Advertisement

ಚಿತ್ರ ವಿಮರ್ಶೆ; ಆದಿವಾಸಿಗಳ ಅರಣ್ಯರೋಧನದ ಚಿತ್ರರೂಪ 19.20.21

09:58 AM Mar 04, 2023 | Team Udayavani |

ಸ್ವತಂತ್ರ್ಯ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಆದ ಹಕ್ಕುಗಳಿವೆ. ಎಲ್ಲರನ್ನೂ ಸಾಮಾನವಾಗಿ ಕಾಣುವ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುವ ಮತ್ತು ಎಲ್ಲರೂ ಸಮಾನವಾಗಿ ಬದುಕ ಬೇಕೆಂಬ ಉದ್ದೇಶದಿಂದ ಭಾರತದ ಸಂವಿಧಾನವೇ ಇಂಥದ್ದೊಂದು ಹಕ್ಕುಗಳನ್ನು ಈ ದೇಶದ ಜನರಿಗೆ ಕೊಟ್ಟಿದೆ. ಸಂವಿಧಾನದತ್ತವಾಗಿ ಬಂದಿರುವ ಆ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ದುರಂತವೆಂದರೆ, ಯಾರಿಗಾಗಿ ಈ ಹಕ್ಕುಗಳನ್ನು ನೀಡಲಾಗಿದೆಯೋ, ಅವರು ಇಂದಿಗೂ ಈ ಹಕ್ಕುಗಳಿಗಾಗಿ ಹೋರಾಟಬೇಕಾಗಿದೆ. ಇಂಥದ್ದೇ ಸಂವಿಧಾನದ ಮೂಲಭೂತ ಹಕ್ಕುಗಳ ವಿಷಯವನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “19.20.21′

Advertisement

ಯುವಕ ಮಂಜು ಪಶ್ಚಿಮಘಟ್ಟದ ಕಾಡುಮಲೆಯ ಆದಿವಾಸಿ ಹುಡುಗ. ನಗರದಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ಮಾಡುತ್ತಿರುವ ಮಂಜು, ತನ್ನ ಕಾಡಿನ ಜನರಿಗೆ ಮೂಲಸೌಕರ್ಯ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಾನೆ. ಜನಜಾಗೃತಿ ಮೂಡಿಸಲು ಶುರು ಮಾಡುತ್ತಾನೆ. ಮೊದಲೇ ಕಾಡಿನಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕು ಎಂಬ ಯೋಚನೆಯಲ್ಲಿದ್ದ ಸರ್ಕಾರ ಇದೇ ಅವಕಾಶವನ್ನು ಬಳಸಿಕೊಂಡು, ಮಂಜು ಮತ್ತು ಆತನ ತಂದೆಯನ್ನು ನಕ್ಸಲಿಯರಿಗೆ ಸಹಾಯ ಮಾಡಿದ್ದಾರೆ ಎಂದು ದೇಶದ್ರೋಹದ (ಯುಎಪಿಎ ಕಾಯ್ದೆ) ಆರೋಪದಡಿ ಪೊಲೀಸರ ಮೂಲಕ ಬಂಧಿಸುತ್ತದೆ. ನೋಡು ನೋಡುತ್ತಿದ್ದಂತೆ ಅಮಾಯಕ ಹುಡುಗ, ಆತನ ತಂದೆ ಕತ್ತಲೆ ಕೋಣೆ ಸೇರುತ್ತಾರೆ. ಅಲ್ಲಿ ಪೊಲೀಸರ ದೌರ್ಜನ್ಯ, ಕ್ರೌರ್ಯ, ಅಟ್ಟಹಾಸ ನರಕ ದರ್ಶನವಾಗುತ್ತದೆ. ಮುಂದೆ ಈ ಹುಡುಗ ಮತ್ತು ಆತನ ತಂದೆಯ ಕಾನೂನು ಹೋರಾಟ ಹೇಗಿರುತ್ತದೆ? ಕೊನೆಗೆ ನ್ಯಾಯ ಯಾರ ಪರವಾಗುತ್ತದೆ? ಎಂಬುದೇ “19.20.21′ ಸಿನಿಮಾದ ಕಥಾಹಂದರ.

ಇದನ್ನೂ ಓದಿ:ಅಹ್ಮದೀಯ ವಿರೋಧಿ ಪ್ರತಿಭಟನೆ; ನೂರಕ್ಕೂ ಹೆಚ್ಚು ಮನೆ-ಅಂಗಡಿಗಳಿಗೆ ಬೆಂಕಿ

ಕೆಲ ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ನೈಜ ಘಟನೆಯೊಂದನ್ನು ಆಧರಿಸಿ “19.20.21′ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಮಂಸೋರೆ. ಆದಿವಾಸಿಗಳ ಬದುಕು, ಬವಣೆ, ಹೋರಾಟ, ಸರ್ಕಾರದ ಮನಸ್ಥಿತಿ, ಅಧಿಕಾರಿ ವರ್ಗದ ದರ್ಪ, ದೌರ್ಜನ್ಯ, ಅಮಾಯಕರ ಅರಣ್ಯರೋಧನ ಎಲ್ಲವನ್ನೂ “19.20.21′ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಪಶ್ಚಿಮಘಟ್ಟದ ಸುಂದರ ಪರಿಸರವನ್ನು ಅನಾವರಣ ಮಾಡುತ್ತ ತೆರೆದುಕೊಳ್ಳುವ ಸಿನಿಮಾ, ನಿಧಾನವಾಗಿ ಗಂಭೀರವಾಗುತ್ತ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ. ಒಂದಷ್ಟು ಪ್ರಶ್ನೆಗಳನ್ನು ನೋಡುಗರ ಮನಸ್ಸಿನಲ್ಲಿ ಮೂಡಿಸಿ, ಸಿನಿಮಾ ಕ್ಲೈಮ್ಯಾಕ್ಸ್‌ ಘಟ್ಟ ತಲುಪುತ್ತದೆ.

ಇನ್ನು ಕಲಾವಿದರಾದ ಶೃಂಗ ಬಿ., ಬಾಲಾಜಿ ಮನೋಹರ್‌, ಸಂಪತ್‌, ಎಂ. ಡಿ. ಪಲ್ಲವಿ, ವಿಶ್ವಕರ್ಣ, ಮಹದೇವ್‌ ಹಡಪದ್‌, ರಾಜೇಶ್‌ ನಟರಂಗ, ಉಗ್ರಂ ಸಂದೀಪ್‌, ಬಿ. ಎಂ. ಗಿರಿರಾಜ್‌ ಮತ್ತಿತರರು ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಚಿತ್ರದ ಛಾಯಾಗ್ರಹಣ ಪಶ್ಚಿಮಘಟ್ಟದ ಸೌಂದರ್ಯದ ಜೊತೆಗೆ ಅಮಾಯಕರ ಯಾತನೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ದೃಶ್ಯಗಳಿಗೆ ಪೂರಕವಾಗಿದೆ.  ಒಟ್ಟಾರೆ ಮಾಮೂಲಿ ಮನರಂಜನೆಯ ಸಿನಿಮಾಗಳಿಗಿಂತ ಹೊರತಾಗಿರುವ “19.20.21′ ಹೊಸ ಆಶಯದ ಸಿನಿಮಾವಾಗಿ ಗಮನ ಸೆಳೆಯುತ್ತದೆ.

Advertisement

 ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next