Advertisement

16037 ಶುದ್ಧ ಕುಡಿಯುವ ನೀರು ಘಟಕಗಳು ಸುಸ್ಥಿತಿಯಲ್ಲಿ

11:40 PM Apr 30, 2019 | Team Udayavani |

ಬೆಂಗಳೂರು: ರಾಜ್ಯಾದ್ಯಂತ 16,567 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 530 ಘಟಕ ಹೊರತುಪಡಿಸಿ ಉಳಿದ ಘಟಕಗಳು ಬಳಕೆಯಲ್ಲಿವೆ. ಯಾವುದೇ ಸಂದರ್ಭದಲ್ಲೂ ಶೇ.3ರಿಂದ ಶೇ.4ರಷ್ಟು ಘಟಕಗಳು ದುರಸ್ತಿಯಲ್ಲಿರಲಿವೆ. ನೀರಿನ ಕೊರತೆ ಹಾಗೂ ಇನ್ನಿತರ ಕಾರಣಕ್ಕೆ ಕೆಲವೊಮ್ಮ ನಿಷ್ಕ್ರಿಯವಾಗಿರುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಹೇಳಿದರು.

Advertisement

ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಟೆಂಡರ್‌ ಕರೆಯದೆ ಕೊಳವೆ ಬಾವಿ ಕೊರೆಸಲು ಐದು ಲಕ್ಷ ರೂ.ವರೆಗೆ ಖರ್ಚು ಮಾಡಲು ಅನುಮತಿ ನೀಡಿದ್ದ ಅವಧಿ ಕಳೆದ ಮಾ.31ಕ್ಕೆ ಮುಕ್ತಾಯವಾಗಿದೆ. ಹಾಗಾಗಿ, ಅನುಮತಿ ಮುಂದುವರಿಕೆಗೆ ಅವಕಾಶ ಕಲ್ಪಿಸಲಾಗುವುದು. ಜಿಲ್ಲಾಮಟ್ಟದಲ್ಲಿ ಟಾಸ್ಕ್ಫೋರ್ಸ್‌ಗಳಿದ್ದು, ನೀತಿ ಸಂಹಿತೆಯಿಂದಾಗಿ ಶಾಸಕರು ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಿಇಒಗಳೇ ಸುಮಾರು 5000 ಕಾಮಗಾರಿಗಳ ಪೈಕಿ ಅಗತ್ಯವಿರುವುದನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನಗೊಳಿಸುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ ಎಂದು ವಿವರಿಸಿದರು.

2016-17 ಹಾಗೂ 2017-18ನೇ ಸಾಲಿನಲ್ಲಿ ಒಟ್ಟು 2175 ಕೋಟಿ ರೂ.ಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರದಿಂದ 815 ಕೋಟಿ ರೂ.ಬಾಕಿ ಇತ್ತು. 2018-19ನೇ ಸಾಲಿನ ಕೊನೆಯ ತ್ತೈಮಾಸಿಕದಲ್ಲಿ ಕೂಲಿ ವಿತರಣೆಗೆ ಅಭಾವ ತಲೆದೋರಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ 678 ಕೋಟಿ ರೂ.ನೀಡಲಾಗಿತ್ತು.

ಕೇಂದ್ರ ಸರ್ಕಾರವು 815 ಕೋಟಿ ರೂ.ಬಿಡುಗಡೆ ಮಾಡಿ ಅದರಲ್ಲಿ ರಾಜ್ಯ ಸರ್ಕಾರ ಭರಿಸಿದ್ದ 678 ಕೋಟಿ ರೂ.ಕಡಿತಗೊಳಿಸಿಕೊಂಡು ಉಳಿದ ಹಣ ಬಳಸುವಂತೆ ಸೂಚಿಸಿತ್ತು. ಆದರೆ, ಸಾಮಗ್ರಿ ವೆಚ್ಚಕ್ಕಾಗಿ 950 ಕೋಟಿ ರೂ.ಮೊತ್ತದ ಬಿಲ್‌ ಬಾಕಿ ಉಳಿದಿದೆ. ಹಾಗಾಗಿ, 678 ಕೋಟಿ ರೂ.ಕಡಿತ ಮಾಡಿಕೊಂಡು ಉಳಿದ 166 ಕೋಟಿ ರೂ.ಗಳನ್ನು ಬಳಸಲಾಗುವುದು. ಕೇಂದ್ರದಿಂದ 1649 ಕೋಟಿ ರೂ.ಬಾಕಿಯಿದ್ದು, ಈ ಸಂಬಂಧದ ಪ್ರಸ್ತಾವಕ್ಕೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next