Advertisement

125 ವಸಂತ ಪೂರೈಸಿದ ಜಿಕೆಬಿಎಂಎಸ್‌ ಶಾಲೆ

03:43 PM Nov 15, 2018 | |

ರಾಮನಗರ: ಬರೋಬ್ಬರಿ 125 ವರ್ಷಗಳ ಇತಿಹಾಸ ಇರುವ ನಗರದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ (ಜಿಕೆಬಿಎಂಎಸ್‌- ಗೌರ್ನಮೆಂಟ್‌ ಕನ್ನಡ ಬಾಯ್ಸ ಮಾಡೆಲ್‌ ಸ್ಕೂಲ್‌) ಮೊದಲಿಗೆ ಆಂಗ್ಲರು ಸ್ಥಾಪಿಸಿದ್ದ ಆಂಗ್ಲ ಮಾಧ್ಯಮ ಶಾಲೆ. ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್‌ ಹನುಮಂತಯ್ಯ, ಆಂಗ್ಲ ಸಾಹಿತಿ ಸಿ.ಡಿ.ನರಸಿಂಹ ಯ್ಯ, ಐಎಎಸ್‌ ಅಧಿಕಾರಿಗಳಾದ ಬಿ.ಪಾರ್ಥ ಸಾರಥಿ, ಜಿ.ವಿ.ಕೆ. ರಾವ್‌ ಮುಂತಾದ ಖ್ಯಾತನಾಮರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ ಎಂದು ಈ ಶಾಲೆಯಲ್ಲಿಯ ದಾಖಲಾತಿ ತೋರಿಸುತ್ತದೆ. ಇಂದು ಯಶಸ್ವಿಯಾಗಿ ನಡೆಯುತ್ತಿರುವ ಕನ್ನಡ ಮಾಧ್ಯಮ ಶಾಲೆ. ಬಹುಶಃ ರಾಮನಗರ ತಾಲೂಕಿನಲ್ಲೇ ಪ್ರಥಮವಾಗಿ ಸ್ಥಾಪಿಸಿದ ಶಾಲೆ ಇದಾಗಿದೆ.

Advertisement

ವೆಸ್ಲಿಯನ್‌ ಮಿಷನ್‌ ಏಡೆಡ್‌ ಇಂಗ್ಲಿಷ್‌ ಸ್ಕೂಲ್‌: ಜಿಕೆಬಿ ಎಂಎಸ್‌ ಕಟ್ಟಡವನ್ನು ಶಾಲೆ ನಡೆಸು ವುದಕ್ಕಾಗಿ ಕಟ್ಟಿದ ಕಟ್ಟಡವಲ್ಲ. ಬ್ರಿಟಿಷ್‌ ಅಧಿಕಾರಿಗಳ ತಂಗುವ ಸ್ಥಳ ಮತ್ತು ಪ್ರಾರ್ಥನಾ ಮಂದಿರವಾಗಿತ್ತು. ಇಲ್ಲಿನ ನಿವಾಸಿಗಳ ಉಪಯೋಗಕ್ಕೆಂದು “ದಿ ವೆಸ್ಲಿಯನ್‌ ಮಿಷನ್‌ ಏಡೆಡ್‌ ಇಂಗ್ಲಿಷ್‌ ಸ್ಕೂಲ್‌” ಎಂಬ ಆಂಗ್ಲ ಮಾಧ್ಯಮ ಶಾಲೆಯನ್ನು 1893ರಲ್ಲಿ ಆರಂಭಿಸಲಾಗಿದೆ.

   33 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ 1 ರಿಂದ 4ರವರೆಗೆ ತರಗತಿಗಳು ನಡೆಯು ತ್ತಿದ್ದವು. 1924ರಲ್ಲಿ ಈ ಶಾಲೆ ಯಲ್ಲಿ ಹಿರಿಯ ಪ್ರಾಥಮಿಕ ತರಗತಿಗಳು ಆರಂಭ ವಾಗಿ “ವೆಸ್ಲಿಯನ್‌ ಮಿಡಲ್‌ ಸ್ಕೂಲ್‌” ಎಂದು ಮರು ನಾಮಕರಣ ದೊಂದಿಗೆ ಮುಂದುವರೆಯಿತು.

