂರು ಸುಪಾರಿ ಕಿಲ್ಲರ್‌. ಮೈಮ್‌ ರಾಮ್‌ದಾಸ್‌, ದೀಪಕ್‌ ರೈ ಸಂಜೀವನ ಪ್ರಾಣ ಸ್ನೇಹಿತರು. ರೂಪಾ ವರ್ಕಾಡಿ ಸಂಜೀವನ ಹೆಂಡತಿ. ಶ್ರದ್ಧಾ ಸಾಲ್ಯಾನ್‌ ಕೂಡ ಇದೇ ಪಾತ್ರ. ರವಿ ರಾಮಕುಂಜ ಆಸ್ಪತ್ರೆಯ ಸೆಕ್ಯುರಿಟಿ, ಅನಿಶಾ ಶರತ್‌ ನರ್ಸ್‌ ಭಗ್ನ ಪ್ರೇಮಿಗಳು, ಸುರೇಶ್‌ ಮಂಜೇಶ್ವರ ಡಾಕ್ಟರ್‌. ಉಳಿದಂತೆ ಶಬರೀಶ್‌ ಕಬ್ಬಿನಾಳೆ, ಯತೀಶ್‌ ಪಸೋಡಿ, ಆರ್‌.ಜೆ. ಅರ್ಪಿತ್‌, ದೀಕ್ಷಿತ್‌ ಕೋಟ್ಯಾನ್‌, ಪ್ರದೀಪ್‌ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ದೀಪಕ್‌ ರಾಜ್‌ ಶೆಟ್ಟಿ, ಸೂರಜ್‌ ಶೆಟ್ಟಿ, ಪ್ರಶಾಂತ್‌ ಸಿ.ಕೆ. ಹಾಗೂ ಶ್ರೀನಿವಾಸ ಆಸ್ಪತ್ರೆಯ ವೈದ್ಯರು ಕಾಣಿಸಿಕೊಂಡಿದ್ದಾರೆ.

2 ಎಕ್ರೆಯಲ್ಲಿ ವಿಶೇಷವೆಂದರೆ ಸಾಕಷ್ಟು “2′ ಇದೆ. 2 ಗಂಟೆಯ, 2 ಸಂಜೀವನ, 2 ಮಕ್ಕಳ ಗಲಾಟೆಯ, 2 ಹೆಂಡತಿಯ, 2 ಕಥೆಯ, ನಿರ್ದೇಶಕ-ನಿರ್ಮಾಪಕರ 2ನೇ ಸಿನೆಮಾ ಇದಾಗಿದೆ. ಸಿದ್ದು ಜಿ.ಎಸ್‌. ಛಾಯಾಗ್ರಹಣ. ಕಿಶೋರ್‌ ಶೆಟ್ಟಿ ಸಂಗೀತ, ಸುನದ್‌ ಗೌತಮ್‌ ಹಿನ್ನೆಲೆ ಸಂಗೀತ, ರಾಹುಲ್‌ ವಶಿಷ್ಠ ಸಂಕಲನದಲ್ಲಿ ಕೈಜೋಡಿಸಿದ್ದಾರೆ. ಸುರೇಶ್‌ ನಾಯಕ್‌, ಮಹೇಶ್‌ , ಕಿರಣ್‌ ಶೆಟ್ಟಿ ಸಹಕರಿಸಿದ್ದಾರೆ.

Advertisement

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next