Advertisement

ವೇದಾವತಿ ನದಿಗೆ ಉರುಳಿದ ಬಸ್‌: 19 ಮಂದಿಗೆ ಗಾಯ

06:00 AM May 30, 2018 | |

ಕಡೂರು: ಚಾಲಕನ ನಿಯಂತ್ರಣ ತಪ್ಪಿದ ರಾಜ್ಯ ರಸ್ತೆ ಸಾರಿಗೆ ಬಸ್‌ ಮಂಗಳವಾರ ಬೆಳಗ್ಗೆ ಪಟ್ಟಣ ಸಮೀಪದ ವೇದಾವತಿ ನದಿಗೆ ಉರುಳಿ ಬಿದ್ದ ಪರಿಣಾಮ 19 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸೇತುವೆ ಮೇಲಿನಿಂದ ಬಸ್‌ ಉರುಳಿದ್ದು ಸಂಪೂರ್ಣ ಅಡಿಮೇಲಾಗಿದೆ. ಆದರೆ ನದಿಯಲ್ಲಿ ನೀರಿಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ.

Advertisement

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಬಸ್‌ ಕಡೂರು ಪ್ರವೇಶಿಸುವ ಮೊದಲು ಸಿಗುವ ವೇದಾವತಿ ನದಿ ಸೇತುವೆ ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟ ಬಸ್‌ 10.45ರ ಸುಮಾರಿಗೆ ಕಡೂರು ಸಮೀಪ ಬರುತ್ತಿದ್ದಂತೆ ಸ್ಟೇರಿಂಗ್‌ ರಾಡ್‌ ಮುರಿದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಆಳಕ್ಕೆ ಮಗುಚಿ ಬಿದ್ದಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು ರಕ್ಷಿಸಿದರು. ಬಸ್‌ ಪಲ್ಟಿಯಾದ ರಭಸಕ್ಕೆ ಡೀಸೆಲ್‌ ಟ್ಯಾಂಕ್‌ ಒಡೆದು ಸೋರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ ನೀರು ಸಿಂಪಡಿಸಿದರು. 

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 19ಕ್ಕೂ ಹೆಚ್ಚು ಮಂದಿ ಮಂದಿಗೆ ಗಾಯಗಳಾಗಿದ್ದು ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು 4 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ
ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆ ಸಿಬ್ಬಂದಿ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next