Advertisement

15ನೇ ಹಣಕಾಸು ಯೋಜನೆ: ಗ್ರಾ.ಪಂ. ಅನುದಾನಕ್ಕೆ ಕತ್ತರಿ

11:24 PM Feb 24, 2022 | Team Udayavani |

ಕುಂದಾಪುರ: ಸ್ಥಳೀಯ ಸರಕಾರವೆಂಬ ಉಪಾಧಿ ಹೊಂದಿರುವ ಗ್ರಾ.ಪಂ.ಗಳಿಗೆ 15ನೇ ಹಣಕಾಸು ಯೋಜನೆಯಡಿ ನೀಡುವ ಅನುದಾನಕ್ಕೆ 2021-22ನೇ ಸಾಲಿನಲ್ಲಿ ಕತ್ತರಿ ಬಿದ್ದಿದೆ. 2020-21ನೇ ಸಾಲಿಗಿಂತ ಈ ವರ್ಷ ರಾಜ್ಯದ ಪಂಚಾಯತ್‌ಗಳಿಗೆ ನೀಡುವ ಅನುದಾನ ಇಳಿಕೆಯಾಗಿದೆ.

Advertisement

ಉಡುಪಿ ಜಿಲ್ಲೆಯ 158 ಗ್ರಾ.ಪಂ.ಗಳು, ದಕ್ಷಿಣ ಕನ್ನಡ ಜಿಲ್ಲೆಯ 218 ಗ್ರಾ.ಪಂ.ಗಳ ಸಹಿತ ರಾಜ್ಯದ ಒಟ್ಟು 6,011 ಗ್ರಾ.ಪಂ.ಗಳಿಗೆ 2021-22ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆಯು ಅನುದಾನವನ್ನು ಈಗಾಗಲೇ ಹಂಚಿಕೆ ಮಾಡಿದೆ. ಉಡುಪಿಯ 7 ತಾಲೂಕುಗಳ 158 ಗ್ರಾ.ಪಂ.ಗಳಿಗೆ 50.17 ಕೋ.ರೂ., ದ.ಕ.ದ 7 ತಾಲೂಕುಗಳ 218 ಗ್ರಾ.ಪಂ.ಗಳಿಗೆ 67.85 ಕೋ.ರೂ. ಸಹಿತ ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ 2,020.45 ಕೋ.ರೂ. ಹಂಚಿಕೆ ಆಗಿದೆ.

ಎಷ್ಟು ಕಡಿತ? :

15ನೇ ಹಣಕಾಸು ಯೋಜನೆಯಡಿ ಜನಸಂಖ್ಯೆಗೆ ಅನುಗುಣವಾಗಿ ಆಯಾಯ ಪಂಚಾಯತ್‌ಗೆ ಕನಿಷ್ಠ 10ರಿಂದ ಗರಿಷ್ಠ 40 ಲಕ್ಷ ರೂ.ವರೆಗೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಅದರಲ್ಲಿ ಶೇ. 60ನ್ನು ಜಲಜೀವನ್‌ ಮಿಶನ್‌ಗೆ ಮೀಸಲಿಡಬೇಕು, ಉಳಿದ ಶೇ. 40ರಲ್ಲಿ ಶೇ. 15ರಷ್ಟು ಪ.ಜಾತಿ, ಪಂಗಡದವರಿಗೆ, ತಲಾ ಶೇ. 10ರಷ್ಟು ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಕಡ್ಡಾಯವಾಗಿ ವಿನಿಯೋಗಿಸಬೇಕು. ಉಳಿದ ಶೇ. 5 ಅನುದಾನವನ್ನು ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಗ್ರಾ.ಪಂ.ಗಳಿಗೆ ಇಂತಿಷ್ಟೇ ಕಡಿತ ಮಾಡಿದ್ದಾರೆ ಎನ್ನುವ ಸ್ಪಷ್ಟತೆಯಿಲ್ಲ. ಉದಾಹರಣೆಗೆ, ಕಳೆದ ಸಾಲಿನಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾ.ಪಂ.ಗೆ 28,68,282 ರೂ. ನೀಡಿದ್ದರೆ ಈ ಸಾಲಿನಲ್ಲಿ 21,52,832 ರೂ. ಅಷ್ಟೇ ನೀಡಲಾಗಿದೆ. ಅಂದರೆ 7,15,450 ರೂ. ಕಡಿಮೆ ನೀಡಲಾಗಿದೆ. ಇದು ಒಂದು ಗ್ರಾ.ಪಂ.ನ ಉದಾಹರಣೆ.

