Advertisement

ಮೆಸ್ಕಾಂ ಕಾಪು ಉಪವಿಭಾಗ ವ್ಯಾಪ್ತಿಗೆ 2.12 ಕೋ. ರೂ. ಮಂಜೂರು: ನರಸಿಂಹ ಪಂಡಿತ್‌

11:26 PM Oct 11, 2019 | Sriram |

ಕಾಪು: ಮೆಸ್ಕಾಂ ಕಾಪು ಉಪವಿಭಾಗ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್‌ ಮಾರ್ಗಗಳ ಜೋಡಣೆ, ತಂತಿ ಬದಲಾವಣೆ, ತಂತಿ ಅಳವಡಿಕೆ ಮತ್ತು ಹೊಸ ಟ್ರಾನ್ಸ್‌ಫಾರ್ಮರ್‌ ಅಳವಡಿಕೆಗೆ 2.12 ಕೋ. ರೂ. ಮಂಜೂರಾಗಿದೆ. ಈ ಅನುದಾನವನ್ನು ಬಳಸಿಕೊಂಡು ಜನರ ಅಗತ್ಯತೆಗೆ ಅನುಗುಣವಾಗಿ ಟೆಂಡರ್‌ ಕರೆದು ಹಂತ ಹಂತವಾಗಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಮೆಸ್ಕಾಂ ಉಡುಪಿ ವಿಭಾಗದ ಅಧೀಕ್ಷಕ ಎಂಜಿನಿಯರ್‌ ನರಸಿಂಹ ಪಂಡಿತ್‌ ಹೇಳಿದರು.

Advertisement

ಮೆಸ್ಕಾಂ ಕಾಪು ಉಪ ವಿಭಾಗದ ವತಿಯಿಂದ ಶುಕ್ರವಾರ ಕಾಪು ಜೇಸಿ ಭವನದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಜನರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಪಡುಬಿದ್ರಿ ವ್ಯಾಪ್ತಿಯಲ್ಲಿ ಹಳೆ ವಿದ್ಯುತ್‌ ತಂತಿ ಬದಲಾಯಿಸಲು 1.30 ಕೋಟಿ ರೂ., ಹೆಜಮಾಡಿ ವ್ಯಾಪ್ತಿಯಲ್ಲಿ ಹೊಸದಾಗಿ ತಂತಿ ಅಳವಡಿಸಲು 28 ಲಕ್ಷ ರೂ., ಉದ್ಯಾವರ ಹೊಳೆ ಪ್ರದೇಶದಲ್ಲಿ ವಿದ್ಯುತ್‌ ತಂತಿ ಹಾಯಿಸುವ ಕಾರ್ಯಕ್ಕೆ 24 ಲಕ್ಷ ರೂ. ಹಾಗೂ ಎಲ್ಲ ಶಾಖಾ ವ್ಯಾಪ್ತಿಗಳಲ್ಲಿ ಹಳೆ ವಿದ್ಯುತ್‌ ತಂತಿ ಬದಲಾಯಿಸಲು 30 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.

ಮೆಸ್ಕಾಂ ಕಚೇರಿಗೆ ಜಾಗ ಕಲ್ಪಿಸಿ
ಕಾಪು ಮೆಸ್ಕಾಂ ಉಪ ವಿಭಾಗಕ್ಕೆ ಸ್ವಂತ ಕಚೇರಿ ಹಾಗೂ 33 ಕೆ.ವಿ. ವಿದ್ಯುತ್‌ ಉಪಕೇಂದ್ರ ನಿರ್ಮಾಣಕ್ಕಾಗಿ ಜಮೀನು ಒದಗಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಂದ ಹಿಡಿದು ಮುಖ್ಯಮಂತ್ರಿಗಳವರೆಗೂ ಮನವಿಯ ಪಟ್ಟಿ ಸಲ್ಲಿಸಿದ್ದೇವೆ. ಸ್ವಂತ ಕಚೇರಿ ಮತ್ತು ಉಪ ಕೇಂದ್ರ ನಿರ್ಮಾಣಕ್ಕಾಗಿ ಅನುದಾನವನ್ನೂ ಕಾಯ್ದಿರಿಸಲಾಗಿದೆ. ಜಮೀನು ಲಭ್ಯವಾದಲ್ಲಿ ತಕ್ಷಣ ಯೋಜನೆ ಕಾರ್ಯಗತವಾಗಲಿದೆ. ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಹಕರಿಸುವಂತೆ ಮನವಿ ಮಾಡಿದರು.

