Advertisement

1,204 ರೌಡಿಶೀಟರ್‌ ಮನೆ ಮೇಲೆ ದಾಳಿ

10:42 AM Oct 14, 2019 | Suhan S |

ಹುಬ್ಬಳ್ಳಿ: ಅವಳಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದ ಅಪರಾಧ ಕೃತ್ಯಗಳು ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಕಾನೂನು-ಸುವ್ಯವಸ್ಥೆ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್‌ ಕಮಿಷನರೇಟ್‌ ಘಟಕ ಈಗಾಗಲೇ 1200ಕ್ಕೂ ಅಧಿಕ ರೌಡಿಶೀಟರ್‌ಗಳ ಮನೆಗಳ ಶೋಧ ನಡೆಸಿ ಬಿಸಿ ಮುಟ್ಟಿಸಿದೆ.

Advertisement

ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಸರಣಿ ಚಾಕು ಇರಿತ ಮತ್ತು ಓರ್ವನ ಕೊಲೆ ಪ್ರಕರಣ, ನಂತರದ ದಿನಗಳಲ್ಲಿ ಅವಳಿ ನಗರದಲ್ಲಿ ನಡೆದ ಶೂಟೌಟ್‌, ಕೊಲೆ, ಚಾಕು ಇರಿತದಂತಹ ಪ್ರಕರಣಗಳಿಂದ ಅವಳಿ ನಗರದ ಜನ ಆತಂಕಕ್ಕೊಳಗಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಭೀತಿಗೊಂಡಿದ್ದರು. ಅಲ್ಲದೆ ಪೊಲೀಸ್‌ ವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸತೊಡಗಿದ್ದರು.

ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡ ಆಯುಕ್ತ ಆರ್‌. ದಿಲೀಪ್‌ ಅವರು ತಮ್ಮ ಮುಂದಾಳತ್ವದಲ್ಲಿಯೇ ಸೆ. 24ರಿಂದ ಅ. 12ರ ವರೆಗೆ ಒಟ್ಟು 1204 (ಪೊಲೀಸ್‌ ಇಲಾಖೆಯ ಮಾಹಿತಿ ಅನುಸಾರ) ರೌಡಿಶೀಟರ್‌ಗಳ ಮನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ 355 ರೌಡಿಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಜೊತೆಗೆ ಪ್ರಮುಖ ರೌಡಿಶೀಟರ್‌ಗಳಾದ ನಾಗಶೆಟ್ಟಿಕೊಪ್ಪದ ಅಲ್ತಾಫ ಎಂ. ಬೇಪಾರಿ, ಶಾಂತಿನಗರದ ಶಿವಕುಮಾರ ಬಾಲಸುಬ್ರಮಣ್ಯಂ, ಗೋಪನಕೊಪ್ಪ ವಡ್ಡರ ಓಣಿಯ ಮಂಜುನಾಥ ಎಸ್‌. ಪೂಜಾರ, ನಾಗಶೆಟ್ಟಿಕೊಪ್ಪ ವಡ್ಡರ ಓಣಿಯ ಕಿರಣ ಎಂ. ಮಾನೆ, ವಿಶಾಲ ಜಾಧವ ಬಂಧಿಸುವ ಮೂಲಕ ರೌಡಿಶೀಟರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದುವರೆಗೆ ಒಟ್ಟಾರೆ ಹುಬ್ಬಳ್ಳಿಯಲ್ಲಿ 1118 ಹಾಗೂ ಧಾರವಾಡದಲ್ಲಿ 86 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

