Advertisement

8 ತಿಂಗಳಲ್ಲಿ 130 ಬಾಲ್ಯವಿವಾಹ ಬೆಳಕಿಗೆ!

02:22 PM Dec 28, 2019 | Suhan S |

ಕೊಪ್ಪಳ: ಶೈಕ್ಷಣಿಕವಾಗಿ ಹಿಂದುಳಿದಂತ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಇಂದಿಗೂ ಸದ್ದು ಮಾಡುತ್ತಿದೆ. ಕಳೆದ 8 ತಿಂಗಳಲ್ಲಿ 130 ಬಾಲ್ಯವಿವಾಹ ನಡೆಯುವ ಬಗ್ಗೆ ದೂರು ಬಂದಿದ್ದು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 128 ಬಾಲ್ಯ ವಿವಾಹ ತಡೆದಿದೆ. ಇಷ್ಟಾದರೂ ಸಾರ್ವಜನಿಕರಲ್ಲಿ ಇನ್ನೂ ಜಾಗೃತಿ ಇಲ್ಲ !

Advertisement

ಹೌದು. ಕಲ್ಯಾಣ ಕರ್ನಾಟಕ (ಹೈದ್ರಾಬಾದ್‌ ಕರ್ನಾಟಕ)ದಲ್ಲಿ ಕೊಪ್ಪಳ ಜಿಲ್ಲೆಯ ಜನತೆಯಲ್ಲಿ ಶಿಕ್ಷಣದ ಬಗೆಗಿನ ಜಾಗೃತಿ, ಕಾನೂನಿನ ತಿಳಿವಳಿಕೆ ಕಡಿಮೆಯಿದೆ. ಪಾಲಕರಲ್ಲಿ ಮಕ್ಕಳನ್ನು ಬೇಗ ಮದುವೆ ಮಾಡಿಕೊಡಬೇಕು. ಮನೆಗೆ ಭಾರ ಎನ್ನುವ ಭಾವನೆಯಿಂದಲೇ ಹಿರಿಯರ ಮಾತಿನ ಒಪ್ಪಂದದಂತೆ ಎಳೆಯ ಕಂದಮ್ಮಗಳಿಗೆ ಸಂಸಾರಿಕ ಅರ್ಥವೇ ತಿಳಿಯದ ವಯಸ್ಸಿನಲ್ಲಿ ವಿವಾಹ ಮಾಡುವ ಕಾರ್ಯ ನಡೆಯುತ್ತಿವೆ.

ಸರ್ಕಾರ ಬಾಲ್ಯವಿವಾಹ ತಡೆಗೆ ಹಲವಾರು ಕಾಯ್ದೆಗಳನ್ನು ರೂಪಿಸಿದೆ. ಕಠಿಣ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ನಿರಂತರ ಪ್ರಚಾರ ಮೂಡಿಸುತ್ತಿದೆ.ಇಷ್ಟಾದರೂ ಕಾಯ್ದೆ, ಕಾನೂನಿನ ಬಗ್ಗೆ ಹೆಚ್ಚು ಗಮನ ನೀಡದ ಜನತೆ ತಮ್ಮ ಕಾಯಕದಲ್ಲೇ ನಿರತರಾಗುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಕಳೆದ 8 ತಿಂಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬರೊಬ್ಬರಿ 130 ಬಾಲ್ಯವಿವಾಹದ ದೂರು ಬಂದಿದ್ದು, ಇವುಗಳಲ್ಲಿ 116 ಬಾಲ್ಯವಿವಾಹ ತಡೆಯಲಾಗಿದೆ. ಇದರಲ್ಲೇ 128 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ವಿಚಾರಣೆ ಮಾಡಲಾಗಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತಿದೆ. ಬಾಲ್ಯವಿವಾಹಗಳನ್ನುನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿ ವರ್ಗ ಹೇಳುತ್ತಿದ್ದರೂ, ಸದ್ದಿಲ್ಲದೇ 130 ಬಾಲ್ಯ ವಿವಾಹದ ಪ್ರಕರಣ ಕೇಳಿ ಬಂದಿವೆ.

ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ 561 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 495 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಪಾಲಕರ, ಮಗುವಿನ ಸಮಸ್ಯೆ ಬಗ್ಗೆಯೂ ಸುದೀರ್ಘ‌ ಚರ್ಚೆ ಮಾಡಲಾಗಿದೆ. ಇವುಗಳಲ್ಲಿ 66 ಮಕ್ಕಳ ಪಾಲಕರಿಗೆ ತಿಳಿವಳಿಕೆ ಹೇಳಿ ವಿವಾಹ ತಡೆಹಿಡಿಯಲಾಗಿದೆ. ಇದರಲ್ಲೇ 14 ಮಕ್ಕಳನ್ನು ವಸತಿ ನಿಲಯಕ್ಕೆ ಸೇರ್ಪಡೆ ಮಾಡಿ ಅವರಿಗೆ ಶಿಕ್ಷಣ ಕೊಡಿಸುವ ಕಾಯಕವೂ ನಡೆದಿದೆ. ಬಾಲ್ಯವಿವಾಹ ಮಾಡಿದ ಪಾಲಕರ ಮೇಲೆ 34 ಪ್ರಕರಣ ದಾಖಲಿಸಲಾಗಿದೆ. ಇಷ್ಟೆಲ್ಲ ಘಟನೆ ನಡೆದರೂ ಜಿಲ್ಲೆಯಲ್ಲಿನ ಜನತೆಯಲ್ಲಿ ಕಾನೂನಿನ ಜಾಗೃತಿ ಮೂಡುತ್ತಿಲ್ಲ.