ಪಡುಬಿದ್ರಿಗೆ ಹೊಸ ಕಟ್ಟಡ
ಪಡುಬಿದ್ರಿಯಲ್ಲಿ ನಮ್ಮದೇ ಆದ ಸ್ವಂತ ಜಮೀನು ಇದ್ದರೂ, ಕೊಳಚೆ ನೀರಿನ ಸಮಸ್ಯೆಯಿಂದಾಗಿ ಕಟ್ಟಡ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಅಲ್ಲಿಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕೊಳಚೆ ಮತ್ತು ತ್ಯಾಜ್ಯ ಸಮಸ್ಯೆಗೆ ಮುಕ್ತಿ ದೊರೆತಲ್ಲಿ ಶೀಘ್ರ ಹೊಸ ಕಟ್ಟಡ ರಚನೆಯಾಗಲಿದೆ ಎಂದರು.

Advertisement

ಮುದರಂಗಡಿಯಲ್ಲಿವೆ ಹಲವು ಸಮಸ್ಯೆಗಳು
ತಾ.ಪಂ. ಸದಸ್ಯ ಮೈಕಲ್‌ ರಮೇಶ್‌ ಡಿ’ಸೋಜಾ ಮಾತನಾಡಿ, ಮುದರಂಗಡಿ ಪೇಟೆಯಲ್ಲಿರುವ ಟ್ರಾನ್ಸ್‌ಫಾರ್ಮರ್‌ ರಸ್ತೆ ಕಾಂಕ್ರೀಟೀಕರಣದ ವೇಳೆ ಸ್ಥಳಾಂತರವಾಗದೇ ಸಮಸ್ಯೆ ಉಂಟಾಗಿದೆ. ಈ ವಿಷಯವನ್ನು ಒಂದು ವರ್ಷದ ಹಿಂದೆಯೇ ಗಮನಕ್ಕೆ ತರಲಾಗಿದ್ದರೂ ಇನ್ನೂ ಸ್ಥಳಾಂತರಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಪಿಲಾರು ಗ್ರಾಮದ ವಿದ್ಯಾನಗರದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಹಾಗೂ ಸಾಂತೂರಿನ ನೀರ್ಚಾಲುವಿನಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ರಸ್ತೆಗೆ ವಾಲಿ ಸಮಸ್ಯೆಗಳಾಗುತ್ತಿವೆ. ಮೆಸ್ಕಾಂ ಸಿಬ್ಬಂದಿಗಳ ರಕ್ಷಣೆಗೆ ಆದ್ಯತೆ ಮತ್ತು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಗಸ್ತು ವಾಹನ ಒದಗಿಸಬೇಕು. ಇದಕ್ಕೆ ಮೆಸ್ಕಾಂ ಶೇ. 60ರಷ್ಟು ಅನುದಾನ ನೀಡಿದರೆ ಶೇ. 40 ರಷ್ಟು ಸಹಾಯಧನವನ್ನು ತಾವೇ ಮುತುವರ್ಜಿ ವಹಿಸಿ ಭರಿಸುವುದಾಗಿ ಭರವಸೆ ನೀಡಿದರು.