 ಅಕ್ರಮ ಹಣಕಾಸು ವ್ಯವಹಾರಗಳಿಗೆ ರೌಡಿಗಳ ನೆರವು ಬಳಕೆ? : ನಗರದಲ್ಲಿ ಅಕ್ರಮ ದಂಧೆ ಹಾಗೂ ಮೀಟರ್‌ ಬಡ್ಡಿ ಕುಳಗಳು ತಮ್ಮ ವ್ಯವಹಾರ ಸಲೀಸಾಗಿ ನಡೆಯಲು ರೌಡಿಗಳನ್ನು ಬಳಸಿಕೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಸಾಲಗಾರರು ಬಡ್ಡಿ ಹಣ ಕೊಡಲು ವಿಳಂಬ ಮಾಡಿದಾಗ ಇಲ್ಲವೆ ಅಸಲು ಕೊಡಲು ಅವರನ್ನು ತಡಕಾಡಿಸಿದಾಗ ಬಡ್ಡಿಕೋರರು ರೌಡಿಗಳನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಾರೆ. ಅದೇರೀತಿ ಅಣ್ಣಾಗಳೆನಿಸಿಕೊಂಡ ಕೆಲವರು ತಮ್ಮ ಹಫ್ತಾ ವಸೂಲಿಗಾಗಿ ರೌಡಿಗಳ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬಡ್ಡಿ ಕುಳಗಳ, ಹಫ್ತಾ ವಸೂಲಿದಾರರ ಹಾಗೂ ಅಕ್ರಮ ದಂಧೆಕೋರರಿಗೆ ಪೂರಕವಾಗಿ ಕೆಲಸ ಮಾಡುವ ಸಲುವಾಗಿಯೇ ಕೆಲ ರೌಡಿಗಳು ಹುಟ್ಟಿಕೊಂಡಿದ್ದಾರೆ. ನಗರದಲ್ಲಿ ಪ್ರತಿಷ್ಠಿತರೆಂದೆನಿಸಿಕೊಂಡ ಕೆಲವರು ಬಡ್ಡಿ ವ್ಯವಹಾರವನ್ನೇ ತಮ್ಮ ಕಸುಬನ್ನಾಗಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸ್‌ ಆಯುಕ್ತರು ರೌಡಿಶೀಟರ್‌ಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಅಕ್ರಮ ದಂಧೆಕೋರರು, ಬಡ್ಡಿ ಕುಳಗಳು ಹಾಗೂ ಹಫ್ತಾ ವಸೂಲಿಗಾರರನ್ನು ಮಟ್ಟ ಹಾಕಿದರೆ ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆಗಳು ತನ್ನಂದತಾನೇ ಹತೋಟಿಗೆ ಬರಲು ಸಾಧ್ಯವೆಂಬ ಮಾತುಗಳು ಕೇಳಿಬರುತ್ತಿವೆ.

Advertisement

ಅಕ್ರಮ ದಂಧೆ-ಬಡ್ಡಿ ಕುಳಗಳ ಮೇಲೂ ಕ್ರಮ : ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ಅವರು ರೌಡಿಶೀಟರ್‌ಗಳ ಮೇಲೆ ಮಾತ್ರ ಕ್ರಮಕೈಗೊಳ್ಳದೆ ಅಕ್ರಮ ದಂಧೆ, ಮೀಟರ್‌ ಬಡ್ಡಿ, ಹಫ್ತಾ ವಸೂಲಿ ಹಾಗೂ ಬೇರೆಯವರ ಹೆಸರನಲ್ಲಿನ ಆಸ್ತಿ ಮಾರಾಟ ಮಾಡುತ್ತಿದ್ದ ವಂಚಕರ ಬಾಲ ಕತ್ತರಿಸುತ್ತಿದ್ದಾರೆ. ಬೇರೆಯವರ ಆಸ್ತಿಯನ್ನು

ಜಿಪಿಎ ಆಧಾರಿಸಿ ಮಾರಾಟ ಮಾಡುತ್ತಿದ್ದ ನರೇಶ ರಾವಲ್‌ ಹಾಗೂ ಸಾರ್ವಜನಿಕರು ಮತ್ತು ತರಕಾರಿ, ಹಣ್ಣು ವ್ಯಾಪಾರಿಗಳನ್ನು ಹೆದರಿಸಿ ಅಕ್ರಮ ದಂಧೆ ನಡೆಸುತ್ತಿದ್ದ ಫ್ರೂಟ್‌ ಇರ್ಫಾನ್‌ನನ್ನು ಬಂಧಿಸುವ ಮೂಲಕ ಇತರೆ ಮೀಟರ್‌ ಬಡ್ಡಿ ಕುಳಗಳು, ಹಫ್ತಾ ವಸೂಲಿಗಾರರು, ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

ಅವಳಿ ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆ, ಮೀಟರ್‌ ಬಡ್ಡಿ, ಹಫ್ತಾ ವಸೂಲಿ ಸೇರಿದಂತೆ ಇನ್ನಿತರೆ ಅನೈತಿಕ ಚಟುವಟಿಕೆಗಳನ್ನು ಬುಡಸಮೇತ ಕಿತ್ತು ಹಾಕಲು ಯೋಜಿಸಲಾಗಿದೆ. ಯಾರಾದರೂ ಅಮಾಯಕರು, ಸಾರ್ವಜನಿಕರು ಇಂತಹ ದಂಧೆಕೋರರಿಂದ ವಂಚನೆ, ಅನ್ಯಾಯಕ್ಕೊಳಗಾಗಿದ್ದರೆ ಇಲಾಖೆಗೆ ಮಾಹಿತಿ ಕೊಟ್ಟರೆ ಅಂಥವರನ್ನು ಯಾವುದೇ ಒತ್ತಡ, ಮುಲಾಜಿಲ್ಲದೆ ಮಟ್ಟಹಾಕಲಾಗುವುದು. ಇಂಥವರಿಂದಲೇ ಸಮಾಜದಲ್ಲಿ ರೌಡಿಗಳು ಹುಟ್ಟಿಕೊಳ್ಳುತ್ತಿದ್ದಾರೆ.  –ಆರ್‌. ದಿಲೀಪ್‌, ಹು-ಧಾ ಪೊಲೀಸ್‌ ಆಯುಕ್ತ

 

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next