ಪುನರ್‌ ನಾಮಕರಣ: 1931ರಲ್ಲಿ “ವೆಸ್ಲಿಯನ್‌ ಮಿಷನ್‌ ಕನ್ನಡ ಸ್ಕೂಲ್‌” ಆಗಿ ಪರಿವರ್ತನೆಯಾಗಿದೆ. ವರ್ಷಗಳು ಉರುಳಿದಂತೆ ಮೆಥೋಡಿಯನ್‌ ಮಿಷನ್‌ ಸೊಸೈಟಿ ಎಂಬ ಸಂಘಟನೆ ಈ ಶಾಲೆಯನ್ನು ನಿರ್ವಹಿಸಿದೆ. 1941ರಲ್ಲಿ ಸರ್ಕಾರ ಈ ಶಾಲೆಯನ್ನು ವಹಿಸಿಕೊಂಡು ನಿರ್ವಹಿಸಲಾರಂಭಿಸಿದೆ. ಅಂದಿ ನಿಂದ ಈ ಶಾಲೆಯ ಹೆಸರು ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ (ಜಿಕೆಬಿಎಂಎಸ್‌) ಎಂದು ಪುನರ್‌ ನಾಮಕರಣಗೊಂಡಿದೆ. 1896ರಿಂದ 1956ರವರೆಗೆ ಆಂಗ್ಲ ಅಧಿಕಾರಿಗಳು, ಗಣ್ಯರು ಈ ಶಾಲೆಗೆ ಭೇಟಿ ನೀಡುತ್ತಿದ್ದು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ, ಅತ್ಯುತ್ತಮ ಶಾಲೆ ಎಂದು ಕೂಡ ಬರೆದಿದ್ದಾರೆ ಎಂದು ಶಾಲೆಯ ಮೂಲಗಳು ತಿಳಿಸಿವೆ.

2 ಎಕರೆ ಭೂ ಪ್ರದೇಶ: ಮೊದಲಿಗೆ ಈ ಕಟ್ಟಡದಲ್ಲಿ ಒಂದು ಹಾಲ್‌ ಮತ್ತು ಎರಡು ಕೊಠಡಿಗಳಿದ್ದವು. 1938ರಲ್ಲಿ 5 ಕೊಠಡಿಗಳನ್ನು ಹೆಚ್ಚುವರಿಯಾಗಿ ಕಟ್ಟಿಸಲಾಗಿದೆ. ಸದ್ಯ ಹಳೆ ಕಟ್ಟಡದಲ್ಲಿ 11 ಕೊಠಡಿಗಳಿವೆ. 1990ರ ದಶಕದಲ್ಲಿ ಹಳೆ ಕಟ್ಟಡದ ಉತ್ತರ ಭಾಗದಲ್ಲಿ ಸರ್ಕಾರ ಇನ್ನು 10 ಕೊಠಡಿಗಳನ್ನು ನಿರ್ಮಿಸಿದೆ. ಈ ಶಾಲೆಗೆ 2 ಎಕರೆ ಭೂ ಪ್ರದೇಶವಿದೆ. ಬಿಇಒ ಕಚೇರಿ, ಸಿಆರ್‌ಪಿ ಕಚೇರಿ ಸಹ ನಿರ್ಮಾಣವಾಗಿದೆ.

Advertisement

 1200 ವಿದ್ಯಾರ್ಥಿಗಳಿದ್ದ ದಾಖಲಾತಿ ಕ್ಷೀಣಿಸುತ್ತಿದೆ: ಹಿರಿಯ ಪ್ರಾಥಮಿಕ ತರಗತಿಗಳು ಇಲ್ಲಿ ಮಾತ್ರ ನಡೆಯುತ್ತಿದ್ದಿದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಬೆಳಗಿನ ಹೊತ್ತು 1 ರಿಂದ 4ನೇ ತರಗತಿ ಮತ್ತು ಮಧ್ಯಾಹ್ನದ ಅವಧಿಯಲ್ಲಿ 5 ರಿಂದ 7ನೇ ತರಗತಿಗಳು ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
 
ಪ್ರಸಕ್ತ ಸಾಲಿನಲ್ಲಿ 380 ವಿದ್ಯಾರ್ಥಿಗಳು: 10 ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಶಾಲೆಗಳು ಇರದ ಕಾರಣ ಈ ಶಾಲೆಗೆ ಬಹು ಬೇಡಿಕೆ ಇತ್ತು. ಕೆಲವು ವರ್ಷ ಸಾವಿರಕ್ಕೂ ಅಧಿಕ ಮಕ್ಕಳು ಇಲ್ಲಿ ವ್ಯಾಸಂಗ ಮಾಡಿದ್ದಾರೆ. 2002-03ನೇ ಸಾಲಿ ನಿಂದ ದಾಖಲೆ ಇಳಿಮುಖವಾಗಿದೆ. ಆಯಾ ಬಡಾವಣೆ, ಗ್ರಾಮ ಗಳಲ್ಲೇ ಸರ್ಕಾರ ಶಾಲೆ ಆರಂಭಿಸಿದ್ದರಿಂದ ದಾಖಲಾತಿ ಇಳಿಕೆಗೆ ಕಾರಣವಾಗಿದೆ. ಪ್ರಸಕ್ತ ಸಾಲಿನಲ್ಲಿ 380 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 