ತೆಂಕ ಎರ್ಮಾಳಿನ ವಿದ್ಯುತ್‌ ಸಮಸ್ಯೆ ಪರಿಹರಿಸಲು ಆಗ್ರಹ
ತೆಂಕ ಎರ್ಮಾಳ್‌ ಕೆನರಾ ಬ್ಯಾಂಕ್‌ ಬಳಿ ಹಾಗೂ ವಿಟuಲ ಪೂಜಾರಿ ಮನೆ ಬಳಿ ವಿದ್ಯುತ್‌ ತಂತಿಗಳು ಕೈಗೆಟಕುತ್ತಿದ್ದು ಅನಾಹುತಕ್ಕೆ ಆಹ್ವಾನ ನೀಡುತ್ತಿವೆ. ಯುಪಿಸಿಎಲ್‌ ನೀರು ಶುದ್ಧೀಕರಣ ಘಟಕ ವ್ಯಾಪ್ತಿಯಲ್ಲಿ ಲೋ ವೋಲ್ಟೆàಜ್‌ ಹಾಗೂ ಪದೇ ಪದೇ ವಿದ್ಯುತ್‌ ಕಡಿತದಿಂದ ಸಮಸ್ಯೆಯಾಗುತ್ತಿದೆ. ಈ ಭಾಗದಲ್ಲಿರುವ ತುಕ್ಕು ಹಿಡಿದಿರುವ ತಂತಿಗಳನ್ನು ಬದಲಾಯಿಸಬೇಕು ಎಂದು ತೆಂಕ ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಹರೀಶ್‌ ಮತ್ತು ತಾ.ಪಂ. ಸದಸ್ಯ ಕೇಶವ ಮೊಯ್ಲಿ ಅಹವಾಲು ಸಲ್ಲಿಸಿದರು.

ಬಂಟಕಲ್ಲು ಕೋಡುಗುಡ್ಡೆ ಬಳಿ ಟ್ರಾನ್ಸ್‌
ಫಾರ್ಮರ್‌ ಅಳವಡಿಸಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿನ 8 ಕಬ್ಬಿಣ ಕಂಬಗಳ ಬದಲಾವಣೆ, ಎಸ್‌ಸಿ-ಎಸ್‌ಟಿ ಮನೆಗಳ ಮೇಲೆ ವಿದ್ಯುತ್‌ ತಂತಿಗಳಿಂದಾಗುವ ತೊಂದರೆ, ಅರಸಿಕಟ್ಟೆ ಬಳಿ ಟ್ರಾನ್ಸ್‌ಫಾರ್ಮರ್‌ ಸಂಪರ್ಕಿಸುವ ತಂತಿಗಳು ಜೋತುಬಿದ್ದಿರುವ, ಕಟಾವು ಮಾಡಿದ ಮರದ ಗೆಲ್ಲುಗಳನ್ನು ತೆರವು ಮಾಡದಿರುವ ಬಗ್ಗೆ ಗ್ರಾ.ಪಂ. ಸದಸ್ಯ ಕೆ.ಆರ್‌. ಪಾಟ್ಕರ್‌ ದೂರು ನೀಡಿದರು.

