Advertisement

110 ಪವನ್‌ ಚಿನ್ನಾಭರಣ, 70,000 ರೂ. ನಗದು, ರ್ಯಾಡೋ ವಾಚ್‌ ಕಳವು

10:07 AM Aug 19, 2017 | Team Udayavani |

ಮಂಜೇಶ್ವರ: ಕುಂಜತ್ತೂರುಪದವಿನಲ್ಲಿ ಗುರುವಾರ ತಡರಾತ್ರಿ  ಮನೆಯೊಂದಕ್ಕೆ ನುಗ್ಗಿದ ಕಳ್ಳರು 110 ಪವನ್‌ ಚಿನ್ನಾಭರಣ, 70 ಸಾವಿರ ರೂ. ನಗದು ಮತ್ತು ರ್ಯಾಡೋ ವಾಚ್‌ ಕಳವು ಮಾಡಿದ್ದಾರೆ.

Advertisement

ಕುಂಜತ್ತೂರುಪದವು ನಿವಾಸಿ ಹೊಸಂಗಡಿಯಲ್ಲಿ ಹಾಲಿನ ವ್ಯಾಪಾರಿಯಾಗಿರುವ ಅಬ್ದುಲ್‌ ಮುನೀರ್‌ ಅವರ ಮನೆಯಿಂದ  ಮನೆಯ ಅಡುಗೆ ಕೋಣೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್‌ ರೂಂ ಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನಾಭರಣ, ವಾಚ್‌ ಹಾಗು ಹಣವನ್ನು ದೋಚಿದ್ದಾರೆ. 
ಅವುಗಳನ್ನು ಪೆಟ್ಟಿಗೆಯೊಂದರಲ್ಲಿ ಇರಿಸಲಾಗಿತ್ತು. ಈ ಪೆಟ್ಟಿಗೆಯನ್ನೇ ಕೊಂಡೊಯ್ದಿದ್ದಾರೆ.

ಅಬ್ದುಲ್‌ ಮುನೀರ್‌, ಪತ್ನಿ ಹಸೀನಾ ಹಾಗೂ ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ನಿದ್ದೆ ಮಾಡಿದ್ದರು. ತಡರಾತ್ರಿ 2 ಗಂಟೆಗೆ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಅಬ್ದುಲ್‌ ಮುನೀರ್‌ ಹೊರಗೆ ಬೆಳಕು ಹಾಯಿಸಿ ಬಳಿಕ ಮತ್ತೆ ನಿದ್ದೆ ಮಾಡಿದ್ದರು. 
ಕಪಾಟು ತೆರೆಯುವ ಶಬ್ದ ಕೇಳಿ ಹಸೀನಾ ಎಚ್ಚರ ಗೊಂಡಿದ್ದರು. ಕೂಡಲೇ ಪತಿಯನ್ನು ಎಬ್ಬಿಸುತ್ತಿದ್ದಂತೆ ಕಪಾಟಿನೊಳಗಿದ್ದ ನಗ -ನಗದು ಇದ್ದ ಪೆಟ್ಟಿಗೆಯನ್ನು ತೆಗೆದು ಕಳ್ಳರು ಪರಾರಿಯಾಗಿದ್ದಾರೆ. ಕೂಡಲೇ ಕಳ್ಳರನ್ನು ಹಿಂಬಾಲಿಸಿದಾಗ ಕಂಪೌಂಡ್‌ ಹಾರಿದ ಕಳ್ಳರು ಸಮೀಪದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಕಪಾಟಿನೊಳಗೆ ಪೆಟ್ಟಿಗೆಯಲ್ಲಿ ಹಸೀನ ಅವರ 15 ಹಾಗು 10 ಪವನಿನ ಎರಡು ಸರ, ಒಂದು ಪವನಿನ 9 ಬಳೆ, 6 ಪವನ್‌ನ ಒಂದು ಬಳೆ, 11 ಪವನ್‌ನ ಅಲಂಕಾರ ಹೂ, ಹಸೀನಾ ಅವರ ಸಹೋದರಿ ಬಂದ್ಯೋಡಿನ ಮಿಸ್ರಿಯಾ ಅವರ 15 ಪವನ್‌ನ ಸೊಂಟದ ಪಟ್ಟಿ, 5 ಪವನ್‌ನ ತೋಳ್ಪಟ್ಟಿ, ಎರಡೂವರೆ ಪವನಿನ ಸರ, ಇನ್ನೋರ್ವ ಸಹೋದರಿ ನುಸ್ರ ಅವರ ಒಂದು ಪವನಿನ 6 ಬಳೆ, 4 ಪವನಿನ ಬೆಂಡೋಲೆ, ಹಸೀನರ ತಾಯಿ ಆಮಿನ ಅವರ 5 ಪವನ್‌ನ ಆಭರಣ ಹಾಗು ಮಕ್ಕಳಾಭರಣ ಸಹಿತ 110 ಪವನ್‌ ಚಿನ್ನಾಭರಣ ಇರಿಸಲಾಗಿತ್ತು. 

ಮನೆಯ ಆವರಣ ಗೋಡೆಯ ಒಂದು ಭಾಗದಲ್ಲಿ ಕೆಂಪು ಕಲ್ಲುಗಳನ್ನು ತೆಗೆದು ಆ ಮೂಲಕ ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕಪಾಟಿನ ಮೇಲಿರಿಸಿದ್ದ ಕೀಲಿ ಕೈ ಬಳಸಿ ಕಳವು ಮಾಡಲಾಗಿದೆ. 

Advertisement

ಎರಡಂತಸ್ತಿನ ಮನೆ ಚಾವಡಿಯಲ್ಲಿ ಮನೆ ಮಂದಿ ಬಾಗಿಲು ಶೀಘ್ರ ತೆರೆಯದಿರಲು ಬಾಗಿಲಿಗೆ ಅಡ್ಡವಾಗಿ ಕಳ್ಳರು ನೈಲಾನ್‌ ಹಗ್ಗ ಕಟ್ಟಿದ್ದರು.

ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲಿಸಿದರು. ಶ್ವಾನ ದಳ ಮತ್ತು ಬೆರಳ ಗುರುತು ತಜ್ಞರು ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next