ಹಳೆ ವಿದ್ಯಾರ್ಥಿಗಳು ಸಂಘಟಿತರಾಗಬೇಕಾಗಿ¨ 1893ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ಇಂಜಿನಿಯರ್‌ಗಳು, ವೈದ್ಯರು, ಶಿಕ್ಷಕರು, ಸರ್ಕಾರಿ ಸೇವೆ, ವ್ಯಾಪಾರಿಗಳು ಹೀಗೆ ಅನೇಕ ವೃತ್ತಿಗಳಲ್ಲಿ ತೊಡಗಿಸಿಕೊಂಡು ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳು ಸಂಘಟಿತ ರಾಗಿ ಶತಮಾನೋತ್ಸವ ಸಮಾರಂಭವನ್ನು ಆಚರಿಸುವುದರ ಮೂಲಕ ಶಾಲೆಯ ಹಿರಿಮೆ ಯನ್ನು ಅಧುನಿಕ ಯುಗದಲ್ಲಿ ದಾಖಲಿಸಬೇಕು ಎಂಬುದು ಇಲ್ಲಿನ ನಾಗರಿಕರ ಅಭಿಪ್ರಾಯ.

ಕಟ್ಟಡವನ್ನು ಉಳಿಸಿಕೊಂಡು, ಶತಮಾನೋತ್ಸವ ಭವನ ನಿರ್ಮಿಸಲು ಸರ್ಕಾರವನ್ನು ಆಗ್ರಹಿಸಿ, ತಾವು ಸಹ ತನು, ಮನ, ಧನ ಸಹಕಾರ ನೀಡಬೇಕಾಗಿದೆ. ಶತಮಾನೋತ್ಸವ ಭವನದಲ್ಲಿ ಸುಸಜ್ಜಿತ ತರಗತಿ ಕೊಠಡಿಗಳು, ಆಧುನಿಕ ಕಲಿಕಾ ಸಾಧನಗಳನ್ನು ಅಳವಡಿ ಸಬೇಕಾಗಿದೆ. ಮಾದರಿ ಶಾಲೆ ತನ್ನ ಹೆಸರಿಗೆ ತಕ್ಕಂತೆ ಮಾದರಿ ಶಾಲೆಯಾಗಿ ಪರಿವರ್ತಿಸಲು ಸರ್ಕಾರ, ಸಮುದಾಯ ಮುಂದಾಗಬೇಕಾಗಿದೆ. 

ನಾನು ಸಹ ಜಿಕೆಬಿಎಂಎಸ್‌ಶಾಲೆಯಲ್ಲಿ 6 ಮತ್ತು 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡಿದ್ದೇನೆ. ಹಳೆ ಕಟ್ಟಡವಾದ್ದರಿಂದ ಮೂಲ ಸೌಕರ್ಯಗಳು ವೃದ್ಧಿಯಾಗಬೇಕಾಗಿದೆ. ಜೊತೆಗೆ ವಿಶಾಲವಾಗಿರುವ ಈ ಆವರಣಕ್ಕೆ ತಕ್ಕದಾಗಿ ಕಾಂಪೌಂಡ್‌ ನಿರ್ಮಿಸುವ ಮೂಲಕ
ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. 
ಕೆ.ವಿ.ಉಮೇಶ್‌, ಆಭರಣ ವ್ಯಾಪಾರಿ

 ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್‌ ಹನುಮಂತಯ್ಯ, ಆಂಗ್ಲ ಸಾಹಿತಿ ಸಿ.ಡಿ.ನರಸಿಂಹಯ್ಯ, ಐಎಎಸ್‌ ಅಧಿಕಾರಿಗಳಾದ ಬಿ.ಪಾರ್ಥಸಾರಥಿ, ಜಿ.ವಿ.ಕೆ. ರಾವ್‌ ಮುಂತಾದ ಖ್ಯಾತನಾಮರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ ಎಂದು ಇಲ್ಲಿ ಸೇವೆ ಸಲ್ಲಿಸಿದ ಹಿರಿಯರು ವರದಿ ದಾಖಲಿಸಿದ್ದಾರೆ.
 ಎಚ್‌.ಶ್ರೀನಿವಾಸ್‌, ಮುಖ್ಯ ಶಿಕ್ಷಕರು

ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next