Advertisement

ಶ್ರಮಿಕ ರೈಲಿನಿಂದ ಪ್ರಯಾಣ ಬೆಳೆಸಿದ 14,528 ವಲಸಿಗರು

08:13 AM May 22, 2020 | Team Udayavani |

ಹುಬ್ಬಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿಲುಕಿಕೊಂಡ ವಲಸಿಗರನ್ನು ಅವರ ರಾಜ್ಯಗಳಿಗೆ ವ್ಯವಸ್ಥಿತವಾಗಿ ಕಳುಹಿಸುವ ಸವಾಲಿನ ಕಾರ್ಯವನ್ನು ಧಾರವಾಡ ಜಿಲ್ಲಾಡಳಿತ ಯಶಸ್ವಿಯಾಗಿ ನಿರ್ವಹಿಸಿದ್ದು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ವ್ಯವಸ್ಥಿತ ಯೋಜನೆಯ ಫಲವಾಗಿ ಮೊದಲ ಹಂತದಲ್ಲಿ ನಿಗದಿಯಾಗಿದ್ದ 10 ಶ್ರಮಿಕ ರೈಲುಗಳ ಮೂಲಕ ಬರೋಬ್ಬರಿ 14,528 ವಲಸಿಗರನ್ನು ನಗರದ ರೈಲ್ವೆ ನಿಲ್ದಾಣದಿಂದ ಅವರ ರಾಜ್ಯಗಳಿಗೆ ಕಳುಹಿಸಲಾಗಿದೆ.

Advertisement

ವಲಸೆ ಕಾರ್ಮಿಕರ ವಿಚಾರದಲ್ಲಿ ಜಿಲ್ಲೆಯಲ್ಲಿ ಯಾವುದೇ ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡದಂತೆ ವ್ಯವಸ್ಥಿತ ಯೋಜನೆ ರೂಪಿಸಿ ಅವರವರ ರಾಜ್ಯಗಳಿಗೆ ಕಳುಹಿಸುವ ಕಾರ್ಯ ಕೈಗೊಳ್ಳಲಾಗಿದೆ. ಸೇವಾಸಿಂಧು ವೆಬ್‌ಪೋರ್ಟ್‌ಲ್‌ನಲ್ಲಿ ಕಾರ್ಮಿಕರ ಹೆಸರು ನೋಂದಣಿ ಮಾಡಿಸುವುದರಿಂದ ಹಿಡಿದು, ಪ್ರತಿಯೊಬ್ಬ ಕಾರ್ಮಿಕರಿಗೆ ಟಿಕೆಟ್‌ ಖರೀದಿಸಿ ರೈಲು ಹತ್ತಿಸುವ ಕಾರ್ಯವನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಿರ್ವಹಿಸಿದೆ.

ಯಾವ ರಾಜ್ಯಕ್ಕೆ ಎಷ್ಟು ವಲಸಿಗರು?: ಒಂದು ರೈಲು ಸಂಚಾರಕ್ಕೆ ಕನಿಷ್ಠ 1200 ಪ್ರಯಾಣಿಕರು ಇರಬೇಕು ಎನ್ನುವ ಕಾರಣಕ್ಕೆ ಧಾರವಾಡ ಸೇರಿದಂತೆ ಸುತ್ತಲಿನ ಜಿಲ್ಲೆಗಳಾದ ಹಾವೇರಿ, ಕೊಪ್ಪಳ, ಗದಗ, ಬಾಗಲಕೋಟೆ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ರಾಯಚೂರು, ಶಿವಮೊಗ್ಗ ಜಿಲ್ಲಾಡಳಿತ ಸಂಪರ್ಕಿಸಿ ಅಲ್ಲಿನ ವಲಸಿಗರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮೂಲಕ ನಾಲ್ಕು ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಪ್ರದೇಶಕ್ಕೆ 5ರೈಲುಗಳ ಮೂಲಕ 7360, ರಾಜಸ್ಥಾನಕ್ಕೆ 2 ರೈಲುಗಳ ಮೂಲಕ 2813 ಜನ, ಬಿಹಾರಕ್ಕೆ 2 ರೈಲುಗಳಲ್ಲಿ 2903 ಹಾಗೂ ಜಾರ್ಖಂಡಕ್ಕೆ ಒಂದು ರೈಲಿನಲ್ಲಿ 1452 ವಲಸಿಗರು ತೆರಳಿದ್ದಾರೆ. ಇನ್ನೂ ಕೊನೆಯ ಕ್ಷಣದಲ್ಲಿ ಕೌಂಟರ್‌ಗಳಿಗೆ ಬಂದು ಟಿಕೆಟ್‌ಗೆ ಮನವಿ ಸಲ್ಲಿಸಿ ಟಿಕೆಟ್‌ ಪಡೆದು ಪ್ರಯಾಣಿಸಿದವರ ಸಂಖ್ಯೆ ಸುಮಾರು 1ಸಾವಿರ ದಾಟಲಿದ್ದು, ಸುಮಾರು 15000ಕ್ಕೂ ಹೆಚ್ಚು ವಲಸಿಗರನ್ನು ಇಲ್ಲಿನ ರೈಲ್ವೆ ನಿಲ್ದಾಣದ ಮೂಲಕ ಕಳುಹಿಸಲಾಗಿದೆ.

