Advertisement

ಟೂರ್ ಪ್ಯಾಕೇಜ್ ಹೆಸರಿನಲ್ಲಿ 12 ಲಕ್ಷ ರೂ. ವಂಚನೆ: ಆರೋಪಿ ಬಂಧನ

08:25 PM Jul 13, 2023 | Team Udayavani |

ಪಣಜಿ: ಟೂರ್ ಪ್ಯಾಕೇಜ್ ಹೆಸರಿನಲ್ಲಿ 12 ಲಕ್ಷ ರೂಪಾಯಿ ದೋಚಿದ್ದ ಶಂಕಿತ ಥಾಣೆ-ಮಹಾರಾಷ್ಟ್ರದ ಯತೀನ್ ಶ್ರೀರಾಮ ಕೋಚೆ ಎಂಬ ಆರೋಪಿಯನ್ನು ಡಿಚೋಲಿ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಲೊಕೇಶನ್ ಆಧಾರದ ಮೇಲೆ ಪೊಲೀಸರು ಶಂಕಿತನನ್ನು ಥಾಣೆಯಲ್ಲಿ ಬಂಧಿಸಿದ್ದಾರೆ.

Advertisement

ಆರೋಪಿ ಕಳೆದ ಆರು ತಿಂಗಳಿನಿಂದ ನಾಪತ್ತೆಯಾಗಿದ್ದ. ಪ್ರತಿ ಬಾರಿಯೂ ಅವನು ಸ್ಥಳವನ್ನು ಬದಲಾಯಿಸುತ್ತಿದ್ದ. ಶಂಕಿತ ಆರೋಪಿ ಸಾಖಳಿಯಲ್ಲಿರುವ  ಗುರುನಾಥ್ ವಾಮನ್ ನಾಯ್ಕ್ ಮತ್ತು ಆತನ ಗೆಳೆಯರಿಗೆ ಉತ್ತರ ಪ್ರದೇಶದಲ್ಲಿ ಟೂರ್ ಪ್ಯಾಕೇಜ್ ಆಯೋಜಿಸುವುದಾಗಿ ಆಮಿಷ ತೋರಿಸಿ 2.5 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದರು. ಹಣ ತೆಗೆದುಕೊಂಡ ನಂತರ ಆರೋಪಿ ನಾಪತ್ತೆಯಾಗಿದ್ದ.

ಮೋಸಹೋದ ಗುರುನಾಥ್ ನಾಯ್ಕ್ ಎಂಬುವರು ಡಿಚೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಂಕಿತ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಡಿ.17 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 507 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಶಂಕಿತನ ಜಾಡು ಹಿಡಿದಿದ್ದರು. ಶಂಕಿತನ ಮೊಬೈಲ್ ಲೊಕೇಶನ್ ಮಾಹಿತಿ ಪಡೆದ ಪೊಲೀಸರು ಡಿಚೋಲಿ ಉಪ ಪೊಲೀಸ್ ಅಧೀಕ್ಷಕ ಸಾಗರ್ ಎಕೋಸ್ಕರ್ ಮತ್ತು ಪೊಲೀಸ್ ಇನ್ಸ್‍ಪೆಕ್ಟರ್ ರಾಹುಲ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಆತನನ್ನು ಬಂಧಿಸಿದ್ದಾರೆ. ಕಾನ್‍ಸ್ಟೆಬಲ್‍ಗಳಾದ ಲಕ್ಷ್ಮಣ್ ಘಾಡಿ ಮತ್ತು ಲಕ್ಷ್ಮಣ್ ನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಪೇದೆ ಲಕ್ಷ್ಮಣ್ ಘಾಡಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next