Advertisement

ವಿದ್ಯುತ್‌ ನಷ್ಟ ಶೇ.13.34 ಇಳಿಕೆ

10:51 AM Mar 26, 2017 | Team Udayavani |

ಬೆಂಗಳೂರು: ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ವಿದ್ಯುತ್‌ ಪ್ರಸರಣ ಮತ್ತು ವಿತರಣೆ ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ನಷ್ಟ ಶೇ.13.34ರಷ್ಟು ಇಳಿಕೆಯಾಗಿದೆ. ಇದರಿಂದ ಪ್ರತಿ ವರ್ಷ ಸುಮಾರು 5,369 ಕೋಟಿ ರೂ. ಉಳಿತಾಯವಾಗುತ್ತಿದೆ. ರಾಜ್ಯದಲ್ಲಿ ಎಲ್ಲ ಪ್ರಕಾರದ ಗ್ರಾಹಕರಿಗೆ ವರ್ಷಕ್ಕೆ 60ರಿಂದ 65 ಸಾವಿರ ಮಿಲಿಯನ್‌ ಯೂನಿಟ್‌
ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಪ್ರಸರಣ ಮತ್ತು ವಿತರಣೆ ವೇಳೆ ನಷ್ಟವಾಗುತ್ತಿದ್ದ ವಿದ್ಯುತ್‌ ಪ್ರಮಾಣ 2005-06ರಲ್ಲಿ ಶೇ. 30.96ರಷ್ಟು ಇತ್ತು. ಈ ಪ್ರಮಾಣ 2015-16ಕ್ಕೆ ಶೇ.17.62ಕ್ಕೆ ಇಳಿಕೆಯಾಗಿದೆ.

Advertisement

ಪ್ರಸರಣ ಮತ್ತು ವಿತರಣೆ ನಷ್ಟ ಇಳಿಕೆಯಿಂದ 910 ಕೋಟಿ ಯೂನಿಟ್‌ ವಿದ್ಯುತ್‌ ಉಳಿಯುತ್ತಿದ್ದು, ಇದರ ಮೊತ್ತ 5,300 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮೊತ್ತದಲ್ಲಿ ಗ್ರಾಹಕರ ಮೇಲಿನ ಒಂದು ವರ್ಷದ ವಿದ್ಯುತ್‌ ದರ ಏರಿಕೆ
ಹೊರೆ ತಗ್ಗಿಸಬಹುದೆಂದು ಮೂಲಗಳು ತಿಳಿಸಿವೆ.

ಶೇ.16ಕ್ಕೆ ಇಳಿಸುವ ಗುರಿ: ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸುವ ಉದ್ದೇಶದಿಂದ ವಿದ್ಯುತ್‌ ಜಾಲಗಳನ್ನು ಬಲಪಡಿಸಲು ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಪ್ರಸರಣ ಮತ್ತು ವಿತರಣೆಯಲ್ಲಾಗುತ್ತಿರುವ ನಷ್ಟ ಇಳಿಕೆಯಾಗುತ್ತಿದೆ. ಈಗ ವಿದ್ಯುತ್‌ ಉಳಿತಾಯ ಮಾತ್ರವಲ್ಲದೆ ಹಣಕಾಸು ನಿರ್ವಹಣೆ ಕೂಡ ಸುಧಾರಿಸಿದೆ. 2016-17ರಲ್ಲಿ ನಷ್ಟದ ಪ್ರಮಾಣ ಶೇ.16ಕ್ಕೆ ತಗ್ಗಿಸುವ ಗುರಿ ಇದೆ ಎಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌)ದ ನಿರ್ದೇಶಕ (ಪ್ರಸರಣ) ಎಚ್‌.ನಾಗೇಶ್‌ ಹೇಳುತ್ತಾರೆ.

ಒಂದೆಡೆ ಪ್ರಸರಣ ಮತ್ತು ವಿತರಣಾ ನಷ್ಟ ತಗ್ಗಿಸಿದರೆ, ಮತ್ತೂಂದೆಡೆ ಈ ಮೂಲಸೌಕರ್ಯಗಳ ಅಭಿವೃದ್ಧಿಯಿಂದ ವಿದ್ಯುತ್‌ ಪೂರೈಕೆ ಸಾಮರ್ಥ್ಯವನ್ನೂ ಹೆಚ್ಚಿಸಲು ಸಾಧ್ಯವಾಗಿದೆ. ಉದಾಹರಣೆಗೆ 2005-06ರಲ್ಲಿ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ 8,500 ಮೆ.ವ್ಯಾಟ್‌ ಇತ್ತು. ಈಗ 10,250 ಮೆ.ವ್ಯಾಟ್‌ ತಲುಪಿದೆ ಎಂದು ತಿಳಿಸುತ್ತಾರೆ.

