Advertisement

ಎರಡು ತಿಂಗಳುಗಳಲ್ಲಿ 18,351 ಪ್ರವಾಸಿಗರು!

04:31 AM Feb 28, 2019 | Team Udayavani |

ಮಹಾನಗರ : ಕಡಲ ನಗರಿ ಮಂಗಳೂರು ರಾಜ್ಯವ್ಯಾಪಿಯಾಗಿ ಪ್ರವಾಸೋದ್ಯಮದಲ್ಲಿ ಗುರುತಿಸಿ ಕೊಳ್ಳುತ್ತಿರುವ ಮಧ್ಯೆಯೇ, ಬಂದರು ನಗರಿ ಮಂಗಳೂರಿಗೆ ಯುರೋಪ್‌, ಅಮೆರಿಕ ಸಹಿತ ವಿದೇಶದ ಪ್ರವಾಸಿಗರು ನಿರೀಕ್ಷೆಗೂ ಮೀರಿ ಬರುತ್ತಿರುವುದು ಕರಾವಳಿ ಪ್ರವಾಸೋದ್ಯಮದಲ್ಲಿ ಹೊಸ ಭಾಷ್ಯ ಬರೆದಂತಾಗಿದೆ.

Advertisement

ಜನವರಿ 1ರಿಂದ ಫೆ. 27ರ ವರೆಗೆ ನವಮಂಗಳೂರು ಬಂದರಿಗೆ ವಿದೇಶದ 18 ಹಡಗುಗಳು ಆಗಮಿಸಿದ್ದು, ಒಟ್ಟು 18,351 ಪ್ರವಾಸಿಗರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಇದು ಈವರೆಗಿನ ಹೊಸ ದಾಖಲೆ. ವಿಶೇಷವೆಂದರೆ ಮುಂದಿನ ತಿಂಗಳಿನಲ್ಲಿ ಒಟ್ಟು 6 ವಿದೇಶಿ ಹಡಗುಗಳು ಮತ್ತೆ ವಿದೇಶದಿಂದ ಬರಲಿದ್ದು, ಎಪ್ರಿಲ್‌ನಲ್ಲಿಯೂ ನಾಲ್ಕು ಹಡಗುಗಳು ಬರಲಿವೆ ಎಂಬುದು ಸದ್ಯದ ಮಾಹಿತಿ. ಈ ಮೂಲಕ ನಗರ ವಿದೇಶೀ ಪ್ರವಾಸಿಗರ ಪಾಲಿಗೆ ಪ್ರವಾಸೋದ್ಯಮದ ಸ್ವರ್ಗ ಎಂದು ಪರಿಗಣಿತವಾಗಿದೆ.

ಕಳೆದ ವರ್ಷ ಒಟ್ಟು 22 ಹಡಗುಗಳಲ್ಲಿ 24,258 ಮಂದಿ ಪ್ರವಾಸಿಗರು ಮಂಗಳೂರಿಗೆ ಆಗಮಿಸಿದ್ದರು. ಪ್ರವಾಸಿಗರಲ್ಲಿ ಹೆಚ್ಚಿನವರು 55 ವರ್ಷ ಮೇಲ್ಪಟ್ಟವರು, ಹಿರಿಯ ನಾಗರಿಕರು. ವಿಶ್ವದ ವಿವಿಧೆಡೆಗಳಿಂದ ಪ್ರವಾಸಿಗರಿದ್ದರು. ಪಶ್ಚಿಮ ಕರಾವಳಿಯಲ್ಲಿ ಮುಂಬಯಿ, ಗೋವಾ, ಮಂಗಳೂರು ಮತ್ತು ಕೊಚ್ಚಿನ್‌ ಬಂದರುಗಳಿಗೆ ವಿದೇಶಿ ಹಡಗುಗಳು ಆಗಮಿಸುತ್ತವೆ. 2016ರಲ್ಲಿ ಕೇಂದ್ರ ಸರಕಾರ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ವೀಸಾ ನೀಡುವ ಪ್ರಕ್ರಿಯೆ ಸರಳಗೊಳಿಸಿ, ಬಂದರುಗಳಲ್ಲಿ ಇ-ವೀಸಾ ವ್ಯವಸ್ಥೆ ಮಾಡಿದ ಅನಂತರ ನಗರಕ್ಕೆ ಪ್ರವಾಸಿ ಹಡಗುಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಎನ್‌ಎಂಪಿಟಿ ಅಧಿಕಾರಿಗಳು ಹೇಳುವ ಮಾಹಿತಿ.