ಪಡುಬಿದ್ರಿ ಭಾಗದಲ್ಲಿ ತುಕ್ಕು ಹಿಡಿದ ತಂತಿ ಗಳ ಬದಲಾವಣೆ, ಮೆಸ್ಕಾಂ ಸಿಬಂದಿ ದಕ್ಷ ಕಾರ್ಯನಿರ್ವಹಣೆ, ಪಡುಬಿದ್ರಿ ಶಾಖೆಯ ನಿರ್ವಹಣೆ, ಜನರಿಗೆ ಆಗುತ್ತಿರುವ ವಿವಿಧ ತೊಂದರೆಗಳ ಬಗ್ಗೆ ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌ ಅಧಿಕಾರಿಗಳ ಗಮನಕ್ಕೆ ತಂದರು. ಉಳಿಯಾರಗೋಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಮೆಸ್ಕಾಂನ ಸಭೆಗಳಿಗೆ ಎಲ್ಲಾ ಜನಪ್ರತಿನಿಧಿಗಳಿಗೆ ನೋಟೀಸು ನೀಡಬೇಕು, ಅದರಲ್ಲಿ ಅವರು ಭಾಗವಹಿಸಿ ಜನರ ಪರ ಅಹವಾಲು ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಮೆಸ್ಕಾಂ ಕಾಪು ಉಪವಿಭಾಗದಲ್ಲಿ ವಿವಿಧ ಜನಪ್ರತಿನಿಧಿಗಳು, ಗುತ್ತಿಗೆದಾರರು ಮತ್ತು ಜನರಿಂದ ಕೇಳಿಬಂದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು, ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ತುರ್ತಾಗಿ ಸಮಸ್ಯೆ ಬಗೆಹರಿಸುವಂತೆ ನರಸಿಂಹ ಪಂಡಿತ್‌ ಅವರು ಶಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಮೆಸ್ಕಾಂ ಬಗ್ಗೆ ಕಡೆಗಣನೆ, ವೃಥಾರೋಪ ಸಲ್ಲದು
ಮೆಸ್ಕಾಂ ಪ್ರತೀ 3 ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಿ, ಜನರಿಂದ ಅಹವಾಲು ಸ್ವೀಕರಿಸುತ್ತದೆ. ಗಣ್ಯರ ಕಾರ್ಯಕ್ರಮಗಳಲ್ಲಿ ವಿದ್ಯುತ್‌ ಕಡಿತವಾಗದಂತೆ ಎಚ್ಚರ ವಹಿಸುವ ವಿದ್ಯುತ್‌ ಇಲಾಖೆಯವರಿಗೆ ಕೊನೆಯಲ್ಲಿ ವಂದಿಸುವ ಜಾಯಮಾನವೂ ಇರುವುದಿಲ್ಲ. ಇಲಾಖೆಯವರನ್ನು ಅಸ್ಪೃಶ್ಯರಂತೆ ಕಾಣದಿರಿ. ವಿದ್ಯುತ್‌ ಸಂಪರ್ಕಕ್ಕಾಗಿ ತಂತಿ ಎಳೆಯಲು ನಮ್ಮದೇ ಜಾಗವಿಲ್ಲ. ಮರಗಳ ಗೆಲ್ಲು ತೆರವು ಮಾಡಿದರೂ ಅರಣ್ಯ ಇಲಾಖೆಯಿಂದ ಮೊಕದ್ದಮೆ ಎದುರಿಸಬೇಕಾಗಿದೆ ಎಂದು ನರಸಿಂಹ ಪಂಡಿತ್‌ ಅಳಲು ತೋಡಿಕೊಂಡರು. ಉಡುಪಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ದಿನೇಶ್‌ ಉಪಾಧ್ಯ, ಉಪ ನಿಯಂತ್ರಣಾಧಿಕಾರಿ ಮಂಜುನಾಥ್‌, ಕಾಪು ಮೆಸ್ಕಾಂ ಉಪ ವಿಭಾಗದ ಕಾ.ನಿ.ಎಂಜಿನಿಯರ್‌ ಹರೀಶ್‌ ಕುಮಾರ್‌ ಉಪಸ್ಥಿತರಿದ್ದರು.

667 ಹುದ್ದೆ ಭರ್ತಿಗೆ ಕ್ರಮ
ಮೆಸ್ಕಾಂನ ವಿವಿಧ ಭಾಗಗಳಲ್ಲಿ ಖಾಲಿಯಿರುವ 667 ಜೂನಿಯರ್‌ ಪವರ್‌ ಮೆನ್‌ (ಕಿರಿಯ ಶಕ್ತಿ ಮಿತ್ರ) ಹುದ್ದೆಗಳಿಗೆ ಸುಮಾರು 3,380 ಅರ್ಜಿಗಳು ಬಂದಿವೆ. ಅಕ್ಟೋಬರ್‌ 21 ರಂದು ವಿವಿಧೆಡೆಗಳಲ್ಲಿ ಈ ಹುದ್ದೆಗಳಿಗೆ ಸಂದರ್ಶನ ನಡೆಯಲಿದ್ದು ಉಡುಪಿಯಲ್ಲಿ 1,112 ಮಂದಿಗೆ ಸಂದರ್ಶನಕ್ಕೆ ಹಾಜರಾಗಲಿದ್ದಾರೆ. ಇದರಲ್ಲಿ ಅರ್ಹರಾದವರನ್ನು ಆಯ್ಕೆ ಮಾಡಿ, ಸಿಬಂದಿಗಳ ಕೊರತೆಯನ್ನು ನೀಗಿಸಿಕೊಳ್ಳಲಾಗುವುದು.
-ನರಸಿಂಹ ಪಂಡಿತ್‌,ಅಧೀಕ್ಷಕ ಎಂಜಿನಿಯರ್‌, ಮೆಸ್ಕಾಂ ಉಡುಪಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next