ಬೆಂಗಳೂರು: “ರಾಜ್ಯದಲ್ಲಿ ಒಟ್ಟು 17 ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಏಳು ರಸ್ತೆಗಳ ಟೋಲ್ ವಿಧಿಸಲು ಟೆಂಡರ್ ನೀಡಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, “ರಸ್ತೆ ತೆರಿಗೆ ಕಟ್ಟುತ್ತಿದ್ದರೂ ಪುನಃ ರಾಜ್ಯ ಹೆದ್ದಾರಿಗಳಿಗೂ ತೆರಿಗೆ ವಿಧಿಸುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ರಸ್ತೆಗಳ ನಿರ್ವಹಣೆಗೆ ಹಣ ಬೇಕಾಗುತ್ತದೆ’ ಎಂದು ಸಮರ್ಥಿಸಿಕೊಂಡರು.
ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸುವ ನಿರ್ಣಯ ಮಾಡಿ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದು ಹಿಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ. ಹೀಗಾಗಿ ಟೋಲ್ ಬಗ್ಗೆ ಯಡಿಯೂರಪ್ಪ ಅವರನ್ನೇ ಪ್ರಶ್ನಿಸಬೇಕು ಎಂದರು. ಕೆಲವೆಡೆ ಸರ್ವಿಸ್ ರಸ್ತೆ ಇಲ್ಲ.
ಟೋಲ್ ಪಾವತಿಸಲು ಸಾಧ್ಯವಾಗದವರು ಶುಲ್ಕ ಪಾವತಿಸದೆ ಸರ್ವಿಸ್ ರಸ್ತೆಯಲ್ಲಿ ಓಡಾಡಲು ಅವಕಾಶ ನೀಡಬೇಕು. ಹೀಗಾಗಿ ನಾವು ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ವೇಳೆ ಎರಡು ಪಥದ ಸರ್ವಿಸ್ ರಸ್ತೆ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಚುನಾವಣಾ ಹಣ ಸಂಗ್ರಹಕ್ಕೆ 1400 ಕೋಟಿ ರೂ. ಮೊತ್ತದ ಹಣವನ್ನು ಕಾಮಗಾರಿ ಮುಗಿಯದೆ ಬಿಡುಗಡೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ನಾನು 1 ರೂ. ತುಂಡು ಗುತ್ತಿಗೆಯನ್ನೂ ನೀಡಿಲ್ಲ. ಆರೋಪಿಸುವವರು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.