ದೇವಾಲಯ, ಬೀಚ್‌- ಚರ್ಚ್‌ಗೆ ಭೇಟಿ
ವಿದೇಶಿ ಪ್ರವಾಸಿಗರು ಒಂದು ದಿನ ಜಿಲ್ಲೆಯ ಕದ್ರಿ ದೇವಾಲಯ, ಕುದ್ರೋಳಿ, ಮಂಗಳಾದೇವಿ, ಸೈಂಟ್‌ ಅಲೋಶಿಯಸ್‌ ಚಾಪೆಲ್‌, ಮಿಲಾಗ್ರಿಸ್‌ ಚರ್ಚ್‌, ಸುಲ್ತಾನ್‌ ಬತ್ತೇರಿ, ತಣ್ಣೀರುಬಾವಿ, ಕುಲಶೇಖರ ಕ್ಯಾಶೂ ಫ್ಯಾಕ್ಟರಿ, ನಗರದ ಮಾಲ್‌ ಗಳು, ಮೂಡುಬಿದಿರೆ ಸಾವಿರಕಂಬದ ಬಸದಿ, ಸೋನ್ಸ್‌ ಫಾರಂ, ಪಿಲಿಕುಳ ನಿಸರ್ಗಧಾಮಗಳ ವೀಕ್ಷಣೆಗೆ ತೆರಳುತ್ತಾರೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯದಿಂದ ನಗರ ಸುತ್ತುವ ಜತೆಗೆ ಟೂರ್‌ ಪ್ಯಾಕೇಜ್‌ನಲ್ಲಿ ಮೊದಲೇ ಆಯ್ಕೆ ಮಾಡಿಕೊಂಡಂತೆ ಪ್ರವಾಸಿಗರು, ಬಸ್‌, ರಿಕ್ಷಾ, ಸೈಕಲ್‌ಗ‌ಳಲ್ಲಿ ವಿವಿಧೆಡೆ ಸಂಚರಿಸುವವರೂ ಇದ್ದಾರೆ.

ದೇಶದ ಪ್ರಥಮ ಮಾಹಿತಿ ಕೇಂದ್ರ 
ನವಮಂಗಳೂರು ಬಂದರಿನ (ಎನ್‌ಎಂಪಿಟಿ)ಕ್ರೂಸ್‌ ಲಾಂಜ್‌ನಲ್ಲಿ ಪ್ರವಾಸಿ ಮಾಹಿತಿ ಕೇಂದ್ರವನ್ನು ದ.ಕ. ಜಿಲ್ಲಾಡಳಿತ ಇತ್ತೀಚೆಗೆ ಆರಂಭಿಸಿತ್ತು. ಪ್ರತಿ ವರ್ಷ 30ಕ್ಕೂ ಅಧಿಕ ಕ್ರೂಸ್‌ಗಳಲ್ಲಿ 35,000ಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಫ್ರಾನ್ಸ್‌, ಜರ್ಮನ್‌, ರಷ್ಯಾ ಮುಂತಾದ ದೇಶಗಳಿಂದ ಆಗಮಿಸುತ್ತಾರೆ. ಈ ಮಾದರಿ ಕಿಯೋಸ್ಕ್  ದೇಶದಲ್ಲೇ ಪ್ರಥಮವಾಗಿದ್ದು, ಮಾಹಿತಿ ಕೇಂದ್ರದ ಸಂಪೂರ್ಣ ಸದ್ಬಳಕೆಗೆ ಕಾರ್ಯಯೋಜನೆ ರೂಪಿಸಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಸುಸಜ್ಜಿತವಾದ ಪ್ರವಾಸಿ ಮಾಹಿತಿ ಕೇಂದ್ರದ ಮೂಲಕ ಮಾಹಿತಿ ಹಾಗೂ ಕನಿಷ್ಠ ದರಗಳಲ್ಲಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಪ್ರೀಪೈಡ್‌ ಟ್ಯಾಕ್ಸಿ ಕೌಂಟರ್‌ಗಳನ್ನು ಒದಗಿಸಲಾಗಿದೆ.

Advertisement

ವಿದೇಶಿಗರ ಸಂಖ್ಯೆ ಅಧಿಕ
ಮಂಗಳೂರಿಗೆ ಪ್ರಸ್ತುತ ದಿನಗಳಲ್ಲಿ ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಮಾಹಿತಿ ನೀಡಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಕೇಂದ್ರ ನಿರ್ಮಿಸಲಾಗಿದೆ. ಜತೆಗೆ ಖಾಸಗಿ ಏಜೆನ್ಸಿಯವರ ಮೂಲಕ ವಿದೇಶಿಗರು ಮಂಗಳೂರು ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.
– ಉದಯ ಕುಮಾರ್‌ ಶೆಟ್ಟಿ,
ಪ್ರವಾಸೋದ್ಯಮ ಇಲಾಖೆ ಅಧಿಕಾರಿ

‡ ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next