Advertisement

2 ದೋಣಿ ಅವಘಡ: 21 ಮಂದಿಯ ರಕ್ಷಣೆ

12:35 AM Sep 15, 2019 | Team Udayavani |

ಮಂಗಳೂರು/ಕಾಪು: ಕಾಪು ಮತ್ತು ಉಚ್ಚಿಲ ಸಮೀಪ ಸಮುದ್ರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಮೀನುಗಾರಿಕಾ ದೋಣಿ ಮುಳುಗಡೆ ಪ್ರಕರಣಗಳಲ್ಲಿ 21 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

Advertisement

ಬಶೀರ್‌ ದಾವೂದ್‌ ನೆಕ್ಕಿಲಾಡಿ ಅವರಿಗೆ ಸೇರಿದ “ಎಸ್‌.ಎಂ. ಫಿಶರೀಸ್‌’ ಬೋಟ್‌ ಶುಕ್ರವಾರ ಬೆಳಗ್ಗೆ ಮಂಗಳೂರು ಹಳೆ ಬಂದರಿನಿಂದ ಹೊರಟು ಮೀನುಗಾರಿಕೆಗೆ ಹೊರಟಿದ್ದು, ಅಪರಾಹ್ನ 3.30ರ ವೇಳೆಗೆ ಕಾಪು ಸಮೀಪ ತಲುಪಿದಾಗ ಆಕಸ್ಮಿಕವಾಗಿ ದೋಣಿಯ ಒಳಗೆ ನೀರು ನುಗ್ಗಿತು. ಅದರಲ್ಲಿದ್ದ 9 ಮೀನುಗಾರರು ಸಮೀಪದ ಇನ್ನೊಂದು ದೋಣಿಯವರ ನೆರವು ಪಡೆದು ಅಪಾಯದಿಂದ ಪಾರಾದರು.

ಎಸ್‌.ಎಂ. ಫಿಶರೀಸ್‌ ಬೋಟ್‌ ನೀರಿನಲ್ಲಿ ಮುಳುಗಿದೆ ಎಂದು ಮಾಲಕ ಬಶೀರ್‌ ದಾವೂದ್‌ ನೆಕ್ಕಿಲಾಡಿ ಅವರು ಮಂಗಳೂರು ಟ್ರಾಲ್‌ ಬೋಟ್‌ ಯೂನಿಯನ್‌ಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 30 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಇನ್ನೊಂದು ಪ್ರಕರಣ
ಕಾಪು: ಉಚ್ಚಿಲದ ಅಶೋಕ್‌ ಪುತ್ರನ್‌ ಅವರಿಗೆ ಸೇರಿದ್ದ ಕರಿಯ ಜೋಡಿ ಹೆಸರಿನ ದೋಣಿ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಅಪಘಾತಕ್ಕೀಡಾಯಿತು. ಅದರಲ್ಲಿದ್ದ 12 ಮೀನುಗಾರರನ್ನು ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಶಿವಪ್ರಸಾದ್‌ ಬೋಟ್‌ನವರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ದೋಣಿಯನ್ನು ಮಲ್ಪೆ ಬಂದರಿಗೆ ಕೊಂಡೊಯ್ಯಲಾಗಿದೆ.

ಹಿಂದಿನ ದಿನವೂ ಅಪಘಾತ
ಗುರುವಾರ ಕಂತಲೆ ಬಲೆಯ ಮೀನುಗಾರಿಕೆಗೆ ತೆರಳಿದ್ದ ಐತಪ್ಪ ಸುವರ್ಣ ಅವರಿಗೆ ಸೇರಿದ್ದ ಮೀನುಗಾರಿಕಾ ದೋಣಿ ದಡಕ್ಕೆ ವಾಪಾಸು ಬರುತ್ತಿರುವಾಗ ಅಪಘಾತಕ್ಕೀಡಾಗಿದ್ದು ದೋಣಿಯಲ್ಲಿದ್ದ ಮೀನು ಸಮುದ್ರ ಪಾಲಾಗಿದೆ. ಆದರೆ ಯಾವುದೇ ಅಪಾಯವುಂಟಾಗಿಲ್ಲ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next