7 ತಾಸು ಪೂರೈಕೆಗೆ ಶೇ.17 ನಷ್ಟ: ಎಸ್ಕಾಂಗಳಿಂದ ವಿದ್ಯುತ್‌ ಪೂರೈಕೆಯೇ ಸಮರ್ಪಕವಾಗಿಲ್ಲ. ಪ್ರಮುಖ ನಗರಗಳಲ್ಲಿ ಮಾತ್ರ 22ರಿಂದ 24 ಗಂಟೆ ವಿದ್ಯುತ್‌ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಏಳು ತಾಸು ವಿದ್ಯುತ್‌ ಸಂಪರ್ಕ ಇರುತ್ತದೆ. ಹೆಚ್ಚು ಗ್ರಾಹಕರಿರುವುದು ಗ್ರಾಮೀಣ ಭಾಗಗಳಲ್ಲಿ. ಕೇವಲ ಏಳು ತಾಸು ಕರೆಂಟ್‌ ಕೊಟ್ಟರೂ ಶೇ.17.62 ನಷ್ಟ ಆಗುತ್ತಿದೆ. ಇನ್ನು “ಎನರ್ಜಿ ಆಡಿಟ್‌’ (ಇಂಧನ ಲೆಕ್ಕಪರಿಶೋಧನೆ) ಸಮರ್ಪಕವಾಗಿಲ್ಲ. ಹೀಗಾಗಿ,
ನಷ್ಟದ ಪ್ರಮಾಣ ಪ್ರಶ್ನಾರ್ಹವಾಗಿದೆ ಎಂದು ಇಂಧನ ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

ವ್ಯತಿರಿಕ್ತ ಅಂಶಗಳು: ಈ ಮಧ್ಯೆ 2012-13ರಿಂದ 2014-15ರ ವರೆಗಿನ ಕೇಂದ್ರದ ಇಂಧನ ಹಣಕಾಸು ನಿಗಮ (ಪವರ್‌ ಫೈನಾನ್ಸ್‌ ಕಾರ್ಪೋರೇಷನ್‌) ವರದಿ ಹಾಗೂ ಕರ್ನಾಟಕ ಆರ್ಥಿಕ ಸಮೀಕ್ಷೆ ವರದಿಯಲ್ಲಿ ನೀಡಿರುವ ತಾಂತ್ರಿಕ ಮತ್ತು ವಾಣಿಜ್ಯ ನಷ್ಟ (ಎಟಿ ಆ್ಯಂಡ್‌ ಸಿ ನಷ್ಟ)ದ ಅಂಕಿ-ಅಂಶಗಳಲ್ಲಿ ವ್ಯತ್ಯಾಸ ಇದೆ. ಇಂಧನ ಹಣಕಾಸು ನಿಗಮದ
ಪ್ರಕಾರ ನಷ್ಟದ ಪ್ರಮಾಣ 2012-13ರಲ್ಲಿ ಶೇ.20.78 ಹಾಗೂ 2013-14ರಲ್ಲಿ ಶೇ.22.02 ಮತ್ತು 2014-15ರಲ್ಲಿ ಶೇ.18.71 ಇದೆ. ಆದರೆ, ಆರ್ಥಿಕ ಸಮೀಕ್ಷೆಯಲ್ಲಿ ಇದರ ಪ್ರಮಾಣ ಕ್ರಮವಾಗಿ ಶೇ.19.1 ಹಾಗೂ ಶೇ.18.25 ಮತ್ತು ಶೇ.17.08 ಇದೆ. ಆದ್ದರಿಂದ ಎನರ್ಜಿ ಆಡಿಟ್‌ನಿಂದ ಮಾತ್ರ ಗೊಂದಲ ಬಗೆಹರಿಸಬಹುದು ಎನ್ನುತ್ತವೆ ಇಂಧನ
ಇಲಾಖೆ ಮೂಲಗಳು.

ನಿರ್ವಹಣೆ ದಕ್ಷತೆಗೆ 30,339 ಕೋಟಿ ರೂ. ಖರ್ಚು
ಪ್ರಸರಣ ಮತ್ತು ವಿತರಣೆಯಲ್ಲಿ ನಷ್ಟವನ್ನು ತಗ್ಗಿಸಲು ಸಾವಿರಾರು ಕೋಟಿ ರೂ. ವ್ಯಯಿಸಲಾಗಿದೆ. 2005-06ರಿಂದ ಈವರೆಗೆ 30,339 ಕೋಟಿ ರೂ. ಖರ್ಚು ಮಾಡಲಾಗಿದೆ. ಇದು ವಿದ್ಯುತ್‌ ನಿರ್ವಹಣೆಯಲ್ಲಿ ದಕ್ಷತೆಯನ್ನು ತರಲು ಅತ್ಯಗತ್ಯ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ಹೇಳುತ್ತಾರೆ. ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ಎಚ್‌ಟಿ ಲೈನ್‌ಗಳಲ್ಲಿ ನಷ್ಟದ ಪ್ರಮಾಣ ಕಡಿಮೆ. ಲೋಟೆನÒನ್‌ ಮಾರ್ಗದಲ್ಲಿ ವಿದ್ಯುತ್‌ ಕಳ್ಳತನದಂತಹ ನಷ್ಟ ಹೆಚ್ಚು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next