ಅಧಿಕಾರಿಗಳಿಗೆ ದಿಗ್ಬಂಧನ!: ಬಾಲ್ಯವಿವಾಹ ತಡೆಗೆ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಸಹಾಯವಾಣಿ-1098 ಸೇರಿದಂತೆ ಯುನೆಸೆಫ್‌ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪೊಲೀಸ್‌ ಪಡೆಗೆ ವಿಶೇಷಾಧಿಕಾರ ನೀಡಲಾಗಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಕ್ಕಳ ಮದುವೆ ತಡೆಯಲು ತೆರಳಿದ ಅಧಿಕಾರಿ, ಸಿಬ್ಬಂದಿಗೆ ದಿಗ್ಬಂಧನ ಹಾಕಿ ಮದುವೆ ಮಾಡಿದ ಪ್ರಕಣಗಳು ಬೆಳಕಿಗೆ ಬಂದಿವೆ. ಇನ್ನು ಕೆಲ ರಾಜಕಾರಣಿಗಳ ಮೂಲಕ ಬಾಲ್ಯವಿವಾಹ ತಡೆಗೆ ತೆರಳಿದ ಅಧಿಕಾರಿ ವರ್ಗಕ್ಕೆ ರಾಜಕಾರಣದ ಒತ್ತಡವೂ ಕೇಳಿ ಬರುತ್ತಿವೆಯಂತೆ.

Advertisement

ಪ್ರಸ್ತುತ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಸಾರ ಬಾಲ್ಯ ವಿವಾಹ ಮಾಡಿದ ಅರ್ಚಕರು, ತಂದೆ-ತಾಯಿ, ಹುಡುಗನ ತಂದೆ-ತಾಯಿ, ಮದುವೆಗೆ ಬರುವ ಸಂಬಂಧಿಕರು ಸೇರಿ ವಿವಾಹ ನೆರವೇರಿಸಲು ಸಹಕಾರ ನೀಡುವ ಸಂಘಟಕರ ಮೇಲೂ ಕಾನೂನಿನಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ. ಕೆಲವರ ಮೇಲೆಯೂ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣವು ನಡೆದಿವೆ. ಇಷ್ಟಾದರೂ ಪಾಲಕರಲ್ಲಿ, ಅದರಲ್ಲೂ ಗ್ರಾಮೀಣ ಭಾಗದ ಜನತೆ ಬಾಲ್ಯವಿವಾಹ ಮಾಡುವುದನ್ನು ನಿಲ್ಲಿಸಿಲ್ಲ. ಹಿರಿಯರ ಆಣೆ-ಪ್ರಮಾಣ ಮನೆ ಸಂಬಂಧಿಯೊಳಗಿನ ಒಪ್ಪಂದ, ಹೆಣ್ಣು ಮಕ್ಕಳು ಮನೆಗೆ ಭಾರ, ಬೇಗನೆ ಮದುವೆ ಮಾಡಿದರೆ ನಮ್ಮ ಹೊಣೆ ಕಡಿಮೆಯಾಗಲಿದೆ ಎನ್ನುವ ಯೋಚನೆಯಂತ ಮೌಡ್ಯತೆಗಳೇ ಕಂದಮ್ಮಗಳನ್ನು ಕಂದಕಕ್ಕೆ ನೂಕುವ ಕಾಯಕ ನಡೆದಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಧಿಕಾರಿ ವರ್ಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಬೇಕಿದೆ. ಸದ್ಯ 8 ತಿಂಗಳಲ್ಲಿ 130 ದೂರು ಅಧಿಕೃತವಾಗಿಯೇ ಬಂದಿವೆ. ಇನ್ನೂ ಗೊತ್ತಿಲ್ಲದಂತೆ ಹಲವು ಮದುವೆಗಳು ಇಂದಿಗೂ ನಡೆಯುತ್ತಲೇ ಇವೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನ ನೀಡಬೇಕಿದೆ.

ಬಾಲ್ಯವಿವಾಹ ನಿಯಂತ್ರಣಕ್ಕೆ ಅಧಿಕಾರಿಗಳ ತಂಡ ಹೆಚ್ಚಿನ ನಿಗಾ ವಹಿಸಿದೆ. ಜಿಲ್ಲಾಧಿಕಾರಿ, ಸಿಇಒ ಹಾಗೂ ಎಸ್‌ಪಿ ಅವರಿಂದ ನಮಗೆ ಕಟ್ಟುನಿಟ್ಟಿನ ಸೂಚನೆಯೂ ಇದೆ. ಬಾಲ್ಯ ವಿವಾಹ ತಡೆಯಲು ತೆರಳಿದವರ ಮೇಲೆ ಕೆಲವೊಮ್ಮೆ ದೌರ್ಜನ್ಯಗಳೂ ನಡೆದಿವೆ. ಆದರೂ ಮಕ್ಕಳ ಮದುವೆ ನಿಲ್ಲಿಸುವ ಕಾರ್ಯ ನಡೆಸಿದ್ದೇವೆ. ವೀರೇಶ ನಾವದಗಿ, ಪ್ರಭಾರಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next