ವಿವಿಧ ಇಲಾಖೆಗಳ ಪರಿಶ್ರಮ: ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಂದಾಯ, ಪೊಲೀಸ್‌, ಮಹಾನಗರ ಪಾಲಿಕೆ, ಸರ್ವೇ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾಯವ್ಯ ಸಾರಿಗೆ ಸಂಸ್ಥೆ ಸೇರಿದಂತೆ ಇನ್ನೂ ಹಲವು ಇಲಾಖೆಗಳ ಸುಮಾರು 500ಕ್ಕೂ ಹೆಚ್ಚು ಅಧಿಕಾರಿಗಳ ಹಾಗೂ ಸಿಬ್ಬಂದಿ ಪರಿಶ್ರಮವಿದೆ. ಕಾರ್ಮಿಕರನ್ನು ಗುರುತಿಸಿ ಸೇವಾ ಸಿಂಧು ಅಡಿ ನೋಂದಣಿಯಿಂದ ಹಿಡಿದು ಆರೋಗ್ಯ ತಪಾಸಣೆ, ರೈಲ್ವೆ ನಿಲ್ದಾಣಕ್ಕೆ ತಲುಪಿಸುವವರೆಗೂ ವಿವಿಧ ಕಾರ್ಯಗಳನ್ನು ಅಧಿಕಾರಿಗಳು, ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಇನ್ನೂ ಬೇಡಿಕೆಯಿದೆ: ನೋಂದಣಿಯಾದ ಕಾರ್ಮಿಕರನ್ನು ಮೊದಲ ಹಂತದಲ್ಲಿ ರೈಲುಗಳಲ್ಲಿ ಕಳುಹಿಸಲಾಗಿದ್ದು, ಕೊಲ್ಕತಾ ಹಾಗೂ ದೆಹಲಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ಕುರಿತು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಸಣ್ಣ ಗೊಂದಲ ಉಂಟಾಗದಂತೆ ಯೋಜನೆ ರೂಪಿಸಿ ಕಳೆದ ಎಂಟು ದಿನಗಳಿಂದ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ಕೆಲಸ ಮಾಡಲಾಗಿದೆ. ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪರಿಶ್ರಮದಿಂದ ಪ್ರತಿಯೊಂದು ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಕಾರ್ಮಿಕರಿಗೆ ಮಾಹಿತಿ ನೀಡುವುದರಿಂದ ಹಿಡಿದು ಅವರನ್ನು ರೈಲು ಹತ್ತಿಸುವವರೆಗೂ ಕೆಲಸ ಮಾಡಿದ್ದಾರೆ. -ಡಾ|ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ

ಪ್ರತಿಯೊಬ್ಬ ಕಾರ್ಮಿಕನಿಗೂ ಸರಿಯಾದ ಮಾಹಿತಿ ನೀಡಿ ಅವರ ರಾಜ್ಯಕ್ಕೆ ಕಳುಹಿಸುವುದು ನಮ್ಮ ಉದ್ದೇಶವಾಗಿತ್ತು. ಅದರಂತೆ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಇದು ಯಶಸ್ವಿಯಾಗಿದೆ. ರೈಲು ಹೊರಡುವ ಕೊನೆಯ ಕ್ಷಣದವರೆಗೂ ಬಂದ ಕಾರ್ಮಿಕರ ಮಾಹಿತಿ ಸಂಗ್ರಹಿಸಿ ಟಿಕೆಟ್‌ ನೀಡಿ ಕಳುಹಿಸುವ ಕೆಲಸ ಮಾಡಲಾಗಿದೆ. ಧಾರವಾಡ ಸೇರಿದಂತೆ ಇನ್ನನಿತರ ಜಿಲ್ಲೆಗಳಿಂದ ಆಗಮಿಸಿದವರೆಲ್ಲರಿಗೂ ಉಪಹಾರ, ಊಟ, ನೀರಿನ ಸೌಲಭ್ಯ ಕಲ್ಪಿಸಲಾಗಿದೆ.- ಪುರುಷೋತ್ತಮ, ವಲಸೆ ಕಾರ್ಮಿಕರ ನೋಡಲ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next