ಅಭಿವೃದ್ಧಿಗೆ ಅಡ್ಡಿ :

Advertisement

ಗ್ರಾ.ಪಂ.ಗಳು ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬೇರೆಲ್ಲ ಅನುದಾನಕ್ಕಿಂತ 15ನೇ ಹಣಕಾಸು ಯೋಜನೆಯ ಅನುದಾನವನ್ನೇ ಹೆಚ್ಚಾಗಿ ನಂಬಿವೆ. ಆದರೆ ನಿರೀಕ್ಷಿತ ಅನುದಾನ ಬಾರದ ಕಾರಣ ವರ್ಷದ ಹಿಂದಷ್ಟೇ ಆಯ್ಕೆಯಾದ ನೂತನ ಗ್ರಾ. ಪಂ. ಸದಸ್ಯರು ಜನರ ನಿರೀಕ್ಷೆಗಳಿಗೆ ಸ್ಪಂದಿಸಲಾಗದೆ ಟೀಕೆ ಎದುರಿಸುವಂತಾಗಿದೆ. ಪಂಚಾಯತ್‌ಗಳಿಗೆ ಸಿಗುವುದೇ ಅಲ್ಪ ಮೊತ್ತ. ಅದರಲ್ಲೂ ಈ ರೀತಿ ಕಡಿತ ಮಾಡಿದರೆ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕಾರ್ಯ ಅಥವಾ ತುರ್ತು ಕಾಮಗಾರಿ ಕೈಗೊಳ್ಳಲು ಸಾಧ್ಯ ಎನ್ನುವುದು ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಯು. ಸತ್ಯನಾರಾಯಣ ರಾವ್‌ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲೆ :

ತಾಲೂಕು           ಗ್ರಾ.ಪಂ.              ಅನುದಾನ

(ಲಕ್ಷ ರೂ.ಗಳಲ್ಲಿ)

ಬಂಟ್ವಾಳ           58           1,703.37

ಬೆಳ್ತಂಗಡಿ           48           1,388.19

ಕಡಬ   21           598.16

ಮಂಗಳೂರು     42           1,400.45

ಮೂಡಬಿದಿರೆ    12           391.95

ಪುತ್ತೂರು            22           669.28

ಸುಳ್ಯ    25           613.80

ಒಟ್ಟು   218         6,765.21

ಉಡುಪಿ ಜಿಲ್ಲೆ :

ತಾಲೂಕು           ಗ್ರಾ.ಪಂ.              ಅನುದಾನ

(ಲಕ್ಷ ರೂ.ಗಳಲ್ಲಿ)

ಬ್ರಹ್ಮಾವರ         27           813.25

ಬೈಂದೂರು        19           730.94

ಹೆಬ್ರಿ     8              239.43

ಕಾಪು    16           567.40

ಕಾರ್ಕಳ               27           824.06

ಕುಂದಾಪುರ      45           1,197.89

ಉಡುಪಿ               16           644.46

ಒಟ್ಟು   158         5,017.43

ಕೇಂದ್ರದಿಂದ ಎಷ್ಟು ಅನುದಾನ ಬಂದಿದೆಯೋ ಅದೆಲ್ಲವನ್ನೂ ರಾಜ್ಯದ ಗ್ರಾ.ಪಂ.ಗಳಿಗೆ ಇಂತಿಷ್ಟು ಎಂದು ಹಂಚಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಯಾದರೆ ಎಲ್ಲ ಗ್ರಾ.ಪಂ.ಗಳಿಗೆ ಒದಗಿಸಲಾಗುವುದು. ಶಿಲ್ಪಾ ಶರ್ಮ, ಆಯುಕ್ತರು, ಪಂ. ರಾಜ್‌ ಇಲಾಖೆ, ಬೆಂಗಳೂರು

 

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next